ಭಾನುವಾರ, ಜೂನ್ 6, 2010

ಚೈತನ್ಯನ ಚೇತಕ್!!!

ಚೈತನ್ಯನ ಬಳಿ ಒಂದು ವಿಶಿಷ್ಠವಾದ ದ್ವಿಚಕ್ರವಾಹನವೊಂದಿತ್ತು. ಅದರ ಆಕಾರ ನೋಡಲು ಬಜಾಜ್ ಚೇತಕ್ ನಹಾಗಿದ್ದರೂ ಅದು ಬಜಾಜ್ ಕಂಪನಿಯವರದ್ದಲ್ಲ, ಇನ್ನೂ ೪ ಸ್ಟ್ರೋಕ್ ಇಂಜಿನ್ ಆದರೂ ಹೀರೋ ಹೋಂಡಾ ಕಂಪನಿಯದ್ದೂ ಅಲ್ಲ. ಹಾಗಿದ್ರೆ ಇನ್ಯಾವ್ದು ಅಂದ್ರೆ, ಅದು ಕೈನೆಟಿಕ್ ಕೆ೪ ಎಂಬ ವಿಚಿತ್ರ ಬೈಕ್. ಅದೇ ಬೈಕ್ ಇತರ ಸ್ನೇಹಿತರ ಬಳಿ ಇದ್ದರೂ ಚೈತನ್ಯನ ಬೈಕಿನ ಸಂಗತಿಯೇ ಬೇರೆ. ಅದಕ್ಕೆ ನಾವೆಲ್ಲ ಪ್ರೀತಿಯಿಂದ ಇಟ್ಟ ಹೆಸರೇ ಚೈತನ್ಯನ ಚೇತಕ್!!!
ಓಹ್!!! ಕ್ಷಮಿಸಿ!! ಚೈತನ್ಯ ಯಾರು ಅನ್ನೋದನ್ನ ಹೇಳಲೇ ಇಲ್ಲ.
ನಾನು ಎಂ.ಎಸ್ಸಿ ಮುಗಿಸಿ ಮುಂದೇನು? ಎಂಬ ಪ್ರಶ್ನಾರ್ಥಕವೇ ಕುಡುಗೋಲಾಗಿ ನನ್ನನ್ನು ಕತ್ತರಿಸಲು ಬಂದಾಗ ನನ್ನ ಸಹಪಾಠಿ ಸ್ನೇಹಿತ ದಿನೇಶನ ಮೂಲಕ ಪರಿಚಯವಾದವನು ಮತ್ತು ನನ್ನನ್ನು ಈ ವೈದ್ಯಕೀಯ ಪ್ರತಿನಿಧಿ ವೃತ್ತಿಗೆ ತಂದವನೇ ಅವನು. ಯಾರೇ ಸರಿ ಚೈತನ್ಯನನ್ನು ಮೊದಲಬಾರಿ ಭೇಟಿಯಾದರೆ ಅವನ ಸ್ನೇಹಿತರಾಗುವುದು ಸೆಂಟ್ ಪರ್ಸೆಂಟ್ ಗ್ಯಾರಂಟಿ. ಯಾವಾಗಲೂ ತಮಾಷೆಯಾಗೆ ಮಾತನಾಡುತ್ತಾ, ಏನೇ ತೊಂದರೆ ಬಂದರೂ ನಗುತ್ತಲೇ ಪರಿಹರಿಸುವಂತಹ ವ್ಯಕ್ತಿತ್ವ.
ಇಂತಹ ಚೈತನ್ಯನಿಗೆ ಅವನ ಬೈಕ್ ಎಂದರೆ ಪಂಚಪ್ರಾಣ! ೧ ಲೀ ಪೆಟ್ರೋಲ್ ಗೆ ಸುಮಾರು ೮೦ ಕಿ.ಮಿ ಮೈಲೇಜ್ ಬರುತ್ತಿತ್ತು. ಆದರೆ ಆಕ್ಸ್ಲರೇಟರ‍್ ಎಷ್ಟು ಹೊತ್ತಿದರೂ ೪೦ ರ ಮೇಲೆ ಯಾವತ್ತೂ ಹೋಗುತ್ತಿರಲಿಲ್ಲ. ಭಾರೆಯಮೇಲೆ ಎಳೆಯುತ್ತಿರಲಿಲ್ಲ, ಇಳಿಜಾರಿನಲ್ಲಿ ನಿಲ್ಲುತ್ತಿರಲಿಲ್ಲ.
ಒಂದು ಸಾರಿ ಸಂಜೆ ಏಳು ಗಂಟೆಯ ಸಮಯ ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ವೃತ್ತದೆಡೆಗೆ ಇಬ್ಬರು ಜೊತೆಗೂಡಿ ಹೊರಟಿದ್ದೆವು, ಮುಂದಿನಿಂದ ಟ್ರಾಫಿಕ್ ಪೋಲೀಸ್ ಒಬ್ಬ ಮುಂದೆ ಬಂದು ಗಾಡಿಯನ್ನು ಪಕ್ಕಕ್ಕೆ ಹಾಕಲು ಹೇಳಿದ. ಇಬ್ಬರಿಗೂ ನಡುಕ ಶುರುವಾಯ್ತು. ನಮ್ಮಿಬ್ಬರ ಬಳಿ ಲೈಸೆನ್ಸ್ ಇರಲಿ ಎಲ್. ಎಲ್. ಆರ್. ಕೂಡ ಇರಲಿಲ್ಲ!! ಅದು ಹೋಗಲಿ ಅಂದ್ರೆ ಗಾಡಿಗೆ ಇನ್ಶೂರೆನ್ಸ್ ಕೂಡ ಇಲ್ಲ!! ಸಧ್ಯ! ಗಾಡಿಯನ್ನು ಚೈತನ್ಯ ಓಡಿಸುತ್ತಿದಾನೆಂಬುದೇ ನನ್ನ ಸಮಾಧಾನ! ಅವನೋ
"ಮಗ!! ಇವತ್ತು ಜೋಬಿಗೆ ಬರೆ ಗ್ಯಾರಂಟಿ !!" ಎಂದು ಗೊಣಗಾಡಿದ.
"ಎಲ್ರಿ? ಗಾಡಿಗೆ ಲೈಟ್ ಇಲ್ಲದೆ ಓಡೀಸುತ್ತಿದ್ದೀರಾ? ಸ್ವಲ್ಪನೂ ಬುದ್ದಿ ಇಲ್ವಾ?" ಅಂತ ಪಿ. ಸಿ ಸಾಹೇಬ್ರು ಗುಡುಗೋದರ ಜೊತೆಗೆ
"ಎಜುಕೇಟೆಡ್ ಬೇರೆ" ಅಂತಹ ಮತ್ತಷ್ಟು ಮರ್ಯಾದೆಯನ್ನು ತಗೆಯುತ್ತಿದ್ದರೆ ನಮ್ಮಿರಗೂ ಸ್ವಲ್ಪ ನಿರಾಳವಾದಂತಾಯ್ತು. ಸಧ್ಯ ಇದು ಪೆಟ್ಟಿ ಕೇಸು ಅಂತಾ!!
"ಯಾರ್ ಸರ್ ಹೇಳಿದ್ದು? ನೋಡಿ" ಎನ್ನುತ್ತ ತನ್ನ ಕೆ೪ ನ ಹೆಡ್ ಲೈಟ್ ಅನ್ನು ತೋರಿಸಿದ. ಆ ಪೋಲಿಸಪ್ಪನಿಗೆ ನಮಗೆ ಮತ್ತೆ ಬೈಯ್ಯಬೇಕೋ ಅಥವಾ ಈಗಾಗಲೇ ಬೈದದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ತಿಳಿಯದೆ ತಲೆಯಮೇಲಿನ ಟೋಪಿ ತೆಗೆದು ಸೆಕೆ ಬೀಸಿಕೊಳ್ಳುತ್ತಾ ನಿಂತು ಬಿಟ್ಟ!
ಏಕೆಂದರೆ ಬೈಕ್ ನ ಲೈಟು ಎಂಟಾಣಿ ಕ್ಯಾಂಡಂಲ್ ಗಿಂತಲೂ ಕಡೆಯಾಗಿ ಉರಿಯುತ್ತಿತ್ತು!!! ಏನೂ ತೋಚದ ಆರಕ್ಷಕ ಮಹಾಶಯ ಬಿಟ್ಟು ಕಳುಹಿಸಿದ.
ಮತ್ತೊಂದು ಸಂಜೆ ನಮ್ಮ ಕೆ.ಇ.ಬಿ ಯವರ ಕೃಪೆಯಿಂದಾಗಿ ಕರೆಂಟ್ ಇಲ್ಲದ ಸಮಯದಲ್ಲಿ ಅದೇ ಮಾರ್ಗವಾಗಿ ಬರುತ್ತಿರಬೇಕಾದರೆ ಅದೇ ಬಲ್ಲಾಳ್ ವೃತ್ತದ ಬಳಿ ಇವನ ಬೈಕ್ ಗೆ ಒಬ್ಬ ಹಣ್ಣು ಹಣ್ಣು ಮುದುಕಿ ಅಡ್ಡ ಬಂದುಬಿಡುವುದೇ!!? ಮೊದಲೇ ಬೈಕ್ ನ ಲೈಟ್ ಬೇರೆ ಇಲ್ಲ! ಸೀದ ಆ ಮುದುಕಿಗೆ ಇಕ್ಕಿದ್ದ. ಸಧ್ಯ! ಇವನ ಬೈಕ್ ಗೆ ಸ್ಪೀಡ್ ಇರಲಿಲ್ಲ ಬರೀ ತರಚಿದ ಗಾಯವಾಯ್ತು ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನಹಾಗೆ ರಾತ್ರಿ ಏಳರ ನಂತರ ಜನಸಂದಣೆ ೧೦ ವರ್ಷಗಳ ಹಿಂದೆ ಇರುತ್ತಿರಲಿಲ್ಲ. ಇದ್ದಿದ್ದರೆ ಇಬ್ಬರಿಗೂ ಧರ್ಮದೇಟು ಖಾಯಂ!! ತಕ್ಷಣ ಆ ಅಜ್ಜಿಯನ್ನು ಅದೇ ಗಾಡಿಯ ಮೇಲೆ ಕೂರಿಸಿಕೊಂಡು ಪಕ್ಕದ ವಿನಾಯಕ ನರ್ಸಿಂಗ್ ಹೋಂ ನಲ್ಲಿ ಉಪಚರಿಸಿ ಕಳುಹಿಸಿದೆವು. ನಮ್ಮ ಪುಣ್ಯ ಆ ಅಜ್ಜಿಗೆ ಆಕೆಗೆ ಗುದ್ದಿದ್ದು ನಾವೇ ಅನ್ನುವ ಸತ್ಯ ತಿಳಿಯಲೇ ಇಲ್ಲ!!
ಇಂತಿಪ್ಪ ಗಾಡಿಗೆ ನಾವೆಲ್ಲರೂ ಬೈಯ್ದು, ಕಾಡಿ, ಬೇಡಿದ ನಂತರ ಕಡೆಗೂ ಇನ್ಶೂರೆನ್ಸ್ ಮಾಡಿಸಿಯೇ ಬಿಟ್ಟ!!
"ಹೇಗೂ ಗಾಡಿಯನ್ನು ಹುಷಾರಾಗಿ ಹೋಡಿಸ್ತೇನೆ, ಎಲ್ಲೂ ಆಕ್ಸಿಡೆಂಟ್ ಆಗೋ ಚಾನ್ಸು ಕಡಿಮೆ, ಆಗಲೇ ಗಾಡಿ ಆಯಸ್ಸು ಅರ್ಧ ಮುಗ್ದೋಗಿದೆ, ಸುಮ್ಮನೆ ಇನ್ಶೂರೆನ್ಸ್ ದುಡ್ಡು ವೇಸ್ಟು ಮಗಾ! ಎಂಗಾದ್ರೂ ಮಾಡಿ ಆ ದುಡ್ಡು ವಸೂಲಿ ಮಾಡ್ಕೋಬೇಕು" ಎಂದು ಅವಲತ್ತು ಕೊಳ್ಳುತ್ತಿದ್ದವನಿಗೆ ಆ ಬೈಕ್ ನ ಷೋ ರೂಂ ನ ಮೆಕ್ಯಾನಿಕ್ ಮಹಮದ್ ಒಂದ್ ಐಡಿಯಾ ಕೊಟ್ಟ!
"ಸಾರ್ ನಿಮ್ ಬೈಕ್ ಗೆ ನಂ ಷೋರೂಂದಲ್ಲಿ ಗುದ್ದರ್ಸಿ ಕೊಟ್ಬಿಢ್ಹತ್ತಿನಿ, ಸುಮ್ಕೆ ಮನೆ ಹತ್ರ ನಿಲ್ಸಿದಾಗ ಜಾರಿ ಬಿದ್ದದ್ದು ಅಂತ ಪೋಲೀಸ್ ಕಂಪ್ಲೇಂಟ್ಗೆ ಕೊಟ್ಟಿ ಇನ್ಶೂರೆನ್ಸ್ ಕ್ಲೈಮು ಮಾಡ್ಕಳಿ" ಅಂದ. ಸರಿ ಒಂದು ಭಾನುವಾರ ಅವನು ಹೇಳಿದ ಹಾಗೆ ಮಾಡಿ ಕಂಪ್ಲೇಂಟ್ ಕೊಟ್ಟು ಹತ್ತು ಹದಿನೈದು ದಿನಕ್ಕೆಲ್ಲಾ ೩೨೦೦/- ರೂ ಹಣವೂ ಬಂತು, ಅದರಲ್ಲಿ ಅವನ ಬೈಕ್ ರಿಪೇರಿಗೆಂದು ೭೦೦ ಖರ್ಚಾಯ್ತು.! ಚೈತನ್ಯನಿಗೆ ತನ್ನ ಸಾಧನೆಗೆ ಖುಷಿಯೋ ಖುಷಿ!!
"ನೋಡ್ಮಗ! ಒಣ್ಟು ತ್ರಿಬ್ಬಲ್ ವಸೂಲಿ ಮಾಡ್ದೆ ಇನ್ಶೂರೆನ್ಸ್ ನೋರ ಹತ್ರ" ಅಂತ ಹೇಳಿಕೊಂಡು ತಿರುಗ ತೊಡಗಿದ. ಆ ಸಮಯದಲ್ಲಿ ನಾವೆಲ್ಲಾ ಕರುಬಿದರೂ ನಮ್ಮ ಬೈಕ್ ಗಳ ಮೇಲೆ ರಿಸ್ಕ್ ತೆಗೆದುಕೊಳ್ಳಾಲು ತಯಾರಿರಲಿಲ್ಲ.
ಸರಿ ಬೈಕ್ ಪುನರ್ನಿಮಾಣಗೊಂಡು ೨ ದಿನ ಕಳೆದ ನಂತ ಗುಂಡ್ಲುಪೇಟೆಗೆ ಕೆಲಸಕ್ಕೆಂದು ಹೊರಟ. ಆ ದಿನ ನಾನು ಮೈಸೂರಿನಲ್ಲೇ ಇದ್ದೆ. ಊಟಕ್ಕೆಂದು ಮಧ್ಯಾನ್ಹ ರೂಮಿಗೆ ಬಂದಾಗ ಟೆಲಿಗ್ರಾಂ ಬಂತು. ಅದು ಚೈತನ್ಯನಿಂದ!!!! ಈಗಿನ ಹಾಗೆ ಮೊಬೈಲ್ ಫೋನ್ ಇಲ್ಲದ್ದರಿಂದ ನಮ್ಮ ವೃತ್ತಿಯಲ್ಲಿ ಒಬ್ಬರನ್ನೊಬ್ಬರು ಸಂಪರ್ಕಿಸಬೇಕೆಂದರೆ ಈ ರೀತಿ ಟೆಲಿಗ್ರಾಂ ಕೊಟ್ಟು ತಮಗೆ ಕರೆಮಾಡಲು ಅಥವಾ ತಾವೇ ಕರೆಮಾಡುತ್ತೇವೆಂದು ತಿಳಿಸುತ್ತಿದ್ದರು. ಅದೇ ರೀತಿ ಅಂದು ಸಂಜೆ ೪ ಗಂಟೆಗೆ ಅವನೇ ನನಗೆ ಫೋನ್ ಮಾಡುವವನಿದ್ದ. ಪಕ್ಕದ ಅಂಗಡಿಯ ಕಾಯಿನ್ ಭೂತ್ ನಲ್ಲಿ ಇವನ ಫೋನಿಗೆ ಕಾಯುತ್ತಾ ಕುಳಿತೆ. ಫೋನ್ ಬಂತು,
"ಮಗಾ!! ಈಗ ನಂಜನಗೂಡಿನಲ್ಲಿ ಟ್ರೈನ್ ಹತ್ತುತ್ತಿದ್ದೀನಿ, ಈಗೇನೂ ಹೇಳಕ್ಕಾಗಲ್ಲ ಸೀದಾ ಐದ್ಗಂಟೆಗೆ ರೈಲ್ವೇ ಸ್ಟೇಷನ್ ಹತ್ರ ಬಂದ್ಬಿಡು ನಮ್ಮನೆಗೇನು ಹೇಳ್ಬೇಡ" ಅಂತ ಕ್ಷೀಣ ಧ್ವನಿಯಲ್ಲೇಳಿ ಫೋನಿಟ್ಟುಬಿಟ್ಟ. ನನ್ನ ಕೈಕಾಲುಗಳೆಲ್ಲಾ ನಡುಗಲು ಪ್ರಾರಂಭಿಸಿದವು. ತಲೆಯಲ್ಲಿ ನೂರಾರು ಯೋಚನೆಗಳು!!
ಬೆಳಿಗ್ಗೆ ತಾನೆ ಬೈಕಿನಲ್ಲೇ ಹೊರಟ! ಏನಾಯ್ತು? ಏನಾದರೂ ಆಕ್ಸಿಡೆಂಟ್!!? ಛೇ!! ಬಿಡ್ತು! ಹಾಗಾಗ್ದಿರ್ಲಿ. ಮತ್ಯಾಕೆ ಟ್ರೈನಲ್ಲಿ ಬರ್ತಿದಾನೆ? ಹೀಗೆ ಯೋಚಿಸುತ್ತಾ ರೈಲು ನಿಲ್ದಾಣದ ಬಳಿ ಬಂದೆ.
ಚೈತನ್ಯ ಒಂದು ಗೋಣಿ ಚೀಲದ ಮೂಟೆಯನ್ನು ಕಷ್ಟ ಪಟ್ಟು ಎಳೆದುಕೊಂಡು ಹೊರಬರಲು ಹೆಣಗುತ್ತಿದ್ದ. ತಕ್ಷಣ ಅವನ ಬಳಿ ಓಡಿದೆ.
"ಏನೋ ಇದು?" ಅಂದೆ
"ಪ್ಚ್ಲ್!! ನನ್ಗಾಡಿ ಮಗಾ!!" ಅಂದ ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗತೊಡಗಿದೆ.
"ನಗು ಮಗಾ ಟೈಮ್ ನಿಂದು!" ಎಂದ ಮ್ಲಾನವದನನಾಗಿ. ನನಗೆ ಪಿಚ್ಚೆನಿಸಿತು, ನಗು ನಿಲ್ಲಿಸಿ
"ಏನಾಯ್ತೋ? ಏನಿಂಗೆ?" ಅಂದೆ.
"ಗುಂಡ್ಲುಪೇಟೆ ತಲುಪ್ಲೇ ಇಲ್ಲ ಮಗಾ! ನಂಜುನ್ಗೂಡು ಸುಜಾತ ಫ್ಯಾಕ್ಟರಿ ಹತ್ರ ಬೈಕ್ ಇಂಜಿನ್ ಸೀಝಾಗೋಯ್ತು, ಕಿಕ್ ಮಾಡಿ ಮಾಡಿ ಸುಸ್ತಾಯ್ತು, ಏನಾಗಿದೆ ಅಂತಾ ನೋಡಿದ್ರೆ ಆಯಿಲ್ ಸೀಲ್ ಬಿಚ್ಚೋಗಿತ್ತು, ಸರಿ ಅಂತೇಳಿ ಅದನ್ನಾಕ್ಸಿ ಮತ್ತೆ ಸ್ಟಾರ್ಟ್ ಮಾಡ್ದೆ ಪಾರ್ಟ್ಸ್ ಗಳೆಲ್ಲಾ ಪೀಸ್ ಪೀಸ್, ಆ ಮೆಕಾನಿಕ್ಕು ಗೋಣೀಚೀಲುಕ್ಕಾಕ್ಕೋಟ್ಟ. ಇಲ್ಬಂದಿದೀನಿ" ಅಂದ.
ಈ ರೀತಿ ಚೈತನ್ಯನ ಚೇತಕ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿತ್ತು.!!

ಕಾಮೆಂಟ್‌ಗಳಿಲ್ಲ: