ಶುಕ್ರವಾರ, ಜೂನ್ 27, 2014

ಎದೆಯೊಳಗೆ ನಿನ್ನದೇ ಸದ್ದುಗಳು......

ಎದೆಯೊಳಗೆ ನಿನ್ನದೇ ಸದ್ದುಗಳು
ಹೆಜ್ಜೆಗಳ  ಗುರುತಿದೆ
ಗೆಜ್ಜೆಯ ನಾದವಿದೆ

ಕಣ್ಣೊಳಗೆ ನಿನದೇ ಕನಸುಗಳು
ಕಾಮನಬಿಲ್ಲಿಗೇ ಗಾಳ ಹಾಕಿ
ಬಣ್ಣಗಳ ಹೀರುತ್ತಾ ಬರೆದ
ಚೆಂದದ ಸುಂದರ ಚಿತ್ತಾರ
ಮನದ ಗೋಡೆಯ ಮೇಲೆ
ಅಳಿಸಲಾಗದ ಅಚ್ಚ ಹಸಿರು

ಕರ್ಣದೊಳಗೆ
ನಿನ್ನ ಕರುಣೆಯ ಇನಿದನಿ
ಭಾವರಾಗಕೆ ಮಿಡಿದ ಶೃತಿಯಾಗಿ
ಹೊಮ್ಮಿದ ನಾದತರಂಗ
ನೀ ಪಿಸುಗುಟ್ಟಿದ ಪ್ರೀತಿ
ಮಾತುಗಳ  ಪ್ರತಿಧ್ವನಿ

ನಿನ ಸುಕೋಮಲ
ಕರಗಳಿಗರಷ್ಟು  ಶಕ್ತಿ
ಎನ್ನ ಮನದ ಕರಿಮುಗಿಲೆತ್ತರದ
ಕಡು ಕಷ್ಟಗಳ  ಕತ್ತು ಹಿಚುಕಿ
ಹುಡಿಮಾಡಿ ನೆಮ್ಮದಿಯ
ನೆರಳನೆರೆದ ಬೆರಳುಗಳ
ಸುಸ್ಪರ್ಶ ನನಗೆಂದಿಗೂ
ಧೈರ್ಯದ ದಾರಿದೀಪ

ಭಾನುವಾರ, ಜೂನ್ 22, 2014

ನಿನ್ನ ಮಂದಹಾಸ

ಮರುಗಿ ನರಳಿದ ಮನದೊಳಗೆ
ಮಿಡಿವ ನಿನ್ನ ನೆನಪಿನ ಮಧುರ ವೀಣೆ
ಸುಮ ಸಂಜೆಯ ಇನಿದನಿಯ ಮಿಡಿತ ರಾಗಕೆ
ಎದೆ ಬಡಿತದ ತಾಳಮೇಳಗಳ  ಮದ್ದಳೆ

ರಾಗ ನಿರಾಗಗಳ ಪರಿವೆಯಿಲ್ಲದೆ
ಎಲ್ಲ ದಿಕ್ಕುಗಳಲ್ಲಿ ದಾಂಗುಡಿ
ಬಗೆದಷ್ಟೂ ಆಳ, ಮೊಗೆದಷ್ಟೂ ದಾಹ,
ಅರಿತಷ್ಟೂ ನಿಗೂಘಡವಾಗಿಹ
ಬದುಕಲ್ಲಿ ಪತ್ತೆದಾರಿಕೆಯ ಹಂಗೇಕೆ

ಸತ್ತ ಸತ್ಯಗಳು ಪ್ರೇಮ ಪ್ರಲಾಪದ
ಮಧುರ ಆಲಾಪಾನೆಗಳು
ಬದುಕುಳಿದ ಸುಳ್ಳುಗಳು ಸತ್ಯದ
ಸಮಾಧಿಯೊಳಗಿನ ಕದಲಿಕೆಗಳು

ಜಗಕೆ ನಿತ್ಯ ಮಿಥ್ಯದಿ ಮುಖ ಮಜ್ಜನ
ಸತ್ಯಕೆ ಜಗವ ಬಡಿದೆಬ್ಬಿಸಿ ಅಭ್ಯಂಜಿಸುವ ತವಕ
ಸ್ವಾರ್ಥ ಜಂಗುಳಿಯೊಳಗೆ ನೀ ನಿಸ್ವಾರ್ಥದ ಪ್ರತೀಕ
ಆದರೂ ನಿನ್ನ ಕಾಣುವ ಬಾವ
ನನಗೆ ಮಾತ್ರ ಅನಂತದ ಸ್ವಾರ್ಥ

ಮನದ ಕುಲುಮೆಯೊಳಗೆ ಕುಡಿಯೊಡೆವ
ನಿರಂತರ ಮೌನದ ಲಹರಿಗಳಿಗೆ ಎಲ್ಲ ಗೊಡವೆಗಳು ಗೌಣ
ತಮದ ತೊಡರುಕಾಲಿಗೆ ಎಡವಿಬಿದ್ದಾಗ ಆಸರೆಯಾಗಿದ್ದು
ನಿನ್ನ ನಿರ್ಮಲ ಸಾಂತ್ವಾನದ ಊರುಗೋಲು

ಹೇಳಲಾಗಾದ ಮಾತುಗಳಿಗೆ ಧನಿಯಾದೆ
ಕೇಳಲಾಗದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವಾದೆ
ಕೊರಗುವ ಎದೆಯೊಳಗೆ ಏರುವ ಮಿಡಿತ
ಸದಾ ನಿನ್ನ ಹಿತವಾದ ಮಾತ ಕೇಳುವ ತುಡಿತ

ಎಷ್ಟು ಚಂದ .......
ದುಗುಡವ ತದುಕುವ ನಿನ್ನ ನಗು
ಮುಂಗುರುಳೊಳಗೆ ಇಣುಕಿ ಕೊಲ್ಲುವ
ನಿನ್ನ ಬಟ್ಟಲು ಕಂಗಳ ನೋಟ
ನನ್ನ ಸೃತಿಯಲ್ಲಿ ಮಿತಿಯಿಲ್ಲದ ಅಚ್ಚ ಹಸುರಿನ ಅಚ್ಚು.....
ಮಂದಾನಿಲದ ನಿನ್ನ ಮಂದಹಾಸ ನೆನೆದಾಗಲೆಲ್ಲ
ಮನ ಬ್ರಹ್ಮಕಮಲ........

ಚಾರಣ

ಪ್ರಿಯ ಗೆಳತಿ ಹೊರಟಿಹೆ
ಕನಸುಗಳ ಪರ್ವತ ಚಾರಣ
ದಾರಿಗಿದೆ ನಿನ ನೆನಪಿನ ಹೂರಣ

ಬಳಲಿಕೆಗೆ ನಿನ ಮುಂಗುರಳ  ಬೀಸಣಿಕೆ
ಕತ್ತಲಿಗೆ ನಿನ್ನ ಕಣ್ಣ ಕೋಲ್ಮಿಂಚು ದೀವಟಿಕೆ
ಬಿಸಿಲಿಗೆ ನಿನ ನಗೆಯ ನೆರಳು

ಹಸಿವಿಗೆ ನಿನ್ನ ಹಿತ ಇನಿದನಿ
ಬಾಯಾರಲು ನಿನ ಕರುಣೆಯ ಕಡಲು
ನಿನ ಸಂತಸದ ನುಡಿಗಳು
ನನಗೆ ದಾರಿಯ ನೀಲ ನಕ್ಷೆ

ಸಮಾಧಾನಗಳೇ ಊರುಗೋಲು
ನಿನ್ನ ನೋಡಿ ಕಟ್ಟದ ಗೋಪುರಕೆ
ನಿನದೇ ಹೆಸರು ನೀನೆ ಉಸಿರು
ನೆಪವಷ್ಟೇ ನಾನು

ತುತ್ತ ತುದಿ ತಲುಪಲು
ಕಾರಣವೇ ನೀನು

ಮಿಥ್ಯದ ಕಾಡು ಕಡಿದು
ಸತ್ಯದ ಹೂವ ಬಿತ್ತಿ
ಪ್ರೇಮದ ಸೌಗಂಧ ಬೆಳೆಸಿ
ನಿನ್ನಡಿಗಾಗಿ ಕಾಯುವೆ
ಇಂದು ನನ್ನ ಹಾಡು ಹಾಡಲಲ್ಲ
ನಿನ್ನ ಹಾಡು ಕೇಳಲು.........

ಪ್ರಶ್ನೆಯ ಪರಿ.....

ಕುಣಿದು ಕುಣಿಸಿದೆ
ನಲಿದು ನಲಿಸಿದೆ
ನೀನು ನಕ್ಕು ನನ್ನ
ನಗಿಸಿ ನೋವ ಮರೆಸಿ
ನೀನು ಮರೆತೆ

ದುಃಖ ನೀಗಿ ಕಣ್ಣೀರ
ಕುಡಿದು ಸಿಹಿ ಸಜ್ಜಿಗೆಯ
ಬಡಿಸಿ ಮನಕೆ ಮಲ್ಲಿಗೆಯ
ಬನವಾದೆ....
ಕಂಪ ಬೀರಿದೆ

ಮನದ ಮರೆಯಲಿ ನಿಂತು
ಎದೆಯ ಬಡಿತವೇ
ನೀನಾದೆ
ಕಣ್ಣ ಬಿಂಬದ
ಪಟವೂ ನೀನೆ
ಎನ್ನ ಕವನದ
ದಾಟಿಯೂ ನೀನೇ
ಪಲ್ಲವಿ ಅನುಪಲ್ಲವಿಗಳ
ಹೆಜ್ಜೆಯೂ ನಿಂದೆ

ಆದರೂ .........

ನೀನೇಗೆ ಪದಗಳಿಗೆ
ಬಣ್ಣದ ಜೀವ ಕೊಟ್ಟೆ!!!!!
ಎಂಬ ನಿನ್ನ ಪ್ರಶ್ನೆಯ
ಪರಿ ತಿಳಿಸೆಯಾ
ಎನ್ನ ಮನ ಮಂದಿರದ
ಒಡತಿ.....!!

ನಿನ್ನ ಹೊಳಪು

ಸಮುದ್ರಕ್ಕೂ ಉಣ್ಣಿಮೆಯ ಕಂಡು
ಉಕ್ಕುವ ಆಸೆ
ಆಗಸದಿ ಚಂದ್ರನೇ ಇಲ್ಲ .....

ಚಂದ್ರನಿಗೂ ಇಳೆಗೆ
ತಂಪ ಪಸರಿಸುವಾಸೆ .....
ಮೋಡಗಳ ತೆರೆಯ ತೊರೆಯಲಾಗುತ್ತಿಲ್ಲ.......

ಸುಡುವ ಸೂರ್ಯನಿಗೂ
ಬರೀ ಬೆಳಕ  ನೀಡುವಾಸೆ....
ತನ್ನೊಡಲ ದಾವಾಗ್ನಿ  ದಹಿಸುತ್ತಲೇ ಇರಲು
ಅವನೇನು ಮಾಡಲು ಸಾಧ್ಯ......

ನೈದಿಲೆಗೆ ನಗುವ ಆಸೆ .....
ಮಾವಿನಮರದಲಿ ಚಿಗುರೇ ಇಲ್ಲ
ಇನ್ನು ಇಂಪು ಬರುವುದಾದರೂ ಎಲ್ಲಿಂದ.......

ಬರಡು ಕಾನನದಿ ಹಸಿರು
ಸಿರಿಯ ಕಾಣುವಾಸೆ....
ಮೊಳಕೆಗಳು ಚಿಗುರಲು
ಜಲದ ಸೆಲೆಯೇ ಇಲ್ಲ....

ನನಗೆ ಗೊತ್ತು ನಿನ್ನ ಸಹನೆ ಪ್ರಶ್ನಾತೀತ......
ಅದಕ್ಕೂ ಕಟ್ಟಕಡೆಯ ತುದಿಯುಂಟು........
ಒಡೆದ ಮಾತುಗಳು ಮನದೊಳಗೆ
ತಿದಿಯೊತ್ತಿ ಕೊರಳುಬ್ಬುವುದು ಸಹಜವೇ.....
.
ಎಲ್ಲವೂ ಕ್ಷಣಿಕ ........

ನಿನ್ನ ತಾಳ್ಮೆ ಗೆ ಜಯವುಂಟು....
ಪುಟಕ್ಕಿಟ್ಟ ಚಿನ್ನವು ನೀನು......
ಬೆಂಕಿಯಲಿ ಬೆಂದರೂ
ನಿನ್ನ ಹೊಳಪು ಜಗದ ಬೆಳಕು..