ಶನಿವಾರ, ಜನವರಿ 30, 2010

ಸಂಕ್ರಾಂತಿ ಮತ್ತು ಆರೋಗ್ಯ

ಸಂಜೆಯ ವೇಳೆಗೆ ಎಳ್ಳುಬೆಲ್ಲಗಳನ್ನು ಒಬ್ಬರಿಗೊಬ್ಬರಿಗೆ ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯಮಾತಾಡೋಣ ಎಂದು ಹೇಳುತ್ತಾರೆ.

ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ಸಂಕ್ರಾಂತಿ ಇದು ಸೂರ್ಯ ಸಾಮೀಪ್ಯದಿಂದ ಸಿಕ್ಕುವ ಉಷ್ಣತೆಯ ಲಾಭದ ಆನಂದದ ಸಂಕೇತ. ಈ ಸಂಕ್ರಮಣ ಕಾಲದಿಂದ ಹಗಲಿನ ಭಾಗ ಹೆಚ್ಚಾಗುತ್ತದೆ. ಚಳಿಗಾಲದ ಕೊರೆತದ ಪರಿಣಾಮದಿಂದ ಬರಡಾದ ವಸ್ತುಗಳಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಈ ದಿವಸದಿಂದ ಸೂರ್ಯನು ತನ್ನ ಉತ್ತರಾಭಿಮುಖದ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇಂದಿನಿಂದ ‘ಉತ್ತರಾಯಣ’ ಪ್ರಾರಂಭ. ಇದು ಸಾಮಾನ್ಯವಾಗಿ ಜನವರಿ ತಿಂಗಳಿನ ಮಧ್ಯಭಾಗದಲ್ಲಿ ಬರುತ್ತದೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ದಕ್ಷಿಣಾಯನದಲ್ಲಿ ಚಂದ್ರನು ಪ್ರಬಲವಾಗುವುದರಿಂದ ಇವಕ್ಕೆ ಬಲವನ್ನು ನೀಡುತ್ತಾನೆ. ಉತ್ತರಾಯಣವು ಶಿಶಿರ ಋತುವಿನಿಂದ ಪ್ರಾರಂಭವಾಗಿ ವಸಂತ ಹಾಗೂ ಗ್ರೀಷ್ಮ ಋತುಗಳನ್ನೊಳಗೊಂಡಿರುತ್ತದೆ. ಹಾಗೆಯೇ ದಕ್ಷಿಣಾಯನವು ವರ್ಷಋತುವಿ ನಿಂದ ಪ್ರಾರಂಭವಾಗಿ ಶರತ್ ಮತ್ತು ಹೇಮಂತ ಋತುಗಳನ್ನು ಒಳಗೊಂಡಿರುತ್ತದೆ.



ಎಳ್ಳು, ಬೆಲ್ಲ(ಸಕ್ಕರೆ),ಕೊಬ್ಬರಿ ಮುಂತಾದವುಗಳಲ್ಲಿ ಸ್ನಿಗ್ಧತ್ವವು ಅಧಿಕವಾಗಿದ್ದು ಅವುಗಳು ಪ್ರಬಲವಾದ ವಾತ ಹಾಗೂ ಅಗ್ನಿಗಳನ್ನು ನಿಗ್ರಹಿಸುವ ಗುಣಗಳನ್ನು ಪಡೆದಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿ ಯಂದು ಅವುಗಳ ಮಿಶ್ರಣವನ್ನು ಎಲ್ಲರಿಗೂ ಹಂಚುವ ಹಾಗೂ ತಿನ್ನುವ ವಾಡಿಕೆ ಬಂದಿದೆ. ಅಂದು ಎಳ್ಳು ಬೆಲ್ಲವನ್ನು ಹಂಚಿ ಒಳ್ಳೆ ಒಳ್ಳೆ ಮಾತನಾಡಬೇಕೆಂಬ ಪ್ರತೀತಿಯು ಒಬ್ಬರಿಗೊಬ್ಬರ ಸ್ನೇಹವರ್ಧನೆಯ ಸಂಕೇತವಾಗಿದೆ. ಶರೀರದಲ್ಲಿ ಈ ಕಾಲದಲ್ಲಿ ರೂಕ್ಷತೆ ಹೆಚ್ಚಾಗುವುದರಿಂದ ಎಳ್ಳೆಣ್ಣೆಯ(ಅಂದರೆ ತೈಲಾದಿಗಳಿಂದ)ಶರೀರ ಮರ್ಧನೆ, ಬಿಸಿ ನೀರು ಸ್ನಾನ, ವ್ಯಾಯಾಮ ಮಾಡುವುದು, ಕಬ್ಬನ್ನು, ಕಬ್ಬಿನ ರಸದಲ್ಲಿ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಆಚರಣೆಗೆ ಬಂದಿದೆ. ಅಲ್ಲದೆ ಈ ಋತುವಿನ ಶೀತ ವಾತಾವರಣದ ಪ್ರಭಾವದಿಂದಾಗಿ ಚರ್ಮದಲ್ಲಿರುವ ಶಾರೀರಿಕ ಉಷ್ಣತೆಯು ಹೊಟ್ಟೆಗೆ ಹೊಕ್ಕಿರುತ್ತದೆ. ಹಾಗಾಗಿ ಈ ಋತುಗಳಲ್ಲಿ ಜನರಿಗೆ ಹಸಿವು ಹೆಚ್ಚಾಗಿರುತ್ತದೆ. ಹಸಿವನ್ನು ನಿಗ್ರಹಿಸಲು ಆಯುರ್ವೇದವು ಜೀರ್ಣಕ್ಕೆ ಭಾರವಾದ ಅಂದರೆ ಗುರು ಗುಣವುಳ್ಳ, ಸ್ನಿಗ್ಧಗುಣವುಳ್ಳ, ಸಿಹಿ ರುಚಿಯುಳ್ಳ, ಹೊಸದಾಗಿ ಬೆಳೆದ ಧಾನ್ಯಗಳ ಉಪಯೋಗವನ್ನು ಸೂಚಿಸುತ್ತದೆ. ಜೊತೆಯಲ್ಲಿ ಕಬ್ಬಿಗೂ ಹಾಗೂ ಕಬ್ಬಿನ ರಸದಿಂದ ತಯಾರಿಸಿದ ಪದಾರ್ಥಗಳಿಗೂ (ಅಂದರೆ ಸಿಹಿ ಪದಾರ್ಥಗಳು) ಗುರು, ಸ್ನಿಗ್ಧ ಮುಂತಾದ ಗುಣಗಳು ಹೇರಳವಾಗಿರುವುದರಿಂದ ಅವುಗಳ ಸೇವನೆಯು ಆ ಋತುವಿಗೆ ಹಿತಕರವಾಗಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿಯಂದು ಎಳ್ಳು, ಬೆಲ್ಲ ಅಥವಾ ಸಕ್ಕರೆ ಮಿಶ್ರಣ ಹಾಗೂ ಸಿಹಿ ಪದಾರ್ಥಗಳ ಭೋಜನ ವಾಡಿಕೆಯಲ್ಲಿ ಬಂದಿದೆ.
ಸಂಕ್ರಾಂತಿಯಂದು ಪ್ರಾರಂಭವಾಗುವ ಶಿಶಿರ ಋತುವು ಶಾರೀರಿಕ ಬಲವನ್ನು ನೀಡುವ ಋತುವಾಗಿರು ವುದರಿಂದ ಆ ಋತುವಿನಲ್ಲಿ ವ್ಯಾಯಾಮ, ಮೈಥುನ ಸುಖ, ಪ್ರೀತಿಯುಕ್ತ ಸಂಭಾಷಣೆ ಮುಂತಾದ ಉತ್ಸಾಹದಾಯಕ ವರ್ತನೆ, ಚಟುವಟಿಕೆ, ಸಂತೋಷದಾಯಕವಾದ ಕ್ರಿಯೆಗಳಲ್ಲಿ ಮನಸೋಚ್ಛೆ ತೊಡಗಲು ಆಯುರ್ವೇದದಲ್ಲಿ ಉಪದೇಶವಾಗಿದೆ. ಇದರ ಸಂಕೇತವಾಗಿಯೇ ಸಂಕ್ರಾಂತಿ ಯನ್ನು ಜನರು ಸಡಗರದಿಂದ ಉಲ್ಲಾಸದಾಯಕವಾಗಿ ಪ್ರೀತಿ ಹರ್ಷಗಳೊಡನೆ ಆಚರಿಸುವುದು ರೂಢಿಗೆ ಬಂದಿದೆ.

ಕಾಮೆಂಟ್‌ಗಳಿಲ್ಲ: