ಶನಿವಾರ, ಡಿಸೆಂಬರ್ 26, 2009

ಕೆಲ ಕದ್ದ SMS ಜೋಕುಗಳು.................

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.

ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ !!!


’’



ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:

'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'

'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು. ?' ಹೆಂಡತಿ ಕೇಳಿದಳು.

'AEROPLANE' ಕಣೇ !!!!!









ಗುಂಡ ಮ್ಯಾರೀಡ್
ಕುಡುಕನೊಬ್ಬ ಬಾರಿಗೆ ಹೋದ. ಪಕ್ಕದ ಟೇಬಲ್‍ನಲ್ಲಿದ್ದವ ವೇಟರ್‌ಗೆ ’ಜಾನಿ ವಾಕರ್ ಸಿಂಗಲ್’ ಎಂದ.

ಮುಂದಿನ ಟೇಬಲ್‍ನಲ್ಲಿ ಕೂತಿದ್ದ ಮತೊಬ್ಬ ’ಪೀಟರ್ ಸ್ಕಾಚ್ ಸಿಂಗಲ್’ ಎಂದ.

ಈ ಕುಡುಕನೂ ಸ್ಟೈಲಾಗಿ ’ಗುಂಡ ಮ್ಯಾರೀಡ್’ ಎಂದ.










ಕಾಫಿ ಬಾರ್ ಮತ್ತು ವೈನ್ ಬಾರ್

ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ ?

ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ !!!








ಟ್ಯಾಕ್ಸಿ ಬಾಡಿಗೆ
ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:

ಕುಡುಕ: ಬಾಡಿಗೆ ಎಷ್ಟಾಯ್ತು ?

ಡ್ರೈವರ್: ಇಪ್ಪತ್ತು ರೂಪಾಯಿ

ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.

ಡ್ರೈವರ್: ಇದು ಹತ್ತು ರೂಪಾಯಿ

ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ???








ಬಕೆಟ್ ತೂತು!!!!!

ಸರ್ದಾರ್: ಡಾಕ್ಟ್ರೆ! ಈ ಬಕೇಟ್ ತೂತಾಗಿದೆ. ಸ್ವಲ್ಪ ನೋಡಿ!

ಡಾಕ್ಟರ್: ಅದೇನೋ ಸರಿ !! ಅದನ್ನ ನಂಗ್ಯಾಕೆ ಹೇಳ್ತಿದೀರಾ? ಗೊತ್ತಾಗ್ಲಿಲ್ಲ..!
ಸರ್ದಾರ್: ನೀವು ತುಂಬಾ ಫೇಮಸ್ ಪ್ಲಾಸ್ಟಿಕ್ ಸರ್ಜನ್ ಅಲ್ವ!! ಅದಕ್ಕೆ!!

'
'
'
ಕೆಮ್ಮು

ಬ್ರ್ಯಾಂಡಿ ಕುಡದ್ರೆ ಕೆಮ್ಮು ಹೋಗುತ್ತಾ ?

ತಿಮ್ಮ : ಯಾಕೆ ಹೋಗಲ್ಲ ?

ನನ್ನ ಹೊಲ, ಮನೆಗಳೇ ಹೋಗಿವೆ ......

ಇನ್ನು ನಿನ್ನ ಕೆಮ್ಮು ಏನ್ ಮಹಾ !!!
'
'
'
'
'
'

ಮೋಹಿನಿ ಕಾಟ
'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ

'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು

ಆದರೆ ಇಂದು 'ತಂಗಾಳಿಯಲ್ಲಿ ನಾನು ತೇಲಿ ಬಂದೆ ' ಎಂದು

ನೀನು 'ಮೋಹಿನಿ'ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು

ಅಷ್ಟಕ್ಕೂ ನಿನಗೆ 'Drink N Drive' ಮಾಡಿ!

'ಸ್ವರ್ಗ' ಸೇರಲು ನಾ ಹೇಳಿದ್ದೆನಾ ! ?
'
'
'
'
'
'

ಫ್ಯಾಮಿಲಿ ಕಳ್ಳ
ಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ?

ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ.
,
,
,
,
,
,
,
,
,
ಖೈದಿ ಸರ್ದಾರ್
ಸರ್ದಾರ್‌ನ ನೇಣು ಹಾಕಬೇಕಾದರೆ,

ಜೈಲರ್ : ನಿನ್ನ ಕೊನೆ ಆಸೆ ಏನು ?

ಸರ್ದಾರ್ : ನನ್ನ ನೇಣು ಹಾಕ್ತಿದ್ದೀರಲ್ಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ಹಾಕಿ ಸಾಕು !!!









ಏರೊಪ್ಲೇನ್ ಹತ್ತಿಸಬೇಕಾ...
ಗುಂಡ ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.

ಪೋಲಿಸ್ : ಏನಯ್ಯಾ ರಾತ್ರಿ 12 ಗಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ? ಏರೊಪ್ಲೇನ್ ಹತ್ತಿಸಬೇಕಾ?

ಗುಂಡ : ಅಯ್ಯೋ ಬೇಡಾ ಸಾರ್...ಯಾವ್ದಾದ್ರು ಒಂದು ಆಟೋ ನಿಲ್ಲಿಸಿ ಹತ್ತಿಸಿಬಿಡಿ ಸಾಕು.. !!!







ಸಂಪೂರ್ಣ ರಾಮಾಯಣ
ಪೇದೆ : ರಾಮನವಮಿ ಪ್ರಯುಕ್ತ ನಿನ್ನೆ ಜೈಲಿನ ಖೈದಿಗಳು ’ಸಂಪೂರ್ಣ ರಾಮಾಯಣ’ ನಾಟಕ ಆಡಿದರು ಸಾರ್.

ಜೈಲಿನ ಅಧಿಕಾರಿ : ಅದಕ್ಕೇನೀಗ ?

ಪೇದೆ : ಹನುಮಂತನ ಪಾತ್ರ ವಹಿಸಿದ ಖೈದಿ ಸಂಜೀವಿನಿ ಸಸ್ಯ ತರಲು ಹೋದವನು ಇನ್ನೂ ಬಂದೇ ಇಲ್ಲ ಸಾರ್ !!!







ಬಾಂಬ್
ಗೆಳೆಯರಿಬ್ಬರಿಗೆ ಮೂರು ಬಾಂಬ್‍ಗಳು ಸಿಕ್ಕವು. ಪೋಲೀಸ್ ಸ್ಟೇಷನ್‍ಗೆ ತೆಗೆದುಕೊಂಡು ಹೋಗುವಾಗ ಒಬ್ಬಾತ ಹೇಳಿದ

’ದಾರಿಯಲ್ಲಿ ಒಂದು ಬಾಂಬ್ ಢಂ ಅಂದ್ಬಿಟ್ರೆ, ಏನ್ ಮಾಡೋದು ?’

ಇನೊಬ್ಬ ತಣ್ಣಗೆ ಪ್ರತಿಕ್ರಯಿಸಿದ - ’ಮೂರಲ್ಲಿ ಎರಡು ಸಿಕ್ಕಿದ್ದು ಅನ್ನೋಣ’ !!!







ಪೇಪರ್ ನೋಡಿದರಾಯ್ತು
ಕಳ್ಳರಿಬ್ಬರು ದರೋಡೆ ಮಾಡಿ ಬಂದು ಒಂದು ಕಡೆ ಕುಳಿತರು.

ಒಬ್ಬ ಕಳ್ಳ : ಎಷ್ಟು ಹಣ ನೋಡೋಣವೇನೋ ?

ಇನ್ನೊಬ್ಬ ಕಳ್ಳ : ನಂಗೆ ನಿದ್ದೆ ಬರುತ್ತಿದೆ ಮನೆಗೆ ಹೋಗೋಣಪ್ಪ. ಹೇಗಿದ್ದರು ನಾಳೆ ಪೇಪರ್‌ನಲ್ಲಿ ಬರುತ್ತಲ್ಲ.....!!!






CORRESPONDENCEನಲ್ಲಿ ಕಾರ್ ಚಾಲನೆ
ಕಾರನ್ನು ವೇಗವಾಗಿ ಓಡಿಸುತ್ತಿದ್ದ ಗುಂಡನನ್ನು ಪೋಲೀಸರು ಹಿಡಿದರು.

ಗುಂಡ : ಸಾರ್ ನಾನು ಕಾರ್ ಚಾಲನೆಯನ್ನು ಕಲಿಯುತ್ತಿದ್ದೇನೆ !!!

ಪೋಲೀಸ್ : ಹಾಗಾದರೆ ನಿನ್ನ INSTRUCTOR ಎಲ್ಲಿ ?

ಗುಂಡ : ನಾನು CORRESPONDENCEನಲ್ಲಿ ಕಲಿಯುತ್ತಿದ್ದೇನೆ ಸಾರ್.......!!!






ಪಾರ್ಕಿಂಗ್ ಫೈನ್
ಗುಂಡ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿ ಶಾಪಿಂಗ್‍ಗೆ ಹೋದ.

ಮರಳಿ ಬರುವಷ್ಟರಲ್ಲಿ ಗುಂಡನ ಕಾರಿನ ಮೇಲೆ ’ PARKING FINE’ ಎಂದು ಬರದ ನೋಟಿಸ್ ಅಂಟಿಸಲಾಗಿತ್ತು.

ಅದರ ಕೆಳಗೆ ಗುಂಡ ಬರೆದ : THANKS FOR THE COMPLIMENTS !!!

ಚಾರ್ಲ್ಸ್ ಡಾರ್ವಿನ್ ನ Struggle for Existance ಮತ್ತು ಭಯೋತ್ಪಾದಕರೆಂಬ ಬಸ್ಮಾಸುರರು......

ಭಯೋತ್ಪಾದನೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಎಲ್ಲಿಬೇಕಾದರೂ ಬೆಚ್ಚಿಬೀಳಿಸುವ ಏಕ ಮಾತ್ರ ಪದ....
'ಭಯೋತ್ಪಾದನೆ' ಒಂದು ಪೆಡಂಭೂತ, ಮನುಕುಲ ವಿನಾಶಕವಷ್ಟೇಅಲ್ಲ, ' ಕುಲಕ್ಕೆ ಮೃತ್ಯು ಕೊಡಲಿಯ ಕಾವು' ಎಂಬಂತೆ ತಾನು ತನ್ನವರೆಂಬ ಬೇಧ ಭಾವ ಇರುವುದಿಲ್ಲ, ಹಿರಿಯರು-ಕಿರಿಯರು ಎಂಬ ವಯಸ್ಸಿನ ತಾರತಮ್ಯವಿರುವುದಿಲ್ಲ, ಬಡವ ಬಲ್ಲಿದ ನೆಂಬ ಕಾರುಣ್ಯದ ಕಣ್ಣು ಸಹ ಇಲ್ಲ ಈ ಭಯೋತ್ಪಾದನೆಗೆ. ಎದುರಿಗೆ ಬಂದವರನ್ನು ನಾಶಮಾಡುವುದಷ್ಟೇ ಗೊತ್ತು.

ಬಹುಶಃ 'ಭಯೋತ್ಪಾದನೆ' ಜೀವಿಯ ಉಗಮದೊಂದಿಗೇ ಹುಟ್ಟಿರಬೇಕು. ತನ್ನದೇ ಪರಿಸರದ ಮತ್ತೊಂದು ಜೀವಿ ಅಥವಾ ತನ್ನದೇ ಜಾತಿಯ ಮತ್ತೊಬ್ಬ ಸದಸ್ಯರ ನಡುವೆ ಆಹಾರಕ್ಕಾಗಿ ಅಂತಃಕಲಹವೇರ್ಪಟ್ಟು ಯಾವುದು ಶಕ್ತಿಯುತವಾಗಿ ನಿಂತು ಬಡಿದಾಡಿ ಗೆಲ್ಲುತಿತ್ತೋ ಅದು ಸಹಜವಾಗಿ ಬೇರೆ ಸದಸ್ಯರಿಗೆ ಭಯವನ್ನುಂಟುಮಾಡುತಿತ್ತು ಮತ್ತು ಬದುಕುಳಿಯುತ್ತಿತ್ತು. ಇದು ಪ್ರಕೃತಿಯ ನಿಯಮ. ಇದನ್ನೇ ಚಾರ್ಲ್ಸ್ ಡಾರ್ವಿನ್ ಅಸ್ಥಿತ್ವಕ್ಕಾಗಿ ಹೋರಾಟ ಅಥವಾ Struggle for Existance ಎಂದು ಕರೆದದ್ದು. ಈ ನಿಯಮದಲ್ಲಿ ಸಾಕಷ್ಟು ನೀತಿ ನಿಜಾಯಿತಿಗಳಿವೆ, ಉದಾ; ಕೋಳಿಗಳಲ್ಲಿ ಅತ್ಯಂತ ಬಲಿಷ್ಠವಾದ 'ಹುಂಜ' ನಿಗೆ ತನ್ನ ತಂಡದ ಇತರ ಸದಸ್ಯರು ಗೌರವ ಕೊಡಬೇಕು ಅಷ್ಟೇ ಅಲ್ಲ ಅದರ ಎದುರು ಬಂದರೆ ತಲೆಯ ಮೇಲೆ ಕುಕ್ಕಿಸಿಕೊಳ್ಳಲೇಬೇಕು, ಅಕಸ್ಮಾತ್ ತಂಡದ ಯಾವುದಾದರು ಸದಸ್ಯನಿಗೆ ಅದು ಇಷ್ಟವಾಗಲಿಲ್ಲವೆಂದರೆ ಆ 'ಹುಂಜ' ನೊಡನೆ ಕಾದಾಡಿ ಗೆಲ್ಲಬೇಕು ಸೋತ ಹುಂಜ ಗೆದ್ದವರ ಅಡಿಯಾಳಾಗಿರಬೇಕು. ಈ ರೀತಿಯ ನಿಯಮಗಳು ಎಲ್ಲಾ ಸಣ್ಣಜೀವಿಗಳಿಂದಿಡಿದು ದೊಡ್ಡ ಜೀವಿಗಳವರೆವಿಗೂ ಒಂದಲ್ಲ ಒಂದು ವಿಷಯದಲ್ಲಿ ಇದ್ದೇ ಇದೆ. ಇದು ಪ್ರಕೃತಿ ಅವುಗಳ ಶಿಸ್ತುಬದ್ದ ಬದುಕಿಗೆ ರೂಪಿಸಿದ ನಿಯಮ, ಇದನ್ನು ಅವುಗಳು ಯಾವುವೂ ಮುರಿಯುವುದಿಲ್ಲ ಅಷ್ಟೇಅಲ್ಲ ಅದನ್ನು ಪರಸ್ಪರ ಗೌರವಿಸುತ್ತವೆ.

ಹಾಗಾದರೆ ಪ್ರಕೃತಿಯಲ್ಲೇ ಶ್ರೇಷ್ಠ ಜೀವಿಯಾದ ಮಾನವನಲ್ಲಿ ಯಾವ ನಿಯಮಗಳನ್ನು ಪ್ರಕೃತಿ ನಿರ್ಮಿಸಿಲ್ಲವೇ?
ಮಾನವನು ಪ್ರಕೃತಿಗಿಂತ ಬಲಿಷ್ಠನೇ?

ಎನ್ನುವ ಉತ್ತರ ಸಿಗದ ಸಹಸ್ರಾರು ಪ್ರಶ್ನೆಗಳು ಮನದ ಮೂಲೆಯಲ್ಲಿ ಕೊರೆಯುವುದು ಸಹಜವೇ....
ಮಾನವನ ಹುಟ್ಟಿನಲ್ಲಿ ಮೊದಮೊದಲು ಕೇವಲ ಆಹಾರಕ್ಕಾಗಿ ಇತರ ಜೀವಿಗಳೊಡನೆ ಸೆಣಸುತ್ತಾ ತನ್ನ ಅಸ್ಥಿತ್ವಕ್ಕಾಗಿ ಹೋರಾಡುತ್ತಿದ್ದವ, ನಂತರ ಬುದ್ದಿಬೆಳೆದಂತೆಲ್ಲಾ ತನ್ನ ಸುತ್ತಮುತ್ತಲ ಪರಿಸರಕ್ಕಾಗಿ ಇತರ ಪ್ರಾಣಿಗಳೊಡನೆ ಸೆಣಸಲಾರಂಬಿಸಿ ಅವುಗಳಿಗೆ ಭಯೋತ್ಪಾದಕನಾದ. ನಂತರ ತಾನಿಷ್ಟಪಟ್ಟ ಹೆಣ್ಣನ್ನು ದಕ್ಕಿಸಿಕೊಳ್ಳಲು ತನ್ನದೇ ವರ್ಗಕ್ಕೇ ಭಯೋತ್ಪಾದಕನಾಗುವ ಮೊದಲ ಹೆಜ್ಜೆ ಇಟ್ಟ.
ಇಲ್ಲಿಯವರೆವಿಗೂ ಚಾರ್ಲ್ಸ್ ಡಾರ್ವಿನ್ ನ ಥಿಯರಿ ಅನ್ವಯಿಸುತ್ತದೆ, ಬಹುಶಃ ಪ್ರಕೃತಿಯ ನಿಯಮಗಳನ್ನೂ ಪಾಲಿಸಿದ್ದಾನೆ.
ಆದರೆ ನಂತರ ಶುರುವಾಯ್ತು ನೋಡಿ 'ತಾನು ಕಂಡಿದ್ದೆಲ್ಲಾ ತನಗೇ ಮೀಸಲು' ತಾನು ಜಗದೊಡೆಯ, ತಾನು ಎಲ್ಲರಿಗಿಂತಾ ಬುದ್ದಿಜೀವಿ' ಎನ್ನುವುದು ಯಾವಾಗ ಆತನ ತಲೆಗೇರಿತೋ ಅಂದಿನಿಂದಲೇ ಸಂಪೂರ್ಣ "ಸ್ವಾರ್ಥ"ದ ದಾಸನಾಗಿ, ಎಲ್ಲವನ್ನೂ ಕಬಳಿಸಿ, ಕಡೆಗೆ ದೇವರ ಹೆಸರಿನಲ್ಲಿ ಭಯೋತ್ಪಾದಕನಾಗಿ ಇಂದು ನಿಂತಿದ್ದಾನೆ.
ಅದರಲ್ಲೂ ಕೆಲ ದೇಶಗಳಲ್ಲಿ ಭಯೋತ್ಪಾದಕನಾಗಿ ಸಾಯುವುದು ದೇವರ ಆಜ್ನೆ, ದೇವರ ಸಿಂಹಾಸನದಲ್ಲಿ ಅರ್ಧ ಸಿಕ್ಕುತ್ತದೆ ಇತ್ಯಾದಿ.......ಇತ್ಯಾದಿ.......ಇತ್ಯಾದಿ....... ಕಟ್ಟುಕಥೆಗಳನ್ನು ಹೇಳಿ, ಕೆಳ ವರ್ಗದ ಬಡವರಿಗೆ ಇಲ್ಲಸಲ್ಲದ ಆಸೆ ಆಮಿಷ ತೋರಿಸಿ ಮುಗ್ದ ಜೀವಗಳನ್ನು ಬಲಿತೆಗೆದು ಕೊಂಡು ಖುಷಿಪಡುತ್ತಾರೆ. ಈ ವಿಚಾರದಲ್ಲಿ ನಮ್ಮ ಪಕ್ಕದ 'ಪಾಕಿಸ್ತಾನ" ಎತ್ತಿದ ಕೈ.
ಇಂದು National Geographic Channel ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪ್ರಕಾರ ಕೇವಲ 3000 ರೂಗಳಿಗೆ ಒಬ್ಬ 'ಆತ್ಮಾಹುತಿ ಬಾಂಬರ್' ದೊರುಕುತ್ತಾನಂತೆ, ಅಷ್ಟೆ ಅಲ್ಲ ಕಳೆದ ವರ್ಷದ ಮುಂಬೈ ದಾಳಿ, ಅಮೇರಿಕಾದ ಡಬ್ಲ್ಯು. ಟಿ. ಓ ಕಟ್ಟಡಗಳ ದಾಳಿ, ಇವತ್ತಿನ ಆಫ್ಘನ್ ಮತ್ತು ಇರಾಕಿನ ಆತ್ಮಾಹುತಿ ದಾಳಿಗಳ ಬಾಂಬರ್ ಗಳೆಲ್ಲಾ ಪಾಕಿಸ್ತಾನದವರೇ. ಅಂದ ಮಾತ್ರಕ್ಕೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಪಾಕಿಸ್ತಾನದವರೆ ಅನ್ನುವುದು ವಿಪರ್ಯಾಸ.
ಅಂದು ತನ್ನ ಶತೃವಾದ ರಷ್ಯಾವನ್ನು ಎದುರಿಸಲು "ಒಸಾಮ ಬಿನ್ ಲಾಡೆನ್'' ನನ್ನು ಬೆಳೆಸಿದ್ದು ಇದೇ ಅಮೇರಿಕ!!!!!!. ಕಡೆಗೆ ಅಮೇರಿಕಾದ ಸೊಕ್ಕಿಗೆ ಸೆಡ್ಡು ಹೊಡೆದದ್ದು ಇದೇ ಒಸಾಮ ಬಿನ್ ಲಾಡೆನ್!!!!!!!!! ಅಷ್ಟೆ ಅಲ್ಲ ಭಾರತದ ವಿರುದ್ದ ಹೋರಾಡಲು ಪಾಕಿಸ್ತಾನ ಬೆಳೆಸಿದ್ದು ಇದೇ ಭಯೋತ್ಪಾದಕರನ್ನು, ಕಡೆಗೇನಾಯ್ತು? ಇಂದಿನ ಪಾಕಿಸ್ತಾನದಲ್ಲಿ ದಿನಕ್ಕೆರಡು ಆತ್ಮಾಹುತಿ ದಾಳಿ ಅದೇ ಪಾಕಿಸ್ತಾನಿ ಭಯೋತ್ಪಾದಕರಿಂದ!!!!!!
ಅದಕ್ಕೇ ಹೇಳೋದು ಭಯೋತ್ಪಾದಕರು ಬಸ್ಮಾಸುರರು!!!!!!!!

ಭಾನುವಾರ, ನವೆಂಬರ್ 29, 2009

ಚಾರ್ಲ್ಸ್ ಡಾರ್ವಿನ್ ಮತ್ತು ವಿಕಾಸವಾದ.......

ಚಾರ್ಲ್ಸ್ ರಾಬರ್ಟ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ — ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ಹಡಗಿನಲ್ಲಿ ಭೂರಚನಶಾಸ್ತ್ರ ವಿಜ್ಞಾನಿಯಾಗಿ ಪ್ರವಾಸ ಕೈಗೊಂಡಾಗ ನಡೆಸಿದ ಸಂಶೊಧನೆಯಿಂದ ಮೊದಲು ಪ್ರಖ್ಯಾತರಾದರು. ಅದೇ ಸಮಯದಲ್ಲಿ ಅನೇಕ ಜೀವ ಪಳಯುಳಿಕೆಗಳನ್ನೂ ಸಂಗ್ರಹಿಸಿ, ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಇದೆಲ್ಲವನ್ನೂ ವಿವರಿಸಲು "ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ" ಸಿದ್ಧಾಂತವನ್ನು ೧೮೫೮ರಲ್ಲಿ ಮಂಡಿಸಿದರು. ೧೮೫೯ರಲ್ಲಿ ಈ ಸಿದ್ಧಾಂತವನ್ನು ವಿವರವಾಗಿ ಬಣ್ಣಿಸುವ ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಎಂಬ ಭವ್ಯಕೃತಿಯನ್ನು ಪ್ರಕಟಿಸಿದರು.

ಬೀಗಲ್ ಹಡಗಿನಲ್ಲಿ ಪ್ರವಾಸ

ಬೀಗಲ್ ಹಡಗು ಪ್ಲೈಮೌಥ್ ಬಂದರನ್ನು ೧೮೩೧ರ ಡಿಸೆಂಬರ್ ೨೭ರಂದು ಬಿಟ್ಟು ಸುಮಾರು ೫ ವರ್ಷಗಳ ನಂತರ ೧೮೩೬ರ ಅಕ್ಟೋಬರ್ ೨ರಂದು ಹಿಂದಿರುಗಿತು. ಇಡೀ ಭೂಮಿಯನ್ನು ಸುತ್ತುವರೆದ ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವಿಧಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು. ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳದ ಪ್ರಾಣಿಗಳ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು. ಭೂರಚನೆಯ ಅಧ್ಯಯನದಲ್ಲಿ ಚಾರ್ಲ್ಸ್ ಲ್ಯೆಲ್ ಅವರ "ಪ್ರಿನ್ಸಿಪಲ್ಸ್ ಆಫ್ ಜಿಯಾಲಜಿ" ಪುಸ್ತಕವನ್ನು ಹೆಚ್ಚಾಗಿ ಉಪಯೋಗಿಸಿದರು.

ಪೆಟಗೋನಿಯ ಪ್ರದೇಶದಲ್ಲಿ ಇದ್ದಾಗ ಇವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು. ಇಲ್ಲಿನ ಸಂಶೋಧನೆಗಳಿಂದ ಮತ್ತು ದಕ್ಷಿಣ ಅಮೇರಿಕದಲ್ಲಿ ಇವರು ಕಂಡ ಜೀವ ವಿಧಗಳ ಅಧ್ಯಯನದಿಂದ ಲ್ಯೆಲ್ ಅವರು ಪ್ರಸ್ತಾಪಿಸಿದ್ದ ಜೀವಿಗಳ ಉಗಮದ ಸಿದ್ಧಾಂತದಲ್ಲಿನ ದೋಶಗಳನ್ನು ಕಾಣತೊಡಗಿದರು. ಆದರೆ ಇವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪ್ರದೇಶವೆಂದರೆ ಗ್ಯಾಲಾಪಗೊಸ್ ದ್ವೀಪಗಳು. ಭೂರಚನಶಾಸ್ತ್ರದ ಮಾಪನದ ಪ್ರಕಾರ ಇತ್ತೀಚೆಗೆ ಸೃಷ್ಟಿತವಾಗಿರುವ ಈ ದ್ವೀಪಗಳಲ್ಲಿ ಅನೇಕ ಜೀವವಿಧಗಳನ್ನು ಕಂಡರು. ಈ ಜೀವವಿಧಗಳು ಪ್ರಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ಜೀವವಿಧಗಳು ಒಮ್ಮೆಲೇ ಸೃಷ್ಟಿತವಾದವು ಎಂಬ ಸಿದ್ಧಾಂತದ ಬಗ್ಗೆ ತೀವ್ರ ಸಂಶಯ ಹೊಂದತೊಡಗಿದರು.

ಜೀವ ವಿಕಾಸವಾದದ ಮನವರಿಕೆ
(The Evolution)

ಡಾರ್ವಿನ್ ಅವರು ೧೮೩೬ರ ಅಕ್ಟೋಬರ್ ಅಲ್ಲಿ ಪ್ರವಾಸದಿಂದ ಹಿಂದಿರುಗಿದ ಹೊತ್ತಿಗೆ, ಇವರು ಹೆನ್ಸ್ಲೊ ಅವರಿಗೆ ಕಳುಹಿಸಿದ್ದ ಪತ್ರಗಳಿಂದ ಪ್ರಖಾತರಾಗಿದ್ದರು. ತಂದೆಯವರ ಆರ್ಥಿಕ ಸಹಾಯದಿಂದ, ಇವರು ಪ್ರವಾಸದ ವೇಳೆಯಲ್ಲಿ ಸಂಗ್ರಹಿಸಿದ್ದ ಜೀವಿಗಳನ್ನು ಮತ್ತು ಜೀವಪಳೆಯುಳಿಕೆಗಳನ್ನು ಗುರುತಿಸಿ ವರ್ಗೀಕರಣ ಮಾಡಿಸತೊಡಗಿದರು. ಜೀವರಚನಶಾಸ್ತ್ರ ತಜ್ಞರಾಗಿದ್ದ ರಿಚರ್ಡ್ ಒವೆನ್ ಇದರಲ್ಲಿ ಇವರಿಗೆ ಸಹಾಯ ಮಾಡಿದರು. ಪ್ರಮುಖವಾಗಿ ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳು ಫಿಂಚ್ ಮತ್ತು ವ್ರೆನ್ ಕುಟುಂಬದ ೧೨ ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು.

ಮಾರ್ಚ್ ಹೊತ್ತಿಗೆ ಡಾರ್ವಿನ್ ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು. ಅಲ್ಲಿ ಜೀವ ಪ್ರಜಾತಿಗಳ ಸೃಷ್ಟಿಯ ಬಗ್ಗೆ ಕೂಡ ಚಿಂತನ ನಡೆಯುತ್ತಿತ್ತು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳಬಹುದೇನೊ ಎಂದು ಚಿಂತನೆ ಮಾಡತೊಡಗಿದರು. ಇದರ ಜೊತೆಗೆ ಇವರು ತಮ್ಮ ಪ್ರವಾಸದ ಬಗ್ಗೆ ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು.

ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಟಣೆ (Theory Of Natural Selection)
ಈ ಸಿದ್ದಾಂತದ ಮೂಲ ಅಂಶವೇನೆಂದರೆ, ಪ್ರಕೃತಿಯು ತನಗೆ ಬೇಡದ ಹೆಚ್ಚಾಗಿ ಬದಲಾಗುತ್ತಿರುವ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳದೇ ಇರುವ ಜೀವಿಗಳನ್ನು ತೆಗೆದುಹಾಕುತ್ತದೆ, ಅಥವಾ ಆ ಜೀವಿಯು ತಂತಾನೆ ನಶಿಸುತ್ತದೆ.
ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಮೂಲ ಆಯಕಟ್ಟನ್ನು ಮನಸ್ಸಿನಲ್ಲಿ ಹೊಂದಿದ್ದೇನೆಂದು ಭಾವಿಸಿ, ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸತೊಡಗಿದರು. ಮುಂದಿನ ದಶಕದಲ್ಲಿ ತಮ್ಮ ಬೀಗಲ್ ಪ್ರವಾಸದ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಕಟನೆ ಮಾಡುವಲ್ಲಿ ನಿರತರಾಗಿದ್ದರಿಂದ ತಮ್ಮ ಸಿದ್ಧಾಂತದ ಬಗ್ಗೆ ಸಂಶೋಧನೆ ಹಿಂಬದಿಯಲ್ಲಿ ಉಳಿಯಿತು. ಮೂರು ವರ್ಷಗಳ ಕೆಲಸದ ನಂತರ ೧೮೪೨ರಲ್ಲಿ ಡಾರ್ವಿನ್ ಅವರು ಹವಳದ ಬಗ್ಗೆ ಒಂದು ದೊಡ್ಡ ಕೃತಿಯನ್ನು ಪ್ರಕಟಿಸಿದರು. ಕೆಲಸಗಳ ಒತ್ತಡದಿಂದ ವಿಶ್ರಾಂತಿ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿನ ತಮ್ಮ ಮನೆಯಾದ ಡೌನ್ ಹೌಸ್‍ಗೆ ತೆರಳಿದರು. ೧೮೪೪ರ ಜನವರಿಯಲ್ಲಿ ತಮ್ಮ ಸಿದ್ಧಾಂತದ ಬಗ್ಗೆ ಒಂದು ಕರಡು ಪ್ರತಿಯನ್ನು ರಚಿಸಿ, ಸಸ್ಯಶಾಸ್ತ್ರಜ್ಞ ಜೊಸೆಫ್ ಡಾಲ್ಟನ್ ಹೂಕರ್ ಅವರಿಗೆ ಇದರ ಬಗ್ಗೆ ತಿಳಿಸಿದರು. ಹೂಕರ್ ಇದರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ನೀಡಿದರು. ಜುಲೈ ಹೊತ್ತಿಗೆ ಈ ಕರಡು ಪ್ರತಿಯನ್ನು ೨೩೦ ಪುಟಗಳ ಪ್ರಬಂಧವಾಗಿ ಪರಿವರ್ತಿಸಿದ್ದರು. ೧೮೪೬ರಲ್ಲಿ ಡಾರ್ವಿನ್ ತಮ್ಮ ಮೂರನೆಯ ಭೂರಚನಶಾಸ್ತ್ರದ ಬಗ್ಗೆಯ ಪುಸ್ತಕವನ್ನು ರಚಿಸಿದರು. ೧೮೪೭ರಲ್ಲಿ ಹೂಕರ್ ಅವರಿಗೆ ತಮ್ಮ ಪ್ರಬಂಧವನ್ನು ಕಳುಹಿಸಿದರು ಮತ್ತು ಅವರಿಂದ ಕ್ರಿಯಾತ್ಮಕ ಪ್ರತ್ಯತ್ತರಗಳನ್ನು ಪಡೆದರು.
೧೮೫೬ರಲ್ಲಿ ಲ್ಯೆಲ್ ಅವರು ಆಲ್ಫ್ರೆಡ್ ರಸೆಲ್ ವಾಲೇಸ್ ಅವರ ಒಂದು ಲೇಖನವನ್ನು ಓದಿದರು. ಅದರಲ್ಲಿನ ವಿಚಾರಗಳು ಡಾರ್ವಿನ್ ಅವರ ಸಿದ್ಧಾಂತಗಳನ್ನು ಹೋಲುವುದನ್ನು ನೋಡಿ, ಡಾರ್ವಿನ್ ಅವರಿಗೆ ತಮ್ಮ ವಾದವನ್ನು ಮೊದಲು ಪ್ರಕಟಿಸಲು ಎಚ್ಚರಿಸಿದರು. ಆದರೆ ಡಾರ್ವಿನ್ ಇದರ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ತಮ್ಮ ಸಿದ್ಧಾಂತದ ಬಗ್ಗೆ ಒಂದು ಚಿಕ್ಕ ಲೇಖನವನ್ನು ರಚಿಸಿದರೂ, ಮುಖ್ಯವಾಗಿ ಇದರ ಬಗ್ಗೆ ದೊಡ್ಡ ಪುಸ್ತಕವನ್ನು ಬರೆಯುವುದರಲ್ಲಿ ಹೆಚ್ಚು ಮಗ್ನರಾಗಿದ್ದರು. ೧೮೫೮ರ ಜೂನ್ ೧೮ರಂದು ವಾಲೇಸ್ ಅವರಿಂದ ತಮ್ಮ ವಾದವನ್ನು ಹೆಚ್ಚಾಗಿ ಹೋಲುವ ಲೇಖನವೊಂದನ್ನು ಪಡೆದರು. ಇದರಿಂದ ದಿಗಿಲುಗೊಂಡರೂ, ಇದನ್ನು ಲ್ಯೆಲ್ ಅವರಿಗೆ ಕಳುಹಿಸಿ, ವಾಲೇಸ್ ಅವರಿಗೆ ಇದನ್ನು ಪ್ರಕಟಣೆ ಮಾಡುವಲ್ಲಿ ಸಹಕರಿಸುವ ಮಾತು ನೀಡಿದರು. ಮಾತುಕತೆಯ ನಂತರ ಈ ಲೇಖನವನ್ನು ತಮ್ಮ ಲೇಖನದೊಂದಿಗೆ ಲಿನ್ನಿಯನ್ ಸೊಸೈಟಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದರು. ತಮ್ಮ ಚಿಕ್ಕ ಮಗ ಸ್ಕಾರ್ಲೆಟ್ ಜ್ವರದಿಂದ ಮರಣ ಹೊಂದಿದರಿಂದ, ಈ ಲೇಖನಗಳನ್ನು ಲ್ಯೆಲ್ ಮತ್ತು ಹೂಕರ್ ಅವರು ಜುಲೈ ೧ರಂದು ಮಂಡಿಸಿದರು.

ಈ ಪ್ರಕಟಣೆಗಳು ವಿಜ್ಞಾನಿಗಳಲ್ಲಿ ಮೊದಲಿಗೆ ಹೆಚ್ಚು ಆಸಕ್ತಿ ಉಂಟು ಮಾಡಲಿಲ್ಲ. ಮುಂದಿನ ೧೩ ತಿಂಗಳುಗಳಲ್ಲಿ ಡಾರ್ವಿನ್ ತಮ್ಮ ಪುಸ್ತಕದ ರಚನೆಯ ಮೇಲೆ ಹೆಚ್ಚಾಗಿ ಕೆಲಸ ನಡೆಸಿದರು. ೧೮೫೯ರ ನವೆಂಬರ್ ೨೨ರಂದು ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕವು ಪ್ರಕಟನೆಗೊಂಡಿತು. ಮೊದಲ ಆವತರಣಿಕೆಯ ೧,೨೫೦ ಪ್ರತಿಗಳು ಬಹಳ ಬೇಗನೆಯೇ ಮಾರಾಟಗೊಂಡವು

ಅಸ್ಥಿತ್ವಕ್ಕಾಗಿ ಹೋರಾಟ (Struggle for Existance)ನೈಸರ್ಗಿಕ ಆಯ್ಕೆಯ ಸಿದ್ದಾಂತಕ್ಕನುಗುಣವಾಗಿ ಯಾವುದೇ ಜೀವಿಯು ತನ್ನ ಉಳಿವಿಗಾಗಿ ತನ್ನ ರಕ್ಷಣೆಯಲ್ಲಿ ತೊಡಗುತ್ತದೆ. ಆ ರಕ್ಷಣೆಯು ಇತರ ಬೇರೆ ಜೀವಿಗಳ ವಿರುದ್ದವಾದ ಹೋರಾಟವಾಗಬಹುದು, ತನ್ನ ಆಹಾರಕ್ಕಾಗಿ, ವಸತಿಗಾಗಿ, ವಂಶಾಬಿವೃದ್ಧಿಗಾಗಿಯಾದರೂ ಸರಿ ತನ್ನದೇ ಅಥವಾ ಬೇರೆ ವರ್ಗಗಳ ಜೀವಿಯೊಡನೆಯ ಹೋರಾಟ್ದಲ್ಲಿ ಯಾವ ಜೀವಿಯು ಆ ಉಳಿವಿನಲ್ಲಿ ಬದುಕುಳಿಯುತ್ತದೋ ಅದು ಮತ್ತು ಅದರ ಸಂತತಿಗಳು ಮಾತ್ರ ಬದುಕುಳಿಯುತ್ತವೆ ಎಂಬುದು ಈ ಸಿದ್ದಾಂತದ ಅರ್ಥ. ಆ ಜೀವಿಯ ಹೋರಾಟವು ಇತರ ಜಾತಿಯ ಜಿವಿಗಳ ವಿರುದ್ದವಾಗಬಹುದು ಅಥವಾ ಪ್ರಾಕೃತಿಕ ವಿಪರೀತಗಳಾವಿರುದ್ದವಾಗಬಹುದು ಎಲ್ಲವನ್ನೂ ಮೀರಿ ಉಳಿಯುವ ಜೀವಿ ಬದುಕಿ ಉಳಿಯುತ್ತದೆ. ಈ ರೀತಿ ಹೋರಾಟದ ಗುಣ ಅವುಗಳ ಜೀನು ಗಳಲ್ಲಿ ಒಂದು ಸಂತತಿಯಿಂದ ಮತ್ತೊಂದು ಸಂತತಿಗೆ ಹರಿದುಬರುತ್ತದೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಸೊಳ್ಳೆಗಳು ಮತ್ತು ಡಿ. ಡಿ. ಟಿ ಕೀಟನಾಶಕ 1950ರ ಸುಮಾರಿನಲ್ಲಿ ಭಾರತ ಮತ್ತಿತರ ಅಬ್ಹಿವೃಧ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಸಾವಿನ ಸಂಖ್ಯೆಗಳು ಹೆಚ್ಚತೊಡಗಿದವು, ಹಾಗು ಮಲೇರಿಯಾ ಹರಡಲು 'ಆನಾಫಿಲೀಸ್ ' ಎಂಬ ಸೊಳ್ಳೆಯೇ ಕಾರಣವೆಂದರಿತ 'ವಿಶ್ವ ಆರೋಗ್ಯ ಸಂಸ್ಥೆ' ಯು ಸೊಳ್ಳೆಗಳು ಬರದಂತೆ ಡಿ.ಡಿ.ಟಿ ಕೀಟನಾಶಕವನ್ನು ಸಿಂಪಡಿಸಲು ಆರಂಭಿಸಿತು. ತಕ್ಷಣವೇ ಮಲೇರಿಯಾವು ಕಾಣಿಯಾಗತೊಡಗಿತು, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಯ್ತು. ಆದರೆ 1960 ಆಸುಪಾಸಿನಲ್ಲಿ ಈ ಮಹಾಮಾರಿ ಮತ್ತೆ ಬಂದೆರಗಿತು. ಅಷ್ಟೇಅಲ್ಲ ಡಿ.ಡಿ,ಟಿ ಸಿಂಪರಣೆಯಿಂದ ಸೊಳ್ಳೆಗಳು ಸಾಯಲೂ ಇಲ್ಲ. ಇದಕ್ಕೆ ಕಾರಣವನ್ನು ಅಭ್ಯಸಿಸಲು ಆ ಸೊಳ್ಳೆಗಳ ಸಂತತಿಗಳ 'ಜೀನ್ ' (Genes) ಗಳನ್ನು ಪರೀಕ್ಷಿಸಿದಾಗ ಅವುಗಳು ಡಿ.ಡಿ,ಟಿ ಗೆ ಸಾಯದೇ ಅದನ್ನೇ ತಿಂದು ಬದುಕುವ ಶಕ್ತಿಯನ್ನು ಹೊಂದಿದ್ದವು.
ಇದಲ್ಲದೇ ಮತ್ತಷ್ಟು ಉದಾಹರಣೆಯೆಂದರೆ ಜಿರಾಫೆಯ ಕತ್ತು, ದೈತ್ಯ ಡೈನಾಸೋರ್ ಗಳ ವಿನಾಶ ಜೊತೆಗೆ ಅಳಿವಿನ ಅಂಚಿನಲ್ಲಿರುವ ಇತರ ಪ್ರಸ್ತುತ ಜೀವಿಗಳನ್ನೂ ನಾವು ಕಾಣಬಹುದು. (ಕೆಲ ಜೀವಿಗಳ ವಿನಾಶಕ್ಕೆ ನಾವು ನಮ್ಮ ಸ್ವಾರ್ಥವೂ ಕಾರಣವಾದರೂ ಅವುಗಳಿಗೂ ಈ ಸಿದ್ದಾಂತ ಅನ್ವಯವಾಗುತ್ತದೆ)

ಸಿದ್ಧಾಂತದ ಬಗ್ಗೆ ಪ್ರತಿಕ್ರಿಯೆಗಳುಪುಸ್ತಕದ ಪ್ರಕಟಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಲ್ಲಿ ಆಸಕ್ತಿ ಮೂಡಿಸಿತು. ಡಾರ್ವಿನ್ ಅಸ್ವಸ್ಥ್ಯತೆಯಿಂದ ಸಾರ್ವಜನಿಕ ವಾದಗಳಲ್ಲಿ ಭಾಗವಹಿಸದಿದ್ದರೂ, ಪ್ರತಿಕ್ರಿಯೆಗಳನ್ನು ಅನುಸರಿಸಿದರು ಮತ್ತು ಆದಷ್ಟು ಪತ್ರಮುಖೇನ ತಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಿದರು. ಇಂಗ್ಲೆಂಡಿನ ಚರ್ಚು ಮತ್ತು ಇತರ ಧಾರ್ಮಿಕ ಸಂಘಟನೆಗಳು ಡಾರ್ವಿನ್ ಅವರ ವಾದಗಳಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಡಾರ್ವಿನ್‌ರ ಆಪ್ತ ಮಿತ್ರರಾದ ಗ್ರೇ, ಹೂಕರ್, ಹಕ್ಸ್ಲಿ ಮತ್ತು ಲ್ಯೆಲ್ ಅವರನ್ನು ಬೆಂಬಲಿಸಿದರು.

ಕಾಲಕ್ರಮೇಣ ನೈಸರ್ಗಿಕ ಆಯ್ಕೆ ಸಿದ್ಧಾಂತಕ್ಕೆ ಹೆಚ್ಚು ಪುರಾವೆಯನ್ನು ನೀಡುವ ಪುಸ್ತಕಗಳು ಪ್ರಕಟಗೊಂಡವು. ಜೀವಶಾಸ್ತ್ರದ ಬುನಾದಿಯಾಗಿ ಈ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಈ ಸಾಧನೆಗೆ ೧೮೬೪ರ ನವೆಂಬರ್ ೩ರಂದು ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕವನ್ನು ಡಾರ್ವಿನ್ ಅವರಿಗೆ ನೀಡಲಾಯಿತು.

ಮನದ ನಿವೇದನೆ......

ನಿನ ಬಿರಿದ ಬೊಗಸೆ ಕಂಗಳಲಿ ನನ ಬಿಂಬ
ನನ್ನೆಸರೇ ನಿನ್ನುಸಿರ ತುಂಬಾ
ಕಿವಿಯ ಜುಮುಕಿಯ ಪ್ರತಿಫಲನ ನನ್ನ ಕಣ್ಣೆಡೆಗೆ
ತೊಂಡೆಹಣ್ಣಿನ ತುಟಿಯೊಡೆದು ಬರುವ
ಪ್ರತಿ ಮಾತು ಮಾತಿಗೂ ನನ್ನ ಬೆಸುಗೆ!!
ನಿನ ಮೊಣಕಾಲ ಗೆಜ್ಜೆಗಳು 'ಗಲ್ '
ಎನ್ನುವುದ ಮರೆತು ಯಾವ ಕಾಲವಾಯ್ತೋ?
ನನ್ನೆಸರನ್ನು ತಳುಕುಹಾಕುವುದ ಯಾವಾಗ ಕಲಿತವೋ?
ನಿಜಕ್ಕೂ ಸೋಜಿಗ!!!!!!!

ಕತ್ತಲ ಕಡಲಲ್ಲಿ ಸಿಲುಕಿದ್ದ ನನಗೆ
ಬೆಳಕಿನ ಗಾಳ ಹಾಕಿ ದಡ ತೋರಿದವಳು ನೀನು
ನಿಜ ಹೇಳು?! ಎಲ್ಲರ ಬಾಯಲ್ಲೂ ಅಬಲೆಯಾಗಿರುವ ನೀನು
ಇಷ್ಟೊಂದು ಪ್ರಭಲೆಯಾದದ್ದು ಯಾವಾಗ??!!!
ಬಾಲ್ಯದಲಿ ಗೆಳತಿ, ಯೌವ್ವನದಲಿ ನಲ್ಮೆಯ ನಲ್ಲೆಯಾದೆ
ಮುದಿತನದಲ್ಲಿ ಒಲುಮೆಯ ಅವ್ವನಗುವೆ!
ಹಣ್ಣುಹಣ್ಣಾದಾಗ ಅಲುಗಾಡದ ಅಡೂಗೂಲಜ್ಜಿ!!

ಕಾಲಚಕ್ರಕ್ಕಿಂತಲೂ ವೇಗವಾಗಿ ಸಾಗುವ,
ದಿನದೂಡವ ದಿನಕರನ ರಥವ ನಾಚಿಸುವ
ನಿನ ಬಾಳ ಬಂಡಿಯಲಿ ನಿನ್ನ ಜೊತೆ ಏಗಲು
ಕಾರ್ಪಣ್ಯದ ಆ ನೊಗದಲ್ಲಿ ನನಗೂ
ಸ್ವಲ್ಪ ಜಾಗ ಮಿಗಿಸು!
ಎಂದಿಗೂ ತೀರದ ಆ ನಿನ್ನ ಋಣಕ್ಕೆ ಸ್ವಲ್ಪ
ಬಡ್ಡಿಯನ್ನಾದರೂ ಕಟ್ಟುತ್ತೇನೆ!!!
ನನ್ನೆಗಲನಿತ್ತು!!!!!!

ಕೆಲ ಚುಟುಕುಗಳು..........

ಕಾಡುವುದೇಕೆ...????

ಒಂದು ದಿನವಾದರೂ ನನ್ನೆದುರು ನಿಂತು ಮಾತಾಡಲಿಲ್ಲ
ಕಣ್ಣರಳಿಸಿ ಬಟ್ಟಲು ಕಂಗಳಲ್ಲಿ ದಿಟ್ಟಿಸಲಿಲ್ಲ,
ಕುಡಿನೋಟದಲ್ಲಿ ಕದ್ದು ನೋಡಿದ್ದೇ ಇಲ್ಲ
ನನ್ನೆದೆಯ ಭಾವನೆಗಳ ತಾಕಲಾಟದ ಸದ್ದು
ನಿನಗೆ ಕೇಳಿಸಿತೋ? ಗೊತ್ತಿಲ್ಲ
ನಿನ್ನರಳಿದ ತುಟಿಗಳ ಮೆಲು ಮಂದಹಾಸ!!
ನನಗೆ ಕಾಣಲೇ ಇಲ್ಲ!!!
ಅದರೂ ನೀನ್ಯಾಕೆ ನನ್ನನ್ನು ಹೀಗೆ ಕಾಡುತ್ತೀಯೋ?
ಆ ದೇವರೇ ಬಲ್ಲ!!!


ಒಂದೇ ಸೂರು........

ದುಃಖ ದುಗುಡ ಮನದಲ್ಲಿ ಸಾವಿರಾರು...
ದುಮ್ಮಾನಕ್ಕೆ ಕಾರಣಗಳು ನೂರು ಮತ್ತಾರು.........
ಸಂತಸಕ್ಕೆ ಒಂದೇ ಸೂರು....
ಅದುವೇ ನಿನ್ನಯ ಚಂದದ ಹೆಸರು.......

ನನ್ನವಳು........

ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮನದ ಬಾಗಿಲ ಮೆಲ್ಲಗೆ ತಳ್ಳಿ
ಒಳ ಬಂದವಳೆ

ಮೆದು ಕೆಂಪು ಕೆನ್ನೆಯ ಮೇಲೆ
ಸಂಕೋಚದ ಸಂಕೋಲೆ ತೊಟ್ಟು
ಬೊಗಸೆ ಕಂಗಳ ತುದಿಯಲ್ಲಿ
ಇಣುಕುವ ಕಳ್ಳ ಓರೆನೋಟ!

ಮಿರುಗುವ ಕೆಂದುಟಿಯಲ್ಲುದುಗಿದ
ಸಿಹಿ ಮೆಲು ಮಂದಹಾಸ
ಹಣೆಯ ಮೇಲ ಕರಿ ಕುರುಳು
ಚೆಲುವ ಮೊಗದಲ್ಲಿ!

ಗುಂಗುರು ಮುಡಿಯ ತುಂಬ
ಮೊಲ್ಲೆ ಹೂವು
ಕಟಿಯುದ್ದದ ಜಡೆಯ ತುದಿಯಲಿ
ಮಿರುಗುವ ಕರಿ ಬಿಲ್ಲೆ ಹೊಳೆವ ಕುಚ್ಚು

ಘಲ್ ಘಲ್ ಸದ್ದು ಬೆಳ್ಳಿ ಗೆಜ್ಜೆಯದಲ್ಲ
ನಾಚಿ ನಡುಗುವ ಎದೆಯ ಡವ! ಡವ!
ಚಿಮ್ಮಿ ಬರುವ ಪ್ರತಿ ನೆತ್ತರ ಹನಿ ಹನಿ
ನನ ಕೂಗಿ ಕರೆಯುವ ಇನಿದನಿ!

ಕಣ್ಮುಚ್ಚಲು ಸ್ನಿಗ್ದ ಮೊಗದ ಸಿಂಚನ
ಕಣ್ತೆರೆಯೇ ಹೊಂಬೆಳಕ ಸಿರಿಚಂದನ
ಕಾಲ ಕೂಪವ ಧಾಟಿ ಈಜುವ ಜೀವನದಿ
ನಿನ್ನೆದೆಯ ಸಮುದ್ರದಿ ಉದುಗಿಬಿಡುವೆ!!
ನನ್ನವಳೇ........

ಭಾಷೆ ಬರದ ಊರಲ್ಲೊಂದು ದಿನ !!!.....

ಸುಮಾರು 2005 ರ ಸೆಪ್ಟಂಬರ್ ತಿಂಗಳು ನನ್ನವಳು ಒಂದು ಭಾನುವಾರ ಬೆಳಿಗ್ಗೆ ಎದ್ದು
"ರೀ ದಿನಾ ನನ್ನನ್ನ ಅಣ್ಕುಸ್ತೀರಾ?! ನೋಡಿ ಇವತ್ತು ನಾನೇ ತರಕಾರಿ ವ್ಯಾಪಾರನ ತೆಲುಗಿನಲ್ಲೇ ಮಾತಾಡಿ ಹೆಂಗ್ ಮಾಡ್ತೀನಿ!! ಅಂತ!"
ನಾನು ಹೊದ್ದುಕೊಂಡು ಮಲಗಿದ್ದ ರಗ್ಗನ್ನು ಎಡಗೈಲ್ಲಿ ಎಳೆಯುತ್ತಾ, ಬಲಗೈಯಲ್ಲಿ ಕಾಫಿಯನ್ನು ಮುಖಕ್ಕೆ ಹಿಡಿಯುತ್ತಾ ಚಾಲೆಂಜ್ ಮಾಡುತ್ತಾ ಹೇಳಿದಳು. ಇವಳ 'ತೆಲುಗು ಭಾಷೆ ಕೇಳಬೇಕಲ್ಲಪ್ಪಾ!' ಎನ್ನುವ ಪೀಕಲಾಟ ವನ್ನು ನೆನೆದು ಇದ್ದಬದ್ದ ನಿದ್ದೆಯೆಲ್ಲಾ ಹಾರಿ ಹೋಗಿ ದಡಕ್ಕನೆದ್ದು ಕುಳಿತು ನಿತ್ಯವೂ ಹೇಳುತ್ತಿದ್ದ "ಕರಾಗ್ರ ವಸತೇ........" ಕೂಡ ಹೇಳದೆ ಕಾಫಿ ತೆಗೆದುಕೊಳ್ಳೂತ್ತಾ
"ಇವತ್ತು ಬೇಡಮ್ಮ ಇವತ್ತು ಕನ್ನಡಸಂಘದಲ್ಲಿ ಫಂಕ್ಷನ್ ಇದೆ ನಾಳೆ ಮಾಡು, ಇವತ್ತು ನಿನ್ ತರ್ಕಾರಿ ಅವಶ್ಯಕತೆ ಇಲ್ಲ ಅನ್ಸುತ್ತೆ'' ಅಂದೆ.
"ಇಲ್ಲಾ! ಇವತ್ತು ಭಾನ್ವಾರ ಏನೂ ಕೆಲ್ಸಾ ಇಲ್ಲಾ! ನಂಜೊತೆ ನೀವು ಬರ್ತಾ ಇದೀರಾ!! Ok!!" ಅಂತಾ ಫರ್ಮಾನು ಹೊರಡಿಸಿ ಅಡುಗೆ ಮನೆ ಸೇರಿದಳು.
ನನಗೇನೋ ನನ್ನ ಮಡದಿಯ ಕಂಡರೆ ಬೆಟ್ಟದಷ್ಟು ಪ್ರೇಮವೇ. ಆದರೆ ಅವಳ ತೆಲುಗು ಕಂಡರೆ ಮಾತ್ರ ಭಯ..
ಇದೆಲ್ಲಾ ನಡೆದದ್ದು ವಿಶಾಖಪಟ್ಟಣದಲ್ಲಿ.
ನಾನು ಮಂಡ್ಯದಲ್ಲಿ ಮಾಡುತ್ತಿದ್ದ ಕೆಲಸ ಮೆಚ್ಚಿ ನನ್ನ ಕಂಪನಿ ನನಗೆ ಪ್ರಮೋಷನ್ ನೀಡಿ ವಿಶಾಖಪಟ್ಟಣಕ್ಕೆ ವರ್ಗಾಯಿಸಿತ್ತು.
ಹೊಸ ಜಾಗ, ಹೊಸ ಜನ, ಹೊಸ ಜವಾಬ್ದಾರಿ ಹೇಗೋ? ಏನೋ? ಎಂಬ ಅಳುಕಿನಲ್ಲೇ ವಿಶಾಖಪಟ್ಟಣಕ್ಕೆ ಕಾಲಿಟ್ಟೆನಾದರೂ ಅಲ್ಲಿನ ವಾತಾವರಣಕ್ಕೆ ಬೇಗ ಹೊಂದಿಕೊಂಡು ನನಗೆ ಬರುತ್ತಿದ್ದ ಹರಕಲು ಮುರುಕಲು ತೆಲುಗಿನಲ್ಲೇ ವ್ಯವಹರಿಸಲು ಆರಂಭಿಸಿದವ, ತೆಲುಗರ ಸಮಾನಕ್ಕೆ ತೆಲುಗು ಮಾತನಾಡುವುದ ಕಲಿತೆ. ಮೊದಲ 3 ತಿಂಗಳು ಕನ್ನಡ ಮಾತನಾಡಬೇಕೆಂದರೆ ನನ್ನವಳ ಮತ್ತು ಅಪ್ಪ ಅಮ್ಮನ ಬಳಿ ಫೋನ್-ಇನ್-ನೇರ ಕಾರ್ಯಕ್ರಮವೊಂದೇ ದಾರಿಯಾಗಿತ್ತು. ಏಕೆಂದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು, ಒಳ್ಳೆಯ ಕಡೆ ಮನೆ ಮಾಡಿದನಂತರ ನನ್ನವಳನ್ನು ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದರಿಂದ ಹೊಟ್ಟೆಗೆ ತಾತ್ಕಾಲಿಕ ಸಂಚಕಾರ ಬಂದೊದಗಿತ್ತು. ಇದಲ್ಲದೆ ವಿಶಾಖಪಟ್ಟಣದಲ್ಲೇ ಇದ್ದ "ಕಾವೇರಿ ಕನ್ನಡ ಸಂಘ" ದ ಸದಸ್ಯರೂ ನನ್ನ ಸಹಾಯಕ್ಕೆ ಬಂದರು. ನಿಜವಾಗಿಯು ನನಗೆ ನನ್ನ ಕನ್ನಡದ ಮಹತ್ವ ಅರಿವಾಗಿದ್ದು ನಾನು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಹೋದನಂತರವೇ. ಹೊಸದರಲ್ಲಂತೂ ನೀರಿನಿಂದ ಹೊರಬಂದ ಮೀನಿನಂತಾಗಿದ್ದೆ. ಏಕೆಂದರೆ ಅಲ್ಲಿನವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಅಷ್ಟಾಗಿ ಬರುತಿರಲಿಲ್ಲ. ಆದ್ದರಿಂದಲೇ ನನಗೆ ತೆಲುಗು ಕಲಿಯುವ ಅನಿವಾರ್ಯತೆ. ಅಂತಹ ಸಂದರ್ಭದಲ್ಲಿ ಯಾರಾದರೂ ಕನ್ನಡ ಮಾತನಾಡುವವರು ಸಿಕ್ಕರೆ ಮರುಭೂಮಿಯಲ್ಲಿ 'ಓಯಸಿಸ್ ' ಸಿಕ್ಕಂತಾಗುತಿತ್ತು. ಆದ್ದರಿಂದಲೇ ನಾನು ಸಹ ಸಂಘದ ಸಕ್ರೀಯ ಸದಸ್ಯನಾಗಿದ್ದೆ.
3 ತಿಂಗಳ ನಂತರ ನನ್ನವಳ ಆಗಮನ. ಅವಳೂ ಸಹ ಎಂ.ಎಸ್ಸಿ.(Biochemistry) ಮುಗಿಸಿದ್ದರಿಂದ A.Q.J Pg college ನಲ್ಲಿ ಉಪನ್ಯಾಸಕಳಾಗಿ ಸೇರಿಕೊಂಡಿದ್ದಳು. ಅವಳಿಗೆ ತೆಲುಗು ಕಲಿಯುವ ಅವಶ್ಯಕತೆ ಇಲ್ಲವಾದರೂ ಅವಳ ವಿಧ್ಯಾರ್ಥಿಗಳಿಗಾಗಿ ಅವಳಿಗೆ ತೆಲುಗಿನ ಅನಿವಾರ್ಯತೆ ಇತ್ತು, ಆದರೂ ಅವಳು ಅದನ್ನು ಕಲಿಯುವ ಗೋಜಿಗೆ ಹೋಗಲಿಲ್ಲ. ಅಪ್ಪಿ ತಪ್ಪಿ ಅಕ್ಕಪಕ್ಕದ ಅಪಾರ್ಟ್'ಮೆಂಟ್ ನವರೇನಾದರೂ
"ಮೀ ಇಂಟ್ಲೋ ಈವಾಳ್ಳ ಏ ಸಾಂಬಾರ್ ಚೇಸ್ಯಾರಂಡೀ?" (ಇವತ್ತು ನಿಮ್ಮ ಮನೇಲಿ ಸಾಂಬಾರೇನು ಮಾಡಿದ್ದೀರಾ?) ಅಂತ ಕೇಳಿದ್ರೆ ಆ ದಿನ ಸಾಂಬಾರಿಗೆ ಹಾಕಿದ್ದ ತರಕಾರಿ ತಂದು ಅವರ ಮುಂದೆ ಹಿಡಿಯುತ್ತಿದ್ದಳು. ಈ ತಮಾಷೆ ನೋಡುವ ಸಲುವಾಗೆ ಅವರೆಲ್ಲಾ ನನ್ನವಳನ್ನು ಹಲವಾರು ಪ್ರಶ್ನೆ ಕೇಳಿ ಮಜಾ ತೆಗೆದು ಕೊಳ್ಳುತ್ತಿದ್ದರು.ಅಷ್ಟೆ ಅಲ್ಲ ನಾನು ಅವಳ ತೆಲುಗನ್ನು ಅಣಕಿಸಿ ಮಜಾನೋಡುತ್ತಿದ್ದೆ.
ಒಮ್ಮೆ ಕಾಲೇಜಿನಿಂದ ಬರುವಾಗ ಬಸ್ಸು ಸಿಗದಿದ್ದರಿಂದ, ಆ ದಿನ ನಾನು ಸಹ ಹೊರ ಊರಿಗೆ ಹೋಗಿದ್ದರಿಂದ ಫೋನ್ ಮಾಡಿದ ಅವಳಿಗೆ ಆಟೋದಲ್ಲಿ ಹೋಗುವಂತೆಯೂ, ಅವರು ಇಪ್ಪತ್ತು (ಇರುವೈ) ರೂಪಾಯಿ ಕೇಳುತ್ತಾರೆ ನೀನು 15 ರೂಪಾಯಿ ಕೊಟ್ಟು ಮನೆಗೆ ಹೋಗು ಎಂದು ಸಹ ಸಲಹೆಯಿತ್ತೆ. ಅರ್ಧ ಗಂಟೆಯ ನಂತರ ನನ್ನವಳಿಂದ ಮತ್ತೆ ನನಗೆ ಫೋನ್ ಬಂತು..
"ನೋಡ್ರೀ ಇವತ್ತು ನಾನು ತೆಲುಗಿನಲ್ಲೇ ಮಾತಾಡಿ ಆಟೋದವನ ಬಳಿ ದುಡ್ಡು ಉಳಿಸಿದ್ದೀನಿ. ಗೊತ್ತಾ?" ಅಂದಳು.ನಾನಂತೂ ಹಿಗ್ಗಿಹೋದೆ. 'ಕಡೆಗೂ ನನ್ನವಳು ಸ್ವಲ್ಪವಾದರೂ ತೆಲುಗು ಕಲಿತಳಲ್ಲ' ಅನ್ನಿಸಿ
"ಪರ್ವಾಗಿಲ್ವೇ!! ಏನಾಯ್ತು ಹೇಳಮ್ಮ?".
"ಆಟೋದವನು 25 ರೂ ಆಗುತ್ತೆ ಅಂದ ನಾನು seventeen rupees only ಅಂತ ಹೇಳ್ದೆ. ಅವನು ಅಷ್ಟಕ್ಕೆ ಮನೆ ತಲುಪಿಸಿದ"
ನಮ್ಮ ಮನೆಯಿಂದ ಇವಳ ಕಾಲೇಜಿಗೆ 3 ಕಿ.ಮೀ ಮಿನಿಮಮ್ ಇರೋದು 8 ರೂ. ಅಂದ್ರೆ ಮೀಟರ ಹಾಕಿದ್ರೆ 12 ರೂ ಆಗುತ್ತೆ, ಸುಮ್ಮನೆ ಯಾಕೆ ಅವರತ್ರ ಜಗಳ ಅಂತ 15 ರೂ ಕೊಟ್ಟು ಮನೆ ಸೇರುತಿದ್ದೆವು. ಇವಳು 17 ರೂ ಅಂತಿದ್ದಾಳೆ, ಅಂದ್ರೆ ಇವಳ ತೆಲುಗಿನಿಂದ ಏನೋ ಅವಾಂತರ ಆಗಿರ್ಬೋದು ಅನ್ನಿಸಿ,
"ಆಟೋ ದವ ತೆಲುಗಿನಲ್ಲಿ ತಾನೆ ದುಡ್ಡು ಕೇಳಿದ್ದು?" ಅಂದೆ.
"ಹೌದು!"
"ಹಾಗಿದ್ದರೆ ಹೇಳು ಆತ ತೆಲುಗಿನಲ್ಲಿ ಎಷ್ಟು ಕೇಳಿದ?"
"ಹೂಂ!!..... 'ಪದಿಹೆನ್ನು' ಅಂದ, ಇಲ್ಲಾ ಕೊಡೋದು seventeen rupees only ಅಂತ ಅಂದೆ, ಅವನು ಮಾತನಾಡದೆ ಒಪ್ಪಿಕೊಂಡ" ಅಂದಳು.
ಹೊಟ್ಟೆ ಹಿಡಿದು ನಗುವ ಸರದಿ ನನ್ನದಾಗಿತ್ತು!
ನಾನು ನಗುವುದನ್ನು ನೋಡಿ ಅವಳಿಗೆ ತುಂಬಾ ಸಂಕೋಚ ಸಿಟ್ಟು ಒಟ್ಟೊಟ್ಟಿ ಬಂತೆಂದು ಕಾಣುತ್ತದೆ.
" ಈ ಗಂಡಸರೆಲ್ಲಾ ಹೀಗೇನೇ! ಹೊಟ್ಟೆಕಿಚ್ಚಿನೋರು!ತಾವೇ...."
"ಅಮ್ಮ ತಾಯಿ 'ಪದಿಹೆನ್ನು' ಅಂದ್ರೆ 15 ಅಂತ, ಅಂದ್ರೆ ಅವನು 15ರೂಪಾಯಿ ಕೇಳಿದಾನೆ. ನೀನು 17 ರೂ ಕೊಟ್ಟಿದ್ದೀ....ಹ್ಹಿ..ಹ್ಹಾ..ಹ್ಹಾ....."
ಅವಳ ಮುಖ ಇಂಗು ತಿಂದ ಮಂಗನಾಗಿತ್ತು...

ಅದಕ್ಕೇ ಅವಳ ತೆಲುಗು ಅಂದ್ರೆ ನನ್ಗೆ ನಡುಕ!!!......

ಶನಿವಾರ, ನವೆಂಬರ್ 21, 2009

ಕನ್ನಡ ಬೆಳೆಯಲು....ಉಳಿಯಲು........

ನಮ್ಮ ಕನ್ನಡಕ್ಕೆ ಚುನಾಯಿತ ಸರಕಾರಗಳು, ಸೊಕ್ಕಿದ ಅಧಿಕಾರಿವರ್ಗ, ಅಷೇ ಏಕೆ ಕನ್ನಡಿಗರಾದ ನಾವೆ ಎಷ್ಟೋ ಸಾರಿ ಮಾಡಿದ ಅನ್ಯಾಯಗಳು ಎಲಾವೂ ಬಹುಷಃ ನಮಗೆ ಜ್ಗ್ನಾಪಕ ಬರುವುದು "ನವೆಂಬರ್ ತಿಂಗಳಲ್ಲಿ" ಮಾತ್ರ.
ಈಗಾಗಲೇ "ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇನು ಕಡ್ಡಾಯವಲ್ಲ" ಎಂದು ಪ್ರಹಾರ ಮಾಡುವುದಕ್ಕೆ ಮುನ್ನವೇ ನಮ್ಮ ಮಕ್ಕಳಿಗೆ ಕನ್ನಡಬಿಟ್ಟು ಇಂಗ್ಲೀಷ್ ಕಲಿಸುವುದನ್ನು ಪ್ರಾರಂಭಿಸಿ ಅದೆಷ್ಟೋ ಯುಗಗಳಾಗಿದ್ದವು. ಕನ್ನಡದಲ್ಲಿ ಏನಿದೆ? ಎನಿಸಿ 'ನಾಯಿಮರಿ, ನಾಯಿಮರಿ ತಿಂಡಿಬೇಕೆ' ಕಲಿಸುವುದ ಮರೆತು ನಾಲಿಗೆಯೇ ಹೊರಳದ 'ಟ್ವಿಂಕಲ್ ಟ್ವಿಂಕಲ್ ' ನಮ್ಮ ಮಕ್ಕಳಿಗೆ ಅಪ್ಯಾಯಮಾನವಾಗಿದೆ. "ಅ" ಅಂದ್ರೆ 'ಅಮ್ಮ' ಅಂತ ನಮ್ಮ ಗುರುಗಳಿಂದ ಕಲಿತ ನಾವು "A" for apple "ಕಲಿಸಿ ಮೇಷ್ಟ್ರೇ" ಎಂದು ನಮ್ಮ ಮಕ್ಕಳ ಗುರುಗಳಿಗೆ ತಾಕಿತು ಮಾಡುತ್ತೇವೆ. ಇಲ್ಲಿ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿವೇಚಿಸುವ ಗೋಜಿಗೆ ನಾವ್ಯಾರು ಹೋಗಲ್ಲ, ಏಕೆಂದರೆ ಇಲ್ಲಿ ಇದು "ನಮ್ಮ ಮಕ್ಕಳ ಭವಿಷ್ಯ" ಎಂಬ ಗುಮ್ಮನನ್ನು ನಾವೇ ಮುಂದಿಡುತ್ತೇವೆ. ಕನ್ನಡ ಶಾಲೆಯಲ್ಲಿ ಕಲಿತು ದೊಡ್ಡವರಾದವರ ಬಗ್ಗೆ ಯಾರಾದರು ತಿಳಿಹೇಳಿದರೆ 'ಅದು ಆ ಕಾಲ ಇದು ಈ ಕಾಲ' ಎಂದು ಸಿನಿಕತನ ತೋರುತ್ತೇವೆ.
ಇನ್ನು ನಮ್ಮ 'ಬುದ್ದಿಜೀವಿ' ಅನ್ನಿಸಿಕೊಂಡ ವರ್ಗವು ನಮಗೆ ಸರಿಯಾದ ಮಾರ್ಗ ತೋರುವುದನ್ನು ಮರೆತು ಬೇಕಿಲ್ಲದ ಒಣಜಂಭ, ಬಡಾಯಿ ಪ್ರಚಾರದಲ್ಲಿ ಕಾಲ ಕಳೆಯುವುದಕ್ಕೆ ಸಮಯವಿಲ್ಲ.
ಹಾಗಾದರೆ ಕನ್ನಡವನ್ನು ಮುಂದಿನ ಪೀಳಿಗೆಗೆ ಕನ್ನಡವನ್ನಾಗಿಯೇ ಉಳಿಸಲು, ಆಧುನಿಕತೆಯ ಸವಾಲಿಗೆ ಮೈಯೊಡ್ಡಿ, ಪರಭಾಷೆಗಳ ಮಧ್ಯೆ ಎದ್ದುನಿಲ್ಲುವ ಹಾಗೆ ಮಾಡುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ.
ಬಹುಶಃ ಈ ಮಾತನ್ನು ಅಲ್ಲಲ್ಲಿ ಯಾವಗಲೂ ಕೇಳಿ, ಕೇಳಿ ಎಲ್ಲರಿಗೂ ಬೇಸರವಾಗಿರುತ್ತದೆ ಎಂದು ನನಗೆ ತಿಳಿದಿದೆ.
ಮತ್ತೆ ಮತ್ತೆ ಅದೇಮಾತನ್ನು ಆಡುವುದಕ್ಕಿಂತ ನನಗೆ ತೋಚಿದ ಕೆಲ ಸಲಹೆಗಳನ್ನು ಕೆಳಗೆ ನಮೂದಿಸಿದ್ದೇನೆ.
1) ಮನೆಯಲ್ಲಿ ಕನ್ನಡವೇ ಇರಲಿ, ಮಕ್ಕಳು ಶಾಲೆಯಲ್ಲಿ ಕಲಿಯುವುದನ್ನು ಕಲಿಯಲಿ. ಮನೆಯಲ್ಲಿ ಕನ್ನಡ ಹೇಳಿಕೊಟ್ಟರೆ ಒಳ್ಳೆಯದು.
2) http://kn.wikipedia.org ಇದು ಕನ್ನಡದ ಅಂರ್ತಜಾಲದ ವಿಶ್ವಕೋಶ, ಇದನ್ನು ಯಾರು ಬೇಕಾದರು, ಸಂಪಾದಿಸಬಹುದು, ಅಂದರೆ ತಮಗೆ ತಿಳಿದ ಒಳ್ಳೆಯ ವಿಚಾರಗಳನ್ನು ಸೇರಿಸಲು ಅವಕಾಶವಿದೆ. ಆದರೆ ಅದು ವಯಕ್ತಿಕ ವಿಚಾರಧಾರೆ ಮಂಡಿಸುವ ವೇದಿಕೆಯಲ್ಲ. ಕನ್ನಡದ ಬಗ್ಗೆ, ತಾವು ತಿಳಿದ ವಸ್ತುಗಳ ಬಗ್ಗೆ, ಕರ್ನಾಟಕದ ಸ್ಥಳಗಳ ಬಗ್ಗೆ, ನಿಮಗೆ ತಿಳಿದ ವಿಶ್ವದ ಯಾವುದೇ ಜಾಗದ ಬಗ್ಗೆ, ದೇಶದಬಗ್ಗೆ ವ್ಯಕ್ತಿಗಳ ಬಗ್ಗೆ ಕನ್ನಡದಲ್ಲೇ ಬರೆಯಬಹುದು. ನಿಮಗೆ ತಿಳಿದಿರಲಿ ಭಾರತದ ಇತರ ಭಾಷೆಗಳ ಲೇಖನಗಳು ಈಗಾಗಲೇ 20,000 ಕ್ಕೂ ಹೆಚ್ಚಿವೆ, ತೆಲುಗಿನಲ್ಲಿ ಸುಮಾರು 50,000 ಲೇಖನಗಳಿವೆ, ತಮಿಳಿನಲ್ಲಿ 22,000 ಹಿಂದಿಯಲ್ಲಿ ಸುಮಾರು 45,000 ಲೇಖನಗಳಿವೆ, ಅದೇ ರೀತಿ ಇಂಗ್ಲೀಷಿನಲ್ಲಿ 4 ಲಕ್ಷಕ್ಕೂ ಹೆಚ್ಚು ಲೇಖನಗಳಿವೆ. ದುರಂತವೆಂದರೆ ಕನ್ನಡದಲ್ಲಿ ಇವತ್ತಿನವರೆಗು ಇರುವ ಲೇಖನಗಳ ಸಂಖ್ಯೆ ಕೇವಲ 7,513 ಲೇಖನಗಳು ಮಾತ್ರ.
ಪ್ರತಿಯೊಬ್ಬ ಕನ್ನಡಿಗನೂ, ಪ್ರತಿಯೊಬ್ಬ ಅಂರ್ತಜಾಲ ಉಪಯೋಗಿಸುವ ಕನ್ನಡಿಗನು ದಿನಕ್ಕೊಂದು ಅಲ್ಲದಿದ್ದರೂ wikipidea ದಲ್ಲಿ ವಾರಕ್ಕೊಂದು ವಿಷಯ ಲೇಖನ ಬರೆದರೆ ಕನ್ನಡ ಬಗ್ಗೆ ವಿಶ್ವಕ್ಕೇ ಹೆಚ್ಚು ತಿಳಿಸಿದಂತಾಗುತ್ತದೆಯಲ್ಲವೆ.
ಇದು ನನ್ನ ಅಭಿಪ್ರಾಯ. ನಿಮಗೂ ಸರಿ ಅನ್ನಿಸಿದರೆ ಆಧುನಿಕಥೆಗೆ ಮೈಯೊಡ್ಡಿ ಕೊಡವಿ ನಿಲ್ಲಲು ಸಹಾಯಕವೆನಿಸಿದರೆ ಈ ವಿಚಾರವನ್ನು ನಿಮ್ಮ ಇತರ ಮಿತ್ರರಿಗೂ ತಿಳಿಸಿ, ಹಾಗು ನೀವು ಕನ್ನಡ ಬೆಳೆಸಿ.

"ಸಿರಿಗನ್ನಡಂ ಗೆಲ್ಗೆ"

ದಿನಚರಿ..

ಮುಸ್ಸಂಜೆಯಲಿ ದುಡಿದು ಮನೆಗೆ ಬಂದಾಗ
ಬಾಗಿಲಲಿ ನನ್ನವಳ ಮಲ್ಲಿಗೆಯ ನಗು
ಹಬೆಯಾಡುವ ಬಿಸಿ ಕಾಫಿ
ಕೈಯಲ್ಲಿ ಟಿ. ವಿ. ಯ ರಿಮೋಟು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆಧುನಿಕ ಸರ್ವಜ್ನ

ಕೈಲೇಕೆ ಲ್ಯಾಪ್ ಟಾಪು?
ಕಿವಿಯಲ್ಲೇಕೆ ಮೊಬೈಲು ಬಿಟ್ಟಾಕಿ ಈ ಐಲು ಪೈಲು
ಇತ್ಯಾದಿ ಬೈಗುಳಗಳ ಸಾಲು
ಮಡದಿಯ ಬಾಯಿಂದ ಮುತ್ತುದುರಲು
ಕರ್ಣಗಳ ಕೈಯಿಂದ ಮುಚ್ಚಿಕೊ ಎಂದ ಆಧುನಿಕ ಸರ್ವಜ್ನ

ಗಂಟೆಯಾಯ್ತು ಹತ್ತು
ಕಣ್ಣುರೆಪ್ಪೆಗಳು ಕೂಡಿಕೊಳ್ಳುವ ಹೊತ್ತು
ಕಣ್ಮುಚ್ಚಲು ಬಾಸಿನಿಂದ ಫೋನು ಬತ್ತು
ತಲೆಯಾಡಿಸಿ ಮಲಗಲು ನಿದ್ದೆಹಾರಿ ಹೋಗಿತ್ತು
ಹಾಸಿಗೆಯಲಿ ಹೊರಳಾಡಿ ಬೆಳಕು ಹರಿದಿತ್ತು ಆಧುನಿಕ ಸರ್ವಜ್ನ

ಸರ್ವಜ್ನನ ಕ್ಷಮೆ ಕೋರಿ.......

ಪಾನಿ ಪೂರಿ..........

ದಿನವೆಲ್ಲಾ ಸುತ್ತಾಡಿ ಫೀಲ್ಡ್ ವರ್ಕ್ ಮುಗಿಸಿ ಮನೆಗೆ ಬಂದಾಗ ತಲೆ ಧಿಂ! ಎನ್ನುತ್ತಿತ್ತು.
ಏಕೋ ಏನೋ ಇತ್ತೀಚೆಗೆ ಮನೆಗೆ ಬಂದಕೂಡಲೆ 'ಯಾಕಾದರೂ ಮನೆಗೆ ಬಂದನಪ್ಪಾ?' ಅನಿಸುತ್ತಿತ್ತು. ಮಗುವಿನ ಮುದ್ದಾದ ತೊದಲುನುಡಿಗಳಿಂದಷ್ಟೇ ಸ್ವಲ್ಪ ಸಾಂತ್ವಾನದ ಸಿಂಚನ.
ಕೈಯಿಂದ ಬ್ಯಾಗು ತೆಗೆದುಕೊಂಡು "ಕಾಫಿ ತರ್ತೀನಿ, ಸ್ವಲ್ಪ ಹಾಗೆ ಹಾಸಿಗೆಯಲ್ಲಿ ಉರುಳಿಕೊಳ್ಳಿ" ಎಂಬ ಹಸನ್ಮುಖಿ ಮಡದಿಯ ಪ್ರೀತಿಯ ನುಡಿಗಳು ಬರಬಹುದೇನೋ ಅಂದುಕೊಂಡು ಅವಳ ಮುಖ ನೋಡಿದೆ.
ಅಷ್ಟರಲ್ಲಿ ಬಚ್ಚಲುಮನೆಯಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಕಂದ "ಅಪ್ಪಾ! ಅಮ್ಮ ಅಮ್ಮ ! ಅಪ್ಪ ಬತ್ತು" ಎನ್ನುತ್ತಾ ಓಡಿಬಂತು.
ಅದುವರೆಗು ಆಗಿದ್ದ ಬೇಸರವೆಲ್ಲಾ ಕಂದನ ಬಟ್ಟೆಗಾಗಿದ್ದ ನೀರಿನ ಜೊತೆ ಬೆರೆತು ಕರಗಿ ಹೋಯ್ತು.
"ಅಲೆಲೆಲೆಲೇ ಪುಡ್ಡು ಬಾರೋ ರಾಜ, ಅಪ್ಪಗೆ ಮುತ್ಚ ಕೊಲೋ'' ಎನ್ನುತ್ತಾ ಕಂದನನ್ನು ಬಾಚಿ ತಬ್ಬಿ ಹಾಸಿಗೆಯಲ್ಲಿ ಉರುಳಾಡಿದೆ.
" ಅಪ್ಪ ಕೂಲಲಿ (ಸ್ಕೂಲಲ್ಲಿ) ಮಿಚ್ಸು ಕೊತಮ್ಮುಗೆ (ಗೌತಮ್ ಗೆ) ಒರುದ್ಬುತ್ರು''
"ಆಕೋ ಹೊಡಿದ್ರೋ ಪುಟ್ಟಾ? ಅವ್ನೇನ್ ಮಾಡ್ದ?"
"ಆನು ನಂತಳೆಕೆ (ನಂ ತಲೆಗೆ) ಮನ್ನು ಉಯಿಬುತ್ಟ (ಉಯಿದುಬಿಟ್ಟ) ಅಕ್ಕೆ ಒರುದ್ಬುತ್ರು''
" ಹೌದಾ ಕಂದಾ ಅಂಗೆಲ್ಲಾ ಮಣ್ಣಲ್ಲಿ ಜಾಸ್ತಿ ಆಡ್ಬಾರ್ದು ಕಂದ, ಅಂಗೆಲ್ಲ ಆಡಿದ್ರೆ ಬಟ್ಟೆ ಕೊಳೆಯಾಗ್ಬಿಡುತ್ತೆ"
"ಹೂಂ ಆಮೇಕೆ...................................." ಹೀಗೆ ಮುಂದುವರಿಯುತ್ತಲೇ ಇತ್ತು.
ಮಗುವಿನ ಜೊತೆ ನಾನು ಮಗುವಾಗಿಬಿಟ್ಟೆ. "ಕಾಫಿ" ಎನ್ನುವ ಮಡದಿಯ ಕೂಗಿಗೆ ನಾನು ಬಾಹ್ಯಪ್ರಪಂಚಕ್ಕೆ ಬಂದಿದ್ದು.
ಮದುವೆಯಾಗಿ ಕೇವಲ ನಾಲ್ಕೇ ವರ್ಷ, ಆದರೂ ಇಬ್ಬರ ನಡುವೆ ಮಾತುಗಳಿಗೆ ಸಾಕಷ್ಟು ಬರ! ಮಾತನಾಡಿದರೆ 'ಎಲ್ಲಿ ಜಗಳವಾಗುತ್ತೋ' ಅನ್ನುವ ಆತಂಕ ಆನಂತರ ಜಗಳಾ 'ಎಲ್ಲಿ ತಲುಪುತ್ತದೋ' ಎನ್ನುವ ಭಯ ಇಬ್ಬರನ್ನೂ ಕಾಡುತ್ತಿದ್ದರಿಂದಲೋ ಏನೋ ಮಾತುಗಳು ಇಬ್ಬರ ಬಾಯಿಂದಲೂ ಬಹಳ ತುಲನಾತ್ಮಕವಾಗಿ ಹೊರ ಬರುತ್ತಿದ್ದವು.
" ಅಪ್ಪಾ, ಪ್ಬುಕ್ಕು (ಬುಕ್) ತತ್ತಿನ ತಡೀ" ಎನ್ನುತ್ತಾ ಕೈಯಿಂದ ಜಾರಿ ಪಕ್ಕದ ಕೊಠಡಿಗೆ ಮಗು ಓಡಿದ ನಂತರ 'ಸರಕ್ ಸರಕ್'' ಎಂಬ ಕಾಫಿ ಹೀರುವ ಕರ್ಕಶ ಶಬ್ದವಷ್ಟೇ ಬೆಡ್ ರೂಮನ್ನು ಆವರಿಸಿತ್ತು.
" ನಾಲ್ಕು ದಿನ ಎಲ್ಲದ್ರೂ ಹೋಗ್ಬರ್ತೀನಿ" ಎಂದು ಮೌನ ಮುರಿದ ಮಡದಿಯ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗದೆ ಸುಮ್ಮನಾದೆ.
ಅವಳು ಮಾತ್ರ ಹಾಗೆ ನೋಡುತ್ತಾ ಕುಳಿತಿದ್ದಳು, ನನ್ನ ಉತ್ತರಕ್ಕೆ ಕಾಯುತ್ತಾ.
ಮೊದಲಾಗಿದ್ದರೆ ಎಲ್ಲಾದ್ರೂ ಇರಲಿ ಅವಳ 'ಅಪ್ಪನ ಮನೆಗೆ ಹೋಗ್ತೀನಿ' ಅಂದ್ರೆ ನಖಶಿಖಾಂತ ಉರಿಯುತ್ತಿತ್ತು, ಆಗ ಅವಳು ನನ್ನನ್ನು ರಮಿಸಿ ಸಮಾಧಾನ ಮಾಡಿ 'ತಾನು ಹೇಳಿದ್ದು ತಮಾಷೆಗೆ' ಅನ್ನುತ್ತಿದ್ದಳು. ನಾನು ಸಹ ಸುಖಾಸುಮ್ಮನೆ ಸಿಟ್ಟು ಮಾಡಿಕೊಂಡದ್ದು 'ತಪ್ಪಾಯಿತು ಸಾರ್ರಿ' ಎಂದು ಕೇಳಿ ಅವಳನ್ನು ನಾನೂ ರಮಿಸಿ, ಹೊರಕ್ಕೆ ಕರೆದು ಕೊಂಡು ಹೋಗಿ ಪಾನಿ ಪುರಿ ಕೊಡಿಸಿ, ಸುತ್ತಾಡಿಸಿ ಮನೆಗೆ ಕರೆತರುತ್ತಿದ್ದೆ, ಆದರೆ ಇವತ್ತು ಹಾಗೆನಿಸಲಿಲ್ಲ, ಬದಲಾಗಿ "ಎಲ್ಲಾದ್ರು ಅಂದ್ರೆ, ಎಲ್ಲಿಗೆ?" ಎಂದೆ.
ನನ್ನ ಈ ಪ್ರತಿಕ್ರಿಯೆಯನ್ನು ಅವಳು ನಿರೀಕ್ಷಿರಲಿಲ್ಲವೇನೋ? ಅವಳ ಕಣ್ಣಂಚಿನಲ್ಲಿ ನೀರು ಹರಳುಗಟ್ಟತೊಡಗಿತು. ಪಕ್ಕಕ್ಕೆ ಮುಖ ತಿರುಗಿಸಿ ಗದ್ಗದಿತ ಕಂಠದಿಂದ
"ಅಮ್ಮನ ಮನೆಗೋ ಅಥವಾ ಅಕ್ಕನ ಮನೆಗೋ" ಅಂದಳು.
"ಯಾವಾಗ ಹೋಗ್ತಿಯಾ?'' ಅಂದುಬಿಟ್ಟೆ. ತಕ್ಷಣ ಅಡುಗೆ ಮನೆಗೆ ಓಡಿದಳು, ಅಲ್ಲಿಂದ ಬಿಕ್ಕಳಿಸುವ ಶಬ್ಧ ನನ್ನ ಕಿವಿಯನ್ನು ಇರಿಯುತ್ತಿತ್ತು. ಎದ್ದು ಹೋಗಿ 'ತಪ್ಪಾಯಿತು ಸಾರ್ರಿ' ಅನ್ನಬೇಕು ಎನಿಸಿತು, ತಡೆದು ಸುಮ್ಮನಾದೆ. ಇಂದಿನ ಸಮಸ್ಯೆಗೆ ಉತ್ತರ ಹುಡುಕಲು ನನ್ನ ಮನಸ್ಸು ಎರಡು ದಿನ ಹಿಂದಕ್ಕೆ ಓಡಿತು..................

ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಮಡದಿಯ ಮುಖ ನಿಗಿನಿಗಿ ಕೆಂಡದಂತೆ ಕೆಂಪಾಗಿತ್ತು, ಬೆಲ್ ಶಬ್ದ ಕೇಳಿ ಬಾಗಿಲು ತೆಗೆದವಳೆ ಮಗುವನ್ನು ದರದರನೆ ಎಳೆದು ಕೊಂಡು,
" ಲೋ! ನಿಮ್ಮಪ್ಪಂಗೆಹೇಳೋ, ಸ್ಟೌ ಮೇಲೆ ಕಾಫಿ ಇದೆ ಕುಡಿ ಅಂತ!" ಏನು ಹೇಳಬೇಕು ಎಂದು ತಿಳಿಯದ ಕಂದಮ್ಮ ಪಿಳೀ ಪಿಳಿ ಕಣ್ಣು ಬಿಡುತ್ತಾ ನನ್ನ ಬಳಿ ಬಂತು, ಅದನು ಹೆಗಲಿಗೆ ಏರಿಸುತ್ತಾ,
"ಏನೋ ಕಂದಾ! ಊರಲ್ಲಿ ಮಾರಿಹಬ್ಬ ಇನ್ನೂ 2 ತಿಂಗಳಿದೆ, ಆಗಲೇ ನಿಮ್ಮಮ್ಮನ ಮೈಮೇಲೆ ಮಾರಿ ಬಂದವಳಲ್ಲೋ?" ಎನ್ನುತ್ತಾ ಮಾಮುಲಿಯಾಗೆ ರಮಿಸಲು ಅವಳ ಪಕ್ಕಕ್ಕೆ ಹೋಗಿ ಕುಳಿತು ಗಲ್ಲ ಹಿಡಿಯಲು ಹೋದೆ. ಕೋಪದಿಂದ ಕೈಯನ್ನು ದೂರ ಸರಿಸಿ
" ಮುಟ್ಟಬೇಡಿ ನನ್ನ!!" ಎಂದು ಚೀರಿದಳು. ವಿಷಯವೇನೋ ಗಂಭೀರವಾದ್ದೇ ಅನಿಸಿ ಕೋಪದಿಂದ "ಏನಾಯ್ತು! ಮೊದ್ಲು ಬೊಗ್ಳು!" ಎಂದೆ. ಮರುಮಾತನಾಡದೆ ಹಾಸಿಗೆ ಕೆಳಗಿದ್ದ ಬ್ಯಾಂಕಿನ ನನ್ನ ಅಕೌಂಟಿನ ಸ್ಟೇಟ್ ಮೆಂಟು ಕೈಗಿತ್ತು
"ಹೋದ ತಿಂಗಳು 50,000 ರೂಪಾಯಿ ನನ್ಗೇಳದೆ ಸಾಲಯಾಕ್ ಮಾಡಿದ್ದೀರಿ? ಯಾವಳ್ಗೆ ಸುರಿಯಕೆ ಮಾಡಿದ್ದೀರಿ?" ಅಂದಳು
ಇವಳೇ ನನ್ನ ಸರ್ವಸ್ವ, ಇವಳೇ ನನ್ನ ಜೀವ, ಇವಳಿಲ್ಲದೆ ನನ್ನ ಬದುಕಿಲ್ಲ, ಇವಳೇ ನನ್ನ ಜೀವನದ ಮೊದಲ ಮತ್ತು ಕಡೆಯ ಹೆಣ್ಣು ಎಂದು ತಿಳಿದು ಹಾಗೆಯೇ ಬಾಳುತ್ತಿದ್ದವನಿಗೆ ಇವಳ ಕೆಟ್ಟ ಮಾತುಗಳನ್ನು ಕೇಳಿ ಕಿವಿಗೆ ಕಾದ ಸೀಸ ಉಯ್ದಂತಾಯ್ತು, ಮುಂದೇನು ಮಾಡಬೇಕು ಎಂದು ಯೋಚಿಸುವಷ್ಟರಲ್ಲಿ ಅವಳ ಎಡಗೆನ್ನೆಯ ಮೇಲೆ ನನ್ನ ಬಲಗೈ ಬೆರಳುಗಳ ಗುರುತು ಮೂಡಿದ್ದವು. ಇಷ್ಟೆಲ್ಲಾ ಘಟನೆಗಳಿಗೆ ಮೂಕ ಸಾಕ್ಷಿಯಾಗಿದ್ದ ಮಗು ಏನು ಮಾಡಬೇಕೆಂದು ತಿಳಿಯದೆ ಜೋರಾಗಿ ಅಳತೊಡಗಿತು. ಸಮಾಧಾನಪಡಿಸಲು ಮಗುವನ್ನೆತ್ತಿಕೊಂಡೆ.
"ಏನ್ ಇವರಪ್ಪ ಸಾಕಿದ್ದ್ನೇನೋ ಅನ್ನುವಹಾಗೆ ನನ್ನ್ಮೇಲೆ ಕೈ ಮಾಡ್ತಾನೆ" ತಕ್ಷಣ ನನ್ನ ತಪ್ಪಿನ ಅರಿವಾಯ್ತು, 'ದುಡುಕಿ ಬಿಟ್ಟೆ' ಅನ್ನಿಸಿತು.
''ತಪ್ಪಾಯಿತು ಸಾರ್ರಿ, ಕ್ಷಮಿಸು", ಅಂದೆ. ಅವಳು ಅಳು ನಿಲ್ಲಿಸಲಿಲ್ಲ, ಮಗು ಕೂಡ.
"ನೀನೆ ನನ್ನ ಸರ್ವಸ್ವ, ನೀನೇ ನನ್ನ ಜೀವ, ನೀನಿಲ್ಲದೆ ನನ್ನ ಬದುಕಿಲ್ಲ, ಅಂತ ತಿಳ್ಕೊಂಡಿರೋ ನಂಗೆ 'ಯಾವಳ್ಗೆ ಸುರಿಯಕೆ ' ಅಂತ ಕೇಳ್ತೀಯಲ್ಲ ಇದು ಸರೀನಾ?" ನನ್ನ ಧ್ವನಿ ತುಂಬಾ ಕ್ಷೀಣಿಸಿತ್ತು, ನಾನು ತಪ್ಪಿತಸ್ತ ಎಂಬ ಭಾವನೆ ಎದ್ದು ಕಾಣುತಿತ್ತು. ಮಗು ಕೂಡ ಸುಮ್ಮನಾಯ್ತು. ಮತ್ತೆ ನೀರವ ಮೌನ...........
ಅದು ಮುರುದದ್ದು " ನಾಲ್ಕು ದಿನ ಎಲ್ಲದ್ರೂ ಹೋಗ್ಬರ್ತೀನಿ" ಎನ್ನುವ ಪದದೊಂದಿಗೆ...........
ನನ್ನ ಬಗ್ಗೆ ನನಗೆ ಅಸಹ್ಯ ವೆನಿಸಿತು. ಮೇಲೆದ್ದು ಮಗುವಿನೊಡನೆ ಅಡುಗೆ ಮನೆಗೆ ಹೋಗಿ ಅಳುತ್ತಿದ್ದ ಅವಳ ಪಕ್ಕ ಕುಳಿತು ಅವಳ ತೊಡೆಯ ಮೇಲೆ ತಲೆ ಇಟ್ಟು
''ತಪ್ಪಾಯಿತು ಸಾರ್ರಿ, ಕ್ಷಮಿಸು, ಆದ್ರೆ ನೀನೆಲ್ಲೂ ಹೋಗ್ಬಾರ್ದು?!" ಅಂದೆ. ತಕ್ಷಣ ನನ್ನ ಬಾಯಿ ಮುಚ್ಚಿ, ಬಿಕ್ಕಳಿಸುತ್ತಾ
" ಹಿಂದೂ ಮುಂದೂ ಯೋಚಿಸದೇ ಮಾತಾಡಿದವಳು ನಾನು, ಪ್ಲೀಸ್! ನೀವು ನನ್ನನ್ನ ಕ್ಷಮಿಸಿಬಿಡಿ" ಎನ್ನುತ್ತಾ ನನ್ನ ತಲೆಯ ಮೇಲೆ ಅವಳ ತಲೆಯಿಟ್ಟು, ನನ್ನ ಬೆನ್ನು ನೇವರಿಸತೊಡಗಿದಳು.
" ನಾನು ನಿನಗೆ ಹೇಳ್ಬೇಕಿತ್ತಲ್ವ? ಸಾಲ ಮಾಡಿದ್ಯಾಕೇಂತ? ನಂದೇ ತಪ್ಪು ಸಾ....." ಅನ್ನುವಷ್ಟರಲ್ಲಿ ನನ್ನ ಬಾಯಿಯಮೇಲೆ ಅವಳ ಕೈಯಿತ್ತು.
" ನಾನು ದುಡುಕಿ ಹಾಗೆ ಮಾತಾಡ್ಬಾರ್ದಾಗಿತ್ತು ಅಲ್ವಾ? ಸಾರ್ರಿ" ಅಂದಳು. ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ನಮ್ಮ ಮುಗ್ದ ಮಗು ಅಷ್ಟೇ ಮುಗ್ಧತೆಯಿಂದ
"ಅಪ್ಪಾ ಪಾನಿ ಪುಯೀ" ಎನ್ನುತ್ತಾ ಖುಷಿಯಿಂದ ಚಪ್ಪಾಳೆ ತಟ್ಟತೊಡಗಿತು.
ಆ ದುಃಖದಲ್ಲೂ ಇಬ್ಬರಿಗೂ ನಗು ಉಕ್ಕಿ ಉಕ್ಕಿ ಬಂತು....
ಮರುಕ್ಷಣದಲ್ಲಿ ಮೂವರೂ ಬೈಕಿನ ಮೇಲೆ ಕುಳಿತು ಹೊರಟಿದ್ದೆವು.........
ಪಾನಿಪೂರಿ ತಿನ್ನಲು

ಭಾನುವಾರ, ನವೆಂಬರ್ 15, 2009

ಹಾಡದೇ ಉಳಿದ ಹಾಡು

ಮಬ್ಬುಗತ್ತಲ ಮುದಿ ಸಂಜೆಯಲಿ
ಸೂರ್ಯನು ಸುಸ್ತಾಗಿ ಮಲಗುವ ಹೊತ್ತು
ನಿನ ಕೆಂದುಟಿಯ ಮುಗುಳ್ನಗೆಗೆ
ಕಣ್ಣರಳಿಸಿ ಕಾಯುತ್ತಾ ಕುಳಿತ್ತಿದ್ದೆ
ಯೇರಿ ಹಾದಿಯ ಕಾಲು ಜಾಡಿನಲ್ಲಿ
ಗೂಡು ಸೇರುವ ಗುಬ್ಬಿ ಕೇಳಿತು
ಕಾಯುವುದು ಯಾರಿಗೆಂದು?
ಮುಗುಳ್ನಗೆಯೇ ನನ್ನುತ್ತರ
ಮನದ ಬಿರುಗಾಳಿಗೆ ಮೆದುಳು ತತ್ತರ
ಉತ್ತರಗಳಿಗೆ ಪ್ರಶ್ನೆಗಳ ತಾಕಲಾಟ
ಎಷ್ಟು ಎತ್ತರಕ್ಕೇರಿದೆ ನೀನು?
ಆಸೆ ಆಕಾಂಕ್ಷೆಗಳ ಮೂಟೆ ಹೊತ್ತು
ಬೆನ್ನು ಬಾಗಿದೆ, ಮನಸು ಮಾಗಿದೆ
ನಿನ್ನ ನೆನಪು ಮಾತ್ರ ಮಾಸಿಲ್ಲ
ಹಚ್ಚ ಹಸಿರು, ನಿತ್ಯಹರೀದ್ವರ್ಣದಂತೆ
ದಿನಗಳು, ವಾರಗಳು ಕಾಲಚಕ್ರನ
ಕಾಲ್ತುಳಿತಕ್ಕೆ ಸಿಲುಕಿ ಪುಡಿ ಪುಡಿ,
ಪ್ರತೀಕ್ಷಣ ನಿನ್ನ ಕಾಣಾಲು ತಳಮಳ
ಹತ್ತಿರ ಬಂದಷ್ಟೂ ನೀನು ದೂರ ದೂರ
ಉಳಿದು ಹೋದ ಮಾತುಗಳು
ಹೃದಯ ಬಡಿತದಡಿ ಕರಗಿದ ನೀರವ ಮೌನ
ಬಯಕೆಗಳು ಬಸವಳಿದು
ಎದೆಯ ಗೀತೆಗಳು ಕಮರುವ ಮುನ್ನ
ಉಳಿದು ಹೋದ ಪ್ರೇಮವನ್ನು ನಿವೇದಿಸಿಕೊಳ್ಳುವಾಸೆ
ಹಾಡಲು ಕಾಯುತ್ತಾ ಕುಳಿತಿದ್ದೇನೆ
ಭಾವಬಂಧಗಳ ಸಂಕೋಲೆ ಕಡಿದು
ಶತಮಾನಗಳಾದರೂ ಸರಿ
ಯುಗಗಳು ನಿಗರಿದರೂ ಸರಿ
ಕಂಡವರು ಕಾಣದವರು ಅಣಕಿಸಿದರೂ ಸರಿ
ನೀ ಹೇಳಿದ ಗುರುತಲ್ಲೇ ಕಾಯುತ್ತಿದ್ದೇನೆ
ನಿನಗಾಗಿ ಮಂಡಿಯೂರಿ
ನನ್ನೆದೆಯಲ್ಲಿ ಉಳಿದು ಹೋದ ಹಾಡು ಹೇಳಲು
ನಿಧಾನವಾದರೂ ಪರವಾಗಿಲ್ಲ
ತಪ್ಪದೆ ಬಾ ಅದೇ ಯೇರಿ ಹಾದಿಯ ಮೇಲೆ

ಶೀತಲ ಸಮರ

ಒಂದಿರುಳ ಕನಸಿನಲಿ
ನಿದ್ರೆಬಾರದೆ ಹೊರಳುವ ಹೊತ್ತಿನಲಿ
ನಗೆಯ ಹಾಯಿ ದೋಣಿ!
ಕಣ್ತೆರೆಯಲು ಕೋರೈಸುವ ಮಿಂಚು!!
ತಿಮಿರದ ತಿಮಿಂಗಲದ ನೊಸಲ ಸೀಳಲು
ಜಗವೆಲ್ಲಾ ಜಗಮಗ!!
ಮುಂಗುರುಳ ಬೀಸಣಿಗೆ
ಅಧರಾಮೃತ
ನಾಸಿಕವೇ ಸಂಪಿಗೆ
ಬಳುಕುವ ಬಳ್ಳಿ ಬಂದಳು
ಮನಕೆ ಮೆಲ್ಲಗೆ!!
ಕಣ್ಣು ಎರಡಲುಗಿನ ಕತ್ತಿ
ಮುತ್ತಿಕ್ಕಲು ಭಯ!
ಸವಿಯುವ ಮಾತೆಲ್ಲಿ?
ಸರಿ ಹೊತ್ತಿನಲಿ ಕಾಡುವ
ಕನಲಿಕೆಯೇಕೆ?
ಗೆಳತಿ!!
ನಿಲ್ಲಿಸು ನಿನ್ ಶೀತಲ ಸಮರ
ಜಯದ ನಿಷ್ಕರ್ಷೆ ಆನಂತರ

ಪ್ರಚಲಿತ

ಬೆಟ್ಟಗಳು ಬರಿದಾಗಿ
ರಸ್ತೆಗಳು ಬಸಿರಾದವು
ನೆಲಕುರುಳಿದವು
ಅರಳಿ ನೆರಳನೀವ ಮರ
ಕಂದಮ್ಮನ ಹಾಲು!
ಹಾಲಹಲ!!
ನಂಜಾದವು ಸಸ್ಯ ಸಂಕುಲ
ಸೃಷ್ಟಿಸಿದ ಸಂಜಾತನಿಗೇ ಸೆಡ್ಡು
ಹಾಹಕಾರವೆಬ್ಬಿಸಿದೆ ಗುಟುಕು ಜಲ
ಸ್ವಾರ್ಥದ ತಿಮಿರವೇ ಅಮರ!!
ಅಮ್ಮನ ಪಾಲನೆ
ಕಂದನ ನಲ್ನುಡಿ
ಅಪ್ಪನ ಹಿತನುಡಿ
ಆಸ್ವಾಧಿಸುವ ಮುಗ್ದ ಮನಗಳಿಗೆ ಬರ!
ಪ್ರೇಮಿಯಲ್ಲಿ ಪ್ರೀತಿಯಿಲ್ಲ
ಸ್ನೇಹದಲ್ಲಿ ಸ್ವಾರ್ಥ
ಕುರುಡು ಕಾಂಚಾಣದ ಮುಂದೆ
ಉಳಿದಿದ್ದೆಲ್ಲಾ ವ್ಯರ್ಥ
ಕಾಲನ ಕಟ್ಟೆಯಲಿ
ಸೊಟ್ಟಗಾದ ಪ್ರಸ್ತುತದಲ್ಲಿ
ನೆಟ್ಟಗಾಗುವ ವ್ಯವಧಾನವೆಲ್ಲಿ?
ಕಾಲನಿಗೂ ಅವಸರ
ದಾಂಗುಡಿಯ ಧಾವಂತ!!
ಪ್ರಕೃತಿಯ ಪ್ರಹಾರದ ಮುಂದೆ
ಹುಲು ಮಾನವನ ಪಂಥ!

ಗುರುವಾರ, ಅಕ್ಟೋಬರ್ 1, 2009

ಫೋಟೋ ಬ್ಲಾಗ್ -೨

ಲೆಕ್ಕ ಸರಿ ಇರಲಿ! ಇಲ್ಲದಿದ್ದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ಕೊಡುತ್ತೀನಿ. ಹುಷಾರ್!!!!!!!!!!!!!!!
ಹೇಗಿದೆ ನನ್ನ ಡಬ್ಬದ ಜಾಡು!!!!!!!....................?????????
ವಂದ್ರಿಯಲ್ಲಿ (ಜರಡಿಯಲ್ಲಿ) ಚಂದಿರ...................!!!!!!!!!!





geechiddu

ಶುಕ್ರವಾರ, ಮೇ 1, 2009

ಫೋಟೋ ಬ್ಲಾಗ್





ಇವೆರಡು ನನ್ನ ಮಗಳ ಫ್ಯಾಷನ್ ರಾಮಪ್ ನಡಿಗೆಯ ಫೋಟೋಗಳು.


ಅಣ್ಣನ ಜೊತೆ ಹಂಪಿಯ ಆಂಜನೇಯ ದೇವಾಲಯದ ಮರದ ಬಳಿ. ಮರದ ಮೇಲಿನ ಕೋತಿಗಳನ್ನು ಬೀಳಿಸಲು ಕೆಳಗೊಂದು ಕೋತಿ ಮರ alladisuttide

ಮತ ಹಾಕಲು ಕಾಸು ಕೇಳುವುದು ನಮ್ಮ ಮೂಲಭೂತ ಹಕ್ಕೆ?




ಹೌದು, ನನಗೆ ಈ ಪ್ರಶ್ನೆ ಪ್ರತಿ ಚುನಾವಣೆ ಹತ್ತಿರ ಬಂದಾಗ ಕಾಡುತ್ತಲೇ ಇರುತ್ತದೆ. ನಗರಪ್ರದೇಶವಾಗಬಹುದು ಹಳ್ಳಿಗಲಾಗಿರಬಹುದು ಚುನಾವಣೆ ಬಂದಾಗ "ದುಡ್ಡು ಕೊಡಿ ವೋಟು ಹಾಕ್ತಿವಿ" ಎನ್ನುವ ಅನೈತಿಕ ಸಂಭಾಷಣೆಗಳನ್ನು ಕೇಳಿದ್ದೇನೆ ಹಾಗೆ ಹೇಳುವವರನ್ನು ನೋಡಿದ್ದೇನೆ. ನಮ್ಮ ಮನೆ ಕೆಲಸ ಮಾಡುವ ಸೇವಕನನ್ನು ನಾವು ಆರಿಸಿ ಅವನು ನಮ್ಮ ಕೆಲಸ ಮಾಡಿದ ನಂತರ ತಿಂಗಳ ಕೊನೆಯಲ್ಲಿ ಅವನಿಗೆ ಸಂಬಳ ಕೊಡುತ್ತೇವೆ. ಹಾಗೆ ಮಾಡುವ ಬದಲು "ನಿನ್ನನ್ನು ಕೆಲಸಕ್ಕೆ ತೆಗೆದು ಕೊಳ್ಳುತ್ತೇವೆ ನನಗೆ ಎಷ್ಟು ಲಂಚ ಕೊಡುತ್ತಿಯೇ?" ಎಂದು ಕೇಳಿ ಅವನಿಂದ ಲಂಚ ತೆಗೆದು ಕೊಂಡರೆ ನಾವು ಅವನಿಂದ ಸರಿಯಾದ ಕರ್ತವ್ಯವನ್ನು ನಿರೀಕ್ಷಿಸಲು ಸಾದ್ಯವೇ? ಆತನಿಗೆ ಕೆಲಸ ಹೇಳಿದ ಕೂಡಲೇ "ಅರೆ ! ಹೋಗಯ್ಯ ಕಂಡಿದ್ದೀನಿ ನೀನೇನ್ ಬಿಟ್ಟಿ ಕೆಲಸಕ್ಕೆ ಸೇರಿಸಿಕೊಂಡಿಲ್ಲ, ಸರಿಯಾಗಿ ಕೊಟ್ಟೆ ತಗೊಂಡಿದ್ದಿಯೇ, ನನ್ನಿಷ್ಟ ಬಂದಾಗ್ ಮಾಡ್ತೀನಿ" ಎನ್ನುವ ಉಡಾಫೆ ಉತ್ತರ ಬರುವುದು ಸಹಜ ಅಲ್ಲವೇ?


ಅದೇ ರೀತಿ ನಾವು ಲಂಚ ತೆಗೆದುಕೊಂಡು ಮತದಾನ ಮಾಡಿದರೆ ಗೆದ್ದುಬಂದವನಿಂದ ನಮ್ಮ ಉದ್ದಾರ ಸಾದ್ಯವೇ ಒಮ್ಮೆ ಯೋಚಿಸಿ.

ಭಾನುವಾರ, ಫೆಬ್ರವರಿ 8, 2009

ಬಾಲ್ಯದ ನೆನಪುಗಳು


ಯವ್ವನಿಗರಿಗೆ ಬಾಲ್ಯ ಎನ್ನುವುದು ಎಲ್ಲರಿಗು, ಎಲ್ಲ ರೀತಿಯಲ್ಲೂ, ಎಲ್ಲ ವೇಳೆಯಲ್ಲೂ, ಸಿಹಿಯಾದ ನೆನಪು. ನಾವು ಯಾಕಾದರೂ ಆ ಬಾಲ್ಯವನ್ನು ಕಳೆದು ಕೊಂಡೋ? ನಾವಿನ್ನು ಚಿಕ್ಕ ಮಕ್ಕಳಾಗಿದ್ದರೆ ಎಷ್ಟು ಚೆನ್ನ? ಎಂಬೆಲ್ಲ ಪ್ರಶ್ನೆಗಳು ಯಾವುದಾದರು ಚಿಕ್ಕ ಮಕ್ಕಳನ್ನು ಕಂಡಾಗ ಅನ್ನಿಸದಿರದು. ಅದರಲ್ಲೂ ನಮ್ಮ ಸ್ವಂತ ಕರುಳಕುಡಿಗಲಾಗಿದ್ದರಂತು ಈ ಯೋಚನೆ ಬಹಳ ಕಾಡುತ್ತದೆ.
ಹೌದು!!!! ನನಗೆ ನನ್ನ ಬಾಲ್ಯದ ನೆನಪುಗಳು ಬಹಳವಾಗಿ ನನ್ನನ್ನು ಕಾಡಲು ನನ್ನ ಪುಟ್ಟ ಕಂದ ಕ್ಷಮಾ ಕಾರಣ. ಅವಳ ತೊದಲು ನುಡಿ, ನಾವು ದಿನನಿತ್ಯವೂ ನೋಡುವ ವಸ್ತುಗಳು ಅವಳ ಪುಟ್ಟ ಕಂಗಳಲ್ಲಿ ಮೂಡಿಸುವ ಕಾಂತಿ ಅಂತು ದಿನಬೆಳಗುವ ಸೂರ್ಯನಿಗೆ ಸಮ. ಇದು ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೊ ಎಲ್ಲ ತಂದೆ ತಾಯಿಗಳಿಗೂ ಹಾಗೆ ಅನಿಸುವುದು ಸಹಜವಲ್ಲವೇ? ಇದರ ಜೊತೆಗೆ ಇವಳಿಗಿಂತ ಸ್ವಲ್ಪ ದೊಡ್ಡ ಮಕ್ಕಳನ್ನು "ಪಾಪು!!!!" ಎಂದು ಕರೆಯುವುದು ಬೇರೆಯವರಿಗೆ ತಮಾಷೆ ಎನಿಸಿದರೆ ನನಗಂತೂ ಸೋಜಿಗವೇ. ನೀರು ಕುಡಿಯುವ ಲೋಟಕ್ಕೆ "ಟ್ಯುತಾ" ಎನ್ನುವುದರ ಜೊತೆಗೆ ನೀರಿಗೂ ಅದೇ ಹೆಸರಿಂದ ಕರೆಯುವುದು, ನಾನು ನನ್ನ ಅರ್ದಾಂಗಿ ಮೀನಾ ಎಷ್ಟೋಬಾರಿ "ನೀರು" ಎಂದು ಹೇಳಿಕೊಡಲು ಪ್ರಯತ್ನಿಸಿದಾಗ "ಟ್ಯುತಾ" ಎಂದು ನಮಗೆ ತಿರುಮಂತ್ರ ಹೇಳುವುದು, ಕೆಲಸ ಮುಗಿಸಿ ಮನೆಗೆ ಬಂದಾಗ ಅಮ್ಮನ ಬಗ್ಗೆ ತೊದಲುತ್ತಾ "ಅಪ್ಪ ಅಮ್ಮ ನನ್ನ ನಾನ್ನ" ಎನ್ನುವ ನುಡಿಗಳು ಕೆಲಸದ ಆಯಾಸ, ಬೇಸರಗಳಿಗೆ ನಿಜಕ್ಕೂ ಸಂಜೀವಿನಿಯೇ ಸರಿ. ಇಂದು ಮದ್ಯಹ್ನ್ಹ ನಮ್ಮ ಊರಿಗೆ ಅಪ್ಪ ಅಮ್ಮನನ್ನು ನೋಡಲು ಸಕುಟುಂಬ ಸಮೇತವಾಗಿ ಹೋಗಿದ್ದೆ. ಮನೆಯ ಹೊಸಲು ಮೆಟ್ಟುತ್ತಿದ್ದಂತೆ ನಮ್ಮ ಅಪ್ಪನ ತೊಡೆಯ ಮೇಲೆ ನನ್ನ ತಂಗಿಯ ಮಗ ೨ ವರ್ಷದ ಬಾಬು ಕುಳಿತಿದ್ದ. ನನ್ನ ಕಂಕುಳಲ್ಲಿದ್ದ ನನ್ನ ಕುಲಪುತ್ರಿ "ಅಪ್ಪ ಹೂಂ ! ಬಿಯೂ ಬಿಯೂ"(ಬಿಡೂ ಬಿಡೂ ) ಎನ್ನುತ್ತಾ ಕೆಳಗಿಳಿದು ಚಪ್ಪಲಿಯನ್ನು ಬಿಚ್ಚದೆ " ಎಯೇ ! ನಿಲ್ಲೇ ಚಪ್ಪಲಿ ಹಾಕೊಂಡು ಒಳಗೆ ಹೋಗಬಾರದು" ಎನ್ನುವ ನನ್ನ ಮಡದಿಯ ಕೂಗಿಗೆ ಕವಡೆ ಕಿಮ್ಮತ್ತು ಕೊಡದೆ ತನ್ನ ಬಲಗೈ ತೋರುಬೆರಳನ್ನು ಬಾಬುವಿನೆಡೆಗೆ ತೋರುತ್ತ "ತಾತ ! ಪಾಪು! ತಾತ! ಪಾಪು" ಎನ್ನುತ್ತಾ ರಾಕೆಟ್ನಂತೆ ಅಪ್ಪನೆಡೆಗೆ ನುಗ್ಗಿದಳು. ಅವಳ ತಾತ ಅಜ್ಜಿಗೆ ಅವಳು ಬಂದಳು ಎನ್ನುವ ಸಂತೋಷದ ಜೊತೆಗೆ ಮೊಮ್ಮಗಳು ಹೀಗೆ ಸಿತ್ತಿನಲ್ಲಿದ್ದಾಳೆ? ಎನ್ನುವುದು ತಿಳಿಯುವಷ್ಟರಲ್ಲಿ ಬಂದವಳೇ ನಮ್ಮಪ್ಪನ ತೊಡೆಯ ಮೇಲಿದ್ದ ಬಾಬುವನ್ನು "ಏಯ್ ! ಬಾ ! " ಎಂದು ಅವನ ಕೈ ಹಿಡಿದು ಕೆಳಗೆಳೆದು ಆ ಜಾಗವನ್ನು ಅವಳು ಆಕ್ರಮಿಸಿದ್ದು ನಮ್ಮೆಲ್ಲರಲ್ಲೂ ಆಶ್ಚರ್ಯವನ್ನು ತಂದಿತ್ತು. ಅದೇ ಘಟನೆ ಅವಳು ಕೆಲ ವರ್ಷಗಳ ಬಳಿಕ ಪುನರಾವರ್ತಿಸಿದರೆ ? ಖಂಡಿತವಾಗಿಯೂ ಸಿಟ್ಟು ಬರುವುದು ಸಹಜ. ಆದರೆ ಈಗ ಅದೊಂದು ಮಕ್ಕಳಾಟ.
ಈ ಘಟನೆಯ ಬಳಿಕ ನಾನು ಚಿಕ್ಕಂದಿನಲ್ಲಿ ಹೇಗಿದ್ದೆ? ನನ್ನ ಬಾಲ್ಯವನ್ನು ಹೇಗೆ ಕಳೆದೆ ? ಎಂದು ಯೋಚಿಸುವಂತೆ ಮಾಡಿತು.