ಮಂಗಳವಾರ, ಆಗಸ್ಟ್ 16, 2011

ಅಣ್ಣಾ ನಿಮ್ಮೊಂದಿಗೆ ನಾವೂ ಇದ್ದೀವಣ್ಣ!

ಬಹುಶಃ ಈ ಲೇಖನ ಪ್ರಕಟವಾಗುವ ವೇಳೆಗೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರುದ್ಧದ ನಿರ್ಣಾಯಕ ಹಂತದ ಹೋರಾಟದ ಸಲುವಾಗಿ  ಉಪವಾಸಕ್ಕೆ ಕುಳಿತಿರುತ್ತಾರೆ. ಈ ಬಾರಿಯ ಅವರ ಸತ್ಯಾಗ್ರಹ ಕಳೆದಬಾರಿಗಿಂತ ವಿಭಿನ್ನ!! ಕಳೆದ ಸಾರಿ ಉಪವಾಸಕ್ಕೆ ಕುಳಿತಾಗ ಅದು ಹೊಸತಾಗಿದ್ದರಿಂದಲೋ ಏನೋ ದೇಶದ ಮೂಲೆ ಮೂಲೆಗಳಿಂದ ಅದರಲ್ಲೂ ಸಾಮಾಜಿಕ ತಾಣಗಳಿಂದ ಅತ್ಯಭೂತಪರ್ವ ಬೆಂಬಲ ವ್ಯಕ್ತವಾಗಿತ್ತು. ಅದಕ್ಕೆ ವ್ಯತಿರಿಕ್ತ ಎಂಬಂತೆ ಇದೊಂದು ’ಸಾಮಾನ್ಯ ಓರಾಟ’ ಎಂದು ಕೊಂಡಿದ್ದ ಕೇಂದ್ರ ಸರ್ಕಾರ ಬಹಳ ಪೇಚಿಗೆ ಸಿಲುಕಿತ್ತು. ವಿಧಿಯಿಲ್ಲದೆ ಅಣ್ಣನಿಗೆ ’ಶರಣು’ ಎಂದಿತ್ತು!

ಆದರೆ ಈ ಬಾರಿ ಹಾಗಿಲ್ಲ. ನೈಜವಾದ ಕಾಳಜಿಯುಳ್ಳ ಹೋರಾಟಗಳನ್ನೂ ’ಬರೀ ಓರಾಟ’ ಎಂದು ಜನಸಾಮಾನ್ಯರಲ್ಲಿ ಬಿಂಬಿಸಲು ಅಲ್ಪ ಯಶಸ್ಸು ಕಂಡಿರುವ ಕೇಂದ್ರದ ’ಕಪಿ’ ’ಸಿಂಗಲೀಕ’ಪಡೆಗಳು ತಕ್ಕ ಮಟ್ಟಿಗೆ ಹೋರಾಟದಲ್ಲಿ ಒಡಕು ಮೂಡಿಸಿರುವುದು ಒಪ್ಪತಕ್ಕ ಮಾತೆ ಸರಿ. ಈ ಬಾರಿಯೂ ಅದೇ ರೀತಿಯ ಪ್ರಯತ್ನ ಮುಂದುವರೆಸಿರುವ ಅದೇ ತಂಡ ಬೆಟ್ಟ ಅಗೆದು ಸೊಳ್ಳೆ ಹಿಡಿದಂತೆ ಅಣ್ಣಾರವರ ಮೇಲೆ ಗೂಬೆ ಕೂರಿಸಲು ಎತ್ತ ನೋಡಿದರೂ ಅವರಿಗೆ ಸಂಬಂಧವೇ ಇಲ್ಲದ ೨ ಲಕ್ಷ ರೂಗಳ ಭ್ರಷ್ಟಾಚಾರದ ಆರೋಪವನ್ನು ಹೊರಿಸಿ ತನ್ನ ೨೦ ಲಕ್ಷ ಕೋಟಿಗಳ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದದ ಜೊತೆಗೆ ಜನಸಾಮಾನ್ಯರಲ್ಲಿ ಅಸಹ್ಯ ಮೂಡಿಸಿರುವುದು ಎದ್ದು ಕಾಣುತ್ತದೆ. ಅಲ್ಲದೆ ಗರ್ಭಕೊರಳಿನ ಅರ್ಬುದ ರೋಗ ಚಿಕಿತ್ಸೆಗೆ ಅಮೇರಿಕಕ್ಕೆ ಹಾರಿರುವ ಇಟಲಿಯಮ್ಮನ ಸ್ಥಾನದಲ್ಲಿ ’Programmed ಫಾರಂ ಕೋಳಿ’ ರಾಹುಲ್ ಗಾಂಧಿಯ ಹೆಗಲಿಗೆ ಭ್ರಷ್ಟಾಚಾರವೆಂಬ ಔಷಧವೇ ಇಲ್ಲದ ಅರ್ಬುದ ರೋಗದ ವಿರುದ್ಧ ಸೆಣಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ’ಗುರುತರ’ ಜವಾಬ್ದಾರಿಯನ್ನು ಹೊಣೆಗೇಡಿ ಸರ್ಕಾರ ಹೊರಿಸಿದೆ. ಮೊದಲೇ ಬೇಜಾವಾಬ್ದಾರಿಯಂತೆ ವರ್ತಿಸುವ ಈ ಗಾಂಧಿ ಕುಡಿಗೆ ದೇಶ ನಡೆಸುವ ಚುಕ್ಕಾಣಿ ಕೊಟ್ಟರೆ ನಮ್ಮನ್ನು, ನಮ್ಮ ದೇಶದ ಮರ್ಯಾದಯನ್ನು ಆ ಭಗವಂತನೇ ಕಾಪಾಡಬೇಕು.

ಇದಕ್ಕೆಲ್ಲಾ ಕಳಶವಿಟ್ಟಂತೆ, ಮೌನಿ ಮನಮೋಹನ್ ಸಿಂಗ್ ರವರು ಮೌನ ಮುರಿದು ’ಭ್ರಷ್ಟಾಚಾರವನ್ನು ಹತ್ತಿಕ್ಕಲು ಸತ್ಯಾಗ್ರಹಗಳು ಬೇಕಿಲ್ಲ’ ಎನ್ನುವ ನಾಚಿಕೆಗೇಡಿನ ಮೂಲಕ ತಮ್ಮ ಬುದ್ಧಿ ಶಕ್ತಿಯನ್ನು ಎಲ್ಲೋ ಅಡವಿಟ್ಟು ತಾವೊಂದು ’ಸೂತ್ರದ ಬೊಂಬೆ’ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಉತ್ತೇಜನ ಗೊಂಡ ದೆಹಲಿ ಪೋಲೀಸರು ಅಣ್ಣಾರವರಿಗೆ ಹಾಕಿರುವ ೨೨ ಅಸಂಬದ್ಧ, ಅಸಂವಿಧಾನಿಕ ಶರತ್ತುಗಳಿಗೆ ಅಂಟಿಕೊಂಡು ಸತ್ಯಾಗ್ರಹದ ಸಮಾಧಿ ಮಾಡಲು ಸಜ್ಜಾಗಿದ್ದಾರೆ. ಈ ನಡೆಯಿಂದಾಗಿ ಭ್ರಷರನ್ನು, ಭ್ರಷ್ಟಾಚಾರವನ್ನು ರಕ್ಷಿಸಲು ತಾನು ಕಟಿಬದ್ದವಾಗಿರುವುದಾಗಿ ಕೇಂದ್ರ ಘೋಷಿಸಿಕೊಂಡಿದೆ. ಅಲ್ಲದೆ ಈ ಹೋರಾಟದ ಶುರುವಿನಿಂದಾಗಿ ಕೇಂದ ಸರ್ಕಾರ ವನ್ನು ಸಿಲುಕಿಸಿ ವಿಲವಿಲ ಒದ್ದಾಡುವ ಸ್ಥಿತಿಯನ್ನು ತಂದೊಡ್ಡಿರುವ ೨ ಜಿ, ಸಿ ಡಬ್ಲ್ಯ್ ಜಿ ಮತ್ತಿತರ ಹಗರಣಗಳಿಂದ ಜನರ ಮನಸನ್ನು ಬೇರೆಡೆಗೆ ತಿರುಗಿಸುವ ಚಾಣಾಕ್ಷತನವನ್ನೂ ಕೇಂದ್ರ ಮೆರೆದಿದೆ. ಅಲ್ಲದೇ ದೃಶ್ಯ ಮಾಧ್ಯಮಗಳಾಗಲಿ ಮುದ್ರಣ ಮಾಧ್ಯಮಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಅವುಗಳಿಗೆ ಬರೀ ’ಬ್ರೇಕಿಂಗ್ ನ್ಯೂಸ್’ ಮಾತ್ರವೇ ಮುಖ್ಯವಲ್ಲವೆ?

ಅಷ್ಟೇ ಅಲ್ಲದೆ ಕಳೆದಬಾರಿಯ ಹಜಾರೆಯವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೇಸ್ಸೇತರ ಸರ್ಕಾರಗಳು ಈ ಬಾರಿ ಮಗುಮ್ಮಾಗಿ ಉಳಿದಿವೆ. ಅದರಲ್ಲೂ ನಮ್ಮ ಕರ್ನಾಟಕದ ಬಿ ಜೆ ಪಿ ಸರ್ಕಾರ ನಿನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಶಾಸ್ತ್ರಕ್ಕೆಂದು ಭ್ರಷ್ಟಾಚಾರದ ವಿರುದ್ದ ಒಂದೇ ಒಂದು ಸಾಲನ್ನೂ ಸಹ ಉಲ್ಲೇಖಿಸದಿರುವುದು ಶತಾಯಗತಾಯ ’ಮಾಜಿ ಭ್ರಷ್ಟಾಚಾರವನ್ನು’ ಕಾಪಾಡಲು ಟೊಂಕಕಟ್ಟಿದಂತಿದೆ!!

ಇಷ್ಟೆಲ್ಲಾ ಇಲ್ಲಗಳ ನೆಗೆಟೀವ್ ಅಂಶಗಳ ನಡುವೆಯೂ ನಾವು ಅಣ್ಣಾರವರನ್ನು ಬೆಂಬಲಿಸಲೇಬೇಕಾದ ಅಗತ್ಯವಿದೆ. ನಮ್ಮದೇಶದಲ್ಲಿ ಇರುವ ಎಲ್ಲಾ ಕಾನೂನುಗಳು ಬಲಿಷ್ಠವಾಗಿದ್ದರೂ ಅವುಗಳನ್ನು ಜಾರಿಗೆ ತರುವವರ ನಿರ್ಲಕ್ಷ್ಯದಿಂದಾಗಿ ಅವು ಕಳಪೆ ಕಾನೂನೆಸುವುದು ಸಹಜ. ಅಲ್ಲದೇ ನಮ್ಮ ಕಾನೂನುಗಳು ನಮ್ಮನ್ನಾಳುವವರ, ಸಿರಿವಂತರ ತಾಳಕ್ಕೆ ಆಗಿಂದಾಗ್ಗೆ ’ತಿದ್ದುಪಡಿ’ಆಗಿವೆ, ಆಗುತ್ತಿವೆ. ಇದೆಲ್ಲದರ ನಡುವೆ ಅಣ್ಣಾರವರು ಪ್ರಸ್ತಾಪಿಸಿರುವ ’ಜನ ಲೋಕಪಾಲ್ ಮಸೂದೆ’ಯು ಸಧ್ಯದ ಮಟ್ಟಿಗೆ ರಾಜಕಾರಣಿಗಳಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸಿರಿವಂತರಲ್ಲಿ ಚಳುಕು ಹುಟ್ಟಿಸಿರುವುದರಿಂದಲೇ ಅವರೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೋರಾಟವನ್ನು ಹದಗೆಡಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಆ ಕಾನೂನು ಜಾರಿಯಾದಾಗ ಅದು ಸರಿಯೋ ತಪ್ಪೋ ನಂತರ ಗೊತ್ತಾಗುತ್ತದೆ. ಅಲ್ಲದೆ ಸಧ್ಯ ಮೇಲ್ನೋಟಕ್ಕೆ ಪ್ರಬಲ ಕಾಯ್ದೆಯಂತಿರುವ ’ಜನ ಲೋಕಪಾಲ್’ಮಸೂದೆ ಜಾರಿಗಾಗಿ, ಭ್ರಷ್ಟಾಚಾರವನ್ನು ಹತ್ತಿಕ್ಕುವಸಲುವಾಗಿ ಮುನ್ನುಗ್ಗುತ್ತಿರುವ ಅಣ್ಣನನ್ನು ಬೆಂಬಲಿಸದಿದ್ದಲ್ಲಿ ಮುಂದೊಂದು ದಿನ ನಮ್ಮನ್ನು ನಾವೇ ಶಪಿಸಿಕೊಳ್ಳಬೇಕಾದೀತು!! ಎಲ್ಲರೂ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ದಿನ ಪೂರ್ತಿ ಉಪವಾಸದ ಗುಡಾರಗಳಲ್ಲಿ ಕುಳಿತರೆ ಮಾತ್ರ ಅಣ್ಣಾರವರಿಗೆ ಬೆಂಬಲ ಎಂದುಕೊಳ್ಳುವಂತಿಲ್ಲ. ಸಾಂಕೇತಿವಾಗಿ ಧರಣಿಕುಳಿತು, ಕಪ್ಪು ಪಟ್ಟಿ ಧರಿಸಿಯೂ ಸಹ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕವೂ ಸಹ ಬೆಂಬಲ ವ್ಯಕ್ತಪಡಿಸಬಹುದು! ಅಲ್ಲದೇ ಅಣ್ಣಾರವರು ಕರೆ ನೀಡಿರುವಂತೆ ಪ್ರತಿ ದಿನ ರಾತ್ರಿ ೮ ರಿಂದ ೯ ಗಂಟೆಯವರೆಗೆ ನಮ್ಮ ನಮ್ಮ ಮನೆಯ ದೀಪಗಳನ್ನು ಆರಿಸಿ, ಮನೆಯಿಂದ ಹೊರಬಂದು, ಘೋಷಣೆ ಕೂಗುವುದರ ಮೂಲಕ, ನಿಮ್ಮ ಜಿಲ್ಲಾಧಿಕಾರಿಗಳಿಗೆ, ನಿಮ್ಮ ತಾಲ್ಲೋಕುಗಳಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ, ಅಥವಾ ನಿಮ್ಮ ಹೋಬಳಿಗಳಲ್ಲಿರುವ ಉಪತಹಶೀಲ್ದಾರರಿಗೆ ಕಾನೂನು ಜಾರಿಗೆ ಮನವಿ ಸಲ್ಲಿಸುವುದರ ಮೂಲಕ ಶಾಂತಿಯುತವಾಗಿಯೂ ಕಾನೂನಿನ ಜಾರಿಗೆ ಒತ್ತಾಯಿಸಬಹುದು.

ಜೊತೆಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಶಾಂತಿಯುತ ದಾರಿಗಳು ಇದ್ದೇ ಇರುತ್ತವೆ. ಅವುಗಳೆಲ್ಲವುದರ ಮೂಲಕವೂ ಕೇಂದ್ರ ಸರ್ಕಾರಕದ ಮೇಲೆ ಒತ್ತಡ ತರಬಹುದು. ದಯವಿಟ್ಟು ನಿಮಗೆ ತಿಳಿದಿದ್ದನ್ನು ಮಾಡಿ, ಅದು ಶಾಂತಿಯ ಮಾರ್ಗವಾಗಿರಲಿ ಆದರೆ ಕೇಂದ್ರದ ಮೇಲೆ ಒತ್ತಡವಿರಲಿ. ’ಜನ ಲೋಕಪಾಲ ಮಸೂದೆ’ ಜಾರಿಯಾಗೇ ತೀರಲಿ.

ಜೈ ಅಣ್ಣಾ ಹಜಾರೆ!!

ಭ್ರಷ್ಟಾಚಾರ ವಿರುದ್ದದ ಹೋರಾಟಕ್ಕೆ ಜಯವಾಗಲಿ!!

ಕಾಮೆಂಟ್‌ಗಳಿಲ್ಲ: