ಭಾನುವಾರ, ಜೂನ್ 6, 2010

ಚೈತನ್ಯನ ಚೇತಕ್!!!

ಚೈತನ್ಯನ ಬಳಿ ಒಂದು ವಿಶಿಷ್ಠವಾದ ದ್ವಿಚಕ್ರವಾಹನವೊಂದಿತ್ತು. ಅದರ ಆಕಾರ ನೋಡಲು ಬಜಾಜ್ ಚೇತಕ್ ನಹಾಗಿದ್ದರೂ ಅದು ಬಜಾಜ್ ಕಂಪನಿಯವರದ್ದಲ್ಲ, ಇನ್ನೂ ೪ ಸ್ಟ್ರೋಕ್ ಇಂಜಿನ್ ಆದರೂ ಹೀರೋ ಹೋಂಡಾ ಕಂಪನಿಯದ್ದೂ ಅಲ್ಲ. ಹಾಗಿದ್ರೆ ಇನ್ಯಾವ್ದು ಅಂದ್ರೆ, ಅದು ಕೈನೆಟಿಕ್ ಕೆ೪ ಎಂಬ ವಿಚಿತ್ರ ಬೈಕ್. ಅದೇ ಬೈಕ್ ಇತರ ಸ್ನೇಹಿತರ ಬಳಿ ಇದ್ದರೂ ಚೈತನ್ಯನ ಬೈಕಿನ ಸಂಗತಿಯೇ ಬೇರೆ. ಅದಕ್ಕೆ ನಾವೆಲ್ಲ ಪ್ರೀತಿಯಿಂದ ಇಟ್ಟ ಹೆಸರೇ ಚೈತನ್ಯನ ಚೇತಕ್!!!
ಓಹ್!!! ಕ್ಷಮಿಸಿ!! ಚೈತನ್ಯ ಯಾರು ಅನ್ನೋದನ್ನ ಹೇಳಲೇ ಇಲ್ಲ.
ನಾನು ಎಂ.ಎಸ್ಸಿ ಮುಗಿಸಿ ಮುಂದೇನು? ಎಂಬ ಪ್ರಶ್ನಾರ್ಥಕವೇ ಕುಡುಗೋಲಾಗಿ ನನ್ನನ್ನು ಕತ್ತರಿಸಲು ಬಂದಾಗ ನನ್ನ ಸಹಪಾಠಿ ಸ್ನೇಹಿತ ದಿನೇಶನ ಮೂಲಕ ಪರಿಚಯವಾದವನು ಮತ್ತು ನನ್ನನ್ನು ಈ ವೈದ್ಯಕೀಯ ಪ್ರತಿನಿಧಿ ವೃತ್ತಿಗೆ ತಂದವನೇ ಅವನು. ಯಾರೇ ಸರಿ ಚೈತನ್ಯನನ್ನು ಮೊದಲಬಾರಿ ಭೇಟಿಯಾದರೆ ಅವನ ಸ್ನೇಹಿತರಾಗುವುದು ಸೆಂಟ್ ಪರ್ಸೆಂಟ್ ಗ್ಯಾರಂಟಿ. ಯಾವಾಗಲೂ ತಮಾಷೆಯಾಗೆ ಮಾತನಾಡುತ್ತಾ, ಏನೇ ತೊಂದರೆ ಬಂದರೂ ನಗುತ್ತಲೇ ಪರಿಹರಿಸುವಂತಹ ವ್ಯಕ್ತಿತ್ವ.
ಇಂತಹ ಚೈತನ್ಯನಿಗೆ ಅವನ ಬೈಕ್ ಎಂದರೆ ಪಂಚಪ್ರಾಣ! ೧ ಲೀ ಪೆಟ್ರೋಲ್ ಗೆ ಸುಮಾರು ೮೦ ಕಿ.ಮಿ ಮೈಲೇಜ್ ಬರುತ್ತಿತ್ತು. ಆದರೆ ಆಕ್ಸ್ಲರೇಟರ‍್ ಎಷ್ಟು ಹೊತ್ತಿದರೂ ೪೦ ರ ಮೇಲೆ ಯಾವತ್ತೂ ಹೋಗುತ್ತಿರಲಿಲ್ಲ. ಭಾರೆಯಮೇಲೆ ಎಳೆಯುತ್ತಿರಲಿಲ್ಲ, ಇಳಿಜಾರಿನಲ್ಲಿ ನಿಲ್ಲುತ್ತಿರಲಿಲ್ಲ.
ಒಂದು ಸಾರಿ ಸಂಜೆ ಏಳು ಗಂಟೆಯ ಸಮಯ ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ವೃತ್ತದೆಡೆಗೆ ಇಬ್ಬರು ಜೊತೆಗೂಡಿ ಹೊರಟಿದ್ದೆವು, ಮುಂದಿನಿಂದ ಟ್ರಾಫಿಕ್ ಪೋಲೀಸ್ ಒಬ್ಬ ಮುಂದೆ ಬಂದು ಗಾಡಿಯನ್ನು ಪಕ್ಕಕ್ಕೆ ಹಾಕಲು ಹೇಳಿದ. ಇಬ್ಬರಿಗೂ ನಡುಕ ಶುರುವಾಯ್ತು. ನಮ್ಮಿಬ್ಬರ ಬಳಿ ಲೈಸೆನ್ಸ್ ಇರಲಿ ಎಲ್. ಎಲ್. ಆರ್. ಕೂಡ ಇರಲಿಲ್ಲ!! ಅದು ಹೋಗಲಿ ಅಂದ್ರೆ ಗಾಡಿಗೆ ಇನ್ಶೂರೆನ್ಸ್ ಕೂಡ ಇಲ್ಲ!! ಸಧ್ಯ! ಗಾಡಿಯನ್ನು ಚೈತನ್ಯ ಓಡಿಸುತ್ತಿದಾನೆಂಬುದೇ ನನ್ನ ಸಮಾಧಾನ! ಅವನೋ
"ಮಗ!! ಇವತ್ತು ಜೋಬಿಗೆ ಬರೆ ಗ್ಯಾರಂಟಿ !!" ಎಂದು ಗೊಣಗಾಡಿದ.
"ಎಲ್ರಿ? ಗಾಡಿಗೆ ಲೈಟ್ ಇಲ್ಲದೆ ಓಡೀಸುತ್ತಿದ್ದೀರಾ? ಸ್ವಲ್ಪನೂ ಬುದ್ದಿ ಇಲ್ವಾ?" ಅಂತ ಪಿ. ಸಿ ಸಾಹೇಬ್ರು ಗುಡುಗೋದರ ಜೊತೆಗೆ
"ಎಜುಕೇಟೆಡ್ ಬೇರೆ" ಅಂತಹ ಮತ್ತಷ್ಟು ಮರ್ಯಾದೆಯನ್ನು ತಗೆಯುತ್ತಿದ್ದರೆ ನಮ್ಮಿರಗೂ ಸ್ವಲ್ಪ ನಿರಾಳವಾದಂತಾಯ್ತು. ಸಧ್ಯ ಇದು ಪೆಟ್ಟಿ ಕೇಸು ಅಂತಾ!!
"ಯಾರ್ ಸರ್ ಹೇಳಿದ್ದು? ನೋಡಿ" ಎನ್ನುತ್ತ ತನ್ನ ಕೆ೪ ನ ಹೆಡ್ ಲೈಟ್ ಅನ್ನು ತೋರಿಸಿದ. ಆ ಪೋಲಿಸಪ್ಪನಿಗೆ ನಮಗೆ ಮತ್ತೆ ಬೈಯ್ಯಬೇಕೋ ಅಥವಾ ಈಗಾಗಲೇ ಬೈದದ್ದಕ್ಕೆ ಪಶ್ಚಾತ್ತಾಪ ಪಡಬೇಕೋ ತಿಳಿಯದೆ ತಲೆಯಮೇಲಿನ ಟೋಪಿ ತೆಗೆದು ಸೆಕೆ ಬೀಸಿಕೊಳ್ಳುತ್ತಾ ನಿಂತು ಬಿಟ್ಟ!
ಏಕೆಂದರೆ ಬೈಕ್ ನ ಲೈಟು ಎಂಟಾಣಿ ಕ್ಯಾಂಡಂಲ್ ಗಿಂತಲೂ ಕಡೆಯಾಗಿ ಉರಿಯುತ್ತಿತ್ತು!!! ಏನೂ ತೋಚದ ಆರಕ್ಷಕ ಮಹಾಶಯ ಬಿಟ್ಟು ಕಳುಹಿಸಿದ.
ಮತ್ತೊಂದು ಸಂಜೆ ನಮ್ಮ ಕೆ.ಇ.ಬಿ ಯವರ ಕೃಪೆಯಿಂದಾಗಿ ಕರೆಂಟ್ ಇಲ್ಲದ ಸಮಯದಲ್ಲಿ ಅದೇ ಮಾರ್ಗವಾಗಿ ಬರುತ್ತಿರಬೇಕಾದರೆ ಅದೇ ಬಲ್ಲಾಳ್ ವೃತ್ತದ ಬಳಿ ಇವನ ಬೈಕ್ ಗೆ ಒಬ್ಬ ಹಣ್ಣು ಹಣ್ಣು ಮುದುಕಿ ಅಡ್ಡ ಬಂದುಬಿಡುವುದೇ!!? ಮೊದಲೇ ಬೈಕ್ ನ ಲೈಟ್ ಬೇರೆ ಇಲ್ಲ! ಸೀದ ಆ ಮುದುಕಿಗೆ ಇಕ್ಕಿದ್ದ. ಸಧ್ಯ! ಇವನ ಬೈಕ್ ಗೆ ಸ್ಪೀಡ್ ಇರಲಿಲ್ಲ ಬರೀ ತರಚಿದ ಗಾಯವಾಯ್ತು ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನಹಾಗೆ ರಾತ್ರಿ ಏಳರ ನಂತರ ಜನಸಂದಣೆ ೧೦ ವರ್ಷಗಳ ಹಿಂದೆ ಇರುತ್ತಿರಲಿಲ್ಲ. ಇದ್ದಿದ್ದರೆ ಇಬ್ಬರಿಗೂ ಧರ್ಮದೇಟು ಖಾಯಂ!! ತಕ್ಷಣ ಆ ಅಜ್ಜಿಯನ್ನು ಅದೇ ಗಾಡಿಯ ಮೇಲೆ ಕೂರಿಸಿಕೊಂಡು ಪಕ್ಕದ ವಿನಾಯಕ ನರ್ಸಿಂಗ್ ಹೋಂ ನಲ್ಲಿ ಉಪಚರಿಸಿ ಕಳುಹಿಸಿದೆವು. ನಮ್ಮ ಪುಣ್ಯ ಆ ಅಜ್ಜಿಗೆ ಆಕೆಗೆ ಗುದ್ದಿದ್ದು ನಾವೇ ಅನ್ನುವ ಸತ್ಯ ತಿಳಿಯಲೇ ಇಲ್ಲ!!
ಇಂತಿಪ್ಪ ಗಾಡಿಗೆ ನಾವೆಲ್ಲರೂ ಬೈಯ್ದು, ಕಾಡಿ, ಬೇಡಿದ ನಂತರ ಕಡೆಗೂ ಇನ್ಶೂರೆನ್ಸ್ ಮಾಡಿಸಿಯೇ ಬಿಟ್ಟ!!
"ಹೇಗೂ ಗಾಡಿಯನ್ನು ಹುಷಾರಾಗಿ ಹೋಡಿಸ್ತೇನೆ, ಎಲ್ಲೂ ಆಕ್ಸಿಡೆಂಟ್ ಆಗೋ ಚಾನ್ಸು ಕಡಿಮೆ, ಆಗಲೇ ಗಾಡಿ ಆಯಸ್ಸು ಅರ್ಧ ಮುಗ್ದೋಗಿದೆ, ಸುಮ್ಮನೆ ಇನ್ಶೂರೆನ್ಸ್ ದುಡ್ಡು ವೇಸ್ಟು ಮಗಾ! ಎಂಗಾದ್ರೂ ಮಾಡಿ ಆ ದುಡ್ಡು ವಸೂಲಿ ಮಾಡ್ಕೋಬೇಕು" ಎಂದು ಅವಲತ್ತು ಕೊಳ್ಳುತ್ತಿದ್ದವನಿಗೆ ಆ ಬೈಕ್ ನ ಷೋ ರೂಂ ನ ಮೆಕ್ಯಾನಿಕ್ ಮಹಮದ್ ಒಂದ್ ಐಡಿಯಾ ಕೊಟ್ಟ!
"ಸಾರ್ ನಿಮ್ ಬೈಕ್ ಗೆ ನಂ ಷೋರೂಂದಲ್ಲಿ ಗುದ್ದರ್ಸಿ ಕೊಟ್ಬಿಢ್ಹತ್ತಿನಿ, ಸುಮ್ಕೆ ಮನೆ ಹತ್ರ ನಿಲ್ಸಿದಾಗ ಜಾರಿ ಬಿದ್ದದ್ದು ಅಂತ ಪೋಲೀಸ್ ಕಂಪ್ಲೇಂಟ್ಗೆ ಕೊಟ್ಟಿ ಇನ್ಶೂರೆನ್ಸ್ ಕ್ಲೈಮು ಮಾಡ್ಕಳಿ" ಅಂದ. ಸರಿ ಒಂದು ಭಾನುವಾರ ಅವನು ಹೇಳಿದ ಹಾಗೆ ಮಾಡಿ ಕಂಪ್ಲೇಂಟ್ ಕೊಟ್ಟು ಹತ್ತು ಹದಿನೈದು ದಿನಕ್ಕೆಲ್ಲಾ ೩೨೦೦/- ರೂ ಹಣವೂ ಬಂತು, ಅದರಲ್ಲಿ ಅವನ ಬೈಕ್ ರಿಪೇರಿಗೆಂದು ೭೦೦ ಖರ್ಚಾಯ್ತು.! ಚೈತನ್ಯನಿಗೆ ತನ್ನ ಸಾಧನೆಗೆ ಖುಷಿಯೋ ಖುಷಿ!!
"ನೋಡ್ಮಗ! ಒಣ್ಟು ತ್ರಿಬ್ಬಲ್ ವಸೂಲಿ ಮಾಡ್ದೆ ಇನ್ಶೂರೆನ್ಸ್ ನೋರ ಹತ್ರ" ಅಂತ ಹೇಳಿಕೊಂಡು ತಿರುಗ ತೊಡಗಿದ. ಆ ಸಮಯದಲ್ಲಿ ನಾವೆಲ್ಲಾ ಕರುಬಿದರೂ ನಮ್ಮ ಬೈಕ್ ಗಳ ಮೇಲೆ ರಿಸ್ಕ್ ತೆಗೆದುಕೊಳ್ಳಾಲು ತಯಾರಿರಲಿಲ್ಲ.
ಸರಿ ಬೈಕ್ ಪುನರ್ನಿಮಾಣಗೊಂಡು ೨ ದಿನ ಕಳೆದ ನಂತ ಗುಂಡ್ಲುಪೇಟೆಗೆ ಕೆಲಸಕ್ಕೆಂದು ಹೊರಟ. ಆ ದಿನ ನಾನು ಮೈಸೂರಿನಲ್ಲೇ ಇದ್ದೆ. ಊಟಕ್ಕೆಂದು ಮಧ್ಯಾನ್ಹ ರೂಮಿಗೆ ಬಂದಾಗ ಟೆಲಿಗ್ರಾಂ ಬಂತು. ಅದು ಚೈತನ್ಯನಿಂದ!!!! ಈಗಿನ ಹಾಗೆ ಮೊಬೈಲ್ ಫೋನ್ ಇಲ್ಲದ್ದರಿಂದ ನಮ್ಮ ವೃತ್ತಿಯಲ್ಲಿ ಒಬ್ಬರನ್ನೊಬ್ಬರು ಸಂಪರ್ಕಿಸಬೇಕೆಂದರೆ ಈ ರೀತಿ ಟೆಲಿಗ್ರಾಂ ಕೊಟ್ಟು ತಮಗೆ ಕರೆಮಾಡಲು ಅಥವಾ ತಾವೇ ಕರೆಮಾಡುತ್ತೇವೆಂದು ತಿಳಿಸುತ್ತಿದ್ದರು. ಅದೇ ರೀತಿ ಅಂದು ಸಂಜೆ ೪ ಗಂಟೆಗೆ ಅವನೇ ನನಗೆ ಫೋನ್ ಮಾಡುವವನಿದ್ದ. ಪಕ್ಕದ ಅಂಗಡಿಯ ಕಾಯಿನ್ ಭೂತ್ ನಲ್ಲಿ ಇವನ ಫೋನಿಗೆ ಕಾಯುತ್ತಾ ಕುಳಿತೆ. ಫೋನ್ ಬಂತು,
"ಮಗಾ!! ಈಗ ನಂಜನಗೂಡಿನಲ್ಲಿ ಟ್ರೈನ್ ಹತ್ತುತ್ತಿದ್ದೀನಿ, ಈಗೇನೂ ಹೇಳಕ್ಕಾಗಲ್ಲ ಸೀದಾ ಐದ್ಗಂಟೆಗೆ ರೈಲ್ವೇ ಸ್ಟೇಷನ್ ಹತ್ರ ಬಂದ್ಬಿಡು ನಮ್ಮನೆಗೇನು ಹೇಳ್ಬೇಡ" ಅಂತ ಕ್ಷೀಣ ಧ್ವನಿಯಲ್ಲೇಳಿ ಫೋನಿಟ್ಟುಬಿಟ್ಟ. ನನ್ನ ಕೈಕಾಲುಗಳೆಲ್ಲಾ ನಡುಗಲು ಪ್ರಾರಂಭಿಸಿದವು. ತಲೆಯಲ್ಲಿ ನೂರಾರು ಯೋಚನೆಗಳು!!
ಬೆಳಿಗ್ಗೆ ತಾನೆ ಬೈಕಿನಲ್ಲೇ ಹೊರಟ! ಏನಾಯ್ತು? ಏನಾದರೂ ಆಕ್ಸಿಡೆಂಟ್!!? ಛೇ!! ಬಿಡ್ತು! ಹಾಗಾಗ್ದಿರ್ಲಿ. ಮತ್ಯಾಕೆ ಟ್ರೈನಲ್ಲಿ ಬರ್ತಿದಾನೆ? ಹೀಗೆ ಯೋಚಿಸುತ್ತಾ ರೈಲು ನಿಲ್ದಾಣದ ಬಳಿ ಬಂದೆ.
ಚೈತನ್ಯ ಒಂದು ಗೋಣಿ ಚೀಲದ ಮೂಟೆಯನ್ನು ಕಷ್ಟ ಪಟ್ಟು ಎಳೆದುಕೊಂಡು ಹೊರಬರಲು ಹೆಣಗುತ್ತಿದ್ದ. ತಕ್ಷಣ ಅವನ ಬಳಿ ಓಡಿದೆ.
"ಏನೋ ಇದು?" ಅಂದೆ
"ಪ್ಚ್ಲ್!! ನನ್ಗಾಡಿ ಮಗಾ!!" ಅಂದ ನನಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಗತೊಡಗಿದೆ.
"ನಗು ಮಗಾ ಟೈಮ್ ನಿಂದು!" ಎಂದ ಮ್ಲಾನವದನನಾಗಿ. ನನಗೆ ಪಿಚ್ಚೆನಿಸಿತು, ನಗು ನಿಲ್ಲಿಸಿ
"ಏನಾಯ್ತೋ? ಏನಿಂಗೆ?" ಅಂದೆ.
"ಗುಂಡ್ಲುಪೇಟೆ ತಲುಪ್ಲೇ ಇಲ್ಲ ಮಗಾ! ನಂಜುನ್ಗೂಡು ಸುಜಾತ ಫ್ಯಾಕ್ಟರಿ ಹತ್ರ ಬೈಕ್ ಇಂಜಿನ್ ಸೀಝಾಗೋಯ್ತು, ಕಿಕ್ ಮಾಡಿ ಮಾಡಿ ಸುಸ್ತಾಯ್ತು, ಏನಾಗಿದೆ ಅಂತಾ ನೋಡಿದ್ರೆ ಆಯಿಲ್ ಸೀಲ್ ಬಿಚ್ಚೋಗಿತ್ತು, ಸರಿ ಅಂತೇಳಿ ಅದನ್ನಾಕ್ಸಿ ಮತ್ತೆ ಸ್ಟಾರ್ಟ್ ಮಾಡ್ದೆ ಪಾರ್ಟ್ಸ್ ಗಳೆಲ್ಲಾ ಪೀಸ್ ಪೀಸ್, ಆ ಮೆಕಾನಿಕ್ಕು ಗೋಣೀಚೀಲುಕ್ಕಾಕ್ಕೋಟ್ಟ. ಇಲ್ಬಂದಿದೀನಿ" ಅಂದ.
ಈ ರೀತಿ ಚೈತನ್ಯನ ಚೇತಕ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿತ್ತು.!!

ಬುಧವಾರ, ಜೂನ್ 2, 2010

ಬ್ರಮ್ಮ ತೀರ್ಸೋಗವ್ನೆ!!!!!!

ಸುಮಾರು ೧೯೮೩ ಮೇ ತಿಂಗಳಿರಬಹುದು, ನಾನಾವಾಗ ೨ನೇ ತರಗತಿಯಲ್ಲಿದ್ದೆ. ನಮ್ಮೂರಾದ ಬಿದರಕೋಟೆಯಲ್ಲಿ ಕೌಂಡಲೀಕನ ವಧೆ ಎಂಬ ಪೌರಾಣಿಕ ನಾಟಕವಾಡುತ್ತಿದ್ದರು. ಹೞಿಗಳಲ್ಲಿ ನಾಟಕ ಅಂದರೆ ಕೇಳಬೇಕೆ?!? ಸಂಭ್ರಮವೋ ಸಂಭ್ರಮ!! ಏಕೆಂದರೆ ಈಗಿನ ಹಾಗೆ ಟಿ.ವಿ ಗಳ ಹಾಳು ಧಾರಾವಾಹಿಗಳಾಗಲಿ, ರಿಯಾಲಿಟಿ ಷೋಗಳಾಗಲಿ ಇರಲಿಲ್ಲ. ಅಷ್ಟೇ ಏಕೆ ಸಿನಿಮಾ ನೋಡಬೇಕೆನಿಸಿದರೆ ಪಿ.ಜಿ. ದೊಡ್ಡಿ ಟೆಂಟಿಗೋ ಅಥವಾ ಕೊಪ್ಪಾದ ಸಿನಿಮಾ ಗುಡಿಸಲಿಗೋ ಈಗಿನ ಹಾಗೆ ಬಸ್ಸುಗಳಿಲ್ಲದ ಕಾರಣ ಎತ್ತಿನ ಗಾಡಿಯಲ್ಲಿ ಹೋಗಬೇಕಿತ್ತು. ಹಾಗಾಗಿ ವರ್ಷ ೨ ಅಥವಾ ಮುರೋ ನಡೆಯುತ್ತಿದ್ದ ಪೌರಾಣಿಕ ನಾಟಕಗಳೇ ನಮ್ಮ ಜನಗಳ ಮನರಂಜನೆಯ ಸರುಕಾಗಿದ್ದವು.
ಹಾಗಾಗಿ ಬಹುತೇಕ ಊರಿನ ಎಲ್ಲಾ ಮನೆಯವರು ತಂತಮ್ಮ ನೆಂಟರಿಷ್ಟರನ್ನೆಲ್ಲಾ ಬರಮಾಡಿಕೊಂಡು ಹಬ್ಬದೂಟ, ಬಾಡೂಟಗಳನ್ನೇರ್ಪಡಿಸಿ, ನಾಟಕ ನಡೆಯುವ ಸ್ಥಳವಾದ ದೇವಿರಮ್ಮನ ಗುಡಿಯ ಮುಂದೆ ಚಾಪೆ ಗೋಣಿತಾಟುಗಳನ್ನು ಹರವಿ ತಂತಮ್ಮ ಜಾಗಗಳನ್ನು ಕಾಯ್ದಿರಿಸಿ, ಅವುಗಳನ್ನು ಕಾಯಲು ಮಕ್ಕಳನ್ನು ಅಲ್ಲಿ ಕಾವಲಿರಿಸುತ್ತಿದ್ದದ್ದು ಸರ್ವೇಸಾಮಾನ್ಯವಾಗಿತ್ತು. ಅದೇ ರೀತಿ ಕಾಕತಾಳಿಯವೆಂಬಂತೆ ನಾಟಕದ ಹಿಂದಿನ ದಿನವೇ ನಮ್ಮ ಹೊಸಮನೆಯ ಗೃಹಪ್ರವೇಶವಿದ್ದುದ್ದರಿಂದ ನಮ್ಮ ಮನೆಗೂ ಸಹ ಸ್ವಲ್ಪ ಹೆಚ್ಚೆನ ನೆಂಟರು ಇದ್ದರು ಹಾಗಾಗಿ ಜಾಗ ಹಿಡಿದು ಕೂರುವ 'ಗುರುತರ ಜವಾಬ್ದಾರಿ' ನನ್ನ ಮತ್ತು ನನ್ನತಂಗಿಯರ ಹೆಗಲಿಗೆ ಬಿತ್ತು. ಎಷ್ಟೇ ಆಗಲಿ ಬಾಲಸಹಜ ಗುಣವಲ್ಲವೇ? ಹಾಗೆಯೇ ವೇದಿಕೆಯ ಮುಂಬಾಗದಲ್ಲಿ ಜಾಗ ಕಾಯ್ದಿರಿಸಿ, ನರಿಗೆ ಹೇಳಿದ ಕೆಲಸವನ್ನು ಅದು ತನ್ನ ಬಾಲಕ್ಕೆ ಹೇಳಿತಂತೆ ಹಾಗೆ ನನ್ನ ಕೆಲಸವನ್ನು ನನ್ನ ತಂಗಿಯರ ತಲೆಗೆ ಕಟ್ಟಿ ನನ್ನ ಚಡ್ಡಿ ಸ್ನೇಹಿತರೊಡನೆ ಸ್ಟೇಜಿನ ಹಿಂಬಾಗದಲ್ಲಿದ್ದ ಮೇಕಪ್ ರೂಮಿನಲ್ಲೇನು ನಡೆಯುತ್ತಿದೆ?ಎಂದು ತಿಳಿಯುವ ಸಲುವಾಗಿ ಬಗ್ಗಿ ನೋಡುತ್ತಿದ್ದೆವು.
ಆಗಲೇ ಕೆಲವರು ಮೇಕಪ್ ಮುಗಿಸಿ ಪಕ್ಕದಲ್ಲಿ ಕುಳಿತು ಬೀಡಿ ಸಿಗರೇಟು ಸೇದುತ್ತಿದ್ದರು. ಅಷ್ಟರಲ್ಲಿ ನಮ್ಮ ಪಟಾಲಂನಲ್ಲೊಬ್ಬನಾದ ಮುದ್ದುರಾಜು ಈಶ್ವರ ಪಾತ್ರದಾರಿ ಟೈಲರ್ ವೆಂಕಟೇಶಣ್ಣನನ್ನು ನೋಡಿ.
"ಲೋ! ಅಲ್ನೋಡ್ಲಾ! ಕೈಲಾಸ್ದಲ್ಲಿ ಚಳಿ ತಡೀಕಾಗ್ದೆ ಈಸ್ವುರ ಬೀಡಿ ದಂ ಎಳಿತಾವ್ನೆ" ಅಂದ. ಅದನ್ನು ಕೇಳಿಸಿಕೊಂಡ ಹಾಗು ನಾವು ಇಣುಕುತ್ತಿದ್ದ ಜಾಗದ ಬಳಿ ಕುಳಿತಿದ್ದ ಕೌಂಡಲೀಕ ಪಾತ್ರದಾರಿ ಶಾಂತಪ್ಪನವರು ತಮ್ಮ ನಗು ಮಿಶ್ರಿತ ಸಿಟ್ಟಿನಿಂದ,
"ಯಾವ್ಲ ಅವು? ಬಗ್ನೋಡದು? ಅತ್ಲಾಗೋದಿರೂ? ಚಬ್ಬೆ ತಗಳನೋ?" ಎನ್ನುತ್ತ ಮೇಲೆದ್ದು ಪಕ್ಕದಲ್ಲಿದ ಗದೆಯೊಂದನ್ನು ಎಳೆದುಕೊಂಡರು.
"ಲೇ!!! ಓಡ್ರುಲಾ!!" ಎನ್ನುತ್ತ ಒಬ್ಬರಮೇಲೊಬ್ಬರು ಬಿದ್ದೆದ್ದು ಓಡುವಾಗ ಎದುರಿನಿಂದ ಆ ನಾಟಕದ ಸ್ಟೇಜ್ ಮ್ಯಾನೇಜರ್ ಆದ ಕಾಡೇಗೌಡರು ಎದುರಾಗಬೇಕೆ?
"ನಿಂತ್ಕಳಿ ಬಡ್ಡಿವಾ! ನಿಮ್ಗೆ ಅದ ಕಾಯ್ಸುತೀನಿ." ಎನ್ನುತ್ತಾ ಕೈಗೆ ಸಿಕ್ಕಿದ ಕಲ್ಲೊಂದನ್ನು ನಮ್ಮೆಡೆಗೆ ತೂರಿದರು, ಅದು ಗುರಿತಪ್ಪಿ ಪಕ್ಕದಲ್ಲಿ ಓಡುತ್ತಿದ್ದ ನಾಯಿಯೊಂಕ್ಕೆ ಬಿದ್ದು 'ಕ್ಜ್ಞೂಂ ಕ್ಜ್ಞೂಯಿ' ಎನ್ನುತ್ತಾ ಓಡಿಹೋಯ್ತು. ಇಲ್ಲಿ ನಮ್ಮ ಕಾಡೇಗೌಡರ ಬಗ್ಗೆ ಸ್ವಲ್ಪ ಹೇಳದಿದ್ದರೆ ಕಥೆಯ ಮುಂದಿನ ಭಾಗಕ್ಕೆ ಧಕ್ಕೆಯಾದೀತು?
ನಮ್ಮೂರಿನಲ್ಲಿ ಕಾಡೇಗೌಡ ಎನ್ನುವವರು ಬಹುಶಃ ಹತ್ತರಿಂದ ಹದಿನೈದು ಮಂದಿಯಾದರೂ ಸಿಗುತ್ತಾರೆ ಹಾಗಾಗಿ ಪ್ರತಿಯೊಬ್ಬರ ಹೆಸರಿನ ಹಿಂದೆ ಒಂದೊಂದು ಅಡ್ಡಹೆಸರಿರುತ್ತದೆ. ಹಾಗೆ ಈ ಕಾಡೇಗೌಡರಿಗೆ "ಬಕ್ರಣ್ಣ" ಎಂಬ ಅಡ್ಡ ಹೆಸರು ಹೇಗೆ ತಳುಕು ಹಾಕಿಕೊಂಡಿತೋ ಗೊತ್ತಿಲ್ಲ. ಬಹಳ ಸಹೃದಯಿ ಮನುಷ್ಯ, ಜೊತೆಗೆ ಶ್ರಮಜೀವಿ, (ಈಗ್ಗೆ ೩ ವರ್ಷದ ಕೆಳಗೆ ತೀರಿಕೊಂಡರು), ಆದರೆ ಮಾತಿಗೆ ಮುನ್ನ "ಅಪ್ಪಟ ಸಂಸ್ಕೃತ" ಪದಗಳು ಹೊರಡುತ್ತಿದ್ದರಿಂದ ಅವರ ಕೆಲಸಗಾರರಿಗೆ ಬಹಳ ಭಯವಿತ್ತು. ಆದರೆ ನೇರ ನಿಷ್ಠುರ ನುಡಿಗಳಿಗೆ ಹೆಸರಾಗಿದ್ದರು. ಇಂತಹವರನ್ನು ಸ್ಟೇಜ್ ಮ್ಯಾನೇಜರ್ ಆಗಿ ನೇಮಿಸಲಾಗಿತ್ತು. ಅವರ ಕೆಲಸ ದೃಷ್ಯಗಳಿಗೆ ತಕ್ಕನಾಗಿ ಪಾತ್ರದಾರಿಗಳನ್ನು ಅಣಿಮಾಡಿ ಕಳುಹಿಸುವುದು ಅವರ ಕೆಲಸವಾಗಿತ್ತು. ಅಲ್ಲದೆ ಸಮಯ ಪರಿಪಾಲನೆಗೆ ಸಹ ಗಮನವಿರಿಸಬೇಕ್ಕಾದದ್ದು ಅವರ ಕೆಲಸವಾಗಿತ್ತು. ಪಾತ್ರದಾರಿಗಳೆಲ್ಲರೂ ಇವರ ಬೈಗುಳಿಗೆ ಹೆದರಿ ತಮ್ಮ ತಮ್ಮ ಪಾತ್ರಗಳು ಬರುವ ಮೊದಲೇ ಅಣಿಯಾಗಿ ನಿಂತಿರುತ್ತಿದ್ದರು.
ಸರಿ ನಾಟಕ ಪ್ರಾರಂಭವಾಯ್ತು!! ಸೂತ್ರಧಾರಿ ನಾಟಕದ ಪರಿಚಯಮಾಡಿಕೊಟ್ಟ ನಂತರ ಕೌಂಡಲೀಕನ ದರ್ಬಾರು ದೃಶ್ಯ.
ಆಗಲೇ ಸ್ಟೇಜಿನ ಹಿಂಭಾಗದಲ್ಲಿ ಕಾಡೇಗೌಡರ ಆರ್ಭಟ ಮೈಕಿನ ಧ್ವನಿಗಿಂತ ಹೆಚ್ಚಾಗಿ ಕೇಳಿ ಬರುತ್ತಿತ್ತು. ನಮ್ಮ ಪಟಾಲಂಗೆ ಕುತೂಹಲ ತಡೆಯಲಾಗಲಿಲ್ಲ.
"ಲೋ! ಆ ಬಕ್ರಪ್ಪುಂಗೆ ವಸಿ ಸುಮ್ನಿರಾಕ್ಯೋಳ್ರುಲಾ" ಅಂತಾ ಸಿಟ್ಟಿನಿಂದ ಪ್ರೇಕ್ಷಕರು ಕೂಗಾಡುವುದು ಹೆಚ್ಚಾಯ್ತು. ಅದೇ ವೇಳೆಗೆ ನಮ್ಮ ಪಟಾಲಂಗೆ ಕುತೂಹಲ ತಡೆಯಲಾಗಲಿಲ್ಲ.
"ಗೌಡ್ರು ಈ ಪಾಟಿ ಕೂಗಾಡ್ತಾವ್ರೆ ಅಂದ್ರೆ ಏನೋ ಆಗದೆ!! ನಡ್ರುಲ ನೋಡವಾ!!" ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡು ಮೇಲೆದ್ದೆವು. ಅಷ್ಟರಲ್ಲಿ ಮತ್ತೊಬ್ಬ ಸ್ಟೇಜ್ ಮ್ಯಾನೇಜರ್ ಆದ ಹೊಸಳ್ಳಿ ಕರೀಗೌಡರು ಕಾಡೇಗೌಡರನ್ನು ಸಮಾಧಾನಿಸುತ್ತಿದ್ದರು.
"ಲೋ! ನಿನ್ ಗಾಳಿ ಗಂಟ್ಲ ವಸಿ ಕಮ್ಮಿ ಮಾಡು, ಇಂಗೆ ಕೂಗಾಡು ಬದ್ಲು ಅವ್ನೆಲ್ಲವ್ನೆ? ಅಂತಾ ವಸಿ ಹುಡ್ಕು" ಎಂದು ಸಮಾಧಾನಿಸಿ ಕಳುಹಿಸುತ್ತಿದ್ದರು.
ನಮಗೋ ತಲೆ ಬುಡ ಒಂದೂ ತಿಳಿಯಲಿಲ್ಲ. ಕುತೂಹಲ ತಡೀಯಲಾರದೆ ಮೆಲ್ಲನೆ ಕಾಡೇಗೌಡರನ್ನು ಹಿಂಬಾಲಿಸಲು ಪ್ರಾರಂಭಿಸಿದೆವು.
"ಹಲ್ಕಾನನ್ಮಗ ನಾನ್ ಸ್ಟೇಜ್ ಮ್ಯಾನೇಜರ್ರಾದಾಗ್ಲೆ ಈ ಬೋ....ಮಗ ಇಂಗ್ಮಾಡ್ಬೇಕೋ? ಸೂ...ಮಗ, ,....... ,........, " ಇತ್ಯಾದಿಯಾಗಿ ಸಂಸ್ಕೃತ ಸಹಸ್ರಾರ್ಚನೆ ಮಾಡುತ್ತಾ ವರದಪ್ಪನ ಗುಡಿ ಬೀದೆಯೆಡೆಗೆ ಸರಸರನೆ ನಡೆಯತೊಡಗಿದರು. ಆಗಲೂ ನಮಗೇನು ಅರ್ಥವಾಗದಿದ್ದರೂ ಅದು ಅವರ "ಪಿಸ್ಟೇಜ್'' ನ ವಿಷಯವೆಂದು ಅರ್ಥವಾಗಿತ್ತು. ಅದೇನಿರಬಹುದೆಂದು ನಮ್ಮನಮ್ಮಲ್ಲಿ ಚರ್ಚೆ ಮೂದಲಾಯ್ತಾದರೂ ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ. ಅಷ್ಟರಲ್ಲಿ ಆ ಕತ್ತಲಿನಲ್ಲೂ ಅವರ ದೃಷ್ಠಿ ನಮ್ಮೆಡೆಗೆ ಬಿದ್ದಾಗ ನಮ್ಮಗಳ ಜೀವ ಬಾಯಿಗೆ ಬಂದಂತಾಯ್ತು, ಚಡ್ಡಿ ವದ್ದೆಯಾಗುವುದೊಂದು ಬಾಕಿ. ತಪ್ಪಿಸಿಕೊೞಲು ತಿರುಗುವಷ್ಟರಲ್ಲಿ
"ಲೇಯ್! ಬರ್ರುಲಾ ಇಲ್ಲಿ!" ಸಿಡಿಗುಂಡಿನಂತಹ ಧನಿ, ನಮ್ಮ ಐವರ ಎದೆಯಲ್ಲಿ ಕಜ್ಜಾಯದ ಅಕ್ಕಿ ಕುಟ್ಟುವ ಸದ್ದು!! ಒಂದು ಕ್ಷಣ ಏನು ಮಾಡಬೇಕೆಂದು ತೋಚದೆ ವಿಗ್ರಹಗಳಾಗಿದ್ದೆವು.
"ಬಂದಿರೋ!?! ದಡಿ ತಕಳನೋ?" ಮತ್ತೊಂದು ಖಡಕ್ಕಾದ ಆದೇಶ! ವಿದಿಯಿಲ್ಲದೆ ಅವರೆಡೆಗೆ ಒಬ್ಬರಿಗೊಬ್ಬರು ಅಂಟಿಕೊಂಡೇ ಹೆಜ್ಜೆಯಿಟ್ಟೆವು. ಸ್ವಲ್ಪವೇ ಸ್ವಲ್ಪ ಧೈರ್ಯತಂದುಕೊಂಡ ನಾನು,
"ಏ...ಏನ್ ದೊಡ್ಡಪ್ಪ!!" (ನಮ್ಮ ಅಪ್ಪನಿಗಿಂತ ಬಹಳ ದೊಡ್ಡವರಾದ್ದರಿಂದ ನಮಗೆ ರಕ್ತಸಂಬಂಧಿಗಳಲ್ಲದಿದ್ದರೂ ಅವರನ್ನು ಹಾಗೆ ಸಂಭೋದಿಸುತ್ತಿದ್ದೆ) ಎಂದೆ.
"ಇಲ್ಲೆಲ್ಲೋ ಆ ಸ್ರೀಕಂಟ ಇರ್ಬೇಕು ಉಡ್ಕುರ್ಲಾ" ಸಧ್ಯ!! ಇವರ ವಕ್ರ ದೃಷ್ಠಿ ನಮ್ಮಮೇಲಲ್ಲ, ಮೇಲಾಗಿ ನಮ್ಮನ್ನು ಕರೆದದ್ದು ಅವರ ಸಹಾಯಕ್ಕೆಂದು ತಿಳಿದು ನಮ್ಮ ನಮ್ಮ ದೇಹಗಳು ತಹಂಬದಿಗೆ ಬಂದಿದ್ದವು. ಆದರೆ "ಯಾವ ಶ್ರೀಕಂಠ?" ಅನ್ನುವುದು ಅರ್ಥವಾಗಲಿಲ್ಲ.
"ಯಾವ ಸ್ರೀಕಂಟ?" ಎಲ್ಲರಿಗಿಂತಾ ಮೊದಲೇ ಶಂಕರಲಿಂಗ ಕೇಳಿದ್ದ.
"ಇನ್ಯಾವನಿದ್ದನ್ರುಲಾ ನಮ್ ನಾಟ್ಕುದಲಿ? ಆ ಆಚಾರ್ರು ಸ್ರೀಕಂಟ, ಊರುಗ್ಮುಂದೇ ಮೇಕಪ್ಪ ಮಾಡಿಸ್ಕಂಡು ಎಲ್ಲಾಳಾಗೋದ್ನೋ? ಜಲ್ದಿ ಉಡ್ಕುರ್ಲಾ" ಎಂದು ಆದೇಶವಿತ್ತರು. ಆಗಲೇ ನಮಗೆ ಗೊತ್ತಾಗಿದ್ದು ಬ್ರಹ್ಮನ ಪಾತ್ರದಾರಿ ಶ್ರೀಕಂಠಾಚಾರ್ ಕಾಣಿಯಾಗಿದ್ದಾರೆಂದು, ಮುಂದಿನ ದೃಷ್ಯದಲ್ಲಿ ಕೌಂಡಲೀಕನಿಗೆ ಪ್ರತ್ಯಕ್ಷವಾಗಿ ವರ ನೀಡಬೇಕಿದ್ದರಿಂದ ಅವರನ್ನು ಹುಡುಕಲು ಗೌಡರು ಹಡಾವುಡಿ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವಷ್ಟರಲ್ಲೇ,
" ವೋ! ಲೋ ಬ್ರಮ್ಮ ತೀರ್ಸೋಗವ್ನೆ!!! ಹ್ಹೀ ಹ್ಹೆ ಹ್ಹೆ ಹ್ಹೆ!!" ಎಂದು ಕೂಗಲು ಶುರು ಮಾಡಿದ ಸುಂದರ. ಗೌಡ್ರಿಗೆ ನಖಶಿಖಾಂತ ಉರಿದು ಹೋಯ್ತು.
"ಮುಚ್ಚುರ್ಲಾ ಬಾಯ!! ನೆರೂರೊರೆಲ್ಲಾ ನಾಟ್ಕ ನೋಡಕ್ಬಂದವ್ರೆ ಅವ್ರ್ಮುಂದೆ ಮರ್ಯಾದೆ ತಗೀಬ್ಯಾಡೀ. ತೆಪ್ಗೆ ಉಡ್ಕುರ್ಲಾ. ಆ ಬಡ್ಡೀಮಗ ನನ್ಕೈಗ್ ಸಿಗ್ಲಿ ಹದಾ ಕಾಯ್ಸ್ತೀನಿ, ಹೋಗುರ್ಲಾ ಉಡ್ಕುರ್ಲಾ" ತಮ್ಮ ಮನದಿಂಗಿತವನ್ನು ಹೊರಹಾಕುತ್ತಾ ಜೋರಾಗಿ ಕಿರುಚುತ್ತಾ ಮತ್ತೊಮ್ಮೆ ಹೇಳಿದರು.
ಸರಿ ಅವರ ಆದೇಶ ಅಂದ್ಮೇಲೆ ಕೇಳ್ಬೇಕೆ? ಮಾರೀಗುಡಿ, ಸ್ಕೂಲುಮನೆ, ರಾಮಮಂದಿರದ ಪಡಸಾಲೆ, ಬಸವನಗುಡಿಯ ಇಸ್ಪೀಟು ಅಡ್ಡ ಎಲ್ಲವನ್ನೂ ಹುಡುಕಿದೆವು. ಫಲಿತಾಂಶ ಮಾತ್ರ ಸೊನ್ನೆ!! ನಮ್ಮ ಬ್ರಹ್ಮ ಕಾಣಲೇ ಇಲ್ಲ!! ಅದನ್ನೇ ಕಾಡೇಗೌಡರಿಗೆ ಅರುಹಿದೆವು.
"ಅವ್ನ ಮನೇತಾವಿದ್ದನೇಂಗ್ ನೋಡ್ರುಲಾ!" ಅಂದ್ರು. ಸರಿ! ಗೌಡರೊಡಗೂಡಿ ಆಚಾರರ ಮನೆಬಳಿ ಬಂದರೆ ಮನೆಗೆ ದಪ್ಪ ಬೀಗ!!! ನಮಗೆಲ್ಲಾ ಏನೂ ತೋಚದಂತಾಯ್ತು.
ನೀರವ ರಾತ್ರಿ, ಅಲ್ಲೊಂದು ಇಲ್ಲೊಂದು ನಾಯಿ ಬೊಗಳವ ಸದ್ದಿನ ಮಧ್ಯೆ ಒಂದೊಂದು ಮನೆಯಲ್ಲಿ ಗೊರಕೆ ಶಬ್ದ!! ಬೇರೆಲ್ಲಿಯಾದರೂ ಹುಡುಕುವುದೆಂದು ನಿಷ್ಕರಿಸಿ ಅವರ ಮನೆಯಿಂದ ಹೊರಟೆವು. ವೆಂಕಟೇಶಾಚಾರ್ ಮನೆಮುಂದೆ ಬಂದಾಗ ಆಗತಾನೆ ತಯಾರಿಸಿಟ್ಟಿದ್ದ ಮರದ ಪೆಟಾರಿಯಮೇಲೆ ಏನೋ ಹೊಳೆದಂತಾಯ್ತು. ಆ ಪೆಟಾರಿಯನ್ನು ವೆಂಕಟೇಶಾಚಾರ್ ಅವರಿಗೆ ನಮ್ಮ ತಂದೆಯೇ ಹೊಸಮನೆಗೆ ಹೋಗುತ್ತಿದ್ದೇವೆ ಬಟ್ಟೆ ಬರೆ ಹಾಕಲು ಬೇಕಾಗುತ್ತದೆಂದು ತಯಾರಿಸಲು ಹೇಳಿದ್ದರು.
ಆ ಪೆಟಾರಿಯಮೇಲೆ ಹೊಳೆಯುದೇನೆಂದು ಸ್ವಲ್ಪ ಹತ್ತಿರ ಹೋಗಿ ಪರೀಕ್ಷಿಸಿದರೆ ಅದು!!!! ಬ್ರಹ್ಮನ ಮೂರು ತಲೆಗಳು!!!!!! ಗೌಡರಿಗೆ ಶ್ರೀಕಂಠಾಚಾರರ ಮೇಲಿನ ಸಿಟ್ಟು ಮತ್ತೂ ಉಲ್ಬಣಿಸಿತು.
"ಆ ನನ್ಮಗ ತಲೆ ಇಲ್ಮಡುಗ್ಬುಟ್ಟು ಎಲ್ಲಾಳಾಗೋದ್ರುನ್ಲಾ! ಲೇ ಕೆರೆಗಿರೆಕಡಿಕೆಲಾರ ಹೋದ್ನ ನೋಡ್ರುಲಾ" ಅನ್ನುವಷ್ಟರಲ್ಲಿ ಬ್ರಹ್ಮ ಕಾಣಿಯಾಗಿರುವ ವಿಚಾರ ಬಹಳಷ್ಟು ಜನರಿಗೆ ತಿಳಿದು ಎಲ್ಲರೂ ಬ್ರಹ್ಮನನ್ನು ಹುಡುಕುತ್ತಾ ಅಲ್ಲಿಗೇ ಬಂದರು. ಅಷ್ಟರಲ್ಲಿ ಪೆಟಾರಿಯೊಳಗೆ ಏನೋ ಒರಳಾಡುವ ಸದ್ದು!!! ಆ ಮನೆಯ ಸುತ್ತ ಕಲ್ಲು ಮುಳ್ಳುಗಳಿದ್ದುದ್ದರಿಂದ ಅದರೊಳಗೆ ಹಾವು ಚೇಳು ಸೇರಿಕೊಡಿರಬೇಕೆಂಬ ಅನುಮಾನ ಹಲವರನ್ನು ಕಾಡಿತು. ಇವ್ಯಾವುದಕ್ಕೂ ಕಿವಿಗೊಡದ ಕಾಡೇಗೌಡರು ಬ್ರಹ್ಮನ ತಲೆಗಳನ್ನು ಪಕ್ಕಕ್ಕಿಟ್ಟು ಪೆಟ್ಟಿಗೆ ತಗೆದು ನೋಡುತ್ತಾರೆ!!!
'ಬ್ರಹ್ಮ ಸುಖವಾಗಿ ಪೆಟಾರಿಯೊಳಗೆ ಪವಡಿಸಿದ್ದಾನೆ!!!!!!!!!'' ಬಾಯಿಂದ ಸರಾಯಿ ವಾಸನೇ ಬೇರೆ!!! ಅಲ್ಲಿಯವರೆವಿಗೂ ಸ್ತೀಮಿತದಲ್ಲಿದ್ದ ಗೌಡರ ಸಿಟ್ಟಿನ ಕಟ್ಟೆಯೊಡೆದು
"ಹಲ್ಕಾ ಸೂ............, ನೇ ನಾವಲ್ಲೆಲ್ಲಾ ಒದ್ದಾಡ್ತಿದ್ರೆ ಇಲ್ಬಂದ್ಮಲ್ಗಿದ್ದೀಯಾ?" ಎನ್ನುತ್ತಾ ಜಾಡಿಸಿ ಒಂದು ಒದ್ದರು.

ಉಳಿದವರು ಬ್ರಹ್ಮ ಎಲ್ಲಿ ಎಂದು ಹುಡುಕುವಷ್ಟರಲ್ಲಿ ನಾಟಕದ ಸ್ಟೇಜಿನಲ್ಲಿ ಕೌಂಡಲೀಕನಿಗೆ ವರ ನೀಡುತ್ತಿದ್ದ!!!..

ಶುಕ್ರವಾರ, ಮೇ 21, 2010

ಪ್ರಚಾರದ ಹುಚ್ಚು ಮತ್ತು ನಮ್ಮ ಮಂತ್ರಿಗಳೆಂಬ ಮಂದ ಮತಿಗಳು!!!

ಏನಾಗಿದೆ ನಮ್ಮ ಮಂತ್ರಿ ಮಹೋದಯರಿಗೆ? ಮೊನ್ನೆ ಮೊನ್ನೆ ತಾನೆ ವಿದೇಶಾಂಗ ಸಚಿವ ಶಶಿ ತರೂರ‍್ ಅಂತೂ ತನ್ನದೇ ಆದ ಸರ್ಕಾರದ ನೀತಿಗಳ ಬಗ್ಗೆ ಅಂತೂ ಬಾಯಿಗೆ ಬಂದತದ್ದನ್ನು ಒದರಿ ಬಣ್ಣಗೇಡಿ ಯಾದದ್ದು ಎಲರಿಗೂ ತಿಳಿದದ್ದೆ. ಅದೇ ರೀತಿ ವಾಣಿಜ್ಯ ಸಚಿವ ಕಮಲ್ ನಾಥ್ ಮತ್ತು ಚಿದಂಬರಂ ನಡುವಿನ ವಿರಸ, ದೂರ ಸಂಪರ್ಕ ಸಚಿವ ರಾಜಾ ರವರ ರಗಳೆ ಒಂದೇ ಎರಡೇ? ಹೇಳುತ್ತಾ ಹೋದರೆ ಮುಗಿಯುವುದಿಲ್ಲವೇನೋ ಅನ್ನಿಸುತ್ತದೆ. ಅಂದಹಾಗೆ ಇದು ಬರೀ ಈಗಿನ ಸರ್ಕಾರದ್ದಷ್ಟೇ ಸಮಸ್ಯೆಯಲ್ಲ. ಬಿ.ಜೆ.ಪಿ ಸರ್ಕಾರದಲ್ಲಿ ಜಸ್ವಂಸಿಂಗ್ ಮತ್ತಿ ಎಲ್. ಕೆ. ಅಡ್ವಾಣಿ ಯವರ ವಿರಸವಂತೂ ಭಾರಿ ಜನಜನಿತ. ಇನ್ನು ಜನತಾಪರಿವಾರದ ಸರ್ಕಾರವಿದ್ದಾಗಲಂತೂ ಎಲ್ಲರೂ ಪ್ರಧಾನಮಂತ್ರಿಗಳೇ. ಇವತ್ತಿಗೆ ಹೊಸ ಸೇರ್ಪಡೆ ನಮ್ಮ ಕನ್ನಡಿಗರೇ ಆದ ಶ್ರಿ ಜೈರಾಂರಮೆಶ್ ರವರು ಅಷ್ಟೆ.
ತಾವೊಂದು ತುಂಬಾ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ, ನಮ್ಮ ಮಾತುಗಳನ್ನಾಗಲಿ, ನಮ್ಮ ನಡತೆಯನ್ನಾಗಲಿ ನಮ್ಮದೇಶವಷ್ಟೇ ಅಲ್ಲ, ಇಡೀ ಪ್ರಪಂಚವೇ ಗಮನಿಸುತ್ತದೆ, ಅಷ್ಟೇ ಅಲ್ಲ ನಮ್ಮ ಮಾತುಗಳು ನಮ್ಮ ದೇಶದ ಘನತೆಯನ್ನು ಗೌರವವನ್ನು ಕಾಪಾಡಬಲ್ಲವು/ ಹರಾಜು ಸಹ ಹಾಕಬಲ್ಲವು ಎಂಬ ಪರಿಜ್ನಾನವೂ ಇಲ್ಲದೇ ಆಚಾರವಿಲ್ಲದ ನಾಲಗೆಯನ್ನು ಹರಿಯಬಿಡುತ್ತಾರೆ. ಆಚಾರಮುಖ್ಯವಲ್ಲ ಪ್ರಚಾರ ಬೇಕೆನ್ನುವ ಜಾತಿಯವರು, ಇವರು ಮಾತನಾಡುವ ರೀತಿ ನೋಡಿದವರಾರಿಗಾದರೂ ಇವರ ಪ್ರಚಾರದ ಹುಚ್ಚು ಅರ್ಥವಾದೀತು.
ಈಗ ಜೈರಾಂರಮೇಶ್ ಮತ್ತೊಮ್ಮೆ ಮಾಡಿರುವುದನ್ನು ಅದನ್ನೇ. ಇದೇನು ಅವರಿಗೆ ಹೊಸತಲ್ಲ, ಮೊನ್ನೆ, ಮೊನ್ನೆ ಯಾವುದೋ ವಿಶ್ವವಿದ್ಯಾನಿಲಯದ ಘಟಿಕೋತ್ಸವವೊಂದರಲ್ಲಿ ಭಾಷಣ ಮಾಡುವ ಮುನ್ನ ತಾವೇನೋ ಭಾರಿ ಸಮಾಜಸುಧಾರಕ, ಚಿಂತಕ ಎಂದು ತೋರಿಸುವ ಭರದಲ್ಲಿ ಪಾಪ ವಿಶ್ವವಿದ್ಯಾನಿಲಯದವರು ತೊಡಿಸಿದ್ದ ಗೌನನ್ನು ಕಿತ್ತೊಗೆದು
"ನನಗೆ ಇನ್ನೂ ದಾಸ್ಯದಲ್ಲಿರಲು ಇಷ್ಟವಿಲ್ಲ ಅದಕ್ಕೆ ಗೌನನ್ನು ಕಿತ್ತೊಗೆಯುತ್ತಿದ್ದೇನೆ" ಅಂತ ಪೋಸು ಕೊಟ್ಟರು. ಆದರೆ
"ಅಯ್ಯೋ ಅವಯ್ಯುಂಗೆ ಸೆಕೆಆಯ್ತಂತೆ ಅದ್ಕೆ ಗೌನ್ ಕಿತ್ತಾಕಿ ಶೋ ಕೊಡ್ತಾವ್ರೆ" ಅಂತ ಅಕ್ಕಪಕ್ಕದವರು ಮಾತನಾಡಿಕೊಂಡಿದ್ದು ಸಾಹೇಬರ ಕಿವಿಗೆ ಬೀಳಲೇಇಲ್ಲ. ಆದರೂ ತಮ್ಮ ಎಲುಬಿಲ್ಲದ ನಾಲಿಗೆಯನ್ನು ಕೋಪನ್ ಹೇಗನ್ ನ ಜಾಗತಿಕ ತಾಪಮಾನದಲ್ಲಿ ಮತ್ತೂ ಹೊರಳಾಡಿಸಿದರು. ಅಲ್ಲಿ ನಮ್ಮ ದೇಶದ ಗೌರವಕ್ಕೆ ಹೇಳಿಕೊಳ್ಳುವಂತಹ ಧಕ್ಕೆಯೇನೂ ಆಗದಿದ್ದರೂ ಅವರ ಮಾತಿನ ಮಹತ್ವದ ಅರಿವು ಜಗಜ್ಜಾಹೀರಾಯ್ತು.
ಇಂದು ವಿಚಾರವಂತರಿಗಿಂತ ಪ್ರಚಾರವಂತರಿಗೆ ಹೆಚ್ಚು ಬೆಲೆ ಕೊಡುವ ಕಾಲ ಬಂದಿದೆ. ಹಿಂದೆ ಒೞೆ ಕೆಲಸ ಮಾಡಿದ್ರೆ ಒೞೆ ಹೆಸರು, ಪ್ರಚಾರ ಸಿಗ್ತಿತ್ತು. ಕೆಟ್ಟ ಕೆಲಸ ಮಾಡಿದ್ರೆ ಸ್ಥಾನ ಹಾಗೂ ಮಾನ ಎರಡೂ ಹೋಗ್ತಿತ್ತು. ಈಗ ಕಾಲ ಬದಲಾಗಿದೆ - ಏನೇ ಆಗ್ಲಿ, ಪ್ರಚಾರ ಬೇಕು - ಮಾಧ್ಯಮದವರಿಗೂ ಅಶ್ಟೆ- ತಮ್ಮ ಚಾನಲ್ಗಳ TRP ಹೆಚ್ಚಿಸಲು ಇಂತಹವರ 'soundbites' ಗಳೇ ಬೇಕು. ಕಾಲಾಯ ತಸ್ಮೈ ನಮಹಃ.....
ಈ ಮಾಧ್ಯಮಗಳಿಗೂ ಅಷ್ಟೇ ಇಂತವರ ವಿಚಾರಗಳನ್ನು ಮತ್ತೆ ಮತ್ತೆ ಪ್ರಕಟಿಸಿ ದೇಶದ ಮಾನ ಕಳೆಯುವೌದರಲ್ಲಿ ಎತ್ತಿದ ಕೈ.
ಅತಿ ಪ್ರಾಮಾಣಿಕ, ಬುಧ್ಧಿವಂತ, ವಿವೇಕಿ ಎಂದು ಹೆಸರು ಪಡೆದಿರುವ ಜೈರಾಮ್ ರಮೇಶ್ ಇಂಥ ಮುಜುಗರದ ಸನ್ನಿವೇಶ ತಂದು ಒಡ್ಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಚೀನಾ ಬಗೆಗಿನ ಅವರ ಸೌಮ್ಯ ನೀತಿ ಎಲ್ಲರಿಗೂ ತಿಳಿದದ್ದೇ. ಅದು ಅವರ ಪುಸ್ತಕ " Making Sense of Chindia " ದಲ್ಲಿ ವ್ಯಕ್ತವಾಗಿದೆ. ಆದರೆ ಅವರ ಈ ವರ್ತನೆ ಅಸಮಾಧಾನಕರ.
ಹೋಗಲಿಲಿ ಅಂತಾ ಸುಮ್ಮನಿದ್ದರೆ ಇಂದು ಬೆಳಿಗ್ಗೆ ಅವರು ಚೀನಾ ಭೇಟಿಯವೇಳೆ ಉದುರಿಸಿದ್ದ ಅಣಿಮುತ್ತುಗಳು ಬಹಿರಂಗವಾಗಿವೆ. "ನಮ್ಮ ದೇಶದ ಗೃಹ ಇಲಾಖೆ ನಾಲಾಯಕ್ಕು, ಅದಕ್ಕೆ ಬುದ್ದಿಭ್ರಮಣೆಯಾಗಿದೆ" ಇತ್ಯಾದಿ, ಇತ್ಯಾದಿಯಾಗಿ ಮಾತನಾಡಿರುವುದು ಬೇರೆಲ್ಲೂ ಅಲ್ಲ. ಅದೂ ನಮ್ಮ ಮೇಲೆರಗಲು ಕಾಯುತ್ತಿರುವ ದೇಶದಲ್ಲಿ . ಅಲ್ಲಿ ಇಂತಹ ಮಾತುಗಳನ್ನಾಡಿದರೆ ಏನಾಗಿತ್ತದೆ ಎಂಬ ಸಣ್ಣ ಅರಿವೂ ಇಲ್ಲದ ಬುದ್ದಿಗೇಡಿಯೊಬ್ಬರನ್ನು ಒಂದು ಜವಾಬ್ದಾರಿಯುತ ಜಾಗದಲ್ಲಿ ಕೂರಿಸಿರುವ ನಾವೇ ಪುಣ್ಯವಂತರಲ್ಲವೇ?

ಇನಾದರೂ ತಾವು ಮಾತನಾಡುವಾಗ ಎಚ್ಚರವಹಿಸಿಮಾತನಾಡಿದರೆ ಒಳ್ಳೆಯದಲ್ಲವೇ? ರಮೇಶ್ ಸರ್.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ಎಂಬ ನಿಮ್ಮದೇ ನಾಡಿನ ಶರಣರು ಹೇಳಿದ್ದು ಬಹುಶಃ ಮರೆತುಹೋಯ್ತೇ?

ನಿಮಗಎಲ್ಲಿ ಗೊತ್ತಿರಬೇಕು ವಚನಗಳು, ಎಷ್ಟೇ ಆಗಲಿ ವಿದೇಶದಲ್ಲಿ ಕಲಿತವರಲ್ಲವೇ ನೀವು

ಶನಿವಾರ, ಮೇ 8, 2010

ಸುಮ್ಮನೆ ಹಿಂಗೊಂದು ಪುರಾಣ!!

ಪುರಾಣ ಅಂದ ಮಾತ್ರಕ್ಕೆ ಅದೇ ಶಿವಚರಿತಾಮೃತ, ವಿಷ್ಣುಪುರಾಣ ಇತ್ಯಾದಿ, ಇತ್ಯಾದಿಗಳೇ ಜ್ನಾಪಕಕ್ಕೆ ಬರುತ್ತವೆ ಅಂತಾ ಗೊತ್ತಿದ್ದೂ ಅದೇ ಪುರಾಣಗಳನ್ನ ಮತ್ತೆ ಮತ್ತೆ ಹೇಳಿ ನಿಮ್ಗೆ ಬೋರ್ ಹೊಡ್ಸೋಕೆ ನಂಗಿಷ್ಟವಿಲ್ಲ. ಈಗ ಹೇಳಕ್ಕೊರಟಿರೋದು ನಮ್ಮ ಹಾಸ್ನದ ಸಾವ್ಕಾರ್ ಸಿದ್ದಪ್ಪನೋರ್ ಪುರಾಣ
ಒಂದಾನೊಂದ್ಸಾತಿ ನಮ್ಮ ಇಂತಿಪ್ಪ ಸಿದ್ದಪ್ಪನೋರೇನ್ ಸಾವ್ಕಾರ್ರಾಗಿರ್ಲಿಲ್ಲ. ಅವ್ರೂವೇ ಸಿಕ್ಕಾಪಟ್ಟೆ ಬಡುವ್ರೆಯಾ!! ಅವ್ರು ಸಾವ್ಕಾರ್ರೆಂಗಾದ್ರೂ ಅಂತಾ ಗೊತ್ತಾಗ್ಬೇಕಾದ್ರೆ, ನಂ ಹರಿಕಥಾ ವಿಧ್ವಾನ್ ಶ್ರೀ ಗುರುರಾಜಲು ನಾಯ್ಡು ರವರ ನಲ್ಲತಂಗಾದೇವಿ ಅನ್ನೋ ಹರಿಕಥೇಲ್ ಬರೋ ಒಂದು ಉಪಕಥೆನ ನೀವು ಜ್ನೆಪ್ತಿ ಮಾಡ್ಕಬೇಕು. ಅದೇ ಗುರುವೇ ಕೈಲಾಸ್ದಿಂದ ನಮ್ ಸಿವ್ನ ವೆಹಿಕಲ್ಲು ನಂದೀಸಪ್ಪ್ನೋರು ರಾತ್ರಿವೊತ್ತು ಬೂಮಿಗಿಳ್ದು ಕಬ್ಬು ತರ್ಕಾರಿ ಮೇಯ್ಕೊಂಡೋಯ್ತಿದ್ರಲ್ಲಾ ಅದೇ ಕಥೆ!!
"ಅಯ್ಯೋ! ಅದ್ಯಾರುಗ್ಗೊತ್ತಿಲ್ಲಾ? ಬುಡು ಸಿವಾ! ಅದ್ಕೂವೇ ಸಿದ್ದಪ್ಪ ಸಾವ್ಕಾರ್ ಸಿದ್ದಪ್ಪ ಆಗಾಕುವೇ ಏನ್ ಲಿಂಕು? ಅದೊಸಿ ವದ್ರು" ಅಂತಾ ನೀವು ಸಿಡ್ಕೋಕ್ ಮುಂಚೆ ನಾನೇ ಸುರು ಮಾಡ್ಬುಡ್ತೀನಿ.
ನಮ್ ಸಿದ್ದಪ್ಪನೋರ್ಗಿದ್ದ ಬರೀ ೧೫ ಕುಂಟೆ ಗದ್ದೇಲಿ ಕಬ್ಬುನ್ ರೇಟ್ ಜಾಸ್ತಿ ಆದಾಗ ಕಬ್ ನೆಟ್ಟಿದ್ರು, ಅವ್ರ ಗ್ರಾಚಾರ ಅದು ಕಟಾವ್ಗೆ ಬರೋ ಹೊತ್ಗೆ ರೇಟು ತಳಾಕಚ್ಚಿತ್ತು. ಕಡೇ ಪಕ್ಷ ಹಾಕ್ದ ಬಂಡ್ವಾಳಾನಾದ್ರೂ ಬರಲಿ, ಇನ್ನು ವಸಿ ರೇಟ್ ಜಂಪ್ ಆದ್ಮ್ಯಾಕೆ ಕಡ್ಸುದ್ರಾಯ್ತು. ಅನ್ನೂ ಉದ್ದೇಸ ಮಡೀಕಂಡು, ಕಳ್ಳ್ರು ಗಿಳ್ರು ಕದ್ಬುಟ್ಟಾರೂ ಅಂತಾ ದಿನಾ ರಾತ್ರಿ ವತ್ಗೆ ಕಬ್ ಕಾಯಕೆ ವೋಗೋರು.
ಅಂಗೇ ಒಂದಿನ ಸಿವ್ನ ವೆಹಿಕಲ್ಲು ನಂದೀಸಪ್ಪ ಇವ್ರ ಕಬ್ಬ ಮೆಯ್ಯೋಕೆ ಅಂತಾ ಬಂದ್ಬುಡೋದೆ!!!!!.
ಸಿದ್ದಪ್ನೋರ್ಗೆ ಎಲ್ಲಿಲ್ಲದ ಕ್ವಾಪ ಬಂದ್ಬುಡ್ತು, " ಇರದೇ ಕಚ್ಚೆ ಪವ್ಡೆ ಅಗಲಾ ಗದ್ದೆ, ಏನೋ ವಂಚೂರ್ ಬೆಳುದ್ರೆ, ಹೊಟ್ಗಾದ್ರೆ ಬಟ್ಗಾಯಿಕಿಲ್ಲ, ಅಂತಾದ್ರಲ್ಲಿ ಈ ಬಡ್ಡಿ ಹೈದ್ನ ದನ ಯಾವ್ನನ್ಮಗುಂದೋ ಕಾಣೇ ನನ್ಗದ್ದೇಗೇ ಬರ್ಬೇಕೊ?" ಅಂತಾ ಬಯ್ಕಂಡು ದೊಣ್ಣೆ ತಗಂಡು ಓಡ್ಸಕೋದ್ರೆ ಇದ್ಕಿದ್ದಂಗೆ ಮ್ಯಾಕೆ ಆರಕೆ ಸುರುಮಾಡ್ಬುಡಾದೇ!?!?!?
ಸಿದ್ದಪ್ನೋರ್ಗೆ ಏನ್ ಮಾಡ್ಬೇಕು ಅಂತಾ ಗೊತ್ತಾಗ್ಲಿಲ್ಲ! ಯಾವ್ದೋ ಮಾಯಾವಿ ಅಸ ಇರ್ಬೇಕು!?!? ಅನ್ಕಂತಿದ್ದಾಂಗೆಯಾ ಸಿವ್ರಾತ್ರಿ ದಿಸ ಸ್ವಾಮಪ್ಪನ ಗುಡಿತವ ಕೇಳಿದ್ದ ಹರಿಕತೆ ಗ್ಯೆಪ್ತಿಗ್ಬಂದ್ಬುಡ್ತು!! "ಓಹ್ಹೋ!! ಇದು ಇಂಗೆಲ್ಲಾ ಆರದ್ಕಲ್ತದೆ ಅಂದ್ರೆ ಇದು ಅದೇ ದನ ಇರ್ಬೇಕು ಅನ್ಕಂಡು. ಪಟಕ್ ಅಂತಾ ಅದ್ರು ಬಾಲ್ದ ತುದಿ ಹಿಡ್ಕಂಡು ನಂದೀ ಜೊತೆ ಇವ್ರು ಜೀವಂತ್ವಾಗಿಯೇ ಕೈಲಾಸುಕ್ಕೋದ್ರು. ಅಲ್ಗೆ ತಲ್ಪುದ್ಮಾಕೆ ನಂದೀಸಪ್ಪ ನೋಡ್ತಾನೆ, ಮಾನವ!!! ಇದೊಳ್ಳೆ ಪೀಕ್ಲಾಟಕ್ಬಂತಲ್ಲಪ್ಪ! ನಾನು ಮೇಯಕ್ಕೋಗದೇ ಕದ್ದು ಮುಚ್ಚಿ! ಅಂತಾದ್ರಾಗೆ ಈ ವಯ್ಯ ಬಂದೀರೋದು ನಮ್ ಬಾಸ್ಗೇನಾರ ಗೊತ್ತಾದ್ರೆ ನನ್ ಕೆಲ್ಸದ ಗತಿ ಅಷ್ಟೇಯಾ? ಅಂತಾ ಯೋಚ್ನೆ ಸುರುವಾಯ್ತು. ಅದ್ಕು ಮುಂಚೆ ಇವಯ್ಯನ್ನ ಸಾಗಾಕ್ಬೇಕು ಅನ್ಕಂಡು "ಯಾರಯ್ಯ ನೀನು? ಇಲ್ಗ್ಯಾಕ್ ಬಂದೇ? ಹೋಗ್ ನಿಮ್ಮೂರ್ಗೆ" ಅಂತಾ ದಬಾಯ್ಸಿದ.
ಸಿದ್ದಪ್ನೋರ್ಗೆ ಪಿತ್ತ ನತ್ತಿಗೇರ್ಬುಡ್ತು! " ಎಲಾ!! ಇವ್ನ ನನ್ ಗದ್ದೇಗ್ ಬಂದು ಮೇಯ್ದುದ್ದು ಅಲ್ದೆ! ನಂಗೇ ರೋಪಾಕ್ತೀಯ? ಕರೀಯಲೇ ನಿಂ ಯಜ್ಮಾನ್ರುನ ಅವ್ನತಾವೇ ನ್ಯಾಯ ಕೇಳುಮ?" ಅಂತ ರಾಂಗ್ ಆಗಿ ನಿಂತ್ಕಂಡ್ರು. ನಂದೀಸಪ್ಪುಂಗೆ "ಓಹೋ ! ಇವ್ನು ಆ ಗದ್ದೆ ಹೋನರ್ರು ಅಂತಾ ಗೊತ್ತಾಗೋಯ್ತು.
" ನೋಡು ಗುರುವೇ ಸುಮ್ನೆ ಕೂಗಾಡಿ ನನ್ ಮರ್ವಾದೆ ತಗೀಬ್ಯಾಡ ನಿಂಗೇನ್ಬೇಕು ಕೇಳು ಕೊಡ್ತೀನಿ ಸುಮ್ನೆ ತಗಂಡು ಇಲ್ಲಿಂದ ವಂಟೋಗು" ಅಂತಾ ಬೇಡ್ಕಂಡ.
ಹೇಳೀ ಕೇಳೀ ಸಿದ್ದಪ್ನೋರು ಬುಟ್ಟಾರೆ ಅವ್ಕಾಸವಾ!! ಸಿಕ್ಕಾಬಟ್ಟೆ ಐಸ್ಪುರ್ಯವ ನಂದೀಸುಂತವು ಡೀಲ್ ಮಾಡ್ಕಂಡು ಭೂಮಿಗ್ ಬಂದ್ರು.
ಜನ ನೋಡ್ ನೋಡ್ತಿದ್ದಂಗೆಯಾ ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ, ಮಾಡಿ ಮೇಲ್ ಮಾಡೀ ಕಟ್ಟುದ್ರು. ಆ ಮಾಡೀ ತುದಿ ನೋಡ್ಬೇಕು ಅಂದ್ರೆ ನೆಲುದ್ಮ್ಯಾಗೆ ಮನಿಕಂಡು ನೋಡ್ಬೇಕಿತ್ತು ಅಷ್ಟೆತ್ರುಕ್ ಕಟ್ಬುಟ್ರು. ಆ ಮೇಲ್ ಮದ್ವೇ ಆಯ್ತು. ೨ ಗಂಡ್ಮಕ್ಕಳೂ ಆದೋ.
ಇಷ್ಟೆಲ್ಲಾ ಆದ್ಮೇಲೆ ಸಿದ್ದಪ್ಪ್ನೋರ್ಗೆ ಜೀವನಾನೇ ಬೇಸರ ಅನ್ನಿಸ್ಬುಡ್ತು. ಜೀವ್ಣುದಲ್ಲಿ ಮಾಡಾದೆಲ್ಲಾ ಮಾಡೀವ್ನಿ, ಇನ್ನೇನ್ ಸಾಯಾದೆಯಾ! ಅಂತಾ ತೀರ್ಮಾನ್ಸಿದ್ರು.
ತಾನು ಇಂತಾ ಸಾವ್ಕಾರ ಸುಮ್ನೆ ಸತ್ರೆ ಬೆಲೆ ವಯ್ತುದೆ ಅನ್ಕಂಡು ಕರ್ನಾಟ್ಕದ ಅತೀ ದೊಡ್ಡ ಬಿಲ್ಡಿಂಗ್ ಆದ "ಉಟಿಲಿಟಿ" ಬಿಲ್ಡಿಂಗ್ ಮ್ಯಾಲಿಂದಾನೆ ಬಿದ್ ಸಾಯವ ಅನ್ಕಂಡು, ಬ್ಯೆಂಗ್ಳೂರ್ ಬಸ್ ಹತ್ತುದ್ರು. ಬಸ್ಸು ಮುಂದ್ಕೋಯ್ತಾದೆ ಒಳ್ಗೆ ನೋಡ್ತಾರೆ ಇವ್ರು ಸೇರಿ ಇರೋರೇ ೪ ಜನ!!! ಅದ್ರಲ್ಲೊಬ್ಬ ಕಂಡಾಟ್ರು!, ಒನ್ನೊಬ್ಬ ಡೆವರ್ರು!, ಇನ್ನೊಬ್ಬ ಬಾರೀ ಡುಮ್ಮಣ್ಣ. ತಿಕೀಟ್ ತಗಂಡು ಆ ಡುಮ್ಮಣ್ಣನ್ ಪಕ್ಕ ಕೂತ್ಗಂಡ್ರು. ಎಂಗಿದ್ರೂ ಸಾಯವಾ ಅಂತಾ ವಯ್ತಾವ್ನಿ ಇವುಂತಾವಾರ ಮಾತಾಡ್ಕಂಡ್ ಹೋಗವಾ ಅನ್ಕಂಡು " ಏನಪ್ಪಾ ಬೆಂಗ್ಳೂರ್ಗೋ??? " ಅಂದ್ರು.
ಕೈ ಬಾಯಿ ೨ ಫ್ರೀ ಇರದ ಡುಮ್ಮಣ್ಣ " ಹ್ನೂಂ!!" ಅಂದ. ಬಸ್ಸು ಹಿರೀಸಾವೆ ಬುಟ್ಟಿ ಬೆಳ್ಳೂರ್ ಕ್ರಾಸ್ ಬಂದ್ರೂ ಯಾರೂ ಅತ್ನಿಲ್ಲ. ಮತ್ತದೇ ಡುಮ್ಮಣ್ಣನ್ನ ವಿಧಿಯಿಲ್ಲದೇ ಮಾತಿಗೆಳೆದರು.
"ತಿಕೀಟು ತಗಂಡಿದಿಯೋ?" ಅಂದ್ರು. ಡುಮ್ಮಣ್ಣನಿಗೆ ಎಲ್ಲಿಲ್ಲದ ಖುಷಿಯಾಯ್ತು.
"ಹೂಂ!! ೨ ತಿಖೀಟು ತಗಂಡೀವ್ನಿ, ನೋಡೀ!!" ಅಂತಾ ತೋರಿಸಿದ. ತಿಣುಕಾಡೋ ಸರದಿ ಸಿದ್ದಪ್ಪ್ನೋರ್ದು!!!
"ಅಲ್ಲಪ್ಪಾ!! ನೀ ಇರೋದು ಒಬ್ನೆಯಾ! ೨ ತಿಕೀಟು ಯಾಕೆ" ಅಂದ್ರು ಕುತೂಹಲವ ತಡೀನಾರ್ದೆ.
"ಹೂಂ!! ನಾನೇನ್ ದಡ್ಡ ಅಲ್ಲಾ! ಒಂದು ತೀರ್ಸೋದ್ರೆ ಇನ್ನೊಂದಿರ್ಲೀ ಅಂತಾ ೨ ತಗಂಡೇ" ಅಂದ,
"ಆ ತಿಕೀಟು ತೀರ್ಸೋದ್ರೆ?" ಮತ್ತೆ ಕೆಣ್ಕುದ್ರು,
" ನಂಗೂ ಬುದ್ದೀ ಅದೆ, ತೀರ್ಸೋದ್ರೆ ನಂತಾವಾ ಪಾಸ್ ಐತೆ" ಅಂದ ಕೈಲಿದ್ದ ಬನ್ ತಿನ್ನುತ್ತಾ. ಸಿದ್ದಪ್ನೋರ್ಗೆ ಬವಳಿ ಬಂದಂಗಾತು,ಆದ್ರೂವೆ ನಗ್ತಾ,
"ಅದೂ ತೀರ್ಸೋದ್ರೆ?" ಅಂದ್ರು
"ಹೋಲಿ ಬುಡಿ!! ಅಲ್ ಬಸ್ಸೋಡಿಸ್ತಾವ್ನಲ್ಲ ಅವ್ನೇ ನಮಪ್ಪ!!" ಅಂದ ಡುಮ್ಮಣ್ಣನ್ ಮಾತ್ಕೇಳಿ ಬಸ್ಸಿನ ಕಿಟ್ಕಿಯಿಂದ ನೆಗೆದ್ಬುಟ್ರು. ಅವ್ರ ದುರಾದ್ರುಸ್ಟ, ಅವ್ರ ಪ್ರಾಣುಕ್ಕೇನಾಗ್ಲಿಲ್ಲ! ಮ್ಯಾಕೆದ್ದು ನೋಡ್ತಾರೆ!! ಎದುರ್ಗೆ "ಉಟಿಲಿಟಿ" ಬಿಲ್ಡಿಂಗ್ !!!
ಕುಸಿಯಾಗ್ಬುಟ್ಟು ಕಷ್ಟಾಪಟ್ಟು ಮ್ಯಾಕೆ ಅಂದ್ರೆ ಬಿಲ್ಡಿಂಗ್ನ ತುದಿ ತಲ್ಪಿ " ಸಿವನೇ ಸ್ವಾಮಪ್ಪ ನನ್ ತಪ್ಪು ನೆಪ್ಪು ಎಲ್ಲಾನುವೆ ನಿನ್ನೊಟ್ಟೆಗಾಕಳಪ್ಪಾ!" ಅಂದ್ಬುಟ್ಟು ಮ್ಯಾಲಿಂದಾ ಇನ್ನೇನ್ ಕೆಳಾಕ್ ನೆಗೀಬೇಕು ಆಗ ಕೆಳಗೊಬ್ಬ ೨ ಕೈ ೨ ಕಾಲೂ ಇಲ್ದಿರೋ ಅಂಗವಿಕಲ ಬಿಕ್ಸುಕ ಕುಸಿಯಿಂದಾ ಡ್ಯಾನ್ಸ್ ಮಾಡ್ತಿರೊವಂಗೆ ಕಾಣುಸ್ತು.
"ಅರೆರೆರೆ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅಂತಾದ್ರಲ್ಲಿ ೨ಕಯ್ಯಿ, ೨ ಕಾಲೂ ಇಲ್ದಿರೋ ಈ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ ಅನ್ನಾದ ಸಾಯೋ ಮುಂದಾದ್ರೂ ತಿಳ್ಕಳವಾ" ಅಂತಾ ಮತ್ತ ಕೆಳ್ಗೆ ಇಳ್ದು ಬಂದ್ರು. ಬಂದು ಅವ್ನ,
" ಏನಪ್ಪ ಸ್ವಾಮಿ!! ಇಷ್ಟೆಲ್ಲಾ ಐಸ್ಪುರ್ಯ್ ಇದ್ರೂವೇ ನಂಗ್ ನೆಮ್ದಿ ಅನ್ನದೇ ಸಿಕ್ನಿಲ್ಲಾ!! ಅದ್ಕೆ ಸಾಯಾಕೆ ಅಂತಾ ಬಂದೀವ್ನಿ. ಅಂತಾದ್ರಲ್ಲಿ ನೀನು ೨ಕಯ್ಯಿ, ೨ ಕಾಲೂ ಇಲ್ದಿರೋ ಪುಣ್ಯಾತ್ಮ ಅದೆಂಗ್ ಕುಸಿಯಾಗಿ ಡ್ಯಾನ್ಸ್ ಮಾಡಾಕಾಯ್ತದೆ? ನಿನ್ ನೆಮ್ದಿ ಗುಟ್ಟೇನು? ನಂಗೂ ವಸಿ ಹೇಳಪ್ಪಾ! ತಿಳ್ಕಂಡ್ ಸಾಯವಾ" ಅಂದ್ರು.
ಪಾಪ! ಬಿಖ್ಸುಕುನ್ಗೆ ಎಲ್ಲಿಲ್ಲದ ಕ್ಯಾಣ ಹತ್ಬುಡ್ತು! "ಅಯ್ಯೋ! ಕ್ಯಾಮೆ ಗೀಮೆ ಇದ್ರೆ ನೋಡೋಗಯ್ಯೋ!! ಕುಸಿಯಂತೆ ಡ್ಯಾನ್ಸಂತೆ ಇವ್ರಜ್ಜಿ ಪಿಂಡ! ಬೆನ್ನು ಕೆರ್ಕಳಾಕಾಗ್ದೆ ನಾ ಒದ್ದಾಡ್ತಾವ್ನಿ, ಸಾಯೊಂಗಿದ್ರೆ ವಸಿ ಬೆನ್ನ ಕೆರುದ್ಬುಟ್ಟು ಸಾಯೋಗ್!!" ಅಂತ ರೇಗ್ಬಿಡೋದೇ?!!
ಪಾಪ ನಂ ಸಿದಪ್ನೋರ್ಗೆ ಜ್ನಾನೋದಯದ ಜೊತೆಗೆ ಪಾಪ ಪ್ರಜ್ನೆ ಕಾಡೋಕೆ ಸುರು ಆಯ್ತು, " ಇಂತಾ ಕಸ್ಟ ಜೀವಿ ಮನ್ಸ ನೋಯ್ಸ್ಬುಟ್ನಲ್ಲಾ!?" ಅಂತಾ ಅವ್ನ ಬೆನ್ನು ಕೆರೆದು ಜೋಬೊಳ್ಗಿದ್ದ ೧೦೦ ನೋಟನ್ನ ಅವ್ನ ತಟ್ಟೆಗಾಕಿ ಜೊತೆಗೆ ಸಾಯೋ ಯೋಚ್ನೇನು ಅಲ್ಲೇ ಹಾಕಿ ಕಾಲಿ ಜೋಬಾದ್ರಿಂದಾ "ನಡ್ಕಂಡೇ ಆಸ್ನ ಸೇರವಾ" ಅಂತ ತೀರ್ಮಾನ್ಸಿ ನಡೆಯೋಕ್ ಸುರುಮಾಡುದ್ರು.
ನೆಲ್ಮ ಗ್ಲ ಬುಟ್ಟು ಕುಣುಗ್ಲು ಕಡೀಕ್ ತಿರಿಕಂಡ್ರು, ಕಾಲು ಪದ ಯೋಳಾಕ್ ಸುರು ಮಾಡ್ದೋ! " ತಡೀಯಪ್ಪ ಯಾವ್ದಾರಾ ಕೂಟ್ರು, ಕಾರು ಸಿಕ್ಕುದ್ರೆ ವಸಿ ಡ್ರಾಪ್ ತಗಳವಾ ಅನ್ಕಂಡು ಯೆಂಟ್ಗಾನಳ್ಳಿ ಬಾರೆ ಇಳಿಯಕ್ ಸುರುಮಾಡುದ್ರು. ದೂರ್ದಿಂದ ಒಂದ್ಕಾರು ನಿದಾನುಕ್ಕೆ ಬತ್ತಾಯಿತ್ತು. ಸಿದ್ದಪ್ನೋರು ಕೈ ತೋರುದ್ರು ಕಾರು ಸುಮಾರಾಗಿ ಸ್ಲೋ ಆಯ್ತು. ಪಟಕ್! ಅಂತಾ ಡೋರ್ ತಗ್ದುದ್ದೆಯಾ ಹತ್ತಿ ಒಳಕ್ಕೂತ್ಕಂಡ್ರು.
ನೀ ಯಾರೋ ಪುಣ್ಯಾತ್ಮ ನಿನ್ನೊಟ್ಟೆ ತಣ್ಗಿರ್ಲಿ!" ಅಂತಾ ಬಾಗ್ಲಾಕ್ಕಂಡು ತಮ್ಮೆಗ್ಲು ಮೇಲಿದ್ದ ಟವಲಿಂದ ಬೆವರೊಸಿಕಂಡು ನೋಡ್ತಾರೆ!! ಏನಾಶ್ಚರ್ಯ!!!!!!!!!!!
ಕಾರೊಳ್ಗೆ ಡೈವರ್ರೂ ಇಲ್ಲಾ!! ಯಾರೂ ಇಲ್ಲಾ!! ಕಣ್ಮುಂದೆ ನಕ್ಸತ್ರ ಕಾಣಕ್ ಸುರುಆದೋ!! "ಓಹೋ!! ಇದು ದೆವ್ವಾನೆ ಇರ್ಬೇಕು ಅನ್ಕೊಂಡು,
" ದೆವ್ವಾ!! ದೆವ್ವಾ!! ದೆವ್ವಾ!! ಕಾಪಾಡ್ರಪ್ಪೋ ಯಾರಾದ್ರಾ ಕಾಪಾಡ್ರಪ್ಪೋ!! ದೆವ್ವಾ!! ದೆವ್ವಾ!! " ಅಂತಾ ಕೂಗ್ಕಂತ್ತಿದ್ದಂಗೇ ಇಂದ್ಲಿಂದಾ ತಲೇ ಮೇಲೆ ರಪ್!! ಅಂತಾ ಏಟು ಬಿತ್ತು.
" ಹಲ್ಕಾ ನನ್ಮಗನೇ!! ಪೆಟ್ರೋಲ್ ಆಗೋಯ್ತು ಅಂತಾ ೨ ಕಿಲಾಮೀಟ್ರಿಂದಾ ತಳ್ಕಬತ್ತಾವ್ನಿ!! ಒಳಕ್ಕತ್ತುದ್ದೂ ಅಲ್ದೆ! ದೆವ್ವಾ!! ದೆವ್ವಾ!! ಅಂತಾ ಬ್ಯಾರೆ ಅಂತೀಯಾ? ಇಳ್ಯೋ ನನ್ಮಗನೆ ಕೆಳಕ್ಕೆ!" ಅಂತಾ ಕಾರ್ನೋನರ್ರು ಮುಂದೆ ಬಂದ!!
ಪಾಪ!! ಸಿದ್ದಪ್ನೋರು ಕೆಳಕ್ಕಿಳಿದು ತಿರ್ಗಾ ನಡ್ಕಂಡು ಓಗಾಕೆ ಸುರು ಮಾಡುದ್ರು! ಇನ್ನೊಸಿ ದೂರ ಓದ್ಮೇಲೆ ಯಾರೋ ಜ್ಯಾಡ್ಸಿ ಸೊಂಟಕ್ಕೊದ್ದಂಗಾಯ್ತು.
" ಎದ್ದೇಳೋ! ಬೇವರ್ಸೀ! ಮೂರ್ ಮದ್ದೀನಾ ಅಯ್ತು ಇನ್ನೂ ಬಿದ್ದವ್ನೆ!!" ಅಂತಾ ಸಿದ್ದಮ್ಮ ಗೊಣಗೋದು ಕೇಳ್ಸುದ್ಮೇಲೆಯಾ ನಮ್ ಸಿದ್ದಪ್ನೋರ್ಗೆ ತಾವ್ ಕಂಡಿದ್ದು ಕನ್ಸು ಅಂತಾ ಗೊತ್ತಾಗಿದ್ದು!!!!

ಗುರುವಾರ, ಏಪ್ರಿಲ್ 22, 2010

ಮೊಗೆದಷ್ಟು ಉಕ್ಕುವ ಕನ್ನಡದ ಪಿಸುಮಾತಿನ(ಬ್ಲಾಗು) ತಾಣಗಳು- ನಿಮಗಾಗಿ

ಈ ಹಿಂದೆ ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು (ಬ್ಲಾಗು ತಾಣಗಳು) ಮತ್ತು ನಿಮಗಾಗಿ ಕನ್ನಡಿಗರ ಬ್ಲಾಗ್ ವಿಳಾಸಗಳು ಎರಡು ಮಾಲಿಕೆಗಳಲ್ಲಿ ಕನ್ನಡ ಬ್ಲಾಗ್ ತಾಣಗಳ ಮಾಹಿತಿ ನೀಡಿದ್ದೆ. ಆಗ ತಾಣಗಳ ಹೆಸರನ್ನಷ್ಟೇ ಹಾಕಿದ್ದೆ. ಈ ಬಾಅರಿ ಮತ್ತೊಂದಿಷ್ಟು ಹೊಸ ಪಿಸುಮಾತಿನ ತಾಣಗಳೊಡನೆ ಅವುಗಳ ಕಿರುಪರಿಚಯದೊಂದಿಗೆ ಪ್ರಕಟಿಸುತ್ತಿದ್ದೇನೆ. ನಿಮಗೂ ಇಷ್ಟವಾಗಬಹುದು. ತಾಣಗಳಿಗೆ ಇಣುಕಿ ನೋಡಿ.



http://vimarshaki.wordpress.com ಮತ್ತು http://kshakirana.blogspot.com ಈ ೨ ಬ್ಲಾಗುಗಳು ಪತ್ರಿಕಾ ವಿಮರ್ಶೆಗೆ ಮೀಸಲಾಗಿವೆ. ಹೆಚ್ಚಾಗಿ ಪತ್ರಿಕಾವರದಿಗಳ ಕೈಗನ್ನಡಿಯಂತಿವೆ.



http://www.sallaap.blogspot.com ಸುನಾತ್ ರವರ ಈ ಬ್ಲಾಗ್ ನಲ್ಲಿ ವಸ್ತುನಿಸ್ಠ ಚಿಂತನಾ ಬರಹಗಳು ಮನಸ್ಸಿಗೆ ಹಿಡಿಸುತ್ತವೆ. http://gaduginabharata.blogspot.com ಹೆಸರೇ ಹೇಳುವಂತೆ ಗದುಗಿನ ಭಾರತವನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಅಳವಡಿಸುವ ಅಚಲ ಪ್ರಯತ್ನ ಈ ತಾಣದ್ದು.



ನೀವೇನಾದರೂ ಅಶೋಕ್ ರವರ http://ashok567.blogspot.com/ ಈ ತಾಣವನ್ನು ನೋಡದೇ ಉಳಿದು ಬಿಟ್ಟರೆ, ನಿಮಗೆ ಮಾಹಿತಿ ತಂತ್ರಜ್ನಾನದ ಆಗು ಹೋಗುಗಳು ದೊರಕದೇ ಹೋದಾವು?



ಅನ್ನಪೂರ್ಣ ದೈತೋಟ ರವರ ಈ http://nannakhajaane.blogspot.com ಬ್ಲಾಗ್ ಭಾವನೆಗಳ ಖಜಾನೆಯೇ ಸರಿ. ಶೇ-ಪು ರವರ http://timepass-kadlekaayi.blogspot.com ಈ ತಾಣ ಬರೀ ಟೈಮ್ ಪಾಸ್ ಗಷ್ಟೇ ಅಲ್ಲ ಮನಕ್ಕೂ ಮುದ ಗ್ಯಾರಂಟಿ. http://antharangadamaathugalu.blogspot.com ಅಂತೂ ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..........



ವಿ ಆರ‍್ ಭಟ್ಟರ http://nimmodanevrbhat.blogspot.com ಈ ತಾಣ ಕಾವ್ಯಗಳ ಕಜ್ಜಾಯಗಳನ್ನು ಉಣಬಡಿಸುತ್ತದೆ. ಕನ್ನಡದ ಪುಸ್ತಕಗಳ ಬಗ್ಗೆ ವಿಶಿಷ್ಠ ಮಾಹಿತಿ ನೀಡುವ ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ ‘ಒನ್ ಸ್ಟಾಪ್ ಶಾಪ್ http://pusthakapreethi.wordpress.com ಇದು. ಪುಸ್ತಕಗಳ ಸೊಗಸಾದ ವಿಮರ್ಶೆ,ಇತ್ತೀಚಿಗೆ ಪ್ರಕಟವಾದ, ಪುಸ್ತಕಗಳ ಪರಿಚಯ ಈ ಎಲ್ಲಾ ಸಮಗ್ರ ಮಾಹಿತಿಗಳು ಇಲ್ಲಿ ಲಭ್ಯ.ಒಂದು ಉತ್ತಮ ಡಾಕ್ಯುಮೆಂಟರಿಯೇ ಸರಿ.



ಇನ್ನು ಹಾಸನದ ಸುಬ್ರಹ್ಮಣ್ಯ ರವರು "ತಮ್ಗನ್ಸಿದ್ದನ್ನ ಹೇಳ್ಬಿಡಿ" ಎನ್ನುತ್ತಾ http://subrahmanyabhat.blogspot.com ಎಂಬ ಸುಂದರ ತಾಣ ನೀಡಿದ್ದಾರೆ..ಭೇಟಿ ಕೊಡಿ.



http://anil-ramesh.blogspot.com ಅನಿಲ್ ರಮೇಶ್ ರವರ ಈ ತಾಣ ತನ್ನ ಕಪ್ಪು ಬಿಳುಪು ವಿನ್ಯಾಸದಿಂದ ಮನತಣಿಸುವುದಷ್ಟೇ ಅಲ್ಲದೆ, ಸೊಗಸಾದ ಲೇಖನಗಳನ್ನು ಬಚ್ಚಿಟ್ಟುಕೊಂಡಿದೆ.



ಬೆಂಗಳೂರಿನ ವಿನುತ ರವರ http://vinuspeaks.blogspot.com/ ಅಂತು ಮನಸ್ಸಿಗೆ ಹತ್ತಿರವಾಗುವುದರಲ್ಲಿ ಅನುಮಾನವೇ ಇಲ್ಲ. http://avadhi.wordpress.com ಕನ್ನಡ ವಿವಿಧ ಲೇಖಕರು ಬರೆಯುವ ಸೊಗಸಾದ ಲೇಖನಗಳ ಸಂಗ್ರಹ.



http://www.baraha.com/kannada/index.php ಬರಹ ತಂತ್ರಾಂಶ ರವರ ಈ ತಾಣ ವಿದ್ಯುನ್ಮಾನದ ಕನ್ನಡ ಪದಕೋಶ.



ಪೂಜೆ ಪುನಸ್ಕಾರಗಳನ್ನು ಹೇಗೆ ಮಾಡಬೇಕೆಂಬ ಮಾಹಿತಿ ಬೇಕೆ? ಹಾಗಿದ್ದರೆ http://poojavidhana.blogspot.com ಗೆ ತಪ್ಪದೇ ಭೇಟಿಕೊಡಿ.



ಹೂವು ನೀಲಿ, ನಾನು ಮಾಲಿ ಎನ್ನುತ್ತಾ ಕಾವ್ಯ ಕನ್ನಿಕೆಯನ್ನು ತೆರೆದಿಡುವ http://neelihoovu.wordpress.com ಈ ತಾಣ ರಂಜಿತ್ ಅಡಿಗರದ್ದು. ಇನ್ನು ಜಿತೇಂದ್ರ ಕಶ್ಯಪ್ ರವರ್ http://hindumane.blogspot.com ನಲ್ಲಿ ಮಲೆನಾಡಿನ ಹಳ್ಳಿಗಳ ಪ್ರಸ್ತುತ ಸಾಮಾಜಿಕ ಸ್ಥಿತಿಯನ್ನು ಕಾಣಬಹುದು.



ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗವನ್ನು ಅಮೇರಿಕಾದಲ್ಲಿದ್ದುಕೊಂಡೇ ಅರೆದು ಕುಡಿಯುತ್ತಿರುವ http://todayskagga.blogspot.com ವೆಂಕಟೇಶ ಮೂರ್ತಿಯವರದ್ದು.



ಇನ್ನು ನಮ್ಮ ವಿಸ್ಮಯನಗರಿಗ ಶಿವಮೊಗ್ಗದ ಇಸ್ಮಾಯಿಲ್ ಅಣ್ಣನವರ ಈ http://ismailmkshivamogga.blogspot.com ತಾಣ ಸಿಂಪ್ಲಿ ಸೂಪರ್ ಬ್.. ಓದಿನ ಹಸಿವಿರುವ ನರೇಂದ್ರ ಪೈಗಳ ಈ http://narendrapai.blogspot.com ಹೊಸ ಪುಸ್ತಕಗಳ ಚುಟುಕು ವಿಮರ್ಶೆಯಲ್ಲಿ ಎತ್ತಿದ ಕೈ. ಬಿಸಿಲಿಗೂಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ.



ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು ಎನ್ನುತ್ತಾ ಬಿಸಿಲ ಪ್ರಿತಿಯುಳ್ಳ ಇಂಗ್ಲೀಶ್ ಪ್ರಾಧ್ಯಾಪಕ ಉದಯ್ ಇಟಗಿಯವರ ಕನ್ನಡ ಪ್ರೀತಿ http://bisilahani.blogspot.com ನಲ್ಲಿ ಸೊಗಸಾಗಿ ದಾಖಲಾಗಿದೆ.



ದೇವರನ್ನೇ ಮರೆತು ಹೋಗಿರುವ ಕಾಲದಲ್ಲಿ ಯಾರನ್ನಾದರೂ "ದೇವರನಾಮ ಹಾಡಿ, ಹಸೆ ಹಾಡು ಹೇಳಿ" ಎಂದರೆ ದಿಕ್ಕೇ ತೋಚದಂತಾಗಬಹುದು. ಅವರು http://bhakthigeetha.blogspot.com ತಾಣಕ್ಕೆ ಭೇಟಿ ಕೊಟ್ಟರೆ ಎಲ್ಲವನ್ನೂ ಕಲಿಯಬಹುದು. ಸರ್ವಜ್ನ ಮೂರುತಿಯ ವಚನಗಳು ತಕ್ಷಣಕ್ಕೆ ಬೇಕೆ? http://sarvagnana-vachanagalu.blogspot.com ಇಲ್ಲಿಗೆ ಭೇಟಿ ಕೊಟ್ಟರೆ ಸಿಕ್ಕೇ ಸಿಗುತ್ತವೆ.



ಕನ್ನಡದ ಎಲ್ಲಾ ಸಿನಿಮಾ ಹಾಡುಗಳು ಬೇಕೆ? http://anuzlalaland.blogspot.com/ ಗೆ ತಪ್ಪದೇ ಭೇಟಿಕೊಡಿ.



http://aravindh-rao.blogspot.com ಮತ್ತು http://accounts-information.blogspot.com ಈ ಎರಡೂ ತಾಣಗಳ ಒಡೆಯರು ನಮ್ಮ ವಿಸ್ಮಯನಗರಿಗರೇ ಆದ ಅರವಿಂದರಿಗೆ ಸೇರಿದವು ಮೊದಲ ತಾಣ ಕವನ ಕಥೆಗಳನ್ನು ಕೊಟ್ಟರೆ ೨ನೇ ತಾಣ ತಾವು ಹೇಗೆ ತೆರಿಗೆ ಉಳಿಸಬಹುದೆಂಬ ಮಾಹಿತಿ ನೀಡುತ್ತದೆ. www.kannadavoice.blogspot.com ಇದು ನಮ್ಮ ಮತ್ತೊಬ್ಬ ವಿಸ್ಮಯನಗರಿಗ ಶಫೀರ್ ರವರ ಆತ್ಮಸಾಕ್ಷಿಯ ತಾಣ.



ಈ ಲೇಖನ ಪ್ರಕಟಿಸಿದ ನಂತರ ಮಿತ್ರರಾದ ವಿನಯ್ - ಜಿ ರವರು ಹೊಸದೊಂದು ತಾಣದ ಲಿಂಕ್ ನೀಡಿದ್ದಾರೆ. http://www.indiblogger.in/languagesearch.php?pageNum_Recent=0&totalRows_Recent=70&lang=kannada ಇದರಲ್ಲಿ ಕನ್ನಡದ ಎಲ್ಲರೀತಿಯ ನವರಸ ತಾಣಗಳ ಲಿಂಕ್ ಗಳು ಸಿಕ್ಕುತ್ತವೆ, ತಪ್ಪದೇ ನೋಡಿ, ಅತ್ಯುತ್ತಮ ಮನರಂಜನೆ ಮತ್ತು ಮೆದುಳಿಗೆ ಮೇವು ಗ್ಯಾರಂಟಿ.



ಒಂದೇ ಎರಡೇ ಮೊಗೆದಷ್ಟು ಉಕ್ಕುವ ಸಮುದ್ರದಂತೆ ಕನ್ನಡ ಪಿಸುಮಾತಿನ ತಾಣಗಳು ಉಕ್ಕಿ ಉಕ್ಕಿ ಬರುತ್ತವೆ. ಹೆಕ್ಕಿ ಓದಲು ನೀವು ನಾವು ತಯಾರಿರಬೇಕಷ್ಟೇ ಅಲ್ಲವೇ?

ಮತದಾನ ಕಡ್ಡಾಯ ಸಧ್ಯ ಪ್ರಸ್ತುತವೇ........?

ಪರೀಕ್ಷಾ ಸಮಯದಲ್ಲಿ ಓದಲು ವಿದ್ಯಾರ್ಥಿಗಳಿಗೆ ವಿದ್ಯುತ್ ಇಲ್ಲ, ಏರಿದ ಬೆಲೆಗಳು ಕೆಳ ಬರುವ ಸೂಚನೆಗಳೇ ಇಲ್ಲ, ರಣ ಬಿಸಿಲು ನೆತ್ತಿ ಸುಡುತ್ತಾ ಅಂತರ್ಜಲವನ್ನೇ ಅಂತಾರ್ಧನ ಮಾಡಿ ನಾಲಗೆಯ ಪಸೆ ಇಂಗಿಸಲೂ ಬಿಡುವಿಲ್ಲದ ಸರ್ಕಾರ.



ಪಾಪ! ಅದು ತಾನೆ ಏನು ಮಾಡೀತು!!?



ಚುನಾವಣೇ ಮೇಲೆ ಚುನಾವಾಣೇ ಮೇಲೆ ಚುನಾವಣೆ ಬರುತ್ತಲೇ ಇವೇ. ಸ್ಥಳಿಯ ಸಂಸ್ಥೆಗಳಿಗಾಯ್ತು, ಬಿ ಬಿ ಎಂ ಪಿ ಬಂತು. ಗ್ರಾಮಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಬಂದಾಯ್ತು ಮುಗಿಯುತ್ತಿದ್ದಂತೆ ಪದವೀಧರ ಕ್ಷೇತ್ರ, ನಂತರ ಜಿಲ್ಲಾ ಪಂಚಾಯ್ತಿ, ತದನಂತರ ವಿಧಾನಸಭೆ, ಲೋಕಸಭೆ...... ಹನುಮಂತನ ಬಾಲದಂತೆ, ಒಂದಕ್ಕೊಂದು ಜೋಡಿಸಿಕೊಂಡು ಬರುವ ಗೂಡ್ಸ್ ರೈಲುಗಾಡಿಯ ಹಾಗೆ ಚುನಾವಣೆಗಳು ಬರುತ್ತಲೇ ಇರುತ್ತವೆ.



ಇದರಿಂದ ಯಾರಿಗೆ ಲಾಭ!!? ಮರಿಪುಡಾರಿಗಳಿಗೆ ಜೇಬಿನ ತುಂಬಾ ದುಡ್ಡೋ ದುಡ್ಡು! ಕುಡಿಯುವ ಕುಡುಕರಿಗೆ ಕೞಭಟ್ಟಿ! ಓಟಿಗೊಂದು ನೋಟು! ಪಾಪ!! ನಮ್ಮನಿಮ್ಮಂತವರ ಪಾಲಿಗೆ ಹೊಸಬಾಟಲಿಯಲ್ಲಿ ಬರುವ ಅದೇ ಈಡೇರಿಸಲಾಗದ ಹಳೇ ಭರವಸೆಗಳು!! ಇದಕ್ಕೇನು ಪರಿಹಾರ? ಇವೆಲ್ಲ ಸಮಸ್ಯೆಗಳ ಮೂಲ ಯಾವುದು? ಕಾರಣಕರ್ತರಾರು? ಹೀಗೆ ಮೂಲ ಹುಡುಕುತ್ತಾ ಹೊರಟರೆ ಎಲ್ಲಾ ಬೆಟ್ಟುಗಳು ಜನಸಾಮಾನ್ಯರಾದ ನಮ್ಮೆಡೆಗೆ!! ಎನ್ನುವುದೂ ಎಲ್ಲರೂ ಸಹ ಒಪ್ಪಲೇಬೇಕಾದ ಸತ್ಯ!!



ಅದು ಹೇಗೆ? ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಅವರ ತಪ್ಪಲ್ಲವೇ? ಎಂದು ನಾವು ಪ್ರತಿ ಪ್ರಶ್ನೆ ಹಾಕುವ ಮುನ್ನ ನಾವು ಸರಿಯಾದ ನಾಯಕರನ್ನು ಆರಿಸಿದ್ದೇವೆಯೇ? ಎಂಬ ಮತ್ತೊಂದು ಪ್ರಶ್ನೆ ಹರಿತವಾದ ಕುಡುಗೋಲಿನಂತೆ ತಯಾರಗಿರುತ್ತದೆ.



ಸದ್ಯ ಈ ಚಿಂತನೆಗೆ ಕಾರಣ ಈಗತಾನೆ ಮುಗಿದ ಬೃ, ಬೆಂ, ಮ ಪಾ, ಚುನಾವಣೆಯಲ್ಲಿ ಚಲಾವಣೆಯಾದ ಶೇಕಡಾವಾರು ಮತಗಳು. ಅದೂ ಶೇ ೪೪ ಮಾತ್ರ. ಯಾವುದೇ ಒಂದು ಜನಪ್ರತಿನಿದಿಗಳ ಸಭೆಯ ಅಧಿಕಾರ ಹಿಡಿಯಬೇಕಾದರೆ ಶೇಖಡ ೫೧ಕ್ಕಿಂತಾ ಜಾಸ್ತಿ ಸೀಟುಗಳು ಬರಬೇಕೆಂಬ ಕಾನೂನು ಇದೆ. ಹಾಗಿರುವಾಗ ಕೇವಲ ಶೇ ೪೪ರಷ್ಟು ಮತ ಚಲಾವಣೆಯಾಗಿರುವ ಈ ಚುನಾವಣೆ ನಿಜವಾಗಿಯೂ ಸಿಂಧುವೇ? ಈಗ ಚುನಾಯಿತ ಪ್ರತಿನಿದಿಗಳು ಇಡೀ ಬೆಂಗಳೂರಿಗರ ಪ್ರತಿನಿಧಿಗಳೇಗಾಗುತ್ತಾರೆ? ನಿಜಕ್ಕೂ ಚಿಂತಿಸಬೇಕಾದ ವಿಷಯವೇ..!!



"ಚುನಾವಣೆ ಬಂದರೇ ಸಾಕು ೪ ದಿನ ರಜಾ ಗ್ಯಾರಂಟಿ ಜೊತೆಗೆ ಬರೋ ಶನಿವಾರ ಮತ್ತು ಭಾನುವಾರ ಎಲ್ಲಾ ಸೇರಿದರೆ ಒಟ್ಟು ಒಂದುವಾರ ರಜ" ಎಂದು ಯೋಚಿಸುವ ಅಧಿಕಾರಿ ಮತ್ತು ಕಾರ್ಮಿಕ ವರ್ಗ,



"ಯಾರಿಗೆ ಓಟುಹಾಕಿ ಯಾರನ್ನು ಉದ್ದಾರಮಾಡಿದರೇನು? ನಾವು ಮಣ್ಣು ಹೊರುವುದು ತಪ್ಪುತ್ತದೆಯೇ?" ಎಂದು ಸಹಜ ಪ್ರಶ್ನೆಯನ್ನೇ ಕೇಳುವ ಕೂಲಿ ಮಾಡಿ ಹೊಟ್ಟೆಹೊರೆವ ಶ್ರಮಜೀವಿಗಳು.



"ಯಾರಿಗೆ ಮತ ಹಾಕಿದ್ರೂ ನಮ್ಮ ದೇಶದ ಮತ್ತು ನಮ್ಮ ಪರಿಸ್ಥಿತಿ ಇಷ್ಟೇ?!!" ಎನ್ನುವ ಸಿನಿಕವರ್ಗ ಮತ್ತೊಂದೆಡೆಯಿಂದಾಗಿ ಇಷ್ಟು ಕಡಿಮೆ ಮತದಾನವಾಗಿದೆಯೆಂದು ವಿಶ್ಲೇಷಿಸಬಹುದು. ಇದರಿಂದ ಲಾಭವಾಗಿದ್ದು ಅದೇ ದುಡ್ಡುೞುವರಿಗೆ, ಅದೇ ರೌಡಿ ಹಿನ್ನೆಲೆಯೂೞವರಿಗೆ.



ಈ ರೀತಿ ಯೋಚಿಸಿ ನಮ್ಮ ಜವಾಬ್ದಾರಿಯಿಂದ ನುಣುಚಿಕೊೞುವವರು ಯಾವುದೇ ತೊಂದರೆಗಾಳಾದಾಗ ಪ್ರತಿಭಟಿಸಲು ಮುಂದಿನ ಸಾಲಿನಲ್ಲೇ ನಿಂತಿರುತ್ತಾರೆ. ಅವರಿಗೆ ಪ್ರತಿಭಟಿಸುವ ನೈತಿಕ ಹಕ್ಕಾದರೂ ಇದೆಯೇ? ಎಂದೂ ಸಹ ಯೋಚಿಸುವುದಿಲ್ಲ. ಎಲ್ಲವನ್ನೂ ಕೇಳುವುದರಲ್ಲಿ, 'ನ್ಯೂಸೆನ್ಸ್' ಚಾನಲ್ ಗಳಲ್ಲಿ ಮುಖ ತೋರಿಸುವುದರಲ್ಲೂ ಸಹ ಮುಂದು.



ಇವರಿಗೆ ಬೇಕಾದ ನಾಯಕನಿಗೆ ಮತ ಹಾಕಿ ಅವನನ್ನು ಚುನಾಯಿಸಿದ್ದರೇ ಒೞೆಯದಾಗುತ್ತಿತ್ತೋ ಏನೋ? ಎನ್ನುವ ಆಶಾಭಾವನೆಗಾದರೂ ಮತದಾನ ಕಡ್ಡಾಯಗೊಳಿಸಬೇಕಾಗಿದೆ, ಹಾಗೂ ಇದರ ಆಗು ಹೋಗುಗಳನ್ನು ಚಿಂತಿಸಬೇಕಾಗಿದೆ.



ಮೊದಲನೆಯ ತೊಡಕು ಸಂವಿದಾನದ ತೊಡಕು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮುಂದಿಟ್ಟುಕೊಂಡು ನಮ್ಮ ಪ್ರಗತಿಪರರು ಕೂಗಾಡಬಹುದು.



ಕಡ್ಡಾಯ ಮಾಡಿದರಷ್ಟೇ ಸಾಲದು, ಮತಹಾಕದವರಿಗೆ ಶಿಕ್ಷೆಯ ಪ್ರಮಾಣವೂ ಇರಬೇಕು, ಇದು ಮತ್ತಷ್ಟು ವಿವಾದಕ್ಕೆಡೆಮಾಡುವುದೂ ಸಹ ಖಂಡಿತಾ.



ಹೊಟ್ಟೆಪಾಡಿಗಾಗಿ ಸರ್ಕಾರಿ ಕೆಲಸವೋ ಖಾಸಗಿ ಕಂಪನಿಗಳಲ್ಲೋ ಕೆಲಸಕ್ಕಾಗಿ ಪರಊರುಗಳಲ್ಲಿರುವವರು ಈ ಕಾನೂನಿಂದಾಗಿ ಬಹಳವೇ ತೊಂದರೆಗೊಳಗಾಗುವ ಸಾಧ್ಯತೆಯೇ ಹೆಚ್ಚು. ಅಲ್ಲದೇ ರೋಗಿಗಳು, ರೋಗಿಗಳ ಪೋಷಕರೂ ಈ ಕಾಯ್ದೆಯಿಂದ ತೊಂದರೆಗೊಳಗಾಗಬಹುದು.



ಒಟ್ಟಿನಲ್ಲಿ ಮೇಲಿನ ಮತ್ತಿತರ ತೊಡಕುಗಳಿಗೆ ಮೊದಲೇ ಸಾರ್ವಜನಿಕವಾಗಿ ಚರ್ಚಿಸಿ ಕಾಯಿದೆ ರೂಪಿಸಿದರೆ ಒಂದು ಒೞೆಯ ಕಾಯ್ದೆಯ ಜೊತೆಗೆ ಸಮಾಜಕ್ಕೂ ಒಳಿತಾಗಬಹುದೆಂಬ ಆಶಯ.



ಯಾರು ಯಾರಿಗಾದರೂ ಮತಹಾಕಲಿ ಅದು ಬೇರೆಯ ಪ್ರಶ್ನೆ ಒಟ್ಟಿನಲ್ಲಿ ಮತದಾನ ಕಡ್ಡಾಯವಾದರೆ ಹಣದ ಮದದಿಂದ ತೋಳ್ಬಲದಿಂದ ಚುನಾಯಿತರಾಗುತ್ತಿರುವ ರೌಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಕಡಿವಾಣ ಬಿದ್ದು ಕೆಲವರಾದರೂ ಉತ್ತಮ ರಾಜಕಾರಣಿಗಳನ್ನು ರೂಪಿಸಲು ಸಹಾಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.



ಅದಕ್ಕಾದರೂ ಮತದಾನವನ್ನು ಕಡ್ಡಾಯ ಮಾಡಲೇಬೇಕೆನಿಸುತ್ತದೆ ಅಲ್ಲವೇ?

ಅಪ್ಪ ಹಾಕಿದ ಆಲ...

ಮೂಡಲದ ಕಲ್ಲು ತಿಟ್ಟಿನ



ಕಡೇವಲದ ಕೆಂಪು ದಿಬ್ಬದ ಮೇಲಿದೆ



ನಮ್ಮಪ್ಪ ಹಾಕಿದ ಆಲ



ಬೃಹದಾಕಾರ ಬಹಳ ಬಹಳ ವಿಶಾಲ!!



ಹಿಮ ಪರ್ವತದ ಜಡೆಮುನಿಯ ಹಾಗೆ



ಜೋತುಬಿದ್ದ ಬಿಡುಬೀಸು ಬೀಳುಗಳು



ಜಗದನುಭವದ ತಿರುಳ ಎಳೆಗಳು!!



ಗೂಡು ಕಟ್ಟಲು ಹಕ್ಕಿಗಳ ಅರಚಾಟ



ಎಲೆಯಮೇಯಲು ಕುರಿ ಮೇಕೆಗಳ ಮೇಲಾಟ!!



ಇಂತಿಪ್ಪ ಮರದ ನೆಳಲ ಒಳಗೆ



ಸೂರ್ಯ ಜಾರಿ ಮೈ ಮರೆಯುವಮುನ್ನ



ಸೋಲು, ಹತಾಶೆಯ 'ಹ್ಯಾಪು' ಮೋರೆ ಹಾಕಿ



ಪ್ರಾಣ ಹರಣಕೆ ನಿಂತೆ!!!



"ಮಗು!"



ಎಷ್ಟು ಕಕ್ಕುಲತೆಯ ಧನಿ!



ಚಿಂತೆಗೆ ಸಿಂಚಿಸಿತು ಮಂಜಿನ ಮಳೆಹನಿ!!



ಶಿರವೆತ್ತಿ ನೋಡಿದೆ!!



''ನಿಮ್ಮಪ್ಪ ನನ್ನನ್ನು ಬೆಳೆಸಿದ್ದು ನಿನ್ನ ನೆರಳಿಗೆ!!



ಕೊರಳಿಗಲ್ಲ!!"



ಮನದ ಮೂಲೆಯಲಿ ಇಬ್ಬಗೆಯ ತಾಕಲಾಟ!



ತೋಚದ ತೊಳಲಾಟ!!



"ಚಿತೆಯೇರಲು ದಾರಿ ಬರಿ ನೂರು!



ಬದುಕ ಬಂಡಿಯೆಳೆಯಲು ಸಹಸ್ರಾರು,



ಸೋತೆನೆಂದು ಕುಗ್ಗಬೇಡ



ಗೆಲ್ಲಿಸಿದವರನು ತೊರೆಯಬೇಡ!!



ಪ್ರಯತ್ನದ ಫಲ ನಿನಗುಂಟು!"



ಕಾಣದ ಜಾಗದಲ್ಲಿ ಬೀಡು ಬಿಟ್ಟಿದ್ದ



ಸಾವೆಂಬ ಪದ, ನನ್ನೊಳಗಣ ತಾಮಸಿಯ ತಮವನ್ನು



ನಮ್ಮಪ್ಪಹಾಕಿದ ಆಲ!!



ತೊಳೆದು ಓಡಿಸಿತ್ತು!!

ಯಶಸ್ಸಿನ ನಶೆ.............

ಘಟನೆ -೧
ಸುಮಾರು ೨೦೦೨-೨೦೦೩ ನೇ ಇಸವಿಯ ಮಧ್ಯಭಾಗದಲ್ಲಿ ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಮೀಟಿಂಗ್ ಮುಗಿದ ನಂತರ ನಮ್ಮ ಬ್ಯಾಗುಗಳನ್ನು ಹೋಟೆಲ್ ಲಾಡ್ಜ್ ನಲ್ಲಿ ಇಟ್ಟು ಸ್ನೇಹಿತರೊಡನೆ ತಿರುಗಲು ಹೊರಟೆ. ತ್ರಿಭುವನ್ ಥಿಯೇಟರ್ ಬಳಿ ಬಂದಾಗ
"ಲೋ ಉಮಾ!!.....ಲೋ!!...."ಎಂದು ಯಾರೋ ಕೂಗಿದಂತಾಯ್ತು.




ಏನಾಶ್ಚರ್ಯ!!??!! ಕೆಲ ಧಾರಾವಾಹಿ ಮತ್ತಷ್ಟು ಚಲನಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಮುಖತೋರಿಸಿ ಪ್ರವರ್ಧಮಾನಕ್ಕೆ ಬರುತ್ತಿದ್ದ ನನ್ನ ಹೈಸ್ಕೂಲ್ ಸಹಪಾಠಿ...! ಅದೂ ಸುಮಾರು ೧೦ ವರ್ಷಗಳ ನಂತರ ಭೇಟಿಯಾಗುತ್ತಿದ್ದಾನೆ.
"ಓಹೋ....!!! ಏನ್ ಸರ್ ಸಮಾಚಾರ!! ಚೆನ್ನಾಗಿದೀರಾ..? ಕುಶಲೋಪರಿ ವಿಚಾರಿಸಿದೆ.
"ಏಯ್! ಏನ್ಲಾ ಇದು? ಸರ್ರು ಗಿರ್ರು ಅಂತೆಲ್ಲಾ ಬಯ್ಯೋದ್ ಕಲ್ತಿದ್ದೀಯಾ?" ಎಂದು ಕೆಣಕಿದ
"ಏನೇ ಹಾದ್ರೂ ನೀನು ಸ್ಟಾರ್ರು ನಾವು ಬರೀ ಪ್ರೇಕ್ಷಕರು.." ನಾನೂ ಮಾತಿನಲ್ಲೇ ಕಾಲೆಳೆದೆ.
"ನೋಡಮ್ಮ ನಾವೆಷ್ಟೇ ಎತ್ತರಕ್ಕೋದ್ರು ನಮ್ಮೋರು ನಮ್ಮತನವನ್ನ ಯಾವತ್ತಿಗೂ ಮರೀಬಾರ್ದು, ಅನ್ನೋದು ನನ್ನ ಪ್ರಿನ್ಸಿಪಲ್. ಕಾಫಿ ...?" ಎಂದ ಥೇಟ್ ಸಿನಮಾ ಸ್ಟೈಲ್ ನಲ್ಲಿ. ಬಹಳ ಖುಷಿಯಾಯ್ತು ಅವನ ಮಾತುಗಳನ್ನು ಕೇಳಿ. ಕಾಫಿ ಸಮಾರಾಧನೆಯ ಜೊತೆಗೆ ನನ್ನ ಸಹೋದ್ಯೋಗಿಗಳಿಗೂ ಅವನನ್ನು ಪರಿಚಯಿಸಿದೆ. ಹೈಸ್ಕೂಲ್ ನಲ್ಲಿ ಜೊತೆಜೊತೆಗೆ ನಾಟಕಗಳನ್ನು ಆಡಿದ್ದು, ನಂತರ ಕಾಲೇಜಿನ ಕ್ಯಾಂಟೀನಿನಲ್ಲಿ ಕದ್ದು ಜೊತೆಯಾಗಿ ಸಿಗರೇಟ್ ಸೇದಿದ್ದು.... ಇತ್ಯಾದಿ ಗಳನ್ನು ಮೆಲುಕು ಹಾಕುತ್ತಾ ಸ್ನೇಹಿತರೊಡನೆ ಬೀಳ್ಕೊಟ್ಟು ಹೊರಟುಬಂದೆ. ನಂತರ ಬೆಂಗಳೂರಿಗೆ ಹೋದಾಗ ಆಗಾಗ ನಮ್ಮ ಭೇಟಿಯಾಗುತ್ತಿತ್ತು. ಈಗ್ಗೆ ಸುಮಾರು ೪ ವರ್ಷಗಳಿಂದೀಚೆಗೆ ಆಗಿರಲಿಲ್ಲ
ಮೊನ್ನೆ ಸುಮಾರು ೧೫ ದಿನಗಳ ಕೆಳಗೆ ಮೈಸೂರಿನಲ್ಲಿ ಯಾವುದೋ ಡಾಕ್ಟರ್ ಬಳಿ ಕಾಯುತ್ತಾ ಕುಳಿತಿದ್ದೆ. ಅರೆ! ಅವನೆ ಅದೂ ೪ ವರ್ಷಗಳ ನಂತರ ಜೊತೆಯಲ್ಲಿ ಅವನ ಶ್ರೀಮತಿ ಮತ್ತು ಒಂದು ಮುದ್ದಾದ ಮಗು. ಈಗಂತೂ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ಪಾತ್ರಗಳಲ್ಲಿ ಇವನು ಇರಲೇಬೇಕು ಎನ್ನುವಷ್ಟು ಜನಪ್ರಿಯತೆ!
ಸುತ್ತಮುತ್ತಲೂ ಇತರೆ ಕಂಪನಿಗಳ ಪ್ರತಿನಿಧಿಗಳು ನನ್ನ ಹಾಗೆ ವೈದ್ಯರ ಭೇಟಿಗೆ ಕಾಯುತ್ತಾ ಕುಳಿತಿದ್ದರು. ಈಗ ಇಂತಾ ಜನಪ್ರಿಯ ನಟನನ್ನು ಮಾತನಾಡಿಸಿದರೆ ಅವರೆಲ್ಲರ ಮುಂದೆ ನನ್ನ "ತೂಕ" ಇನ್ನು ಹೆಚ್ಚಬಹುದೆನ್ನಿಸಿತು. ಎಷ್ಟೇ ಆಗಲಿ ನಾನೂ ಸಹ ಸಾಮಾನ್ಯ ಮಾನವ ಹಾಗೆ ಯೋಚನೆ ಬಂದಿದ್ದರಲ್ಲಿ ತಪ್ಪೇನು ಇಲ್ಲವೆನಿಸಿತು. ತತ್ ಕ್ಷಣ ಅವನ ಮುಂದೆ ನಿಂತು
"ಹಾಯ್!!.. ಹೇಗಿದ್ದೀಯಾ?" ಎಂದೆ
ಎಲ್ಲರೂ ಆಶ್ಚರ್ಯದಿಂದ ನನ್ನೆಡೆಗೆ ನೋಡುತ್ತಿದ್ದರು! ನನ್ನೊಳಗಿನ ಅಹಂ ಮತ್ತಷ್ಟು ಬಲಿಷ್ಟವಾಯ್ತು.. ಕುತ್ತಿಗೆ ಪಟ್ಟಿ ನೀವುತ್ತಾ ಸ್ವಲ್ಪ ಅವನ ಹತ್ತಿರ ಹೋಗಿ
ಇನ್ನೊಮ್ಮೆ
"ಹಾಯ್.......!" ಎಂದೆ
ಆ ನಟ ನನ್ನೆಡೆಗೆ ತಿರುಗಿದ..
"...ಆ...ಆಹಾಯ್...!" ಬಹಳ ಪ್ರಾಯಾಸದಿಂದ, ಅಸಹ್ಯಭಾವದ ಧ್ವನಿ, ಅಪರಿಚಿತರೆಡೆಗೆ ನೋಡುವ ನೋಟ, ಆತನಿಂದ ನನ್ನೆಡೆಗೆ...???
"...ನಾನೂ.........!" ಮಾತು ಮುಂದುವರೆಸಲು ಪ್ರಯತ್ನಿಸಿದೆ...
"ನೀವ್ಯಾರೋ ಗೊತ್ತಾಗ್ಲಿಲ್ವಲ್ಲ?" ಮತ್ತದೇ ಧ್ವನಿ ಕೇಳಿ ಯಾರೋ ಎಕ್ಕಡದಿಂದ ಕೆನ್ನೆಗೆ ಬಾರಿಸಿದಂತಾಯ್ತು.
ತಕ್ಷಣ ಸಾವರಿಸಿಕೊಂಡೆ...
"....ಹಾ..ಹಾ..ಹಾಯ್..! ನೀವು '.......... ' ಅವರಲ್ವ?!? ಅದಕ್ಕೆ ಮಾತಾಡಿಸ್ದೆ ! ಸಾರಿ..!" ಅಂದೆ
"ಓಕೆ ! ಬಾಯ್!" ಅಂದವ ನನ್ನ ಪ್ರತಿಕ್ರಿಯೆಗೂ ಕಾಯದೆ ಸಂಸಾರದೊಡನೆ ಹೊರಟು ಹೋದ...



ಅದನ್ನೆಲ್ಲ ನೋಡುತ್ತಿದ್ದ ವೈದ್ಯರು ನಾನು ಒಳಹೋದ ನಂತರ



''ಏನ್ ಉಮಾ? ''........" ಅವರು ನಿಂಗೆ ಗೊತ್ತಾ?" ಅಂದರು. ಏನ್ ಹೇಳ್ಬೇಕು ಅಂತ ಒಂದು ಕ್ಷಣ ತಿಳೀಲಿಲ್ಲ....... ಆದರೂ ಸಾವರಿಸಿಕೊಂಡು



"ಅಯ್ಯೋ... ಅವರ್ಯಾಗೊತ್ತಿಲ್ಲಾ ಸರ್!! ಇಡೀ ಕರ್ನಾಟಕಕ್ಕೇ ಗೊತ್ತು......" ಅಂತ ಆ ವಿಷಯವನ್ನು ಹಾಗೆ ತೇಲಿಸಿ ನನ್ನ ಕೆಲಸ ಮುಗಿಸಿ ಹೊರ ಬಂದೆ.







ಘಟನೆ - ೨
ಮೊನ್ನಿನ ಶುಕ್ರವಾರ ಬೆಳ್ಳಂಬೆಳಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬರುವಾಗ ದಾರಿಯಲ್ಲಿ ಸಿಕ್ಕಾಪಟ್ಟೆ ಜನ ಸೇರಿದ್ದರು. "ಏನಿದು? ಜನ ೭ ವರೆಯಾದ್ರೂ ಕೆಲ್ಸಾ ಕಾರ್ಯ ಬಿಟ್ಟು ಇಲ್ಲಿ ಜಮಾಯ್ಸಿದ್ದಾರಲ್ಲ" ಅಂತ ಹತ್ತಿರ ಹೋಗಿ ನೋಡಿದರೆ ಅಲ್ಲಿ ದುನಿಯಾ ವಿಜಯ್ ರವರು ನಟಿಸುತ್ತಿರುವ "ಕರಿ ಚಿರತೆ" ಚಿತ್ರದ ಚಿತ್ರೀಖರಣ!
ಕುತೂಹಲದಿಂದ ನಾನೂ ವೀಕ್ಷಿಸಲು ಜಂಗುಳಿಯಲ್ಲಿ ಒಬ್ಬನಾದೆ. ಯಾವುದೋ ಬೈಕ್ ಚೇಸಿಂಗ್ ದೃಷ್ಯದ ಚಿತ್ರೀಕರಣ.
ಮದ್ಯದಲ್ಲಿ ವಿಜಯ್ ಗೆ ಸ್ವಲ್ಪ ರೆಸ್ಟ್. ವಿಜಯ್ ರವರ ಬೆನ್ನ ಹಿಂದೆ ಎನ್ನುವಷ್ಟು ಸನಿಹದಲ್ಲೇ ನಿಂತಿದ್ದೆ.. ಅವರ ಎದುರಿಗೆ ಒಬ್ಬ ವ್ಯಕ್ತಿ ಜನರ ನಡುವೆ ಮುನ್ನುಗ್ಗಿ ಮುಂದೆ ಬರಲು ತಿಣುಕಾಡುತ್ತಿದ್ದ..
"ಹಾಯ್! ಏನ್ ಮಗ ..........ಗುರು ಸ್ವಲ್ಪ ಜಾಗ ಬಿಡ್ರಪ್ಪ ! ಅವರಿಗೆ.." ಅಂತ ತಮ್ಮ ಗಡುಸು ಧ್ವನಿಯಲ್ಲಿ ಹೇಳಿ ಆ ವ್ಯಕ್ತಿಯನ್ನು ತನ್ನೆಡೆಗೆ ಕರೆಸಿ ಮಾತನಾಡತೊಡಗಿದರು...
"ಎಷ್ಟು ವರ್ಷ ಆಯ್ತು ಮಗ ನಿನ್ನ ನೋಡಿ.. ಹೇಗಿದ್ದೀಯಾ?...." ಆ ಅಪರಿಚಿತನ ಹೆಗಲ ಮೇಲೆ ವಿಜಯ್ ರವರ ಆಪ್ತ ಅಪ್ಪುಗೆ... ಹಾಗೆ ಅವರಿಬ್ಬರ
ಮಾತು ಮುಂದುವರಿದಿತ್ತು. ಬಹುಶಃ ಅವರಿಬ್ಬರೂ ತಮ್ಮ ಫ್ಲ್ಯಾಶ್ ಬ್ಯಾಕ್ ಗೆ ಹೋಗಿರಬೇಕು.
ನನ್ನ ಮೆದುಳು ಈ ಹಿಂದಿನ ಘಟನೆಯನ್ನು ಮೆಲುಕುಹಾಕುತ್ತಾ...ಇತ್ತು
ಹಾಗೆ ಆ ನಟನ ಬದಲು ಯಶಸ್ಸಿನ ನಶೆಯೇರಿಸಿಕೊಳ್ಳದ ಈ ವಿಜಯ್ ನನ್ನ ಸ್ನೇಹಿತನಾಗಬಾರದಿತ್ತೇ? ಅನ್ನಿಸಿತು..
ಅಷ್ಟರಲ್ಲಿ ಮನೆ ತಲುಪಿದ್ದೆ...

ನಮ್ಮತನವನ್ನು, ನಮ್ಮ ಸಂಸ್ಕೃತಿಯನ್ನು ನಾವೇ ಹೀಯಾಳಿಸಿಕೊಂಡರೆ ಅದು ಪ್ರಗತಿಪರ ಚಿಂತನೆಯೇ?

ಏನೂ?!!?? ನನಗೂ ಗೊತ್ತಾಗುತ್ತಿಲ್ಲ. ಅದರಲ್ಲೂ ಗೋಹತ್ಯೆ ನಿಷೇದ ಕಾಯ್ದೆ ಮಂಡಿಸುವ ಮೊದಲು ಮತ್ತು ವಿದೇಯಕದ ನಂತರ ನಮ್ಮ "ಪ್ರಗತಿಪರರು" ಮೈ ಪರಚಿಕೊಳ್ಳುವುದನ್ನು ನೋಡಿದರೆ ಹೀಗನ್ನಿಸುವುದೂ ನ್ಯಾಯವೇ. ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಿದ್ದ ಮುಸಲ್ಮಾನರೇ "ಬೇರೆಯವರ ಮನಸ್ಸಿಗೆ ನೋವಾಗುವುದಾದರೆ ನಮಗೆ ಅದರ ಮಾಂಸವೇ ಬೇಡ, ಬಿಡಿ" ಎಂದು ಸುಮ್ಮನಿರುವಾಗ ಮಧ್ಯದಲ್ಲಿ ಇವರ ಒಗ್ಗರಣೆ ಯಾಕೆ? ಅನ್ನುವುದು ಯಾವತ್ತಿಗೂ ಅರ್ಥವಾಗದಿರುವ ಯಕ್ಷ ಪ್ರಶ್ನೆ..



ಅಂದ ಮಾತ್ರಕ್ಕೆ ಈ ಕಾಯ್ದೆಯಲ್ಲಿ ಲೋಪಗಳೇ ಇಲ್ಲವೆಂದಲ್ಲ, ಈ ಹಿಂದೆ ಇದ್ದ ಕರ್ನಾಟಕ ಗೋಹತ್ಯಾ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ-೧೯೬೪ ರ ಬದಲಿಗೆ ಈ ಹೊಸ ಮಸೂದೆ ಜಾರಿಗೆ ಬರಲಿದೆ. ೧೯೬೪ರ ಕಾಯಿದೆ, ಗೋಹತ್ಯೆಯನ್ನು ನಿಷೇಧ ಮಾಡಿದ್ದರೂ ೧೨ ವರ್ಷಕ್ಕೆ ಮೇಲ್ಪಟ್ಟ ಹಸು, ಎಮ್ಮೆ, ದನ, ಕೋಣ ಇನ್ನಿತರ ಜಾನುವಾ ರುಗಳನ್ನು ಕೊಲ್ಲಲು ಅವಕಾಶ ನೀಡಲಾಗಿತ್ತು. ಆದರೆ ಈ ಹೊಸ ಕಾಯಿದೆ ಹಸುಗಳನ್ನೂ ಒಳಗೊಂಡಂತೆ ಕರು, ಎತ್ತು, ಕೋಣ, ಎಮ್ಮೆ ಮತ್ತದರ ಕರು ಎಲ್ಲವನ್ನೂ ಜಾನುವಾರು ಎಂದೇ ನಿರ್ವಚನ ಮಾಡುತ್ತದಲ್ಲದೆ ಅವುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಪೊಲೀಸರ ಮತ್ತು ಸರ್ಕಾರದ ದ್ವೇಷ ರಾಜ ಕಾರಣ ಮತ್ತು ಆಡಳಿತವನ್ನು ನೋಡಿದವರಿಗೆ ಮಸೂದೆಯ ಈ ಅಂಶ ತಳಮಟ್ಟದಲ್ಲಿ ಪೊಲೀಸರಿಗೆ ಎಂಥಾ ಸರ್ವಾ ಧಿಕಾರವನ್ನು ಕೊಡುತ್ತದೆ ಎಂಬುದು ಗೊತ್ತಾಗುತ್ತದೆ. ಉದಾ ಹರಣೆಗೆ ‘ಅಪರಾಧ’ ಸಂಭವಿಸಿದೆ ಯೆಂದು ತನಿಖೆ ಮಾಡುವ ಅಧಿಕಾರಿಗೆ ಅಲ್ಲಿ ದನದ ಮಾಂಸದ ಬದಲಿಗೆ ಕುರಿ ಮಾಂಸ ಸಿಕ್ಕರೂ ಅದು ದನದ ಮಾಂಸವೆಂಬ ‘ಅನುಮಾನ’ದ ಮೇಲೆ ಬಂಧಿಸಬಹುದು. ಏಕೆಂದರೆ ಅದು ದನದ ಮಾಂಸವಲ್ಲ ಎಂದು ಸಾಬೀತಾಗಬೇಕಿರುವುದು ಕೋರ್ಟಿನಲ್ಲಿ!



ಈ ಮಸೂದೆ ರಾಜ್ಯದ ಎಲ್ಲಾ ರೈತರನ್ನೂ ಸಂಭವನೀಯ ಅಪರಾಧಿಗಳನ್ನಾಗಿಸುತ್ತದೆ. ಈ ಕಾಯಿದೆಯ ಸೆಕ್ಷನ್ (೮) ‘ಜಾನುವಾರುಗಳನ್ನು ಕೊಲ್ಲುವ ಉದ್ದೇಶದಿಂದ ಮಾರುವುದು, ಕೊಳ್ಳುವುದು, ಅಥವಾ ಪರಭಾರೆ ಮಾಡುವುದನ್ನು ನಿಷೇಧಿಸುತ್ತದೆ’. ಇದರ ಪ್ರಕಾರ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಿದರೆ ಮಾತ್ರವಲ್ಲ, ಆ ದನಗಳನ್ನು ಕೊಲ್ಲುವ ಉದ್ದೇಶಕ್ಕೆ ಕೊಳ್ಳಲಾಗುತ್ತಿದೆ ಎಂದು ಗೊತ್ತಿದ್ದರೆ, ಅಥವಾ ದನಗಳನ್ನು ಕೊಲ್ಲಲೆಂದೇ ಕೊಳ್ಳಲಾಗುತ್ತಿದೆ ಎಂದು ನಂಬುವ ಕಾರಣವಿದ್ದೂ ಮಾರಿದರೆ ಅವರನ್ನೂ ಸಹ ಈ ಮಸೂದೆ ಅಪರಾಧಿಯನ್ನಾಗಿಸುತ್ತದೆ. ಆದರೆ ರೈತನಿಗೆ ‘ಕೊಲ್ಲಲೆಂದು ಕೊಳ್ಳಲಾಗುತ್ತಿದೆ’ ಎಂದು ನಂಬುವ ಕಾರಣವಿತ್ತು ಎಂಬುದನ್ನು ನಿರ್ಧರಿಸುವವರು ಸರ್ಕಾರಿ ಅಧಿಕಾರಿಗಳು!



ಈ ಕಾಯಿದೆಯಡಿ ಸಂಭವಿಸುವ ಅಪರಾಧಕ್ಕೆ ನೀಡಲಾಗುವ ಶಿಕ್ಷೆಗಳ ಪ್ರಮಾಣ. ಸೆಕ್ಷನ್ (೧೨)ರಲ್ಲಿ ನಿಗದಿ ಪಡಿಸಿರುವಂತೆ ಜಾನುವಾರು ಹತ್ಯೆ ಮಾಡಿದ ಅಪರಾಧಕ್ಕೆ ಒಂದು ವರ್ಷದಿಂದ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೨೫,000 ರೂ.ಗಳಿಂದ ೧,00,000 ರೂ.ವರೆಗೆ ಜುಲ್ಮಾನೆ. ಭಯೋತ್ಪಾದನೆ, ಉದ್ದೇಶ ಪೂರ್ವಕ ಕೊಲೆ, ಬಲಾತ್ಕಾರ, ಕಳ್ಳಸಾಗಣೆ, ಭ್ರಷ್ಟಾಚಾರಗಳಿಗೂ ಈ ಪ್ರಮಾಣದ ಶಿಕ್ಷೆಯನ್ನು ಇಂಡಿಯನ್ ಪೀನಲ್ ಕೋಡ್ ವಿಧಿಸುವುದಿಲ್ಲ. ಅದೇ ರೀತಿ ಈ ಕಾಯಿದೆಯಡಿ ಎಸಗಲಾಗುವ ಇತರ ಅಪರಾಧಗಳಿಗೆ ಎಂದರೆ ದನದ ಸಾಗಾಟ ಮಾಡುವುದು, ದನದ ಪರಭಾರೆ ಮಾಡುವುದು, ದನದ ಮಾಂಸ ತಿನ್ನುವುದು, ತಿನ್ನಲು ಪ್ರೋತ್ಸಾಹಿಸುವುದು ಹಾಗೂ ಇನ್ನಿತರ ಅಪರಾಧಗಳಿಗೆ ಒಂದು ವರ್ಷದಿಂದ ಮೂರು ವರ್ಷದ ಸಜೆ ಮತ್ತು ೧0,000 ರೂ -೨೫,000 ರೂ.ವರೆಗೆ ಜುಲ್ಮಾನೆ ವಿಧಿಸಬಹುದಾಗಿದೆ.
,ಮೇಲಿನ ಕಾರಣಗಳಿಂದಾಗಿ ಈ ಕಾಯ್ದೆಯನ್ನು ವಿರೋಧಿಸುವವರನ್ನು ನಾನು ಬೆಂಬಲಿಸುತ್ತೇನೆ. ಅದು ಬಿಟ್ಟು ಬೇರೆಯ ಧರ್ಮದವರಿಗೆ ನೋವಾಗುತ್ತದೆ, ಜ್ಯಾತ್ಯಾತೀತತೆ, ಇತ್ಯಾದಿ ಕಾರಣನೀಡಿದರೆ ಅದು ಪ್ರಗತಿಪರ ಚಿಂತನೆಯೆನಿಸುವುದಿಲ್ಲ. ಜೊತೆಗೆ ಅವರ ಹಿಂದಿನ ಚಿಂತನಾಲಹರಿಯನ್ನು ಗಮನಿಸಿ.



ಮರ್ಯಾದಾಪುರುಷೋತ್ತಮ ಶ್ರೀರಾಮ ಮರ್ಯಾದೆಯಿಲ್ಲದವನು, ಶ್ರೀಕೃಷ್ಣ ಸ್ತ್ರೀಲೋಲ, ಪಾಂಡವರಿಂದ ದುರ್ಯೋದನನಿಗೆ ಅನ್ಯಾಯವಾಯ್ತು, ಅವರೇ ಅಧರ್ಮಿಗಳು, ರಾವಣ ಸೀತೆಯನ್ನು ಅಪಹರಿಸಿದ್ದು ನ್ಯಾಯ ........... ಇತ್ಯಾದಿ, ಇತ್ಯಾದಿಯಾಗಿ ಪುಖಾನುಪುಂಖವಾಗಿ ಬಾಯಿಗೆ ಬಂದಂತೆ ಬರೆದು ತಮ್ಮ ತೆವಲು ತೀರಿಸಿಕೊಂಡವರು ಇದೇ (ಅ)ಜ್ನಾನಪೀಠಿಗಳು, ಇದೇ ಪ್ರಗತಿಪರ ಮುಖವಾಡದವರು. ಕೆಲ ವಿಚಾರಗಳು ಕೆಲ ಕೋನಗಳಲ್ಲಿ ಶ್ರೀರಾಮನ ವಿಚಾರದಲ್ಲಿ ಇವರು ಹೇಳುವಂತೆ ಸರಿ ಅನ್ನಿಸಬಹುದು ಆದರೆ ನಾವ್ಯಾಕೆ ಅವನಲ್ಲಿರುವ ಕೆಲವೇ ಕೆಲ ನೆಗೆಟಿವ್ ಅಂಶಗಳನ್ನು ಗಮನಿಸಬೇಕು ಅವನಲ್ಲಿರುವ ಗುಣಗಳು ಆ ಶ್ರೀರಾಮನೆಂಬ ಪಾತ್ರ ಯಾವತ್ತಿಗೂ ಸರ್ವಕಾಲದಲ್ಲೂ ಮಾದರಿ ಪುರುಷನೇ ಅಲ್ಲವೇ? ಆ ಪಾತ್ರವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಒಳ್ಳೆಯದು ಕೆಟ್ಟದರ ನಡುವಿನ ವ್ಯತ್ಯಾಸ ತಿಳಿ ಹೇಳಿ ಒಂದು ಆರೋಗ್ಯಕರ ಸಮಾಜವನ್ನು ಕಟ್ಟುವುದು ಈ ಪ್ರಗತಿಪರರ ಜವಾಬ್ದಾರಿಯಲ್ಲವೇ?



ಶ್ರೀಕೃಷ್ಣ ಸ್ತ್ರೀಲೋಲನೇ ಆಗಿರಲಿ ಬಿಡಿ ಅವನ ರಾಜನೀತಿಗಳು, ಆರ್ಥಿಕ ಚಿಂತನೆಗಳು ಯಾವ ಮೇನೇಜ್ ಮೆಂಟ್ ಗುರುವೂ ಸಹ ಕಲಿಯಲೇಬೇಕಾದದ್ದಲ್ಲವೇ? ಅವುಗಳನ್ನು ಯುವಜನತೆಗೆ ತಿಳಿಸಿಕೊಡಬೇಕಾದದ್ದು ಸಮಾಜವನ್ನು ಪ್ರಗತಿಯೆಡೆಗೆ ಸೆಳೆಯಬೇಕಾದದ್ದು ಈ ಪ್ರಗತಿಪರರ ಕೆಲಸವಲ್ಲವೇ?



ಇದೇ ಯಡ್ಡ್ಯೂರಪ್ಪನವರು ರಾಜ್ಯದ ಜನತೆಯನ್ನು ಕರೆಂಟ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿಸಿ ಆನಂದ ಪಡುತ್ತಿರುವಾಗ ಅವರ ಕಿವಿ ಹಿಂಡಿ ಕರೆಂಟ್ ಕೊಡಿಸಬೇಕಾದ್ದು ಈ ಪ್ರಗತಿಪರರ ಕೆಲಸವಲ್ಲವೇ?



ಖೇಣಿಯಂತಹ ಭೂಗಳ್ಳರು ಒಂದೆಡೆಯಿಂದ ಕರ್ನಾಟಕವನ್ನು ಮಾರಿಕೊಂಡು ಬರುತ್ತಿರುವುದನ್ನು ತಡೆಯಲು ಜನರಲ್ಲಿ ಅರಿವು ಮೂಡಿಸಿ ಸರಕಾರ ಕಣ್ಣುತೆರೆಯುವಂತೆ ಮಾಡುವುದು ಈ ಪ್ರಗತಿಪರರ ಚಿಂತನೆಯ ಹಾದಿಯಲ್ಲವೇ?



ಈ ರೀತಿ ಮಾಡಲು ಬೇಕಾದಷ್ಟು ಕೆಲಸವಿರುವಾಗ ಇವರು ಪರಚಿ ಕಿರುಚಿಕೊಳ್ಳುತ್ತಿರುವುದಾದರೂ ಏತಕ್ಕೆ? ಗೋಹತ್ಯೆ ನಿಷೇದ ಕಾಯ್ದೆಗೆ. ನಿಷೇದಿಸಿದರೆ ತಪ್ಪೇನು? ಎಂದು ಇವರನ್ನು ಕೇಳಿನೋಡಿ.



"ಇದು ಜ್ಯಾತ್ಯಾತೀತ ವಿರೋದಿ" ಅನ್ನುತ್ತಾರೆ.



ಹೇಗೆ? ಅಂತ ಮತ್ತೊಮ್ಮೆ ಕೇಳಿದರೆ ಉತ್ತರ ಗೊತ್ತಿರುವುದಿಲ್ಲ, ಮತ್ತೂ ಕೆದಕಿದರೆ ಆ ಉತ್ತರವನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಒಂದು ಪಿಹೆಚ್. ಡಿ ಪಡೆದುಬಿಡಬಹುದೇನೋ?



ಇದೆಲ್ಲವನ್ನು ಬದಿಗಿಟ್ಟು ಸ್ವಲ್ಪ ಗೋವುಗಳ ಬಗ್ಗೆ ಚಿಂತಿಸೋಣ.



ಸುಮಾರು ೧೦-೧೫ ವರ್ಷಗಳ ಕೆಳಗೆ ಸುಮಾರು ೮೦೦ ಮನೆಗಳಿರುವ ನನ್ನ ಹುಟ್ಟೂರು ಬಿದರಕೋಟೆಯಲ್ಲಿ ಏನಿಲ್ಲವೆಂದರೂ ೩೫೦ ಹೆಚ್ಚು ಮನೆಗಳಲ್ಲಿ ಹೊಲ-ಗದ್ದೆ ಕೆಲಸಗಳಿಗಾಗಿ ಎತ್ತುಗಳನ್ನು ಸಾಕುತ್ತಿದ್ದರು. ಆದರೆ ಇಂದು ೪೦-೫೦ ಮನೆಗಳಲ್ಲೂ ಸಹ ಎತ್ತುಗಳು ಇಲ್ಲ. ಏಕೆಂದರೆ ನಾಟಿ ಹಸುಗಳನ್ನು ಸಾಕಲು ಜನಗಳು ಸಿದ್ದವಿದ್ದರೂ ಆ ತಳಿಗಳೇ ವಿನಾಶದ ಅಂಚಿನಲ್ಲಿರುವುದು, ಅವುಗಳನ್ನು ಸಾಕಲು ಆಗುವ ಖರ್ಚುವೆಚ್ಚಗಳು ಹೆಚ್ಚಾಗಿರುವುದು, ಅವುಗಳನ್ನು ಸಲಹಲು ಜಾಗದ ಕೊರತೆ (ಏಕೆಂದರೆ ಅವಿಭಕ್ತ ಕುಟುಂಬಗಳು ಒಡೆದು ಒಂಟಿ ಕುಟುಂಬಗಳಾಗಿವೆ ಅದರ ಜೊತೆ ಜೊತೆಗೆ ಎಕರೆಗಟ್ಟಲೆ ಜಾಗಗಳು ಕೆಲ ಕುಂಟೆಗಳಿಗೆ ಇಳಿದಿವೆ). ಎಲ್ಲಕ್ಕಿಂತ ಹೆಚ್ಚಾಗಿ ಗೋವುಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎನ್ನುವುದು ಎಲ್ಲರು ಒಪ್ಪಬೇಕಾದ ಸತ್ಯ. ಅವುಗಳ ಹತ್ಯೆಯನ್ನು ನಿಷೇದಿಸಿ ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಲ್ಲವೇ? ಪ್ರಿಯ ಪ್ರಗತಿಪರರೇ? ಅಷ್ಟಕ್ಕೂ ವಾಣಿಜ್ಯಪ್ರಾಣಿಗಳಾದ ಕುರಿ,ಮೇಕೆ, ಕೋಳಿಗಳ ಹತ್ಯೆಯನ್ನೇನು ನಿಷೇದಿಸಿಲ್ಲವಲ್ಲ. ಮಾಂಸ ಪ್ರಿಯರು ಅವುಗಳನ್ನು ತಿಂದು ಆನಂದಿಸಬಹುದಲ್ಲವೇ?



ಇನ್ನಾದರೂ ಸ್ವಲ್ಪ ಪ್ರಗತಿಪರ ಚಿಂತನೆ ನಡೆಯಲಿ. ಇಲ್ಲವಾದಲ್ಲಿ



" ಇಟ್ಟರೆ ಸಗಣಿಯಾದೆ



ಬಿಟ್ಟರೆ ಗೊಗ್ಗರವಾದೆ



ತಟ್ಟಿದರೆ ಬೆರಣಿಯಾದೆ



ಸುಟ್ಟರೆ ವಿಭೂತಿಯಾದೆ



ನೀನಾರಿಗಾದೆಯೋ? ಎಲೆಮಾನವ



ಎಂದು ಗೋವುಗಳು ಹಾಡಿ ಅಣಕಿಸಿಬಿಟ್ಟಾವು?

ಮೀಡಿಯಾದವರಿಗೆ 'ನ್ಯೂಸ್' ಮುಖ್ಯವೋ? ''ನ್ಯೂಸೆನ್ಸ್" ಮುಖ್ಯವೋ?

ಹೌದು! ಇದು ನನ್ನನ್ನು ಬಹಳವಾಗಿ ಕಾಡುತ್ತಿರುವ ಬಹುಕಾಲದ ಉತ್ತರ ಸಿಗದ ಪ್ರಶ್ನೆ! ಅದ್ರಲ್ಲೂ ಮೊನ್ನೆ ನಡೆದ ಬೆಂಗಳೂರಿನ ಕಟ್ಟಡವೊಂದರ ಅಗ್ನಿದುರಂತದ ವರದಿಗಳನ್ನು ವೀಕ್ಷಿಸುತ್ತಿದ್ದಾಗ...!!????



ಅಲ್ಲಿಂದ ವರದಿಮಾಡುತ್ತಿದ್ದ ವರದಿಗಾರರು ಬಳಸುತ್ತಿದ್ದ ವಾಕ್ಯಗಳು ಆ ಸುದ್ದಿಯ ತೀವ್ರತೆಗಿಂತ ವಾಕರಿಕೆ ಬರಿಸುವಂತಿದ್ದದ್ದು ಇಂದಿನ ನ್ಯೂಸ್ ಚಾನೆಲ್'ಗಳು ವಿಕೃತ ಮನಸ್ಸಿನವೇನೋ ಎಂದು ಯಾರಿಗಾದರೂ ಅನ್ನಿಸಲು ಸಾಧ್ಯ.



ಈಗ್ಯೆ ೪-೫ ವರ್ಷಗಳ ಹಿಂದೆ ನಾನು ವಿಶಾಖಪಟ್ಟಣದಲ್ಲಿದ್ದಾಗ 'ಅಲೆಕ್ಸ್' ಎಂಬ ತೆಲುಗು ಸಿನಿಮಾ ಬಂದಿತ್ತು. ಅದರಲ್ಲಿ ನಾಯಕ ವಿಮಾನದಲ್ಲಿ ಸಂಚರಿಸುತ್ತಿದ್ದಾಗ ಅದು ದುರಂತಕ್ಕೀಡಾಗಿ ಸಮುದ್ರಪಾಲಾಗುತ್ತದೆ. ಅದರಲ್ಲಿ ಸಾಕಷ್ಟು ಜನ ಸಾವು ಬದುಕಿನೊಡನೆ ಹೋರಾಡುತ್ತಿರುತ್ತಾರೆ. ಈ ಸುದ್ದಿ ತಿಳಿದ ನ್ಯೂಸ್ ಚಾನಲ್ಲೊಂದು ತನ್ನ ಸ್ವಂತ ಹೆಲಿಕಾಪ್ಟರ್ ನಲ್ಲಿ ಬಂದು ಆ ದೃಶ್ಯಗಳನ್ನು ಸೆರೆಹಿಡಿದು ನೇರ ಪ್ರಸಾರ ಮಾಡುತ್ತಿರುತ್ತದೆ. ಚೆನ್ನಾಗಿ ಈಜು ಬರುತ್ತಿದ್ದ ನಾಯಕ ಸುಮಾರು ಜನರ ಪ್ರಾಣ ಉಳಿಸುತ್ತಾನೆ. ಹೆಲಿಕಾಪ್ಟರ್ ನಲ್ಲಿ ಸೆರೆಹಿಡಿಯುತ್ತಿದ್ದ ಕ್ಯಾಮರಾಮನ್ ವೀಕ್ಷಕ ವಿವರಣೆ ಕೊಡುತ್ತಿದ್ದವನನ್ನು "ಸರ್ ನಮ್ಮ ಹೆಲಿಕಾಪ್ಟರ್ ನ ಸಹಾಯದಿಂದ ಸುಮಾರು ಜನರ ಪ್ರಾಣ ಉಳಿಸಬಹುದಲ್ವೇ? ನಡಿಯಿರಿ ಸಹಾಯ ಮಾಡೋಣ" ಎನ್ನುತ್ತಾನೆ. ಅದಕ್ಕೆ ವೀಕ್ಷಕ ವಿವರಣೆಕಾರ "ಅದು ನಮ್ಮ ಕೆಲಸವಲ್ಲ ಅದರ ಉಸಾಬರಿ ನಿನಗ್ಯಾಕೆ? ಸುಮ್ಮನೆ 'ಬ್ರೇಕಿಂಗ್ ನ್ಯೂಸ್'ನ ಚಿತ್ರೀಕರಿಸು" ಎನ್ನುತ್ತಾನೆ.



ಮೊನ್ನಿನ ಅಗ್ನಿದುರಂತದ ವರದಿಗಳನ್ನು ನೋಡುತ್ತಿದ್ದಾಗ ಮೇಲಿನ ಚಿತ್ರದ ದೃಶ್ಯ ಎಷ್ಟು ಸಲೀಸಾಗಿ ಹೊಂದುತ್ತಿತ್ತು. ಎಲ್ಲಾ ಚಾನಲ್ ಗಳಲ್ಲಿ ಅದು ಸುದ್ದಿಯಾಗಿ ಬಿತ್ತರವಾಗುವುದರ ಜೊತೆಗೆ ಅದನ್ನು ವೀಕ್ಷಿಸುತ್ತಿದ್ದ ವೀಕ್ಷಕರು ಮತ್ತು ದುರಂತಕ್ಕೀಡಾದವರ ಸಂಬಂಧಿಕರು ಅಗತ್ಯಕ್ಕಿಂತ ಹೆಚ್ಚಾಗಿ ಗಾಬರಿ ಮತ್ತು ಖಿನ್ನತೆಗೊಳಗಾಗಿ ಆತಂಕದಿಂದ ಕ್ಷಣಗಳನ್ನು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ಆ ರೀತಿ ವರದಿಯ ಜೊತೆಗೆ ಸ್ವಲ್ಪವಾದರೂ ಸಾಮಾಜಿಕ ಪ್ರಜ್ಞೆಯಿಂದ ಚಾನಲ್ ಗಳು ವರ್ತಿಸಿದ್ದಿದ್ದರೆ ಅವುಗಳ ಕಾಳಜಿಯನ್ನು ಮೆಚ್ಚಬಹುದಾಗಿತ್ತು. ಅದನ್ನು ಬಿಟ್ಟು "ಅಲ್ಲಿ ನೋಡಿ!! ನೋಡಿ!! ಜೀವಭಯದಿಂದ ಜನರು ಕೆಳಗೆ ಹಾರುತ್ತಿದ್ದಾರೆ!!! ಇದು ನಮ್ಮ ಚಾನೆಲ್ ನಲ್ಲಿ ಮಾತ್ರ ಪ್ರಸಾರವಾಗುತ್ತಿದೆ" ಎಂದು ವಿಕೃತವಾಗಿ ಕೂಗುತ್ತಿದ್ದ ವರದಿಗಾರನನ್ನು ನೋಡಿದಾಗ ಅಂತಹ ಸಮಯದಲ್ಲೂ ಅದು ದುಃಖ ತರುವಂತಹ 'ನ್ಯೂಸ್' ಆಗಿದ್ದರೂ ಚಾನೆಲ್ ಗಳದ್ದು ಶುದ್ದ "ನ್ಯೂಸೆನ್ಸ್" ಅನ್ನದೆ ಮತ್ತಿನ್ನೇನು ಅನ್ನಲು ಸಾದ್ಯ ಅಲ್ಲವೇ? ಇದರ ಜೊತೆಗೆ ಮೃತರು ಮತ್ತು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಬಂದು ಅವರ ಸಂಬದಿಕರ ಮುಂದೆ ಮೈಕ್ ಹಿಡಿದು ಹಲ್ಲು ಗಿಂಜುತ್ತಾ



''ಸರ್/ ಮೇಡಂ ನಿಮ್ಮ ಅಭಿಪ್ರಾಯವೇನು?" ಎಂದು ಕೇಳುವ ದೃಷ್ಯಗಳನ್ನು ವೀಕ್ಷಿಸಿದ ಯಾವುದೇ ಹೃದಯವಂತರಿಗೆ ಅದು 'ಇವು ಬುದ್ದಿಗೇಡಿ ಚಾನಲ್'ಗಳು' ಎನ್ನಸಿದೇ ಇರಲು ಸಾಧ್ಯವೇ ಇರಲಿಲ್ಲ. ಇಂತಹ ಚಾನಲ್ ಗಳಿಗೆ ಬರೀ 'ಬ್ರೇಕಿಂಗ್ ನ್ಯೂಸ್' ಮುಖ್ಯವೇ ಹೊರತು, ಅದರಿಂದ ಮನಗಳು 'ಬ್ರೇಕ್' ಆಗುತ್ತವಲ್ಲ ಅದರ ಬಗ್ಗೆ ಅವುಗಳ ವರ್ತನೆ ಮತ್ತು ಚಿಂತನೆ ತಿಳಿಗೇಡಿಗಳಿಗೆ ಅನಾವಾಶ್ಯಕ!!!! ಇದೆಂತಹಾ ವಿಪರ್ಯಾಸ



ಇವರಿಗೆ ಕಿವಿಹಿಂಡಿ ಬುದ್ದಿಹೇಳಲು ಯಾರೂ ಇಲ್ಲವೇ?



ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ, ಹಾಗು ದಯವಿಟ್ಟು ಸುದ್ದಿ ಚಾನೆಲ್ ಗಳು ಇನ್ನಾದರೂ ಸ್ವಲ್ಪ ಪ್ರಜ್ಞೆಯಿಂದ ಸುದ್ದಿ ಪ್ರಸಾರ ಮಾಡಲಿ.

'Fourth Estate' ಎಂದು ಕರೆಸಿಕೊಂಡು ದೇಶದ ಪ್ರಜೆಗಳ ಮುಖವಾಣಿಯಾಗಿ ಅತ್ಯಂತ ಗೌರವವನ್ನು ಹೊಂದಿದ್ದ ಮಾಧ್ಯಮ ಇಂದು ಸಂಪೂರ್ಣವಾಗಿ ತನ್ನನ್ನು ಹಣಕ್ಕಾಗಿ ಮಾರಿಕೊಂಡು ನಗೆಪಾಟಲಿಗೀಡಾಗಿರುವುದು ಎಂತಹಾ ವಿಪರ್ಯಾಸ!. ದುಡ್ಡಿಗಾಗಿ ಅತ್ಯಂತ ಕೀಳು ಮಟ್ಟಕ್ಕೂ ಇಳಿದಿರುವ ಮಾಧ್ಯಮ ಇಂದು 'ಸುದ್ದಿಗಾಗಿ ದುಡ್ಡು' ಪಡೆದು (Paid News) ಜನರನ್ನು ವಂಚಿಸುತ್ತಿರುವುದು ನಾಚಿಕೆಗೇಡಿನ ವಿಚಾರ. 'News' ಅನ್ನುವುದು ಇಂದು ಶುದ್ಧ 'commodity' ಅಷ್ಟೇ. ಎಂತಹ ಸಣ್ಣ ಸುದ್ದಿಯನ್ನೂ 'sensationalise' ಮಾಡಿ ಜನರನ್ನು 'ರಂಜಿಸಲು' ಹೆಣಗಾಡುತ್ತಿರುವ ಚಾನೆಲ್ ಗಳ ಬಗ್ಗೆ ಅಸಹ್ಯವೆನಿಸುತ್ತದೆ. ಟಿ.ವಿ. ವರದಿಗಾರರು 'ಇಲಿ' ಬಂದುದನ್ನು 'ಹುಲಿ' ಬಂತು ಎಂಬಂತೆ ಮೈ ಕೈ ಕುಣಿಸುತ್ತಾ ಅಟ್ಟಹಾಸದ ಸ್ವರದಲ್ಲಿ 'ತೀಕು'ವುದನ್ನು ನೋಡಿದರೆ ನಾಲ್ಕು ದಿನಗಳಿಂದ 'constipation' ತೊಂದರೆಯಿಂದ ಬಳಲುತ್ತಿರುವಂತೆ ಕಾಣುತ್ತದೆ!.



ಇವೆಲ್ಲದರ ಮಧ್ಯೆ ಇನ್ನೂ ಕೆಲವೊಂದು (ವಾರ್ತಾ ಪತ್ರಿಕೆಗಳು) ತಮ್ಮ ಗೌರವ, ಘನತೆ ಕಾಪಾಡುತ್ತಾ ಜನರ ಧ್ವನಿಯಾಗಿ ಇರಲು ಪ್ರಯತ್ನಿಸುತ್ತಿರುವುದು ನಮ್ಮ ಭಾಗ್ಯ.

ಶನಿವಾರ, ಫೆಬ್ರವರಿ 20, 2010

'ವೃಕ್ಷ ರಾಜ'ನ ಸ್ವಗತ.....


ಜಕ್ಕೂ ಮರವಾಗಿ ಹುಟ್ಟಲು ಪುಣ್ಯ ಮಾಡಿರಬೇಕು. ಪೂರ್ವಜನ್ಮದ ಸುಕೃತದಿಂದ ನಾನು ಈ ಜನ್ಮದಲ್ಲಿ ಮರವಾಗಿ ಜನಿಸಿದ್ದೀನಿ, ಅದರಲ್ಲೂ ಬೃಹದಾಕಾರವಾಗಿ ಬೆಳೆಯಬಲ್ಲ 'ವೃಕ್ಷಗಳ ರಾಜ' ಆಲದ ಮರವಾಗಿದ್ದೇನೆ.


ವಿಶಾಲ ಆಲದಮರ 'ಗತಕಾಲ

ನೋಡಿ ಎಷ್ಟು ವಿಶಾಲವಾಗಿದ್ದೇನೆ.

ಸುಮಾರು ೧೦೦-೧೫೦ ವರ್ಷಗಳಿರಬಹುದು, ಒಬ್ಬ ಪುಣ್ಯಾತ್ಮನಾದ ರೈತ ಬೇರ್ಯಾವುದೋ ಆಲದ ಮರದಿಂದ ಒಂದು ಸಣ್ಣಕೊಂಬೆ ಕಡಿದು ಅವನ ಹೊಲದಲ್ಲಿ ನನ್ನನ್ನು ನೆಟ್ಟು ಪ್ರತಿಸ್ಠಾಪಿಸಿದ. ದಿನವೂ ನನಗೆ ನೀರೆರೆದು, ಕಾಲಕಾಲಕ್ಕೆ ಆಹಾರ ನೀಡಿ, ಮೇಕೆ ಕುರಿದನಗಳ ದಾಳಿಯಿಂದ ನನ್ನನ್ನು ರಕ್ಷಿಸಿದ ಆ ಮಹಾನುಭಾವ. ಅವನಿಗೆ ನಾನು ಚಿರರುಣಿ.

ನಾನು ನೆಲಕ್ಕೆ ಬೇರೂರಿ ಸುಮಾರು ೧೫ ವರ್ಷವಾದಾಗ ನನ್ನ ಹೊಟ್ಟೆಯ ಮೇಲೆ ಮೊದಲ ಸಣ್ಣ ಪೆಟ್ಟು ಬಿತ್ತು, ಅದೂ ಈ ಊರಿನ ಯುವಪ್ರೇಮಿಗಳಿಂದ, ಯುವಕನು ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದಿಸಲು ತನ್ನೀರ್ವರ ಹೆಸರುಗಳನ್ನು ನನ್ನ ಹೊಟ್ಟೆಯ ಮೇಲೆ ಕೆತ್ತಿದಾಕ್ಷಣಕ್ಕೆ ನೋವಾದರು ನನಗೆ ಖುಷಿಯೇ ಆಯಿತು 'ನಾನು ಅವರ ಪ್ರೇಮಕ್ಕೆ ಸಾಕ್ಷಿಯಾದೆನಲ್ಲ' ಎಂದು. ಅವರ ನಂತರ ಅದೆಷ್ಟು ಜೋಡಿ ಜೀವಗಳು ನನ್ನ ನೆರಳ ಕೆಳಗೆ ಪಿಸುಗುಟ್ಟಿದ್ದಾರೆ! ಅದೆಷ್ಟು ಜನ ನನ್ನೆದೆಗೊರಗಿ ತಮ್ಮ ದುಃಖತೋಡಿಕೊಂಡು ಸಾಂತ್ವಾನಪಡೆದುಕೊಂಡರು! ಒಂದೆ ಎರಡೇ ಅವುಗಳನ್ನು ಮೆಲುಕುಹಾಕುತ್ತಿದ್ದರೆ ಅದೆಂತಹ ಮಧುರಾನುಭೂತಿ!! "ನಾನೇನು ಭೂತಾಯಿಗಿಂತಲೂ ಒಂದು ಕೈ ಮೇಲೇನೋ' ಎಂಬ ಅಹಂ ನನ್ನನ್ನು ಆಗಾಗ ಕಾಡುವುದುಂಟು.

ಮತ್ತೆ ನನಗೆ ಸ್ವಲ್ಪಜಾಸ್ತಿ ಅನ್ನುವಷ್ಟು ಏಟು ಬಿದ್ದದ್ದು ನನ್ನನ್ನು ನೆಟ್ಟ ರೈತನಿಂದಲೆ!!! ಹೌದು ಅದೊಂದು ದಿನ ತನ್ನಿಬ್ಬರು ಸ್ನೇಹಿತರೊಡನೆ ಬೆೞಂಬೆಳಿಗ್ಗೆ ಹೊಲಕ್ಕೆ ಬಂದ ರೈತ ನನ್ನ ರೆಂಬೆ ಕೊಂಬೆಗಳನ್ನು ಕತ್ತರಿಸತೊಡಗಿದ. ತುಂಬಾನೇ ನೋವಾಯ್ತು! ಕಡಿಬೇಡಿ! ಕಡಿಬೇಡಿ! ಅಂತ ಕೂಗಿಕೊಂಡೆ. ಆದರೆ ನನ್ನ ಮಾತನ್ನು ಯಾರೂ ಕೇಳಲಿಲ್ಲ. ನನ್ನ ಜೀವನ ಇಲ್ಲಿಗೆ ಸಮಾಧಿಯಾಯ್ತು ಅಂದುಕೊಡೇ ೨ ವಾರ ಕಳೆದೆ. ಆದರೇನಾಶ್ಚರ್ಯ!!!!!!! ಅವರು ಕತ್ತರಿ ಜಾಗದಲ್ಲೇಲ್ಲಾ ಮೊದಲಿದ್ದದ್ದಕ್ಕಿಂತಾ ಹೆಚ್ಚು ಹೆಚ್ಚು ರೆಂಬೆಗಳು ಚಿಗುರೊಡೆಯತೊಡಗಿದವು, ನನ್ನ ಹೊಟ್ಟೆ, ಕೈಕಾಲುಗಳು ಮತ್ತಷ್ಟು ದಪ್ಪವಾಗತೊಡಗಿದವು. ಕೆಲದಿನಗಳ ನಂತರ ನಾನು ಮೊದಲಿಗಿಂತಲೂ ಎತ್ತರೆತ್ತರಕ್ಕೆ ಅಗಲಕ್ಕೆ ಬೆಳೆಯತೊಡಗಿದೆ. ಕುರಿ ಮೇಕೆ ಮೇಯಿಸುವವರು ನನ್ನ ಸಣ್ಣ ಕೊಂಬೆಗಳನ್ನು ಕಡಿದು ಅವುಗಳಿಗೆ ತಿನ್ನಿಸುವಾಗ "ಮಗುವಿಗೆ ಹಾಲುಣಿಸುವ ತಾಯ್ತನವನ್ನು ನನಗೂ ಕರುಣಿಸಿದೆಯಲ್ಲಾ ಭಗವಂತಾ! ನಿನಗೆ ನಾನು ಚಿರರುಣಿ" ಎಂದು ಆ ದಯಾಮಯನಿಗೆ ವಂದಿಸಿದೆ.

ಅಬ್ಭಾ!! ಅದೆಷ್ಟು ವರ್ಷಗಳುರುಳಿದವು ನನ್ನ ಕೊಂಬೆಗಳು ನನಗಿಂತಲೂ ಬಲಿತು "ಬೀಳು"ಗಳ ಚಿಗುರಿಸಲು. ಮೊದಲ ಬೀಳು ಚಿಗುರಿ ಇನ್ನೇನು ನೆಲ ಮುಟ್ಟುತ್ತದೆ ಎನ್ನುವಾಗ ಒಂದಿಷ್ಟು ಮಕ್ಕಳು ಬಂದು ಆ ಬೀಳಿಗೆ ಜೋತಾಡಿ ಕುಣಿದು ಕುಪ್ಪಳಿಸುವಾಗ ನನಗೆಷ್ಟು ಆತಂಕವಾಯ್ತು ಗೊತ್ತೇ? ನನ್ನ ಬೀಳುಗಳು ಮುರಿದುಹೋದಾವೆಂದಲ್ಲ ಆ ಮುದ್ದು ಮಕ್ಕಳು ಕೆಳಗೆ ಬಿದ್ದಾವೆಂದು!!! ಸಧ್ಯ!! ಹಾಗಾಗಲಿಲ್ಲ.

ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ ಆದರೆ ಕೆಲದಿನಗಳಲ್ಲಿಯೇ ನನಗೊಂದು ಆಘಾತ ಕಾದಿತ್ತು. ಆ ಊರಿನ ಭಗ್ನಪ್ರೇಮಿಗಳಿಬ್ಬರು ನನ್ನ ಬೀಳುಗಳಿಗೆ ನೇಣು ಬಿಗಿದು ಪ್ರಾಣತೆತ್ತಾಗ. ಅದೆಷ್ಟು ದುಃಖವಾಯ್ತು. ಇಂದಿಗೂ ಅದ ನೆನೆದರೆ ಎದೆಯಲ್ಲಿ "ಚುಳುಕ್" ಎನ್ನದಿರುವುದಿಲ್ಲ.

ಕಾಲಚಕ್ರ ಉರುಳಿತು, ವರ್ಷಗಳು ಕಳೆದಂತೆ ಅದೆಷ್ಟು ಲೆಕ್ಕವಿಲ್ಲದಷ್ಟು ಬದಲಾವಣೆಗಳಾದವು. ನನ್ನನ್ನು ಸಾಕಿ ಬೆಳೆಸಿದ ರೈತ ಅಸುನೀಗಿದ, ಅವನ ಸಮಾಧಿ ನನ್ನೊಡಲಲ್ಲೇ ಇದೆ ಅನ್ನುವುದು ನನಗೆ ಸಿಕ್ಕ ಅಲ್ಪತೃಪ್ತಿ. ಅವನ ಅನಂತರ ಆತನ ಮಕ್ಕಳು ನನ್ನನ್ನು ಬಹಳ ಪ್ರೀತಿ ಆದರಗಳಿಂದ ನೋಡಿಕೊಂಡರು. ನನ್ನ ಸುತ್ತಮುತ್ತಲಿದ್ದ ಹೊಲದಲ್ಲಿ ದನಕರುಗಳ ಆಸ್ಪತ್ರೆ ಕಟ್ಟಿಸಿದರು, ಆಸ್ಪತ್ರೆಗೆ ಬರುತ್ತಿದ್ದ ಜನ ದನಗಳಿಗೆ ನನ್ನ ನೆರಳೇ ಆಶ್ರಯ, ದಾರಿಹೋಕರಿಗೆ ನನ್ನೊಡಲ ತಂಪು ಬಹಳ ಹಿತ.



"ಹಾಂ!! ಅದೆಲ್ಲಾ ಬರೀ ನೆನಪು ಮಾತ್ರ!! ಆಧುನಿಕತೆಯ ದಾಳಿಗೆ ಸಿಲುಕಿ ನಾನು ಸಹ ನಲುಗಿಹೋದೆ. ನಂತರ ನನ್ನದೆಲ್ಲಾ ಕಣ್ಣೀರ ಕಥೆ. ನಾನೀಗ ಹೇಗಿದ್ದೇನೆ ಅಂತ ನೀವೆ ನೋಡಿ









ಇಂದಿನ ನನ್ನ ಸ್ಥಿತಿ
ನೀವೆ ಹೇಳಿ ನಾ ಮಾಡಿದ ತಪ್ಪೇನು?

ವಸೀಮನೂ ಅವನ 'ಖನಡ'ವೂ

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.



"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ



"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ.



ಅವನ ಆ ಆತ್ಮವಿಶ್ವಾಸವೇ ಅವನನ್ನ ನಮ್ಮ ಕಂಪನಿಗೆ ಸೇರಿಸಿಕೊೞಲು ನನಗೆ ಪ್ರೇರೇಪಿಸಿ ಅವನನ್ನ ಆಯ್ಕೆಮಾಡಿದೆ. ಅದೂ ಅಲ್ಲದೆ ಕನ್ನಡಕ್ಕಿಂತ ನನಗೆ ವೈದ್ಯರಬಳಿ ನಮ್ಮ ಉತ್ಪನ್ನಗಳ ಬಗ್ಗೆ ಮಾತನಾಡಲು ಇಂಗ್ಲೀಷ್ ನ ಅವಶ್ಯಕತೆ ಸ್ವಲ್ಪ ಹೆಚ್ಚು, ಜೊತೆಗೆ ಅವನಿಗೂ ಕೂಡ ಕೆಲಸದ ಅನಿವಾರ್ಯತೆಯೂ ಇತ್ತು, ಅವನಿಗೂ ಕೆಲಸ ಕೊಟ್ಟರೆ ಅವನು ಮಾಡುತ್ತಾನೆ ಎಂಬ ನನ್ನ ನಂಬಿಕೆಯನ್ನು ಅವನು ಸಹ ಹುಸಿ ಮಾಡಲಿಲ್ಲ. ಇರಲಿ ಈಗ ವಿಷಯಕ್ಕೆ ಬರೋಣ.



ವಸೀಮ ತುಂಬಾ ಒೞೆಯ ಹುಡುಗ, ಯಾವುದೇ ದುರಬ್ಯಾಸಗಳಾಗಲಿ, ಸುೞು ಹೇಳುವ ಚಟವಾಗಲಿ, ಅವನ ವಯೋಸಹಜಗುಣವಾದ ಹುಡುಗಿಯರನ್ನು ರೇಗಿಸುವ ಚಾಳಿಯಾಗಲಿ ಇರಲಿಲ್ಲ. ಆದರೆ ನನಗೆ ಕುತೂಹಲವಿದ್ದದ್ದು ಅವನ ಕನ್ನಡ ಪದಗಳ ಉಚ್ಚಾರದಲ್ಲಿ!!! ಅವನ 'ಖನಡ' ವು ನನಗೆ ಅವನೊಡನೆ ಕೆಲಸಕ್ಕೆ ಹೋದಾಗಲೆಲ್ಲ ಕುತೂಹಲಭರಿತ ಅವಾಂತರಗಳನ್ನು ಸೃಷ್ಟಿಸಿವೆಯಲ್ಲದೆ, ಆ ಘಟನೆಗಳನ್ನು ಯಾವಾಗ ಮೆಲುಕು ಹಾಕಿದರೂ ಮನದ ಮೂಲೆಯಲ್ಲಿ ಕಚಗುಳಿ ಬರುವುದು ಖಂಡಿತ.



ಅಂತಹ ಈ ಒಂದು ಅನುಭವವನ್ನು ನೀವೇ ಓದಿ ನೋಡಿ..



ಅವನಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಭಾಗದ ಬಹುತೇಕ ಮುಸಲ್ಮಾನರ ಕನ್ನಡ ನಮ್ಮ ವಸೀಮನ 'ಖನಡ'ದ ಹಾಗೆಯೇ ಇರುತ್ತದೆ. ಅಂದಮಾತ್ರಕ್ಕೆ ಸ್ವಚ್ಚ ಕನ್ನಡ ಮಾತನಾಡುವವರು ಇಲ್ಲವೆಂದರೆ ನಮ್ಮ ನಾಡಿನ ಸಾರಸ್ವತಲೋಕದ ದಿಗ್ಗಜರಾದ ಶ್ರೀಮಾನ್ ನಿಸಾರ್ ಅಹಮದ್, ಜಾನಪದ ಕವಿ ಕರೀಮ್ ಖಾನ್ ರಂಥವರಿಗೆ ಅವಮಾನ ಮಾಡಿದಂತಾಗುತ್ತದೆ, ಎಲ್ಲೋ ಕೆಲವರ ಉಚ್ಚಾರದಲ್ಲಿ ವ್ಯತಾಸವಿರುತ್ತದೆ. ಹಾಗಾಗಿ ಒಮ್ಮೆ ವಸೀಮನನ್ನೇ ಕೇಳಿದೆ



"ವಸೀಮ್ ನಂಗೆ ಒಂದ್ವಿಷ್ಯ ಅರ್ಥ ಆಗ್ಲಿಲ್ಲ, ನೀನು ಹುಟ್ಟಿ ಬೆಳದದ್ದು ಎಲ್ಲಾ ಮೈಸೂರಿನಲ್ಲೇ, ಆದ್ರೂ ನಿನ್ನ ಕನ್ನಡ ಯಾಕೆ ಹೀಗೆ?"



''ಸಾರ್! ಹೇನ್ ಮಾಡಾದು ನಮ್ಗೆ ಬಚಪನ್ ದಿಂದ ಬಂದ್ಬಿಟ್ಟಿ ಇಂಗೆ ಹಾಗೋಯ್ತು" ಎಂದ.



"ಹಾಗಾದ್ರೆ ನೀನು ಸ್ಕೂಲು ಕಾಲೇಜ್ನಲ್ಲಿ ಕನ್ನಡ ಹ್ಯಾಗ್ ಪಾಸ್ಮಾಡ್ದೆ ಮತ್ತೆ?" ಎಂದು ಕುತೂಹಲದಿಂದ ಕೇಳಿದೆ.



"ಸಾರ್! ನಮ್ಗೆ ಕಿರಿಷ್ಣಮೂರ್ತಿ ಅಂತ ಮೇಸ್ಟಾರ್ರು ಒಬ್ಬ್ರು ಇದ್ದ್ರು, ಅವರ್ಗೆ ಚೀಟಿ ಕೊಟ್ಟಿ ಎಕ್ಸಾಂದಲ್ಲಿ ಬರಿಸ್ಬಿಟ್ಟಿ ಪಾಸ್ ಮಾಡ್ಸಿದ್ದು" ಅಂದ ಅಷ್ಟೇ ಮುಗ್ದತೆಯಿಂದ.



ಸಧ್ಯ! ಅವನಿಗೂ ಕನ್ನಡ ಓದಲು ಬರೆಯಲು ಬರುತ್ತದಲ್ಲ ಎಂದು ನನಗೆ ಬಹಳ ಖುಷಿಯಾಯ್ತು. ಅದನ್ನು ಹೊರ ತೋರಿಸದೆ, ಅವನು ಕನ್ನಡವನ್ನು ಹೇಗೆ ಓದುತ್ತಾನೆ ನೋಡೋಣವೆನ್ನಿಸಿ ಆ ತಕ್ಷಣಕ್ಕೆ ಎದುರು ಬಂದ ಆಟೋ ಹಿಂದೆ ಬರೆದಿದ್ದ ಒಂದು ಚಿತ್ರದ ಹೆಸರು ನೋಡಿ



" ಸರಿ ವಸೀಮ್!! ಆ ಆಟೋ ಮೇಲಿರೋದ್ನ ಓದು ನೋಡೋಣ್" ಅಂದೆ



"ಹಷ್ಟೇನಾ ಸಾರ್! " ಎಂದು ಆಟೋ ಕಡೆ ಕಣ್ಣೊರಳಿಸಿ



" ಅಮ್ಮ ತಾಯಿಧೇರೇ" ಅಮ್ದು ಬಿಡೋದೇ!!!



ಆ ಕ್ಷಣದಲ್ಲಿ ನಾನು ಮೂರ್ಚೆ ಬಂದು ಕೆಳಗೆ ಬೀಳುವಂತಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗು ವತ್ತರಿಸಿ ಬಂತು.



ಏಕೆಂದರೆ ಆಟೋ ಮೇಲಿದ್ದದ್ದು ನಾಗತೀಹೞಿ ಯವರು ನಿರ್ದೇಶಿಸಿರುವ "ಅಮೃತ ಧಾರೆ" ಚಿತ್ರದ ಹೆಸರು



ಅದೇ ಮೊದಲು ಅದೇ ಕೊನೆ ಇಂದಿಗೂ ನಮ್ಮ ವಸೀಮನ 'ಖನಡ" ನನಗೆ ಪ್ರಶ್ನಾತೀತ

ವಸೀಮನೂ ಅವನ 'ಖನಡ'ವೂ

ಮಾರ್ಚ್ ೨೭ ೨೦೦೭, ಇದು ನನ್ನ ಮತ್ತು ವಸೀಮ್ ಅಹಮ್ಮದ್ ಭೇಟಿಯಾದ ದಿನ. ಆ ದಿನ ನನಗೆ ಚೆನ್ನಾಗಿ ನೆನಪಿರಲು ಕಾರಣ ಅವನ ಕನ್ನಡ ಪದಗಳ ಉಚ್ಚಾರ.



"ಏನಯ್ಯ ವಸೀಮ್? ಕನ್ನಡ ಸರಿಯಾಗ್ ಮಾತಾಡಯ್ಯ" ಅಂತ ಯಾರಾದ್ರೂ ಈಗ ಕೇಳಿದ್ರೂ



"ಸರ್! ಯಾರ್ಗೆ ಹ್ಹೇಳಿದ್ದೂ? ಸರ್, ನಾಂಗೆ ಖನಾಡ ಬರಲ್ಲಾಂತಃ?'' ಎಂಬ ಮರುಪ್ರಶ್ನೆಯನ್ನು ಬಹಳ ಆತ್ಮವಿಶ್ವಾಸದಿಂದ ಎಸೆಯುತ್ತಾನೆ.



ಅವನ ಆ ಆತ್ಮವಿಶ್ವಾಸವೇ ಅವನನ್ನ ನಮ್ಮ ಕಂಪನಿಗೆ ಸೇರಿಸಿಕೊೞಲು ನನಗೆ ಪ್ರೇರೇಪಿಸಿ ಅವನನ್ನ ಆಯ್ಕೆಮಾಡಿದೆ. ಅದೂ ಅಲ್ಲದೆ ಕನ್ನಡಕ್ಕಿಂತ ನನಗೆ ವೈದ್ಯರಬಳಿ ನಮ್ಮ ಉತ್ಪನ್ನಗಳ ಬಗ್ಗೆ ಮಾತನಾಡಲು ಇಂಗ್ಲೀಷ್ ನ ಅವಶ್ಯಕತೆ ಸ್ವಲ್ಪ ಹೆಚ್ಚು, ಜೊತೆಗೆ ಅವನಿಗೂ ಕೂಡ ಕೆಲಸದ ಅನಿವಾರ್ಯತೆಯೂ ಇತ್ತು, ಅವನಿಗೂ ಕೆಲಸ ಕೊಟ್ಟರೆ ಅವನು ಮಾಡುತ್ತಾನೆ ಎಂಬ ನನ್ನ ನಂಬಿಕೆಯನ್ನು ಅವನು ಸಹ ಹುಸಿ ಮಾಡಲಿಲ್ಲ. ಇರಲಿ ಈಗ ವಿಷಯಕ್ಕೆ ಬರೋಣ.



ವಸೀಮ ತುಂಬಾ ಒೞೆಯ ಹುಡುಗ, ಯಾವುದೇ ದುರಬ್ಯಾಸಗಳಾಗಲಿ, ಸುೞು ಹೇಳುವ ಚಟವಾಗಲಿ, ಅವನ ವಯೋಸಹಜಗುಣವಾದ ಹುಡುಗಿಯರನ್ನು ರೇಗಿಸುವ ಚಾಳಿಯಾಗಲಿ ಇರಲಿಲ್ಲ. ಆದರೆ ನನಗೆ ಕುತೂಹಲವಿದ್ದದ್ದು ಅವನ ಕನ್ನಡ ಪದಗಳ ಉಚ್ಚಾರದಲ್ಲಿ!!! ಅವನ 'ಖನಡ' ವು ನನಗೆ ಅವನೊಡನೆ ಕೆಲಸಕ್ಕೆ ಹೋದಾಗಲೆಲ್ಲ ಕುತೂಹಲಭರಿತ ಅವಾಂತರಗಳನ್ನು ಸೃಷ್ಟಿಸಿವೆಯಲ್ಲದೆ, ಆ ಘಟನೆಗಳನ್ನು ಯಾವಾಗ ಮೆಲುಕು ಹಾಕಿದರೂ ಮನದ ಮೂಲೆಯಲ್ಲಿ ಕಚಗುಳಿ ಬರುವುದು ಖಂಡಿತ.



ಅಂತಹ ಈ ಒಂದು ಅನುಭವವನ್ನು ನೀವೇ ಓದಿ ನೋಡಿ..



ಅವನಷ್ಟೇ ಅಲ್ಲ ಮೈಸೂರು ಮತ್ತು ಬೆಂಗಳೂರು ಭಾಗದ ಬಹುತೇಕ ಮುಸಲ್ಮಾನರ ಕನ್ನಡ ನಮ್ಮ ವಸೀಮನ 'ಖನಡ'ದ ಹಾಗೆಯೇ ಇರುತ್ತದೆ. ಅಂದಮಾತ್ರಕ್ಕೆ ಸ್ವಚ್ಚ ಕನ್ನಡ ಮಾತನಾಡುವವರು ಇಲ್ಲವೆಂದರೆ ನಮ್ಮ ನಾಡಿನ ಸಾರಸ್ವತಲೋಕದ ದಿಗ್ಗಜರಾದ ಶ್ರೀಮಾನ್ ನಿಸಾರ್ ಅಹಮದ್, ಜಾನಪದ ಕವಿ ಕರೀಮ್ ಖಾನ್ ರಂಥವರಿಗೆ ಅವಮಾನ ಮಾಡಿದಂತಾಗುತ್ತದೆ, ಎಲ್ಲೋ ಕೆಲವರ ಉಚ್ಚಾರದಲ್ಲಿ ವ್ಯತಾಸವಿರುತ್ತದೆ. ಹಾಗಾಗಿ ಒಮ್ಮೆ ವಸೀಮನನ್ನೇ ಕೇಳಿದೆ



"ವಸೀಮ್ ನಂಗೆ ಒಂದ್ವಿಷ್ಯ ಅರ್ಥ ಆಗ್ಲಿಲ್ಲ, ನೀನು ಹುಟ್ಟಿ ಬೆಳದದ್ದು ಎಲ್ಲಾ ಮೈಸೂರಿನಲ್ಲೇ, ಆದ್ರೂ ನಿನ್ನ ಕನ್ನಡ ಯಾಕೆ ಹೀಗೆ?"



''ಸಾರ್! ಹೇನ್ ಮಾಡಾದು ನಮ್ಗೆ ಬಚಪನ್ ದಿಂದ ಬಂದ್ಬಿಟ್ಟಿ ಇಂಗೆ ಹಾಗೋಯ್ತು" ಎಂದ.



"ಹಾಗಾದ್ರೆ ನೀನು ಸ್ಕೂಲು ಕಾಲೇಜ್ನಲ್ಲಿ ಕನ್ನಡ ಹ್ಯಾಗ್ ಪಾಸ್ಮಾಡ್ದೆ ಮತ್ತೆ?" ಎಂದು ಕುತೂಹಲದಿಂದ ಕೇಳಿದೆ.



"ಸಾರ್! ನಮ್ಗೆ ಕಿರಿಷ್ಣಮೂರ್ತಿ ಅಂತ ಮೇಸ್ಟಾರ್ರು ಒಬ್ಬ್ರು ಇದ್ದ್ರು, ಅವರ್ಗೆ ಚೀಟಿ ಕೊಟ್ಟಿ ಎಕ್ಸಾಂದಲ್ಲಿ ಬರಿಸ್ಬಿಟ್ಟಿ ಪಾಸ್ ಮಾಡ್ಸಿದ್ದು" ಅಂದ ಅಷ್ಟೇ ಮುಗ್ದತೆಯಿಂದ.



ಸಧ್ಯ! ಅವನಿಗೂ ಕನ್ನಡ ಓದಲು ಬರೆಯಲು ಬರುತ್ತದಲ್ಲ ಎಂದು ನನಗೆ ಬಹಳ ಖುಷಿಯಾಯ್ತು. ಅದನ್ನು ಹೊರ ತೋರಿಸದೆ, ಅವನು ಕನ್ನಡವನ್ನು ಹೇಗೆ ಓದುತ್ತಾನೆ ನೋಡೋಣವೆನ್ನಿಸಿ ಆ ತಕ್ಷಣಕ್ಕೆ ಎದುರು ಬಂದ ಆಟೋ ಹಿಂದೆ ಬರೆದಿದ್ದ ಒಂದು ಚಿತ್ರದ ಹೆಸರು ನೋಡಿ



" ಸರಿ ವಸೀಮ್!! ಆ ಆಟೋ ಮೇಲಿರೋದ್ನ ಓದು ನೋಡೋಣ್" ಅಂದೆ



"ಹಷ್ಟೇನಾ ಸಾರ್! " ಎಂದು ಆಟೋ ಕಡೆ ಕಣ್ಣೊರಳಿಸಿ



" ಅಮ್ಮ ತಾಯಿಧೇರೇ" ಅಮ್ದು ಬಿಡೋದೇ!!!



ಆ ಕ್ಷಣದಲ್ಲಿ ನಾನು ಮೂರ್ಚೆ ಬಂದು ಕೆಳಗೆ ಬೀಳುವಂತಾಗುವುದರ ಜೊತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗು ವತ್ತರಿಸಿ ಬಂತು.



ಏಕೆಂದರೆ ಆಟೋ ಮೇಲಿದ್ದದ್ದು ನಾಗತೀಹೞಿ ಯವರು ನಿರ್ದೇಶಿಸಿರುವ "ಅಮೃತ ಧಾರೆ" ಚಿತ್ರದ ಹೆಸರು



ಅದೇ ಮೊದಲು ಅದೇ ಕೊನೆ ಇಂದಿಗೂ ನಮ್ಮ ವಸೀಮನ 'ಖನಡ" ನನಗೆ ಪ್ರಶ್ನಾತೀತ

ಶನಿವಾರ, ಜನವರಿ 30, 2010

ಕದ್ದ SMS ಜೋಕುಗಳು.................

ಅಬಕಾರಿ ಇಲಾಖೆಯ 9 ಹೊಸ ಯೋಜನೆಗಳು

1. ಮರಳಿ ಬಾ ಬಾರಿಗೆ
2. ಕುಡುಕರ ಅಂಗಳ
3. ಮದ್ಯಾಹ್ನದ ಮದ್ಯಪಾನ
4. ಭಾಗ್ಯದ ಬ್ರಾಂದಿ ಯೋಜನೆ
5. ದುಡಿ ಕುಡಿ ಯೋಜನೆ
6. ಕುಡುಕರಿಗಾಗಿ ದೇವದಾಸ್ ವಸತಿ ಶಾಲೆ
7. ಕುಡಿತ ಬಿಟ್ಟವರನ್ನು ಬಾರ್ ಕಡೆ ಆಕರ್ಷಿಸಲು ಮದ್ಯಪಾನ ಮೇಳ
8. ಕುಡುಕರ ಪ್ರತಿಭ ಪ್ರದರ್ಶನಕ್ಕಾಗಿ ಮದ್ಯಪಾನ ಕಾರಂಜಿ
9. ಜಿಲ್ಲಾ ಮಟ್ಟದ ಬಾರ್ & ರೆಸ್ಟೋರೆಂಟ್ ಗಳ ದರ್ಶನ
Sponsor :ಸರ್ವ ಕುಡುಕರ ಅಭಿಯಾನ (ಎಲ್ಲರೂ ಕುಡಿಯೋಣ ಎಲ್ಲರಿಗೂ ಕುಡಿಸೋಣ)



ರಾಜಕಾರಣಿ ವೇಷ


ಕಳ್ಳ-೧: ಏನ್ ಗುರು ಈ ಗೆಟಪ್......? ಒಳ್ಳೆ ರಾಜಕಾರಣಿ ವೇಷ ಹಾಕ್ಬಿಟ್ಟಿದ್ದೀಯಾ ?
ಕಳ್ಳ-೨: ಹೂಂ ಶಿಷ್ಯ, ಈ ಗೆಟಪ್‍ನಲ್ಲಿ ಹೋದ್ರೆ ಯಾವ ನನ್ಮಗ ನನ್ನ ಕಳ್ಳ ಅಂತ ಗುರ್ತು ಹಿಡೀತಾನೆ ?

ಮಹಿಳೆಯ ಅಭಿನಂದನೆ

ಕಳ್ಳನನ್ನು ಹಿಡಿದು ಹೊಡೆದು ಮೂರ್ಚೆ ಹೋಗುವಂತೆ ಮಾಡಿದ ಮಹಿಳೆಯನ್ನು ಅಭಿನಂದಿಸುತ್ತ ಪೋಲೀಸ್ ಅಧಿಕಾರಿ:
'ನಿಮ್ಮ ಸಾಹಸ ಮೆಚ್ಚಿಕೊಳ್ಳಬೇಕಮ್ಮಾ. ಇದೆಲ್ಲಾ ನಿಮಗೆ ಹೇಗೆ ಸಾಧ್ಯವಾಯಿತು' ಎಂದು ಕೇಳಿದರು.
ಮಹಿಳೆ: 'ನಿಜವಾಗಿ ಹೇಳಬೇಕೂಂದ್ರೆ ಆಗ ಬಂದವ ಕಳ್ಳ ಅಂತ ನನಗೆ ಗೊತ್ತೇ ಇರಲಿಲ್ಲ. ಅಷ್ಟು ರಾತ್ರೀಲಿ ಬಂದವ ನನ್ನ ಗಂಡನೇ ಅಂತ ತಿಳಿದು ಒನಕೆಯಿಂದ ಒಂದು ಬಿಗಿದೆ. ಆದರೆ ಚೀರಿಕೊಂಡ ಧ್ವನಿ ಬೇರೆ ಬಂತು' ಎಂದಳು.






ಅಪಘಾತ ವಲಯ ಅನ್ನೊ ಬೋರ್ಡು


ಈ ಹೈವೇ ತಿರುವಿನಲ್ಲಿ ’ಅಪಘಾತ ವಲಯ ನಿಧಾನವಾಗಿ ಚಲಿಸಿ’ ಅನ್ನೊ ಬೋರ್ಡು ಇತ್ತು ಈಗ ಕಾಣ್ತಾ ಇಲ್ಲವಲ್ಲ ???
ಬೋರ್ಡು ಹಾಕಿದ ಮೇಲೆ ಒಂದೂ ಅಪಘಾತ ಆಗಲಿಲ್ಲ ಸಾರ್. ಆದರಿಂದ ತೆಗೆದುಬಿಟ್ವಿ.







ಎಕ್ಸಿಡೆಂಟ್


ಪೋಲೀಸ್ : ಹೇಗಪ್ಪಾ ಎಕ್ಸಿಡೆಂಟ್ ಆಯ್ತು?
ಡ್ರೈವರ್ : ಅದೇ ಸರ್ ನಂಗೂ ಗೊತ್ತಾಗ್ತಾ ಇಲ್ಲ...!! ನಾನಾಗ ನಿದ್ದೆ ಮಾಡ್ತಾ ಇದ್ದೆ..!!!



ಏಟು - ತಿರುಗೇಟು


ಪೋಲೀಸ್: ಡೈನಮೋ ಇದ್ರೂ ಯಾಕ್ರೀ ಲೈಟಿಲ್ದೆ ಹೊಗ್ತಿದ್ದೀರಿ ?
ಸೈಕಲ್ ಸವಾರ: ರಸ್ತೆ ತುಂಬಾ ಲಿಟ್ ಇರುವಾಗ ಸೈಕಲ್‍ಗೆ ಯಾಕೆ ಸಾರ್ ಲೈಟು?
ಸೈಕಲ್ ಸವಾರ: ಸಾರ್ ! ಸಾರ್ ! ಚಕ್ರದ ಗಾಳಿ ಯಾಕೆ ಬಿಡ್ತಾ ಇದೀರಿ ?
ಪೋಲೀಸ್: ಹೊರಗೆಲ್ಲಾ ಇಷ್ಟೊಂದು ಗಾಳಿ ಇರುವಾಗ ಚಕ್ರಕ್ಕೆ ಯಾಕ್ರೀ ಗಾಳಿ !!!



ಡಾಕ್ಟರ್ ಮತ್ತು ರೋಗಿ...


ಡಾಕ್ಟರ್: ನಿಮ್ಮ ಕಿವಿಯಲ್ಲಿ 'ಹಲ್ಲಿ', ಹೋಗುವವರೆಗೆ ಏನು ಮಾಡುತ್ತಿದ್ದಿರಿ ?
ರೋಗಿ: ಸಾರ್ ಮೊದಲು ಕಿವಿ ಒಳಗೆ ಸೊಳ್ಳೆ ಹೋಯ್ತು,
ಅದನ್ನು ಹಿಡಿಯೋಕೆ 'ಹಲ್ಲಿ' ಹೋಯ್ತು,
ಅದಕ್ಕೆ ನಾನು ಹಲ್ಲಿ ಆ ಸೊಳ್ಳೆಯನ್ನು ಹಿಡ್ಕೊಂಡು ಬರುತ್ತೆ ಅಂತ ಸುಮ್ಮನಿದ್ದೆ. !!!



ಸ್ವಿಮ್ - ಸ್ಲಿಮ್


ಡಾಕ್ಟರ್ ಗುಂಡನಿಗೆ : ಎಲ್ಲೋದ್ರು ಡೈಲಿ ಸ್ವಿಮ್ ಮಾಡಿ ನೀವು ಸ್ಲಿಮ್ ಆಗ್ತೀರ.
ಗುಂಡ : ಹಲ್ಲೋ ಸುಮ್ಮನಿರಯ್ಯ ಸಾಕು ತಿಮಿಂಗ್ಳಗಳು ಡೈಲಿ ಸ್ವಿಮ್ ಮಾಡಲ್ವ ಅವು ಯಾಕೆ ಸ್ಲಿಮ್ ಆಗಿಲ್ಲ..... !!!



ಡಾ. Pshychotherapist


ಒಮ್ಮೆ ಡಾ. ಚೋಪ್ರ, Pshychotherapist, ಮನೆಯ ಮುಂದೆ ತಮ್ಮ ಹೆಸರನ್ನು ಬರೆಸಿಕೊಳ್ಳಲು ಆಸೆಯಾಗುತ್ತದೆ.
ಅದಕ್ಕೆ ಒಬ್ಬ painterನಿಗೆ ಕೆಲಸ ಒಪ್ಪಿಸುತ್ತಾನೆ.
ಆ painter ಕುಡಿದ ನಶೆಯಲ್ಲಿ ಹೀಗೆ ಬರೆಯುತ್ತಾನೆ.....
ಡಾ. ಚೋಪ್ರ, Pshycho The Rapist !!!



ಹೂವಿನ ಹಾರ


ರೋಗಿ : ಆಪರೇಷನ್ ಥಿಯೇಟರ್‌ನಲ್ಲಿ ಹೂವಿನ ಹಾರ ಯಾಕಿದೆ ?
ಡಾಕ್ಟರ್ : ಇದು ನನ್ನ ಮೊದಲ ಆಪರೇಷನ್. ಸಕ್ಸಸ್ ಆದ್ರೆ ನನಗೆ, ಫೇಲ್ ಆದ್ರೆ ನಿನಗೆ ! ! !



ನಾಲ್ಕು ನಾಲ್ಕು ಜನ


ಒಮ್ಮೆ ಗುಂಡ ಕಣ್ಣಿನ ಡಾಕ್ಟರ್ ಬಳಿ ಹೋದ :
ಗುಂಡ : ಡಾಕ್ಟರೆ ಏಕೋ ಇತ್ತಿಚೆಗೆ ನಾನು ಯಾರನ್ನಾದರೂ ನೋಡಿದರೆ ಇಬ್ಬಿಬ್ಬರು ಕಾಣುತ್ತಾರೆ.... ?
ಡಾಕ್ಟರ್ : ಅದನ್ನು ಹೇಳುವುದಕ್ಕೆ ಯಾಕ್ರಿ ನಾಲ್ಕು ಜನ ಬಂದ್ದಿದ್ದೀರ ! ! !



ಸ್ಕೂಲ್‍ಗೇ ಹೋಗಿಲ್ಲ .....


ಡಾಕ್ಟರ್ : ನಿಮ್ಮ ಕಿಡ್ನಿ ಫೇಲ್ ಆಗಿದೆ. !
ಗುಂಡ : ಏನ್ ಹೇಳ್ತಿದೀರಾ ಡಾಕ್ಟರ್ ? ನನ್ನ ಕಿಡ್ನಿ ಸ್ಕೂಲಿಗೇ ಹೋಗಿಲ್ಲ. ಹಾಗಿರೋವಾಗ ಕಿಡ್ನಿ ಫೇಲ್ ಆಗೋದು ಹೇಗೆ ???

ಭೂಕಂಪ

ಭೂಕಂಪದ ಬಗ್ಗೆ ಈಗ ಬರೆಯಲು ಕಾರಣ ಹೈಟಿಯಲ್ಲಿ ಮೊನ್ನೆ ಜರುಗಿದ ಭೀಭತ್ಸ "ಭೂಕಂಪನ". ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ, ಲೆಕ್ಕವಿಲ್ಲದಷ್ಟು ಜನ ನಿರ್ವಸತಿಕರಾಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಪ್ರಾಣ ಕಳೆದುಕೊಂಡ ಜೀವಿಗಳಿಗೆ ಅಶ್ರುತರ್ಪಣದ ಶ್ರದ್ದಾಂಜಲಿ ಅರ್ಪಿಸುತ್ತಾ ಭೂಕಂಪದ ಬಗ್ಗೆ ಸ್ವಲ್ಪತಿಳಿದುಕೊಳ್ಲೋಣ.



ಭೂಕಂಪ = ಭೂಮಿಯ ಅದಿರಾಟ = ಹೊಯ್ದಾಡುವಿಕೆ ಎಂಬುದು ಭೂಮಿಯ ಹೊರಪದರದಲ್ಲಿ ಶಕ್ತಿಯು ಇದ್ದಕ್ಕಿದ್ದಂತೆ ಬಿಡುಗಡೆಯಾದಾಗ ಅದು ಉಂಟುಮಾಡುವ ಭೂಕಂಪದ ತರಂಗಗಳ ಪರಿಣಾಮ ಎನ್ನಬಹುದು. ಭೂಕಂಪಗಳನ್ನು ಭೂಕಂಪದ ಮಾಪಕ ಅಥವಾ ರಿಕ್ಟರ್' ಮಾಪಕದ ಸಹಾಯದಿಂದ ದಾಖಲಿಸಲಾಗುತ್ತದೆ. ಇದಕ್ಕೆ ಭೂಕಂಪಲೇಖಿ (ಸೈಸ್ಮಗ್ರಾಫ್) ಎಂಬ ಹೆಸರೂ ಇದೆ. ಭೂಕಂಪವೊಂದರ ಕ್ಷ್ ಣದ ಪ್ರಮಾಣವನ್ನು ಅಥವಾ ಸಂಬಂಧಿತ ಮತ್ತು ಬಹುತೇಕ ಬಳಕೆಯಲ್ಲಿಲ್ಲದ 3ರಷ್ಟು ಪ್ರಮಾಣದೊಂದಿಗಿನ ರಿಕ್ಟರ್ ಪ್ರಮಾಣವನ್ನು, ಅಥವಾ ಬಹುತೇಕ ಗ್ ರಹಿಸಲು ಅಸಾಧ್ಯವಾದ ಕೆಳಮಟ್ಟದ ಭೂಕಂಪಗಳನ್ನು ಮತ್ತು ವಿಶಾಲವ್ಯಾಪ್ತಿಯಲ್ಲಿ ಮಾರ್ಪಡಿಸಲಾಗಿರುವ ಮೆರ್ಕ್ಯಾಲಿ ಮಾಪಕ ದಲ್ಲಿಅಲುಗಾಟದ ತೀವ್ರತೆಯನ್ನು ಅಳೆಯಲಾಗುತ್ತದೆ.



ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು ಉಂಟುಮಾಡುವ ಹಾಗೂ ಕೆಲವೊಮ್ಮೆ ನೆಲವನ್ನು ಸ್ಥಾನಪಲ್ಲಟಗೊಳಿಸುವ ಮೂಲಕ ಭೂಕಂಪಗಳು ಸ್ವತಃ ಸ್ಪಷ್ಟವಾಗಿ ಗೋಚರಿಸುತ್ತವೆ.



ಕಡಲತೀರದಾಚೆಗೆ ಭೂಕಂಪದ ಒಂದು ದೊಡ್ಡ 'ಅಧಿಕೇಂದ್ರ'ವು ಸ್ಥಿತವಾಗಿದ್ದಾಗ, ಕೆಲವೊಮ್ಮೆ ಸಾಕಷ್ಟು ಸ್ಥಾನಪಲ್ಲಟಕ್ಕೆ ಈಡಾಗುವ ಸಮುದ್ರತಳದ ಭೂಮಿಯು 'ಸುನಾಮಿ'ಯೊಂದನ್ನು ಉಂಟುಮಾಡುತ್ತದೆ.



ಭೂಕಂಪಗಳ ಸಮಯದಲ್ಲಿ ಕಂಡುಬರುವ ಅಲುಗಾಟಗಳು, ಭೂಕುಸಿತಗಳನ್ನು ಹಾಗೂ ಕೆಲವೊಮ್ಮೆ ಜ್ವಾಲಾಮುಖಿಯಂತಹ ಚಟುವಟಿಕೆಯನ್ನೂ ಪ್ರಚೋದಿಸಬಲ್ಲವು. ಅದರದೇ ಆದ ಅತ್ಯಂತ ಸಾರ್ವತ್ರಿಕ ಅರ್ಥದಲ್ಲಿ ಹೇಳುವುದಾದರೆ, ಭೂಕಂಪದ ಅಲೆಗಳನ್ನು ಹುಟ್ಟುಹಾಕುವ- ಅದು ಒಂದು ನೈಸರ್ಗಿಕ ಅನುಭವವೇದ್ಯ ಸಂಗತಿ ವಿದ್ಯಮಾನವಿರಬಹುದು ಅಥವಾ ಮನುಷ್ಯರಿಂದ ಉಂಟಾದ ಒಂದು ಘಟನೆಯೇ ಆಗಿರಬಹುದು- ಯಾವುದೇ ಭೂಕಂಪ ಘಟನೆಯನ್ನು ವಿವರಿಸಲು ''ಭೂಕಂಪ'' ಎಂಬ ಪದವನ್ನು ಬಳಸಲಾಗುತ್ತದೆ

ಸಂಕ್ರಾಂತಿ ಮತ್ತು ಆರೋಗ್ಯ

ಸಂಜೆಯ ವೇಳೆಗೆ ಎಳ್ಳುಬೆಲ್ಲಗಳನ್ನು ಒಬ್ಬರಿಗೊಬ್ಬರಿಗೆ ಕೊಟ್ಟು ಎಳ್ಳು ಬೆಲ್ಲ ತಿಂದು ಒಳ್ಳೆಯಮಾತಾಡೋಣ ಎಂದು ಹೇಳುತ್ತಾರೆ.

ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ಸಂಕ್ರಾಂತಿ ಇದು ಸೂರ್ಯ ಸಾಮೀಪ್ಯದಿಂದ ಸಿಕ್ಕುವ ಉಷ್ಣತೆಯ ಲಾಭದ ಆನಂದದ ಸಂಕೇತ. ಈ ಸಂಕ್ರಮಣ ಕಾಲದಿಂದ ಹಗಲಿನ ಭಾಗ ಹೆಚ್ಚಾಗುತ್ತದೆ. ಚಳಿಗಾಲದ ಕೊರೆತದ ಪರಿಣಾಮದಿಂದ ಬರಡಾದ ವಸ್ತುಗಳಲ್ಲಿ ನವಚೇತನ ತುಂಬಿಕೊಳ್ಳುತ್ತದೆ. ಈ ದಿವಸದಿಂದ ಸೂರ್ಯನು ತನ್ನ ಉತ್ತರಾಭಿಮುಖದ ಪ್ರಯಾಣವನ್ನು ಪ್ರಾರಂಭಿಸುತ್ತಾನೆ. ಹಾಗಾಗಿ ಇಂದಿನಿಂದ ‘ಉತ್ತರಾಯಣ’ ಪ್ರಾರಂಭ. ಇದು ಸಾಮಾನ್ಯವಾಗಿ ಜನವರಿ ತಿಂಗಳಿನ ಮಧ್ಯಭಾಗದಲ್ಲಿ ಬರುತ್ತದೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚಾಗಿ ವಾತಾವರಣದಲ್ಲಿ ತಾಪವು ಹೆಚ್ಚುತ್ತದೆ. ಆಯುರ್ವೇದ ರೀತಿ ಉತ್ತರಾಯಣದಲ್ಲಿ ಸೂರ್ಯನು ಪ್ರಬಲವಾಗುವುದರಿಂದ ಪ್ರಾಣಿಗಳ ಹಾಗೂ ಸಸ್ಯಗಳ ಬಲವನ್ನು ಹೀರುತ್ತಾನೆ. ದಕ್ಷಿಣಾಯನದಲ್ಲಿ ಚಂದ್ರನು ಪ್ರಬಲವಾಗುವುದರಿಂದ ಇವಕ್ಕೆ ಬಲವನ್ನು ನೀಡುತ್ತಾನೆ. ಉತ್ತರಾಯಣವು ಶಿಶಿರ ಋತುವಿನಿಂದ ಪ್ರಾರಂಭವಾಗಿ ವಸಂತ ಹಾಗೂ ಗ್ರೀಷ್ಮ ಋತುಗಳನ್ನೊಳಗೊಂಡಿರುತ್ತದೆ. ಹಾಗೆಯೇ ದಕ್ಷಿಣಾಯನವು ವರ್ಷಋತುವಿ ನಿಂದ ಪ್ರಾರಂಭವಾಗಿ ಶರತ್ ಮತ್ತು ಹೇಮಂತ ಋತುಗಳನ್ನು ಒಳಗೊಂಡಿರುತ್ತದೆ.



ಎಳ್ಳು, ಬೆಲ್ಲ(ಸಕ್ಕರೆ),ಕೊಬ್ಬರಿ ಮುಂತಾದವುಗಳಲ್ಲಿ ಸ್ನಿಗ್ಧತ್ವವು ಅಧಿಕವಾಗಿದ್ದು ಅವುಗಳು ಪ್ರಬಲವಾದ ವಾತ ಹಾಗೂ ಅಗ್ನಿಗಳನ್ನು ನಿಗ್ರಹಿಸುವ ಗುಣಗಳನ್ನು ಪಡೆದಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿ ಯಂದು ಅವುಗಳ ಮಿಶ್ರಣವನ್ನು ಎಲ್ಲರಿಗೂ ಹಂಚುವ ಹಾಗೂ ತಿನ್ನುವ ವಾಡಿಕೆ ಬಂದಿದೆ. ಅಂದು ಎಳ್ಳು ಬೆಲ್ಲವನ್ನು ಹಂಚಿ ಒಳ್ಳೆ ಒಳ್ಳೆ ಮಾತನಾಡಬೇಕೆಂಬ ಪ್ರತೀತಿಯು ಒಬ್ಬರಿಗೊಬ್ಬರ ಸ್ನೇಹವರ್ಧನೆಯ ಸಂಕೇತವಾಗಿದೆ. ಶರೀರದಲ್ಲಿ ಈ ಕಾಲದಲ್ಲಿ ರೂಕ್ಷತೆ ಹೆಚ್ಚಾಗುವುದರಿಂದ ಎಳ್ಳೆಣ್ಣೆಯ(ಅಂದರೆ ತೈಲಾದಿಗಳಿಂದ)ಶರೀರ ಮರ್ಧನೆ, ಬಿಸಿ ನೀರು ಸ್ನಾನ, ವ್ಯಾಯಾಮ ಮಾಡುವುದು, ಕಬ್ಬನ್ನು, ಕಬ್ಬಿನ ರಸದಲ್ಲಿ ತಯಾರಿಸಿದ ಪದಾರ್ಥಗಳನ್ನು ಸೇವಿಸುವುದು ಆಚರಣೆಗೆ ಬಂದಿದೆ. ಅಲ್ಲದೆ ಈ ಋತುವಿನ ಶೀತ ವಾತಾವರಣದ ಪ್ರಭಾವದಿಂದಾಗಿ ಚರ್ಮದಲ್ಲಿರುವ ಶಾರೀರಿಕ ಉಷ್ಣತೆಯು ಹೊಟ್ಟೆಗೆ ಹೊಕ್ಕಿರುತ್ತದೆ. ಹಾಗಾಗಿ ಈ ಋತುಗಳಲ್ಲಿ ಜನರಿಗೆ ಹಸಿವು ಹೆಚ್ಚಾಗಿರುತ್ತದೆ. ಹಸಿವನ್ನು ನಿಗ್ರಹಿಸಲು ಆಯುರ್ವೇದವು ಜೀರ್ಣಕ್ಕೆ ಭಾರವಾದ ಅಂದರೆ ಗುರು ಗುಣವುಳ್ಳ, ಸ್ನಿಗ್ಧಗುಣವುಳ್ಳ, ಸಿಹಿ ರುಚಿಯುಳ್ಳ, ಹೊಸದಾಗಿ ಬೆಳೆದ ಧಾನ್ಯಗಳ ಉಪಯೋಗವನ್ನು ಸೂಚಿಸುತ್ತದೆ. ಜೊತೆಯಲ್ಲಿ ಕಬ್ಬಿಗೂ ಹಾಗೂ ಕಬ್ಬಿನ ರಸದಿಂದ ತಯಾರಿಸಿದ ಪದಾರ್ಥಗಳಿಗೂ (ಅಂದರೆ ಸಿಹಿ ಪದಾರ್ಥಗಳು) ಗುರು, ಸ್ನಿಗ್ಧ ಮುಂತಾದ ಗುಣಗಳು ಹೇರಳವಾಗಿರುವುದರಿಂದ ಅವುಗಳ ಸೇವನೆಯು ಆ ಋತುವಿಗೆ ಹಿತಕರವಾಗಿರುವುದರಿಂದ ಸಾಂಕೇತಿಕವಾಗಿ ಸಂಕ್ರಾಂತಿಯಂದು ಎಳ್ಳು, ಬೆಲ್ಲ ಅಥವಾ ಸಕ್ಕರೆ ಮಿಶ್ರಣ ಹಾಗೂ ಸಿಹಿ ಪದಾರ್ಥಗಳ ಭೋಜನ ವಾಡಿಕೆಯಲ್ಲಿ ಬಂದಿದೆ.
ಸಂಕ್ರಾಂತಿಯಂದು ಪ್ರಾರಂಭವಾಗುವ ಶಿಶಿರ ಋತುವು ಶಾರೀರಿಕ ಬಲವನ್ನು ನೀಡುವ ಋತುವಾಗಿರು ವುದರಿಂದ ಆ ಋತುವಿನಲ್ಲಿ ವ್ಯಾಯಾಮ, ಮೈಥುನ ಸುಖ, ಪ್ರೀತಿಯುಕ್ತ ಸಂಭಾಷಣೆ ಮುಂತಾದ ಉತ್ಸಾಹದಾಯಕ ವರ್ತನೆ, ಚಟುವಟಿಕೆ, ಸಂತೋಷದಾಯಕವಾದ ಕ್ರಿಯೆಗಳಲ್ಲಿ ಮನಸೋಚ್ಛೆ ತೊಡಗಲು ಆಯುರ್ವೇದದಲ್ಲಿ ಉಪದೇಶವಾಗಿದೆ. ಇದರ ಸಂಕೇತವಾಗಿಯೇ ಸಂಕ್ರಾಂತಿ ಯನ್ನು ಜನರು ಸಡಗರದಿಂದ ಉಲ್ಲಾಸದಾಯಕವಾಗಿ ಪ್ರೀತಿ ಹರ್ಷಗಳೊಡನೆ ಆಚರಿಸುವುದು ರೂಢಿಗೆ ಬಂದಿದೆ.

ಸರ್ವೇಸಾಮಾನ್ಯವಾಗಿರುವ ಥೈರಾಯ್ಡ್ ಸಮಸ್ಯೆ..

ಮುಟ್ಟು ಹೆಚ್ಚಾಗಿ ಹೋದರೂ ಸರಿ, ಕಡಿಮೆಯಾದರೂ ಸರಿ ಡಾಕ್ಟರು ಮೊದಲು ಥೈರಾಯ್ಡಾ ಪರೀಕ್ಷೆ ಮಾಡಿಸುತ್ತಾರಲ್ಲಾ, ಹೀಗೇಕೆ? ಮುಖ ಸುಂದರವಾಗಿದ್ದರೂ, ಕೆಲವರಲ್ಲಿ ಗಳಗಂಡ ಬೆಳೆದುಕೊಂಡು ಅವರಿಗೆ ಬೇಸರ ಮೂಡಿಸುತ್ತಲ್ಲಾ ಯಾಕೆ?

ನೋಡಿ, ನಮ್ಮ ಕತ್ತಿನ ಮುಂಭಾಗದಲ್ಲಿ ಚಿಟ್ಟೆಯಾಕಾರದ ಗ್ರಂಥಿ ಒಂದಿದೆ. ಅದು ಗುರಾಣಿಯನ್ನು ಹೋಲುವ ಕಾರಣ, ಅದಕ್ಕೆ ಗ್ರೀಕ್ ಭಾಷೆಯ ಎರವಲಾದ ‘ಥೈರಾಯ್ಡೆ’ ಹೆಸರನ್ನು ನೀಡಿದ್ದಾರೆ. ಕೇವಲ 15-20 ಗ್ರಾಂ ತೂಗುವ ಈ ಪುಟ್ಟ ಅಂಗಕ್ಕೆ ಧಾರಾಳವಾದ ರಕ್ತ ಸರಬರಾಜಾಗಿರುವುದು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ಥೈರಾಯ್ಡಿನ ಮೂಲ ಘಟಕ (ಯೂನಿಟ್)ದ ಪರಿಧಿಯ ಒಳಹಾಸಿನಲ್ಲಿ ಒಂದೇ ಸ್ವರೂಪದ ಜೀವಕೋಶಗಳು ಸಾಲಾಗಿ ನಿಂತಿವೆ. ಅಲ್ಲಲ್ಲಿ ಕ್ಯಾಲ್ಸಿಟೋನಿನ್ ತಯಾರಿಸುವ ಸ್ವಲ್ಪ ಭಿನ್ನರೂಪದ ಜೀವಕೋಶಗಳೂ ಕಣ್ಣಿಗೆ ಬೀಳುತ್ತವೆ.

ಈ ಘಟಕದ ನಡುವೆ ಇರುವ ಸ್ಥಳದಲ್ಲಿ ಥೈರೊಗ್ಲಾಬ್ಯುಲಿನ್, ಥೈರೊಪ್ರೊಟೀನ್ ಇತ್ಯಾದಿಗಳ ಕಲಸು ದ್ರವ ತುಂಬಿಕೊಂಡಿದ್ದು, ಇಲ್ಲಿಂದಲೇ ಟಿ-4 ಮತ್ತು ಟಿ-3 ರಸದೂತಗಳು ಸಿದ್ಧವಾಗಿ ಸಂಚಿತವಾಗುತ್ತವೆ. ಈ ಪ್ರಕ್ರಿಯೆಗೆ ಪ್ರೇರಣೆ, ಪಿಟ್ಯುಟರಿ ಗ್ರಂಥಿಯಿಂದ ಒಸರುವ ಟಿ.ಎಸ್.ಎಚ್. ರಸದೂತದಿಂದ ಹಾಗೂ ಅದಕ್ಕೆ ಪ್ರಚೋದನೆ ಮಿದುಳಿನಲ್ಲಿನ ಹೈಪೊಥಾಲಮಸ್‌ನಿಂದ.

ಥೈರಾಯ್ಡೆ ಗ್ರಂಥಿಯ ಸ್ರವಿಕೆಯನ್ನು ಹೊರತರಲು ಯಾವ ನಾಳವೂ ಇಲ್ಲ! ಇದೊಂದು ನಿರ್ನಾಳ ಗ್ರಂಥಿ. ಇಲ್ಲಿನ ಸ್ರಾವ ನೇರವಾಗಿ ರಕ್ತ ಸೇರುತ್ತದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತಣ ಸಂಬಂಧವಯ್ಯಾ’ ಎನ್ನುವಂತೆ, ಥೈರಾಯ್ಡಾ ರಸದೂತಕ್ಕೆ ಮೂಲ ವಸ್ತು ಐಯೊಡಿನ್. ಈ ಮೂಲಧಾತು ನಮ್ಮ ಆಹಾರದಿಂದಲೇ ಬರಬೇಕಾಗಿದೆ. ಆಹಾರದಲ್ಲಿನ ಐಯೊಡೈಡ್ ಅಂಶ ಹೀರಿಕೆಯಾಗಿ, ರಕ್ತ ಸೇರಿ, ಥೈರಾಯ್ಡೆ ಗ್ರಂಥಿಯನ್ನು ತಲಪುತ್ತದೆ. ‘ಪೆರಾಕ್ಸಿಡೇಸ್’ ಕಿಣ್ವದ ಸಹಾಯದಿಂದ ಅದು ಥೈರಾಯ್ಡಿ ಗ್ರಂಥಿಯ ಜೀವಕೋಶಗಳಲ್ಲಿ ಆಮ್ಲಜನಕೀಕರಣ ಹೊಂದುತ್ತದೆ. ಮುಂದೆ ಸಂಕೀರ್ಣ ಬದಲಾವಣೆಗಳಾಗಿ, ನಂತರ, ಟಿ-4 ಹಾಗೂ ಟಿ-3 (ಥೈರಾಕ್ಸಿನ್, ಟ್ರೈ ಐಯೊಡೋ ಥೈರೊಸಿನ್) ರಸದೂತಗಳು ತಯಾರಾಗಿ, ರಕ್ತಕ್ಕೆ ಬಿಡುಗಡೆಯಾಗುತ್ತವೆ.

ಟಿ-4 ಮತ್ತು ಟಿ-3ಗಳ ಹೆಚ್ಚು ಭಾಗ ರಕ್ತಸಾರ (ಸೀರಮ್)ದ ಪ್ರೋಟೀನ್ ಅಂಶದೊಡನೆ ಬಂಧಿತವಾಗುತ್ತದೆ. ಉಳಿದ ಅನಿರ್ಬಂಧಿತ ಭಾಗ ಚಲನಶೀಲವಾಗಿದ್ದು, ದೇಹದ ನಾನಾ ಅಂಗಾಂಶಗಳಿಗೆ ಸಾಗುತ್ತದೆ. ಟಿ-4, ಟಿ-3ಗಳ ಪ್ರಮಾಣದಲ್ಲೇನಾದರೂ ಹೆಚ್ಚೂಕಡಿಮೆಯಾದರೆ, ಆ ಅಂಗಾಂಗಗಳ ಮಾಮೂಲು ಕೆಲಸಗಳು ಕುಂಠಿತವಾಗುವುದನ್ನು ಗಮನಿಸುತ್ತೇವೆ.

ಈ ಐಯೊಡಿನ್ ಅಂಶ ಸಮುದ್ರದ ಉತ್ಪನ್ನಗಳಲ್ಲಿ ಹೇರಳವಾಗಿ ಸಿಗುತ್ತದೆ. ಮೀನು, ಕಾಡ್ ಲಿವರ್ ಎಣ್ಣೆ ಇತ್ಯಾದಿಗಳು ಆಹಾರದಲ್ಲಿದ್ದಾಗ ಇದರ ಕೊರತೆ ಇರುವುದಿಲ್ಲ. ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹಾಲು, ಮಾಂಸ, ತರಕಾರಿಗಳಲ್ಲೂ ಸಿಗುತ್ತದೆ. ಒಳನಾಡಿನ ಗುಡ್ಡಪ್ರದೇಶಗಳಲ್ಲಿ ವಾಸಿಸುವವರ ಆಹಾರದಲ್ಲಿ ಐಯೊಡಿನ್ ಅಂಶ ಬಹಳ ಕಡಿಮೆ ಇರುವ ಕಾರಣ ಅಲ್ಲಿನ ಅನೇಕರಲ್ಲಿ ಥೈರಾಯ್ಡಾ ರಸದೂತದ ಪ್ರಮಾಣವೂ ತಗ್ಗಿರುತ್ತದೆ.

ಅಂಥವರ ಕುತ್ತಿಗೆಯ ಮುಂಭಾಗದಲ್ಲಿ ಥೈರಾಯ್ಡಿ ಗ್ರಂಥಿ ಉಬ್ಬಿಕೊಂಡು ಅವರಿಗೆ ‘ಗಳಗಂಡ’ (ಗಾಯ್ಟರ್) ಇದೆ ಎನ್ನುತ್ತೇವೆ. ವಿಚಿತ್ರವೆಂದರೆ, ಕರಾವಳಿಯ ಕೆಲವು ಪ್ರದೇಶಗಳಲ್ಲಿಯೂ ಗಳಗಂಡ ಇರುವವರನ್ನು ಹೆಚ್ಚಾಗಿ ಕಾಣುತ್ತೇವೆ. ಬಹುಶಃ ಅವರ ಆಹಾರದಲ್ಲಿ ಮೀನು ಧಾರಾಳವಾಗಿದ್ದರೂ, ಐಯೊಡಿನ್ ಹೀರಿಕೆಯನ್ನು ತಡೆಯುವ ಬೇರೆ ಅಂಶಗಳೂ ಅಲ್ಲಿ ಇರಬಹುದೇನೋ. ಆದರೆ ಇತ್ತೀಚೆಗೆ ಅಡಿಗೆ ಉಪ್ಪಿನಲ್ಲಿ ಐಯೊಡಿನ್ ಸೇರಿಸುವಂತೆ ಕಾನೂನು ನಿರ್ಬಂಧಿಸಿರುವುದರಿಂದ ಎಲ್ಲೆಲ್ಲೂ ಗಳಗಂಡದ ಪಿಡುಗು ಕಡಿಮೆಯಾಗಿದೆ ಎನ್ನಬಹುದು.

ಥೈರಾಯ್ಡ ರಸದೂತದ ಏರುಪೇರುಗಳನ್ನು ಹದಿಹರೆಯದ ಹುಡುಗಿಯರಲ್ಲೂ ಗರ್ಭಿಣಿಯರಲ್ಲೂ ಹೆಚ್ಚಾಗಿ ಗಮನಿಸುತ್ತೇವೆ. ಹದಿಹರೆಯದ ಬಿಸುಪು ದಿನಗಳಲ್ಲಿ ಆ ರಸದೂತ ಕೆಲವೊಮ್ಮೆ ಇಳಿಮುಖವಾದಾಗ ಹುಡುಗಿಯರ ತೂಕ ಹೆಚ್ಚುವುದನ್ನು ಕಾಣುತ್ತೇವೆ. ಪಾಠಗಳಲ್ಲಿ ಪ್ರಗತಿ ಕುಗ್ಗಿ, ಅವರಲ್ಲಿ ಸೋಮಾರಿತನವೂ ಹೆಚ್ಚುವ ಸಾಧ್ಯತೆ ಇದೆ. ದೃಷ್ಟಿದೋಷಗಳೂ ಇರಬಹುದು. ಈ ಸಮಯದಲ್ಲಿ, ಶಾಲಾ ಮಕ್ಕಳ ತಪಾಸಣೆ ಬಹಳ ಮುಖ್ಯ. ಥೈರಾಕ್ಸಿನ್ ರಸದೂತವನ್ನು ತಕ್ಕ ಪ್ರಮಾಣದಲ್ಲಿ ನೀಡುವುದರ ಮೂಲಕ, ಸಮಸ್ಯೆ ಪರಿಹಾರವಾಗುತ್ತೆ.

ಥೈರಾಯ್ಡೆ ರಸದೂತದ ಮಟ್ಟ ಏರುವುದೂ ಉಂಟು, ಆಗ ಆ ಮಕ್ಕಳು ಸಣ್ಣಗಾಗುತ್ತಾರೆ, ಅವರಿಗೆ ನಿದ್ರೆ ದೂರವಾಗುತ್ತದೆ, ಚಡಪಡಿಕೆ ಹೆಚ್ಚುತ್ತದೆ, ಕಣ್ಣುಗಳು ಅಗಲವಾಗುವುದೂ ಉಂಟು, ಆಗ ಕಾರ್ಬಮಸೋಲ್, ರೇಡಿಯೊ ಆಕ್ಟಿವ್ ಐಯೊಡಿನ್, ಅಪರೂಪಕ್ಕೆ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಬೇಕಾಗುತ್ತವೆ.

ಸ್ತ್ರೀಯರಿಗೆ ಮಕ್ಕಳಾಗದಿದ್ದಾಗ, ಪದೇ ಪದೇ ಗರ್ಭಪಾತವಾದಾಗ, ಹುಟ್ಟಿದ ಮಗುವಿನಲ್ಲಿ ಆಜನ್ಮ ವಿಕಲತೆ, ಬುದ್ಧಿಮಾಂದ್ಯತೆ ಇತ್ಯಾದಿ ದೋಷಗಳಿದ್ದಾಗ, ಥೈರಾಯ್ಡಾ ತಪಾಸಣೆ ತೀರಾ ಅಗತ್ಯವಾಗುತ್ತದೆ. ಋತುಸ್ರಾವ ತೀರಾ ಹೆಚ್ಚಾದರೂ, ಕಡಿಮೆಯಾದರೂ ಥೈರಾಯ್ಡಾ ಗ್ರಂಥಿಯೇ ಅನೇಕ ಸಮಯಗಳಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ತಜ್ಞರು ಟಿ-4, ಟಿ-3 ಪ್ರಮಾಣವನ್ನು ಮೊದಲು ತಿಳಿದುಕೊಳ್ಳುತ್ತಾರೆ. ಟಿ.ಎಸ್.ಎಚ್. (ಥೈರಾಯ್ಡಾ ಪ್ರೇರಕ ರಸದೂತ) ಮಟ್ಟವನ್ನೂ ಅಳೆಯಬೇಕಾಗುತ್ತದೆ.

ಗರ್ಭಿಣಿಯಲ್ಲಿ ಆಯಾಸ, ಮಲಬದ್ಧತೆ, ಚಳಿ ತಡೆದುಕೊಳ್ಳಲಾಗದ ಪರಿಸ್ಥಿತಿ, ಮೈಬಾವು, ಹೃದಯ ಬಡಿತದ ತೀವ್ರತೆ ಹೆಚ್ಚಾಗುವುದು, ಥೈರಾಯ್ಡಾ ಗ್ರಂಥಿಯ ಉಬ್ಬುವಿಕೆಗಳಿದ್ದರೂ ಥೈರಾಯ್ಡಾ ಪರೀಕ್ಷೆ ಅನಿವಾರ್ಯವಾಗುತ್ತದೆ.

ಗರ್ಭಸ್ಥ ಮಗುವಿಗೆ ಥೈರಾಯ್ಡೆ ರಸದೂತಗಳು ಸರಿಯಾದ ಪ್ರಮಾಣದಲ್ಲಿ ದಕ್ಕದಿದ್ದರೆ, ಸೊರಗುತ್ತದೆ. ಕೆಲವೊಮ್ಮೆ ಹೆರಿಗೆಯಲ್ಲಿ ಬೇಗ ಜೀವ ನೀಗುವುದೂ ಉಂಟು. ಹಾಗಾಗಿ, ಥೈರಾಯ್ಡೆ ಕೊರತೆಯನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು, ‘ಥೈರಾಕ್ಸಿನ್’ ಮಾತ್ರೆಗಳನ್ನು ಗರ್ಭಿಣಿಗೆ ಕೊಡಬೇಕಾಗುತ್ತದೆ.

ಥೈರಾಯ್ಡೆ ತನ್ನ ಪ್ರಭಾವವನ್ನು ದೇಹದ ಎಲ್ಲಾ ಪ್ರಕ್ರಿಯೆಗಳ ಮೇಲೂ ಆಕ್ಟೋಪಸ್‌ನಂತೆ ಚಾಚಿಕೊಂಡಿರುತ್ತದೆ. ಅದೊಂದು ಸ್ನೇಹಗ್ರಂಥಿ, ನಿಜ. ಹಾಗಿದ್ದರೂ, ಕೆಲವೊಮ್ಮೆ ಅದರ ಕಾರ್‍ಯನಿರ್ವಹಣೆ ಮುಗ್ಗರಿಸುತ್ತದೆ. ಆಗ ಆರಂಭದ ಹಂತದಲ್ಲಿಯೇ ತಜ್ಞರು ಅದನ್ನು ಪತ್ತೆ ಮಾಡಬಲ್ಲರು. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲರು. ಆ ಪುಟ್ಟ ಗ್ರಂಥಿಯನ್ನು ಮತ್ತೆ ಹಳಿಗೆಳೆದು ನಿಲ್ಲಿಸಿ, ನಮಗೆ ಆರೋಗ್ಯವನ್ನು ನೀಡಬಲ್ಲರು. ಇದನ್ನು ನಾವು ಮರೆಯಬಾರದು!

ಮರೆಯಾಗುತ್ತಿರುವ ಕನ್ನಡ ಶಿಶು ಗೀತೆಗಳು....

ಮಗಳಿಗೆ ಎರಡುವರೆ ವರ್ಷವಾಗುತ್ತಿದ್ದಂತೆ ಮಡದಿಯ ಗೊಣಗಾಟದ ಅವಧಿ ದಿನದಿಂದ ದಿನಕ್ಕೆ ಹೆಚ್ಚುವ ನಿತ್ಯಬಳಕೆಯ ವಸ್ತುಗಳಂತೆ ಹೆಚ್ಚುತ್ತಿತ್ತು. ಕಡೆಗೊಂದು ದಿನ



"ನೋಡಮ್ಮ ನಂಗೆ ಪ್ರೀ ಸ್ಕೂಲ್ ಗೋಸ್ಕರ ೫೦-೬೦ ಸಾವಿರ ಕಟ್ಟೋಕೆ ಇಷ್ಟವಿಲ್ಲ. ಇಲ್ಲೇ ಮನೆ ಹತ್ರ ಇರೋ ಸ್ಕೂಲ್ ಗೆ ಸೇರಿಸ್ತೀನಿ, ಆಗುತ್ತಾ?'' ಅಂದೆ.



"ಓ ಕೆ, ಆದ್ರೆ ೧ನೇ ಕ್ಲಾಸ್ ಗೆ ಸೆಂಟ್ರಲ್ ಸ್ಕೂಲೇ ಬೇಕು ಏಕೆಂದರೆ ನಮ್ಮ ಮಕ್ಕಳಿಗೆ ನಾವ್ ಕೊಡೋಕಾಗೋ ಆಸ್ತಿ ಅಂದ್ರೆ ಉತ್ತಮ ವಿದ್ಯಬ್ಯಾಸ ಅಷ್ಟೇ" ಅಂತ ತೀರ್ಪಿತ್ತಳು.



"ಅಲ್ವೇ ನೀನು ನಾನು ಇಬ್ರೂ ಗೌರ್ನಮೆಂಟ್ ಸ್ಕೂಲಲ್ಲೇ ಅಲ್ವಾ ಓದಿದ್ದು? ಏನಾಗಿದೆ ನಮಗೆ ಇವಾಗ? ಅದೂ ಅಲ್ದೆ ಅಷ್ಟು ದುಡ್ಡು ಮೇಲಿಂದ ಉದುರುತ್ತಾ?'' ವಾದ ಮುಂದಿಟ್ಟೆ.. ಮಡದಿಯ ಮೂಗಿನ ತುದಿಯ ಕೋಪ ನಾಲಿಗೆಗೆ ಬಂತು



"ರ್ರೀ ಮೂಲೆಗ್ಹಾಕ್ರಿ ನಿಮ್ಮ ಕಂತೆ ಪುರಾಣನ, ಯಾವ್ಯಾವ್ದುಕ್ಕೋ ಸುಮ್ ಸುಮ್ಮನೆ ಸಾಲ ಮಾಡೋಕೆ ಆಗುತ್ತೆ, ನಂ ಮಗು ಭವಿಷ್ಯಕ್ಕೆ ಮಾಡಿ ಕಷ್ಟಪಟ್ಟು ಸಾಲತೀರ್ಸಿದ್ರೇ ತಪ್ಪೇನೂ ಇಲ್ಲ, ಸುಮ್ಮನೆ ಏನೇನೋ ಯೋಚಿಸಿ ಯಾರಾರ್ದೋ ಮಾತು ಕೇಳಿ ನನ್ ತಲೆ ತಿನ್ ಬೇಡಿ. ಹೇಳ್ದಷ್ಟ್ ಮಾಡ್ರೀ"



ಬಹುಶಃ ಈ ರೀತಿಯ ಸಂಭಾಷಣೆಗಳು ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯ. ಕೈಯಲ್ಲಿ ಕಾಸಿದ್ದವರು ಚಿಂತೆಯಿಲ್ಲದೆ ದೊಡ್ಡ ದೊಡ್ಡ ಶಾಲೆ ಸೇರಿಸುತ್ತಾರೆ, ಕಾಸಿಲ್ಲದ ನಮ್ಮಂತವರು ಅಷ್ಟು ದೊಡ್ಡ ಶಾಲೆ ಅಲ್ಲದಿದ್ದರೂ ಸುಮಾರಾಗಿರೊ ಆಂಗ್ಲಶಾಲೆಗೆ ಸೇರಿಸಿ ಮಕ್ಕಳ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸು ಕಾಣುತ್ತಾ ಇರುತ್ತೇವೆ. ನಾನು ಸಹ ಹಾಗೆಯೇ ಮನೆಯ ಹತ್ತಿರವಿದ್ದ ಶಾಲೆಗೆ ಮಗಳನ್ನು ದಾಖಲಿಸಿದೆ, ಅವಳ ಪುಸ್ತಕ ಫೀಜು ಅದು ಇದಿ ಅಂತ ಒಂದಷ್ಟು ತೆತ್ತು ಮನೆಗೆ ಬಂದೆ. ೨ ದಿನ ಕಳೆಯಿತು ಮೂರನೇ ದಿನಕ್ಕೆ "ತಿಂಕಳ್ ತಿಂಕಳ್ ಇಟ್ಸು ತಾರ್" (Twinkle twinkle little staar) ಅನ್ನುವುದನ್ನು ನನ್ನ ಮಗಳ ಬಾಯಿಂದ ಕೇಳಿ ನಮಗೆಲ್ಲಾ ಆನಂದವೋ ಆನಂದ..,ಸ್ವರ್ಗ ಒಂದೇ ಗೇಣು.....!!!!!!! ಖುಷಿಯಾಗಿ ಅವಳಿಗೆ ಕೊಟ್ಟಿದ್ದ ಪುಸ್ತಕಗಳನ್ನು ನೋಡಿದೆ... ಏನಾಶ್ಚರ್ಯ!!! ಕೊಟ್ಟಿದ್ದ ೯ ಪುಸ್ತಕಗಳಲ್ಲಿ ಕನ್ನಡವರ್ಣಮಾಲೆಯ ಒಂದೇ ಒಂದು ಪುಸ್ತಕ ಬಿಟ್ಟ್ರೆ ಮಿಕ್ಕೆಲ್ಲವೂ ಆಂಗ್ಲಭಾಶೆಯ ಪುಸ್ತಕಗಳು!! ಕಡೇ ಪಕ್ಷ ಮಕ್ಕಳ ಶಿಶು ಗೀತೆಗಳನ್ನು ತಿಳಿಸಿಕೊಡುವ ಪುಸ್ತಕವೂ ಸಹ ಇಂಗ್ಲೀಷಿನದ್ದೇ..!!



ನಮಗೆ ಇಂದಿನ ಸ್ಪರ್ಧಾಜಗತ್ತಿಗೆ ಇಂಗ್ಲೀಷ್ ನ ಅವಶ್ಯಕಥೆ ಇದೆ ನಿಜ, ಆದರೆ ನಾವು ಎಷ್ಟೇ ದೊಡ್ಡವರಾದರೂ ಬದುಕಿರುವಾಗ ಮತ್ತು ನಂತರ ನಮ್ಮನ್ನು ಜಗತ್ತು ಗುರುತಿಸುವುದು ನಮ್ಮ ಹುಟ್ಟಿನ ನೆಲೆಯಿಂದಲೇ ಅಲ್ಲವೇ? ನಮ್ಮ ಮೂಲ ನೆಲೆಯಾದ ಕನ್ನಡವನ್ನು ಎತ್ತರಕ್ಕೆ ತಲುಪಿದಾಗ ಮರೆತುಹೋದರೆ ನಾವು ಕನ್ನಡಿಗರಾಗಿ ಹುಟ್ಟಿ ಸಾರ್ಥಕವೇನು ಅಲ್ಲವೇ?



ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಕೇವಲ ಒಂದೇ ಒಂದು ಪೀಳಿಗೆಯಿಂದ ಪೀಳಿಗೆಗೆ ಎಂತಹ ವ್ಯತ್ಯಾಸ!!!. ಮಹಾನ್ ಕವಿಗಳಾದ ಶ್ರೀ ಜಿ.ಪಿ.ರಾಜರತ್ನಂ, ಕಯ್ಯಾರ ಕಿಯ್ಣಣ್ಣ ರೈ ಮತ್ತಿತರ ಮಹಾನ್ ಕವಿಗಳು ಮಕ್ಕಳಿಗೆಂದೇ ಬರೆದು ಪ್ರಸಿದ್ದಿ ಪಡೆದಿದ್ದ ಜನಪ್ರಿಯ ಶಿಶು ಗೀತೆಗಳನ್ನು ಕಲಿಯುವ ಅವಕಾಶದಿಂದ ನಮ್ಮಮಕ್ಕಳು ವಂಚಿತರಾಗುತ್ತಿದ್ದಾರೆ ಎನಿಸಿತು. ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಅಥವಾ ಈ ಎಲ್ಲಾ ಕಾರಣಗಳು ಇರಬಹುದು. ನಂತರ ನನ್ನ ಮಗಳನ್ನು ಕರೆದು



ಶ್ರೀ ಜಿ.ಪಿ.ರಾಜರತ್ನಂ ರವರ 'ನಾಯಿಮರಿ ನಾಯಿಮರಿ ತಿಂಡಿ ಬೇಕೇ?' ಹಾಡು ಹೇಳಿಕೊಟ್ಟೆ "ತಿಂಕಳ್ ತಿಂಕಳ್ " ಗಿಂತ ಚೆನ್ನಾಗಿ ಹೇಳತೊಡಗಿದಳು. ಅವಳ ಜೊತೆ ನಾನು ಮಗುವಾದೆ. ಮುಂದಿನ ಭಾನುವಾರ ಯಾವುದೋ ಪುಸ್ತಕದ ಹುಡುಕಾಟಕ್ಕಾಗಿ 'ಸ್ವಪ್ನ' ಪುಸ್ತಕಮಳಿಗೆಗೆ ಹೋದಾಗ ಆಕಸ್ಮಿಕವಾಗಿ ಮಕ್ಕಳಹಾಡುಗಳ "ಚಿಣ್ಣರ ಚಿಲಿಪಿಲಿ" ಮತ್ತು "ಚಿಣ್ಣರ ಮುತ್ತಿನ ಹಾಡುಗಳು" ಎಂಬ ೨ ಸಿ.ಡಿ ಗಳನ್ನು (ತಯಾರಕರು Buzzers) ತಂದು ಮಗಳಿಗೆ ತೋರಿಸಿದಾಗ ಬಹಳ ಖುಶಿಪಟ್ಟಳು. ನಾನು ನನ್ನ ಬಾಲ್ಯದಲ್ಲಿ ಕಲಿತ ಎಷ್ಟೋ ಹಾಡುಗಳನ್ನು ಅವಳಿಗೂ ಕಲಿಸಿದ ಸಂತ್ರುಪ್ತಿ ನನಗೂ ಉಂಟಾಯ್ತು. ಇತ್ತೀಚೆಗೆ ಅವಳ ಶಾಲೆಯಲ್ಲಿ ನಡೆದ ಶಿಶುಗೀತೆಯ ಸ್ಪರ್ಧೆಯಲ್ಲಿ (ಅವರ ಶಾಲೆಯ ಪ್ರಕಾರ Rhymes Compitetion) ಅದೇ 'ನಾಯಿಮರಿ ನಾಯಿಮರಿ' ಗೀತೆಹಾಡಿ ಎಲ್ಲರ ಮೆಚ್ಚುಗೆ ಮತ್ತು ಪ್ರಶಂಸೆಗಳಿಸಿದಳು ಅಷ್ಟೇ ಅಲ್ಲ ಅವಳ ಟೀಚರ್ ನನ್ನಿಂದ ಆ ಸಿ.ಡಿಗಳನ್ನು ಎರವಲು ಪಡೆದು ಶಾಲೆಯಲ್ಲೂ ಸಹ English Rhymes ನ ಜೊತೆ ಬಣ್ಣದ ತಗಡಿನ ತುತ್ತೂರಿಯನ್ನೂ ಸಹ ಕಲಿಸುತ್ತಿದ್ದಾರೆ. ಅದರ ಸಾಹಿತ್ಯದ ಸಾಲುಗಳನ್ನು ಒಮ್ಮೆ ನೋಡಿ....



ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ




ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು




ತನಗೆ ತುತ್ತೂರಿ ಇದೆಯೆಂದು ಬೇರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತೂರಿ ನಡೆದನು ಬೀದಿಯಲಿ




ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ




ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು




ಖಂಡಿತ ನೀವು ಸಹ ನಿಮ್ಮ ಬಾಲ್ಯಕ್ಕೆ ಹೊರಟುಹೋದ್ರಿ ಅನ್ಸುತ್ತೆ.. ನಿಮ್ಮ ಮಕ್ಕಳಿಗೂ ಕಲಿಸುತ್ತಿರುತ್ತೀರ ಅಂತ ಗೊತ್ತು ಅಕಸ್ಮಾತ್ ಮರೆತಿದ್ದರೆ ಕಲಿಸಿನೋಡಿ ಎಷ್ಟು ಆನಂದ ಸಿಗುತ್ತೆ ಅಂತ...




ಅರ್ಥವತ್ತಾದ ಶಿಶುಗೀತೆಗಳು, ಇಂಪಾದ ಹಾಡು ಮತ್ತು ಕನ್ನಡ ಸೊಗಡಿನ ಕಾರ್ಟೂನ್ ಗಳು ಈ ಕೊಂಡಿಯ ಮೂಲಕ ನಿಮ್ಮದಾಗಲಿ. ಮಕ್ಕಳಿಗೆ ತೋರಿಸಿ ನಲಿಸಿರಿ. ಮಕ್ಕಳು ಆನಂದತುಂದಿಲರಾಗುತ್ತಾರೆ. ದೊಡ್ಡವರಲ್ಲಿನ ಮಗು ಮನಸ್ಸು ಕೂಡ ಸಂತಸಪಡುತ್ತದೆ



http://www.youtube.com/profile_videos?user=chakrira&p=r

ನ್ಯಾಯಾಂಗ ಮತ್ತು ನ್ಯಾಯ.....??!!

ಪ್ರಚಲಿತ ವಿದ್ಯಮಾನ

ನ್ಯಾಯಾಂಗದಿಂದಷ್ಟೇ ಅಲ್ಲ ಬೇರ್ಯಾವುದೇ ರೀತಿಯಿಂದಲೂ ಸಾಮಾನ್ಯರಿಗೆ 'ನ್ಯಾಯ' ಎನ್ನುವುದು ಮರುಭೂಮಿಯ ಮರೀಚಿಕೆಯಾಗಿದೆ..ಅದಕ್ಕೆ ಇತ್ತೀಚಿನ ಉದಾಹರಣೆಗಳನ್ನು ನೋಡಿ.. ಪ್ರಜಾಸತ್ತೆಯ ದ್ಯೋತಕವಾದ ರಾಜ ಭವನ ವನ್ನೇ ತಮ್ಮ ಕಾಮತೃಷೆಯನ್ನು ತೀರಿಸಿ ಕೊಳ್ಳಲು ಬಳಸಿದ ಆರೋಪದ ಮೇಲೆ ಅತ್ಯಂತ ಅವಮಾನಕರವಾದ ರೀತಿಯಲ್ಲಿ ಪದತ್ಯಾಗ ಮಾಡಿದ ರಾಜ್ಯಪಾಲರು. ಕ್ರೀಡಾಪಟುವಾಗುವ ಕನಸು ಹೊತ್ತು ರಾಜ್ಯ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ ಉಪಪೊಲೀಸ್ ಮಹಾ ನಿರ್ದೇಶಕನ ಕಚೇರಿಗೆ ಹೋಗಿದ್ದ 14 ವರ್ಷದ ಬಾಲೆಯ ಮೇಲೆ ತನ್ನ ಕಚೇರಿಯಲ್ಲೇ ಅತ್ಯಾಚಾರ ವೆಸಗಿದ ರಾಕ್ಷಸ ಸ್ವರೂಪಿ ಆರಕ್ಷಕ 19 ವರ್ಷಗಳ ನಂತರವೂ ರಾಜಾರೋಷವಾಗಿ ಓಡಾಡಿಕೊಂಡಿರುವುದು. ತನ್ನ ಇಲಾಖೆಯ ಪೇದೆರ್ಯೋವನ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಆಕೆಯ ಮಾನಹರಣ ಮಾಡಿ, ರಾಜಕೀಯ ಹಾಗೂ ಅಧಿಕಾರಿ ವಲಯದಲ್ಲಿ ತನ್ನ ಪ್ರಭಾವ ವನ್ನು ಬಳಸಿ 13 ವರ್ಷಗಳು ಕಳೆದು ಹೋದ ನಂತರವೂ ಕಣ್ಣು ತಪ್ಪಿಸಿ ತಿರುಗುತ್ತಿರುವ ಮರ್ತ್ತೋವ ಉಪಪೊಲೀಸ್ ಮಹಾ ನಿರ್ದೇಶಕ ಮಹಾಶಯ. ಲೈಂಗಿಕ ಅಪರಾವರ್ತನೆಯ ಆರೋಪಕ್ಕೆ ಒಳಗಾಗಿ ಪ್ರಜಾ ಪ್ರತಿನಿಧಿ ಎಂಬ ಪರಿಕಲ್ಪನೆ ಹಾಗೂ ಆಚರಣೆಗಳೆರಡಕ್ಕೂ ವಿರುದ್ಧವೆನಿಸಿದ ರೀತಿಯಲ್ಲಿ ವರ್ತಿಸಿದ ವ್ಯಕ್ತಿಗೆ ಮಂತ್ರಿ ಪದವಿ ದಯಪಾಲಿಸಿದ ಆಡಳಿತಾರೂಢ ವ್ಯವಸ್ಥೆ. ಮೇಲಿನ ಎಲ್ಲಾ ಉದಾಹರಣೆಗಳನ್ನು ನೋಡಿದ ನಂತರ "ಭ್ರಷ್ಟಾಚಾರದಿಂದ ನ್ಯಾಯಾಂಗವೋ, ನ್ಯಾಯಾಂಗದಿಂದ ಭ್ರಷ್ಟಾಚಾರವೋ?" ಎನ್ನುವ ಪ್ರಶ್ನೆಗೆ 'ಕೋಳಿ ಮೊದಲೋ ಮೊಟ್ಟೆ ಮೊದಲೋ?' ಎನ್ನುವುದಕ್ಕೆ ಉತ್ತರ ಉಡುಕುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟ. ಈ ಮಾತನ್ನು ಹೇಳಲು ಕಾರಣ ಮೇಲಿನ ಎಲ್ಲ ಘಟನೆಗಳಲ್ಲಿ ಅನ್ಯಾಯವೆಸಗಿರುವವರು "ನ್ಯಾಯ ಕೊಡಿಸುವವರು ಅಥವಾ ನ್ಯಾಯ ಕಾಪಾಡುವವರು ಅಥವಾ ನ್ಯಾಯವನ್ನು ರೂಪಿಸುವವರೇ ಆಗಿದ್ದಾರೆ. ಮೇಲೆ ತಿಳಿಸಿದ ಉದಾಹರಣೆಗಳು ಸಮಾಜದ ಮೇಲ್ವರ್ಗದ ಜನರಿಗಾದ ಅನ್ಯಾಯಗಳು. ಇನ್ನು ನಮ್ಮನಿಮ್ಮಂತಹ ಸಾಮಾನ್ಯರಿಗೆ 'ನ್ಯಾಯ' ಕನ್ನಡಿಯೊಳಗಿನ ಗಂಟಲ್ಲದೆ ಮತ್ತೇನು ಅಲ್ಲ ಅಲ್ಲವೇ? ಪರಿಸ್ಥಿತಿ ಹೀಗೆಯೇ ಮುಂದು ವರೆದರೆ ಗತಿಸಿ ಹೋಗಿರುವ ಕಾಲ ಘಟ್ಟವೆಂಬ ಕಪಾಟಿನಲ್ಲಿ ಹುದುಗಿ ಹೋಗಿರುವ ಇನ್ನೆಷ್ಟು ಪ್ರಕರಣಗಳು ಹೊರಬರುತ್ತವೆಯೋ ತಿಳಿಯದು. ಇದಕ್ಕೆ ಮುಖ್ಯ ಕಾರಣಗಳು ಅಧಿಕಾರದ ದುರುಪಯೋಗ ಹಾಗೂ ಅದನ್ನು ಎದುರಿಸುವಲ್ಲಿ ಸಂಪೂರ್ಣ ವಾಗಿ ಸೋತಿರುವ ಪ್ರಜೆಗಳು ಎನ್ನುವುದು ಸೂರ್ಯನಷ್ಟೇ ಸತ್ಯ. ಇದರಬಗ್ಗೆ ಸಾಮಾಜಿಕ ಚಿಂತನೆ ಮತ್ತು ಪರಿಹಾರ ಎರಡೂ ಶೀಘ್ರ ಅತ್ಯಗತ್ಯ..

ಮತ್ತೆ ಬಾ!!

ಗಾನಗಾರುಡಿಗ ಸಿ. ಅಶ್ವಥ್ ಗೆ ಅಶ್ರುತರ್ಪಣ

ಕಂಚಿನ ಕಂಠದ ಓ ಗಾರುಡಿಗ
ಇಹ ಲೋಕಕೆ ಏಕೆ ಹಾಡಿದೆ ಚರಮಗೀತೆ?
ಭಾವತುಂಬಿದ ಎನ್ನ ಮನ ಅಗಲ ಕರ್ಣಗಳ ತೆರೆದು
ಕಾಯುತ್ತಿದೆ ಬಕಪಕ್ಷಿಯಂತೆ ನಿನ ನಾದನಿನಾದಕ್ಕೆ
ಮತ್ತೆ ಬಾ!! ತಪ್ಪದೆ ಬಾ!!

ಸೋಮವಾರ, ಜನವರಿ 4, 2010

ಕರ್ನಾಟಕದಲ್ಲಿ ಪ್ರಳಯ ಆಗಿಹೋಗಿದೆ!!!!!!!!!!!!!

ಹೌದು ನಮ್ಮ ಕರ್ನಾಟಕದಲ್ಲಿ ನಿಜಕ್ಕೂ ಪ್ರಳಯ ಆಗಿಹೋಗಿದೆ!!
ನಿನ್ನೆ ಸಿ.ಅಶ್ವಥ್, ಇಂದು ಡಾII ವಿಷ್ಣುವರ್ಧನ್!!!!!!!
ಬೆಳ್ಳಂಬೆಳಗ್ಗೆ ಮತ್ತೊಂದು ಶಾಕ್! ಅದೇ 'ಸಿಂಹ' ತನ್ನ 'ಘರ್ಜನೆ' ನಿಲ್ಲಿಸಿದೆ..
'ವಂಶವೃಕ್ಷ' ದಿಂದ ಚಿತ್ರ ಅಭಿಯಾನ ಪ್ರಾರಂಭಿಸಿ, 'ನಾಗರಹಾವಿನ' ಬಿಸಿರಕ್ತದ ಯುವಕ, 'ಗಂಧದಗುಡಿ'ಯ ಚಲಬಿಡದ ಸಾಹಸಿ 'ಕರ್ಣ' ದ 'ಕರುಣಾಮಯಿ', 'ಗಂಡುಗಲಿ ರಾಮ' ನಾಗಿ 'ಸಾಹಸಸಿಂಹ' ನಾದ ಈ "ಯಜಮಾನ' ಇಂದು ತನ್ನ ಇಹಲೋಕದ ಪಯಣ ಮುಗಿಸಿದ್ದಾರೆ...

ವಿಷ್ಣು ಸರ್ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.......

ನಿಮ್ಮ ಆತ್ಮವೆಂಬ 'ಬಂಗಾರದ ಕಳಶ' ಚಿರವಾಗಿ ಕನ್ನಡಿಗರಾದ ನಮ್ಮೆಲರ ಮನದಲ್ಲಿ ಹೊಳೆಯುತ್ತಿರುತ್ತದೆ
ಮೇರು ನಟನ ಸಾವು ಕನ್ನಡ ಕಲಾ ಜಗತ್ತಿಗೆ ತುಂಬಲಾರದ ನಷ್ಟ!. ನಂಬಲು ಸಾಧ್ಯವಾಗದ ಸುದ್ದಿ ಮನಸಿಗೆ ಆಘಾತ ತಂದಿದೆ. ವಿಷ್ಣು ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಪರಮಾತ್ಮನು ನೀಡಲಿ. ಅದ್ಬುತ ಕಲಾವಿದನ ಆತ್ಮಕ್ಕೆ ದೇವರು ಶಾಂತಿ ನೀಡಲಿ.....

ಕೇವಲ ಹಿಂದಿ ಗಾಯಕರಿದ್ದರಷ್ಟೇ ಜನ ಸೇರುತ್ತಾರೆ!! ಎಂದು ಕೊಂಡಿದ್ದ ನಮಗೆ "ಕನ್ನಡವೇ ಸತ್ಯ" ಎಂಬ ಡಿಂಡಿಮ ಭಾರಿಸಿ ಕನ್ನಡಿಗರ ಕನ್ನಡತನವನ್ನು ಬಡಿದೆಬ್ಬಿಸಿದ 'ಗಾನ ಗಾರುಡಿಗ' "ನಮ್ಮ ನಡುವೆ ಇಲ್ಲಾ!!" ಎನ್ನುವುದನ್ನೂ ಕಲ್ಪಿಸಿಕೊಳ್ಳಲೂ ಸಹ ಆಗುತ್ತಿಲ್ಲ
ಅವರ ಹಾಡುಗಳನ್ನು ಕೇಳುತ್ತಾ ಅವರಿಗೆ ಶ್ರದಾಂಜಲಿ ಸಲ್ಲಿಸೋಣ..

ಕೇಳ್ರಪ್ಪೋ........ ಕೇಳಿ.......ನಮ್ ರಾಜೇಂದ್ರ ಸಿಂಗ್ ಬಾ(0)ಬು ಹೇಳ್ತಾವ್ರೆ.....

1) ಕನ್ನಡ ಚಿತ್ರ ನಿರ್ದೇಶಿಶಲು ಹೊಸಬರಿಗೆ ಅವಕಾಶವಿಲ್ಲ.........

2) ಇನ್ನು ಮುಂದೆ ಕನ್ನಡ ಚಿತ್ರ ನಿರ್ದೇಶಿಸುವವರು 8 ಚಿತ್ರಕ್ಕೆ ಸಹನಿರ್ದೇಶಕರಾಗಿರ್ಬೇಕು..........

3)ಕ್ಯಾಮರಾಮೆನ್ ಡಿಪ್ಲೋಮೋ ಮುಗಿಸಿದ ಕೂಡಲೆ ಕ್ಯಾಮರಾ ಹಿಡಿದು ಚಿತ್ರ ತೆಗೆಯುವಂತಿಲ್ಲ..........

4)ಕಲಾವಿದರ ಸಂಭಾವನೆ ನಾವು ಕೊಟ್ಟಷ್ಟು...........

5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು...........

ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........ಇತ್ಯಾದಿ........


ಅಂತ ನಮ್ಮ ಅಂದ ಕಾಲತ್ತಿಲ್ ಸೂಪರ ಹಿಟ್ ಚಿತ್ರಗಳ ನಿರ್ದೇಶಕ, ಮಕ್ಕಳ ಚಿತ್ರ ಇದ್ದರೆ 'ನಾಗರಹೊಳೆ' ಇದ್ದಂತೆ ಇರಬೇಕು ಎಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ರಾಜಕೀಯ ಚಿತ್ರ ಹೇಗಿದ್ದರೆ ಚೆನ್ನ 'ಅಂತ' ತೋರಿಸಿಕೊಟ್ಟಂತಹ ನಿರ್ದೇಶಕ, ಕನ್ನಡದಲ್ಲಿ ಮಿಲಿಟರಿ ಕಥೆಯುಳ್ಳ ಸಿನಿಮಾವನ್ನು 'ಮುತ್ತಿನ ಹಾರ' ದಹಾಗೆ ಪೋಣಿಸಬಹುದೆಂದು ತೋರಿಸಿಕೊಟ್ಟಂತಹ ನಿರ್ದೇಶಕ, ಒಂದು ಹಾಸ್ಯ ಚಿತ್ರ ಜನರಿಗೆ ಹೇಗೆ ರಿಲೀಫ್ ಕೊಡಬಲ್ಲದು ಎನ್ನುವುದಕ್ಕೆ 'ಕುರಿಗಳು ಸಾರ್ ಕುರಿಗಳು ' ತೋರಿಸಿಕೊಟ್ಟಂತಹ ನಿರ್ದೇಶಕ, ಒಂದೂವರೆ ವರ್ಷ ಸಮಯ ತೆಗೆದುಕೊಂಡು ಒಂದು ಕೆಟ್ಟ ಸಿನಿಮಾವನ್ನು ಹೇಗೆ ಮಾಡಬಾರದೆಂದು 'ಲವ್ 2004' ತೆಗೆದುತೋರಿಸಿಕೊಟ್ಟಂತಹ ನಿರ್ದೇಶಕ "ರಾಜೇಂದ್ರಸಿಂಗ್ ಬಾಬು" ರವರು ಮೇಲಿನ ರೀತಿಯ 'ಫುಂಖಾನುಫುಂಖ' ಮಾತುಗಳನ್ನು ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ಉದುರಿಸುತ್ತವುದನ್ನು ನೋಡಿದಾಗ ಇವರೇನಾ ಆ "ಪ್ರಭುದ್ದ ನಿರ್ದೇಶಕ?" ಎಂದು ಯಾರಿಗಾದರೂ ಅನ್ನಿಸುತ್ತಿದ್ದುದ್ದು ಸಹಜವೇ.
ಇದಕ್ಕೆಲ್ಲಾ ಅವರು ಕೊಡುವ ಕಾರಣ "ಕನ್ನಡ ಚಿತ್ರರಂಗದ ಸದ್ಯದ ದುಸ್ಥಿತಿಯಿಂದ ಪಾರುಮಾಡಲು ಈ ಶರತ್ತುಗಳು ಅತ್ಯವಶ್ಯಕ"
ಹೌದು! ಇಂದು ಕನ್ನಡ ಚಿತ್ರರಂಗ ಹಲವಾರು ಸಮಸ್ಯೆಗಳ ಸಾಗರದಲ್ಲಿ ಮುಳುಗಿದೆ, ಈ ವರ್ಷ ಇಲ್ಲಿಯವರೆಗೂ ಬಿಡುಗಡೆಯಾಗಿರುವ 110 ಚಿತ್ರಗಳಲ್ಲಿ ಸೂಪರ್ ಹಿಟ್ ಬದಿಗಿರಲಿ ಕಾಸು ಹಾಕಿದ ನಿರ್ಮಾಪಕರಿಗೆ ಹಾಕಿದ ಕಾಸು ಗಿಟ್ಟಿದ್ದು ಕೇವಲ 6 ಚಿತ್ರಗಳಲ್ಲಿ ಮಾತ್ರ ಎನ್ನುವ ಸತ್ಯ ಯಾರಿಗೂ ನೋವುಂಟುಮಾಡುತ್ತದೆ. ಹಾಗೆಂದು ನಿಮ್ಮ ಇಷ್ಟಕ್ಕೆ ಬಂದಂತೆ ನಿಯಮಗಳನ್ನು ಮಾಡಿ ಯಾವಪುರುಷಾರ್ಥವನ್ನು ಸಾಧಿಸಲು ಹೊರಟಿದ್ದೀರಾ? ಬಾಬುರವರೆ..
1) ಕನ್ನಡ ಚಿತ್ರ ನಿರ್ದೇಶಿಶಲು ಹೊಸಬರಿಗೆ ಅವಕಾಶವಿಲ್ಲ.........
ಎನ್ನುವ ನೀವು ಸಹ ನಿಮ್ಮ ಮೊದಲ ಚಿತ್ರ ನಿರ್ದೇಶಿಸುವಾಗ ನೀವು ಹಳಬರಾಗಿರಲಿಲ್ಲ ಅಲ್ಲವೆ? ನಿಮ್ಮ ಚಿತ್ರತೆಗೆಯುವ ತಂತ್ರಗಾರಿಕೆ ಮರೆತುಹೋಗಿ ನಿಮಗೆ ಅವಕಾಶವಿಲ್ಲವೆಂಬ ಹತಾಶೆ ನಿಮ್ಮನ್ನು ಹೀಗೆ ಮಾತಾಡಿಸುತ್ತಿದೆಯೋ.........? ನೀವೆ ಹೇಳಬೇಕು..

2) ಇನ್ನು ಮುಂದೆ ಕನ್ನಡ ಚಿತ್ರ ನಿರ್ದೇಶಿಸುವವರು 8 ಚಿತ್ರಕ್ಕೆ ಸಹನಿರ್ದೇಶಕರಾಗಿರ್ಬೇಕು..........
ನೀವು ನಿಮ್ಮ ಮೊದಲ ಚಿತ್ರ ನಿರ್ದೇಶಿಸುವ ಮೊದಲು ಯಾವ ಚಿತ್ರದ ಟೈಟಲ್ ಕಾರ್ಡ್ ನಲ್ಲೂ ನೀವು ಸಹ ನಿರ್ದೇಶಕರಾಗಿದ್ದೀರೆಂದು ನೋಡಿದ ನೆನಪಿಲ್ಲ, ಹಾಗೇನಾದರು ಇದ್ದರೆ 1 ಅಥವಾ 2 ಚಿತ್ರಗಳಲ್ಲಿ ಇರಬಹುದು. ಹೀಗಿರುವ ನೀವೇ ಈರೀತಿ ಹೇಳುವುದು ನ್ಯಾಯವೇ?

5) ಒಂದು ಚಿತ್ರವನ್ನು ಕೇವಲ 45 ದಿನಗಳಲ್ಲಿ ಮುಗಿಸಲೇಬೇಕು..........
ಎನ್ನುವ ನೀವು ನಿಮ್ಮ ಮಗನ ಭವಿಶ್ಯ ರೂಪಿಸಲು 'ಲವ್ 2004' ಚಿತ್ರವನ್ನು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಚಿತ್ರೀಕರಿಸಿದ್ದು ಯಾಕೆ?...
ಈ ರೀತಿ ಹುಚ್ಚು ನಿಯಮಗಳನ್ನು ರೂಪಿಸಿ ನಿಮ್ಮತೂಕವನ್ನು ಕಡಿಮೆ ಮಾಡಿಕೊಳ್ಳುವ ಬದಲು, ಹೊಸಬರಿಗೆ ನಿಮ್ಮ ನಿರ್ದೇಶನ ಸಾಮರ್ಥ್ಯವನ್ನು ಧಾರೆಯೆರೆದು ಮಾರ್ಗದರ್ಶನ ನೀಡಿ ಅವರು ತಪ್ಪುಗಳನ್ನು ಸರಿಪಡಿಸಲೆತ್ನಿದ್ದರೆ ನಿಮ್ಮ ಹಿರಿತನಕ್ಕೆ, ನಿಮ್ಮ ಅನುಭವಕ್ಕೆ ನಿಮ್ಮ ಮು(ತ್ಸ)ದಿತನಕ್ಕೆ ನಿಜವಾದ ಬೆಲೆಬಂದು ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗಿ ಉದ್ದಾರವಾಗುತ್ತಿತ್ತಲ್ಲವೆ?..................
"ಯೋಚಿಸಿ ನೋಡಿ .........."

ಶನಿವಾರ, ಡಿಸೆಂಬರ್ 26, 2009

ಕೆಲ ಕದ್ದ SMS ಜೋಕುಗಳು.................

ಶರಾಬು
ಶರಾಬು ದೇಶದ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿರುವ ರಾಕ್ಷಸ.

ಬನ್ನಿ, ಎಲ್ಲರೂ ಸೇರಿ ಒಂದೊಂದು ಬಾಟಲಿ ಕುಡಿದು ಎಲ್ಲವನ್ನು ಖಾಲಿ ಮಾಡೋಣ !!!


’’



ವಿಚಿತ್ರ
ಗಂಡ ಕುಡಿದ ಅಮಲಿನಲ್ಲಿ ಹೆಂಡತಿಯ ಹತ್ತಿರ ಬಂದು ಹೇಳಿದ:

'ಲೇ, ಇವತ್ತು ಒಂದು ಭಾರಿ ವಾಹನ ನನ್ನ ಮೇಲೆ ಹರಿದ್ರು ನಾನು ಸಾಯಲಿಲ್ಲ ಕಣೇ'

'ಇದು ವಿಚಿತ್ರಾನೇ. ಅದಿರಲಿ ನಿಮ್ಮ ಮೇಲೆ ಹರಿದ ವಾಹನ ವಾದರೂ ಯಾವುದು. ?' ಹೆಂಡತಿ ಕೇಳಿದಳು.

'AEROPLANE' ಕಣೇ !!!!!









ಗುಂಡ ಮ್ಯಾರೀಡ್
ಕುಡುಕನೊಬ್ಬ ಬಾರಿಗೆ ಹೋದ. ಪಕ್ಕದ ಟೇಬಲ್‍ನಲ್ಲಿದ್ದವ ವೇಟರ್‌ಗೆ ’ಜಾನಿ ವಾಕರ್ ಸಿಂಗಲ್’ ಎಂದ.

ಮುಂದಿನ ಟೇಬಲ್‍ನಲ್ಲಿ ಕೂತಿದ್ದ ಮತೊಬ್ಬ ’ಪೀಟರ್ ಸ್ಕಾಚ್ ಸಿಂಗಲ್’ ಎಂದ.

ಈ ಕುಡುಕನೂ ಸ್ಟೈಲಾಗಿ ’ಗುಂಡ ಮ್ಯಾರೀಡ್’ ಎಂದ.










ಕಾಫಿ ಬಾರ್ ಮತ್ತು ವೈನ್ ಬಾರ್

ಕಾಫಿ ಬಾರ್‌ಗೂ ಮತ್ತು ವೈನ್ ಬಾರ್‌ಗೂ ಏನ್ ವ್ಯತ್ಯಾಸ ?

ಎಲ್ಲಾ ಪ್ರೀತಿಗಳು ಕಾಫಿ ಬಾರ್‌ನಲ್ಲಿ ಪ್ರಾರಂಭವಾಗಿ ವೈನ್ ಬಾರ್‌ನಲ್ಲಿ ಮುಕ್ತಾಯವಾಗುತ್ತದೆ !!!








ಟ್ಯಾಕ್ಸಿ ಬಾಡಿಗೆ
ಕುಡುಕನೊಬ್ಬ ಟ್ಯಾಕ್ಸಿ ನಿಲ್ಲಿಸಿ ಕೂತು ಚಾರ್-ಮಿನಾರ್ ಕಡೆಗೆ ಬಿಡು ಎಂದ, ಸ್ವಲ್ಪ ಹೊತ್ತಾದ ನಂತರ ಚಾರ್-ಮಿನಾರ್ ಬಂತು:

ಕುಡುಕ: ಬಾಡಿಗೆ ಎಷ್ಟಾಯ್ತು ?

ಡ್ರೈವರ್: ಇಪ್ಪತ್ತು ರೂಪಾಯಿ

ಕುಡುಕ: ಜೇಬಿನಿಂದ ಹತ್ತು ರೂಪಾಯಿಯ ನೋಟೊಂದನ್ನು ಡ್ರೈವರಿಗೆ ಕೊಟ್ಟ.

ಡ್ರೈವರ್: ಇದು ಹತ್ತು ರೂಪಾಯಿ

ಕುಡುಕ: ನೀನು ನನ್ನ ಹುಚ್ಚ ಅಂದ್ಕೊಂಡಿದ್ದಿಯೇನು ? ನೀನೂ ನನ್ನ ಜೊತೆಗೆ
ಕೂತ್ಕುಂಡಿರಲಿಲ್ವ ? ನಿನ್ನಬಾಡಿಗೆ ನಾನು ಕೊಡ್ಲ ???








ಬಕೆಟ್ ತೂತು!!!!!

ಸರ್ದಾರ್: ಡಾಕ್ಟ್ರೆ! ಈ ಬಕೇಟ್ ತೂತಾಗಿದೆ. ಸ್ವಲ್ಪ ನೋಡಿ!

ಡಾಕ್ಟರ್: ಅದೇನೋ ಸರಿ !! ಅದನ್ನ ನಂಗ್ಯಾಕೆ ಹೇಳ್ತಿದೀರಾ? ಗೊತ್ತಾಗ್ಲಿಲ್ಲ..!
ಸರ್ದಾರ್: ನೀವು ತುಂಬಾ ಫೇಮಸ್ ಪ್ಲಾಸ್ಟಿಕ್ ಸರ್ಜನ್ ಅಲ್ವ!! ಅದಕ್ಕೆ!!

'
'
'
ಕೆಮ್ಮು

ಬ್ರ್ಯಾಂಡಿ ಕುಡದ್ರೆ ಕೆಮ್ಮು ಹೋಗುತ್ತಾ ?

ತಿಮ್ಮ : ಯಾಕೆ ಹೋಗಲ್ಲ ?

ನನ್ನ ಹೊಲ, ಮನೆಗಳೇ ಹೋಗಿವೆ ......

ಇನ್ನು ನಿನ್ನ ಕೆಮ್ಮು ಏನ್ ಮಹಾ !!!
'
'
'
'
'
'

ಮೋಹಿನಿ ಕಾಟ
'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ

'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು

ಆದರೆ ಇಂದು 'ತಂಗಾಳಿಯಲ್ಲಿ ನಾನು ತೇಲಿ ಬಂದೆ ' ಎಂದು

ನೀನು 'ಮೋಹಿನಿ'ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು

ಅಷ್ಟಕ್ಕೂ ನಿನಗೆ 'Drink N Drive' ಮಾಡಿ!

'ಸ್ವರ್ಗ' ಸೇರಲು ನಾ ಹೇಳಿದ್ದೆನಾ ! ?
'
'
'
'
'
'

ಫ್ಯಾಮಿಲಿ ಕಳ್ಳ
ಪೋಲಿಸ್ ; ನೀನ್ಯಾವಾಗಲೂ ಅವರ ಮನೆಯಲ್ಲೇ ಯಾಕೆ ಕಳ್ಳತನ ಮಾಡ್ತಿಯಾ?

ಕಳ್ಳ : ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್ ಫ್ಯಾಮಿಲಿ ಲಾಯರ್ ಇರೋ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ.
,
,
,
,
,
,
,
,
,
ಖೈದಿ ಸರ್ದಾರ್
ಸರ್ದಾರ್‌ನ ನೇಣು ಹಾಕಬೇಕಾದರೆ,

ಜೈಲರ್ : ನಿನ್ನ ಕೊನೆ ಆಸೆ ಏನು ?

ಸರ್ದಾರ್ : ನನ್ನ ನೇಣು ಹಾಕ್ತಿದ್ದೀರಲ್ಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ಹಾಕಿ ಸಾಕು !!!









ಏರೊಪ್ಲೇನ್ ಹತ್ತಿಸಬೇಕಾ...
ಗುಂಡ ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.

ಪೋಲಿಸ್ : ಏನಯ್ಯಾ ರಾತ್ರಿ 12 ಗಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ? ಏರೊಪ್ಲೇನ್ ಹತ್ತಿಸಬೇಕಾ?

ಗುಂಡ : ಅಯ್ಯೋ ಬೇಡಾ ಸಾರ್...ಯಾವ್ದಾದ್ರು ಒಂದು ಆಟೋ ನಿಲ್ಲಿಸಿ ಹತ್ತಿಸಿಬಿಡಿ ಸಾಕು.. !!!







ಸಂಪೂರ್ಣ ರಾಮಾಯಣ
ಪೇದೆ : ರಾಮನವಮಿ ಪ್ರಯುಕ್ತ ನಿನ್ನೆ ಜೈಲಿನ ಖೈದಿಗಳು ’ಸಂಪೂರ್ಣ ರಾಮಾಯಣ’ ನಾಟಕ ಆಡಿದರು ಸಾರ್.

ಜೈಲಿನ ಅಧಿಕಾರಿ : ಅದಕ್ಕೇನೀಗ ?

ಪೇದೆ : ಹನುಮಂತನ ಪಾತ್ರ ವಹಿಸಿದ ಖೈದಿ ಸಂಜೀವಿನಿ ಸಸ್ಯ ತರಲು ಹೋದವನು ಇನ್ನೂ ಬಂದೇ ಇಲ್ಲ ಸಾರ್ !!!







ಬಾಂಬ್
ಗೆಳೆಯರಿಬ್ಬರಿಗೆ ಮೂರು ಬಾಂಬ್‍ಗಳು ಸಿಕ್ಕವು. ಪೋಲೀಸ್ ಸ್ಟೇಷನ್‍ಗೆ ತೆಗೆದುಕೊಂಡು ಹೋಗುವಾಗ ಒಬ್ಬಾತ ಹೇಳಿದ

’ದಾರಿಯಲ್ಲಿ ಒಂದು ಬಾಂಬ್ ಢಂ ಅಂದ್ಬಿಟ್ರೆ, ಏನ್ ಮಾಡೋದು ?’

ಇನೊಬ್ಬ ತಣ್ಣಗೆ ಪ್ರತಿಕ್ರಯಿಸಿದ - ’ಮೂರಲ್ಲಿ ಎರಡು ಸಿಕ್ಕಿದ್ದು ಅನ್ನೋಣ’ !!!







ಪೇಪರ್ ನೋಡಿದರಾಯ್ತು
ಕಳ್ಳರಿಬ್ಬರು ದರೋಡೆ ಮಾಡಿ ಬಂದು ಒಂದು ಕಡೆ ಕುಳಿತರು.

ಒಬ್ಬ ಕಳ್ಳ : ಎಷ್ಟು ಹಣ ನೋಡೋಣವೇನೋ ?

ಇನ್ನೊಬ್ಬ ಕಳ್ಳ : ನಂಗೆ ನಿದ್ದೆ ಬರುತ್ತಿದೆ ಮನೆಗೆ ಹೋಗೋಣಪ್ಪ. ಹೇಗಿದ್ದರು ನಾಳೆ ಪೇಪರ್‌ನಲ್ಲಿ ಬರುತ್ತಲ್ಲ.....!!!






CORRESPONDENCEನಲ್ಲಿ ಕಾರ್ ಚಾಲನೆ
ಕಾರನ್ನು ವೇಗವಾಗಿ ಓಡಿಸುತ್ತಿದ್ದ ಗುಂಡನನ್ನು ಪೋಲೀಸರು ಹಿಡಿದರು.

ಗುಂಡ : ಸಾರ್ ನಾನು ಕಾರ್ ಚಾಲನೆಯನ್ನು ಕಲಿಯುತ್ತಿದ್ದೇನೆ !!!

ಪೋಲೀಸ್ : ಹಾಗಾದರೆ ನಿನ್ನ INSTRUCTOR ಎಲ್ಲಿ ?

ಗುಂಡ : ನಾನು CORRESPONDENCEನಲ್ಲಿ ಕಲಿಯುತ್ತಿದ್ದೇನೆ ಸಾರ್.......!!!






ಪಾರ್ಕಿಂಗ್ ಫೈನ್
ಗುಂಡ ನೋ ಪಾರ್ಕಿಂಗ್ ಏರಿಯಾದಲ್ಲಿ ಕಾರು ನಿಲ್ಲಿಸಿ ಶಾಪಿಂಗ್‍ಗೆ ಹೋದ.

ಮರಳಿ ಬರುವಷ್ಟರಲ್ಲಿ ಗುಂಡನ ಕಾರಿನ ಮೇಲೆ ’ PARKING FINE’ ಎಂದು ಬರದ ನೋಟಿಸ್ ಅಂಟಿಸಲಾಗಿತ್ತು.

ಅದರ ಕೆಳಗೆ ಗುಂಡ ಬರೆದ : THANKS FOR THE COMPLIMENTS !!!

ಚಾರ್ಲ್ಸ್ ಡಾರ್ವಿನ್ ನ Struggle for Existance ಮತ್ತು ಭಯೋತ್ಪಾದಕರೆಂಬ ಬಸ್ಮಾಸುರರು......

ಭಯೋತ್ಪಾದನೆ ಜಗತ್ತಿನಲ್ಲಿ ಯಾರನ್ನು ಬೇಕಾದರೂ ಎಲ್ಲಿಬೇಕಾದರೂ ಬೆಚ್ಚಿಬೀಳಿಸುವ ಏಕ ಮಾತ್ರ ಪದ....
'ಭಯೋತ್ಪಾದನೆ' ಒಂದು ಪೆಡಂಭೂತ, ಮನುಕುಲ ವಿನಾಶಕವಷ್ಟೇಅಲ್ಲ, ' ಕುಲಕ್ಕೆ ಮೃತ್ಯು ಕೊಡಲಿಯ ಕಾವು' ಎಂಬಂತೆ ತಾನು ತನ್ನವರೆಂಬ ಬೇಧ ಭಾವ ಇರುವುದಿಲ್ಲ, ಹಿರಿಯರು-ಕಿರಿಯರು ಎಂಬ ವಯಸ್ಸಿನ ತಾರತಮ್ಯವಿರುವುದಿಲ್ಲ, ಬಡವ ಬಲ್ಲಿದ ನೆಂಬ ಕಾರುಣ್ಯದ ಕಣ್ಣು ಸಹ ಇಲ್ಲ ಈ ಭಯೋತ್ಪಾದನೆಗೆ. ಎದುರಿಗೆ ಬಂದವರನ್ನು ನಾಶಮಾಡುವುದಷ್ಟೇ ಗೊತ್ತು.

ಬಹುಶಃ 'ಭಯೋತ್ಪಾದನೆ' ಜೀವಿಯ ಉಗಮದೊಂದಿಗೇ ಹುಟ್ಟಿರಬೇಕು. ತನ್ನದೇ ಪರಿಸರದ ಮತ್ತೊಂದು ಜೀವಿ ಅಥವಾ ತನ್ನದೇ ಜಾತಿಯ ಮತ್ತೊಬ್ಬ ಸದಸ್ಯರ ನಡುವೆ ಆಹಾರಕ್ಕಾಗಿ ಅಂತಃಕಲಹವೇರ್ಪಟ್ಟು ಯಾವುದು ಶಕ್ತಿಯುತವಾಗಿ ನಿಂತು ಬಡಿದಾಡಿ ಗೆಲ್ಲುತಿತ್ತೋ ಅದು ಸಹಜವಾಗಿ ಬೇರೆ ಸದಸ್ಯರಿಗೆ ಭಯವನ್ನುಂಟುಮಾಡುತಿತ್ತು ಮತ್ತು ಬದುಕುಳಿಯುತ್ತಿತ್ತು. ಇದು ಪ್ರಕೃತಿಯ ನಿಯಮ. ಇದನ್ನೇ ಚಾರ್ಲ್ಸ್ ಡಾರ್ವಿನ್ ಅಸ್ಥಿತ್ವಕ್ಕಾಗಿ ಹೋರಾಟ ಅಥವಾ Struggle for Existance ಎಂದು ಕರೆದದ್ದು. ಈ ನಿಯಮದಲ್ಲಿ ಸಾಕಷ್ಟು ನೀತಿ ನಿಜಾಯಿತಿಗಳಿವೆ, ಉದಾ; ಕೋಳಿಗಳಲ್ಲಿ ಅತ್ಯಂತ ಬಲಿಷ್ಠವಾದ 'ಹುಂಜ' ನಿಗೆ ತನ್ನ ತಂಡದ ಇತರ ಸದಸ್ಯರು ಗೌರವ ಕೊಡಬೇಕು ಅಷ್ಟೇ ಅಲ್ಲ ಅದರ ಎದುರು ಬಂದರೆ ತಲೆಯ ಮೇಲೆ ಕುಕ್ಕಿಸಿಕೊಳ್ಳಲೇಬೇಕು, ಅಕಸ್ಮಾತ್ ತಂಡದ ಯಾವುದಾದರು ಸದಸ್ಯನಿಗೆ ಅದು ಇಷ್ಟವಾಗಲಿಲ್ಲವೆಂದರೆ ಆ 'ಹುಂಜ' ನೊಡನೆ ಕಾದಾಡಿ ಗೆಲ್ಲಬೇಕು ಸೋತ ಹುಂಜ ಗೆದ್ದವರ ಅಡಿಯಾಳಾಗಿರಬೇಕು. ಈ ರೀತಿಯ ನಿಯಮಗಳು ಎಲ್ಲಾ ಸಣ್ಣಜೀವಿಗಳಿಂದಿಡಿದು ದೊಡ್ಡ ಜೀವಿಗಳವರೆವಿಗೂ ಒಂದಲ್ಲ ಒಂದು ವಿಷಯದಲ್ಲಿ ಇದ್ದೇ ಇದೆ. ಇದು ಪ್ರಕೃತಿ ಅವುಗಳ ಶಿಸ್ತುಬದ್ದ ಬದುಕಿಗೆ ರೂಪಿಸಿದ ನಿಯಮ, ಇದನ್ನು ಅವುಗಳು ಯಾವುವೂ ಮುರಿಯುವುದಿಲ್ಲ ಅಷ್ಟೇಅಲ್ಲ ಅದನ್ನು ಪರಸ್ಪರ ಗೌರವಿಸುತ್ತವೆ.

ಹಾಗಾದರೆ ಪ್ರಕೃತಿಯಲ್ಲೇ ಶ್ರೇಷ್ಠ ಜೀವಿಯಾದ ಮಾನವನಲ್ಲಿ ಯಾವ ನಿಯಮಗಳನ್ನು ಪ್ರಕೃತಿ ನಿರ್ಮಿಸಿಲ್ಲವೇ?
ಮಾನವನು ಪ್ರಕೃತಿಗಿಂತ ಬಲಿಷ್ಠನೇ?

ಎನ್ನುವ ಉತ್ತರ ಸಿಗದ ಸಹಸ್ರಾರು ಪ್ರಶ್ನೆಗಳು ಮನದ ಮೂಲೆಯಲ್ಲಿ ಕೊರೆಯುವುದು ಸಹಜವೇ....
ಮಾನವನ ಹುಟ್ಟಿನಲ್ಲಿ ಮೊದಮೊದಲು ಕೇವಲ ಆಹಾರಕ್ಕಾಗಿ ಇತರ ಜೀವಿಗಳೊಡನೆ ಸೆಣಸುತ್ತಾ ತನ್ನ ಅಸ್ಥಿತ್ವಕ್ಕಾಗಿ ಹೋರಾಡುತ್ತಿದ್ದವ, ನಂತರ ಬುದ್ದಿಬೆಳೆದಂತೆಲ್ಲಾ ತನ್ನ ಸುತ್ತಮುತ್ತಲ ಪರಿಸರಕ್ಕಾಗಿ ಇತರ ಪ್ರಾಣಿಗಳೊಡನೆ ಸೆಣಸಲಾರಂಬಿಸಿ ಅವುಗಳಿಗೆ ಭಯೋತ್ಪಾದಕನಾದ. ನಂತರ ತಾನಿಷ್ಟಪಟ್ಟ ಹೆಣ್ಣನ್ನು ದಕ್ಕಿಸಿಕೊಳ್ಳಲು ತನ್ನದೇ ವರ್ಗಕ್ಕೇ ಭಯೋತ್ಪಾದಕನಾಗುವ ಮೊದಲ ಹೆಜ್ಜೆ ಇಟ್ಟ.
ಇಲ್ಲಿಯವರೆವಿಗೂ ಚಾರ್ಲ್ಸ್ ಡಾರ್ವಿನ್ ನ ಥಿಯರಿ ಅನ್ವಯಿಸುತ್ತದೆ, ಬಹುಶಃ ಪ್ರಕೃತಿಯ ನಿಯಮಗಳನ್ನೂ ಪಾಲಿಸಿದ್ದಾನೆ.
ಆದರೆ ನಂತರ ಶುರುವಾಯ್ತು ನೋಡಿ 'ತಾನು ಕಂಡಿದ್ದೆಲ್ಲಾ ತನಗೇ ಮೀಸಲು' ತಾನು ಜಗದೊಡೆಯ, ತಾನು ಎಲ್ಲರಿಗಿಂತಾ ಬುದ್ದಿಜೀವಿ' ಎನ್ನುವುದು ಯಾವಾಗ ಆತನ ತಲೆಗೇರಿತೋ ಅಂದಿನಿಂದಲೇ ಸಂಪೂರ್ಣ "ಸ್ವಾರ್ಥ"ದ ದಾಸನಾಗಿ, ಎಲ್ಲವನ್ನೂ ಕಬಳಿಸಿ, ಕಡೆಗೆ ದೇವರ ಹೆಸರಿನಲ್ಲಿ ಭಯೋತ್ಪಾದಕನಾಗಿ ಇಂದು ನಿಂತಿದ್ದಾನೆ.
ಅದರಲ್ಲೂ ಕೆಲ ದೇಶಗಳಲ್ಲಿ ಭಯೋತ್ಪಾದಕನಾಗಿ ಸಾಯುವುದು ದೇವರ ಆಜ್ನೆ, ದೇವರ ಸಿಂಹಾಸನದಲ್ಲಿ ಅರ್ಧ ಸಿಕ್ಕುತ್ತದೆ ಇತ್ಯಾದಿ.......ಇತ್ಯಾದಿ.......ಇತ್ಯಾದಿ....... ಕಟ್ಟುಕಥೆಗಳನ್ನು ಹೇಳಿ, ಕೆಳ ವರ್ಗದ ಬಡವರಿಗೆ ಇಲ್ಲಸಲ್ಲದ ಆಸೆ ಆಮಿಷ ತೋರಿಸಿ ಮುಗ್ದ ಜೀವಗಳನ್ನು ಬಲಿತೆಗೆದು ಕೊಂಡು ಖುಷಿಪಡುತ್ತಾರೆ. ಈ ವಿಚಾರದಲ್ಲಿ ನಮ್ಮ ಪಕ್ಕದ 'ಪಾಕಿಸ್ತಾನ" ಎತ್ತಿದ ಕೈ.
ಇಂದು National Geographic Channel ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪ್ರಕಾರ ಕೇವಲ 3000 ರೂಗಳಿಗೆ ಒಬ್ಬ 'ಆತ್ಮಾಹುತಿ ಬಾಂಬರ್' ದೊರುಕುತ್ತಾನಂತೆ, ಅಷ್ಟೆ ಅಲ್ಲ ಕಳೆದ ವರ್ಷದ ಮುಂಬೈ ದಾಳಿ, ಅಮೇರಿಕಾದ ಡಬ್ಲ್ಯು. ಟಿ. ಓ ಕಟ್ಟಡಗಳ ದಾಳಿ, ಇವತ್ತಿನ ಆಫ್ಘನ್ ಮತ್ತು ಇರಾಕಿನ ಆತ್ಮಾಹುತಿ ದಾಳಿಗಳ ಬಾಂಬರ್ ಗಳೆಲ್ಲಾ ಪಾಕಿಸ್ತಾನದವರೇ. ಅಂದ ಮಾತ್ರಕ್ಕೆ ಪಾಕಿಸ್ತಾನದವರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಪಾಕಿಸ್ತಾನದವರೆ ಅನ್ನುವುದು ವಿಪರ್ಯಾಸ.
ಅಂದು ತನ್ನ ಶತೃವಾದ ರಷ್ಯಾವನ್ನು ಎದುರಿಸಲು "ಒಸಾಮ ಬಿನ್ ಲಾಡೆನ್'' ನನ್ನು ಬೆಳೆಸಿದ್ದು ಇದೇ ಅಮೇರಿಕ!!!!!!. ಕಡೆಗೆ ಅಮೇರಿಕಾದ ಸೊಕ್ಕಿಗೆ ಸೆಡ್ಡು ಹೊಡೆದದ್ದು ಇದೇ ಒಸಾಮ ಬಿನ್ ಲಾಡೆನ್!!!!!!!!! ಅಷ್ಟೆ ಅಲ್ಲ ಭಾರತದ ವಿರುದ್ದ ಹೋರಾಡಲು ಪಾಕಿಸ್ತಾನ ಬೆಳೆಸಿದ್ದು ಇದೇ ಭಯೋತ್ಪಾದಕರನ್ನು, ಕಡೆಗೇನಾಯ್ತು? ಇಂದಿನ ಪಾಕಿಸ್ತಾನದಲ್ಲಿ ದಿನಕ್ಕೆರಡು ಆತ್ಮಾಹುತಿ ದಾಳಿ ಅದೇ ಪಾಕಿಸ್ತಾನಿ ಭಯೋತ್ಪಾದಕರಿಂದ!!!!!!
ಅದಕ್ಕೇ ಹೇಳೋದು ಭಯೋತ್ಪಾದಕರು ಬಸ್ಮಾಸುರರು!!!!!!!!

ಭಾನುವಾರ, ನವೆಂಬರ್ 29, 2009

ಚಾರ್ಲ್ಸ್ ಡಾರ್ವಿನ್ ಮತ್ತು ವಿಕಾಸವಾದ.......

ಚಾರ್ಲ್ಸ್ ರಾಬರ್ಟ್ ಡಾರ್ವಿನ್ (ಫೆಬ್ರುವರಿ ೧೨ ೧೮೦೯ — ಏಪ್ರಿಲ್ ೧೯ ೧೮೮೨) ಇಂಗ್ಲೆಂಡ್ ದೇಶದ ಪ್ರಸಿದ್ಧ ಜೀವವಿಜ್ಞಾನಿ. ಈತನು ೧೮೫೮ರಲ್ಲಿ ಮಂಡಿಸಿದ ಜೀವ ವಿಕಾಸವಾದವು ಆಧುನಿಕ ಜೀವವಿಜ್ಞಾನದ ಬುನಾದಿಯಾಗಿದೆ. ಎಡಿನ್‍ಬ್ರೊ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡಿಸಿದ ಇವರು ೧೮೩೧ರಿಂದ ೧೮೩೬ರ ಮಧ್ಯದಲ್ಲಿ ಎಚ್ ಎಮ್ ಎಸ್ ಬೀಗಲ್ ಹಡಗಿನಲ್ಲಿ ಭೂರಚನಶಾಸ್ತ್ರ ವಿಜ್ಞಾನಿಯಾಗಿ ಪ್ರವಾಸ ಕೈಗೊಂಡಾಗ ನಡೆಸಿದ ಸಂಶೊಧನೆಯಿಂದ ಮೊದಲು ಪ್ರಖ್ಯಾತರಾದರು. ಅದೇ ಸಮಯದಲ್ಲಿ ಅನೇಕ ಜೀವ ಪಳಯುಳಿಕೆಗಳನ್ನೂ ಸಂಗ್ರಹಿಸಿ, ಅನೇಕ ಜೀವವಿಧಗಳನ್ನು ವೀಕ್ಷಿಸಿದರು. ಇದೆಲ್ಲವನ್ನೂ ವಿವರಿಸಲು "ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸವಾದ" ಸಿದ್ಧಾಂತವನ್ನು ೧೮೫೮ರಲ್ಲಿ ಮಂಡಿಸಿದರು. ೧೮೫೯ರಲ್ಲಿ ಈ ಸಿದ್ಧಾಂತವನ್ನು ವಿವರವಾಗಿ ಬಣ್ಣಿಸುವ ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಎಂಬ ಭವ್ಯಕೃತಿಯನ್ನು ಪ್ರಕಟಿಸಿದರು.

ಬೀಗಲ್ ಹಡಗಿನಲ್ಲಿ ಪ್ರವಾಸ

ಬೀಗಲ್ ಹಡಗು ಪ್ಲೈಮೌಥ್ ಬಂದರನ್ನು ೧೮೩೧ರ ಡಿಸೆಂಬರ್ ೨೭ರಂದು ಬಿಟ್ಟು ಸುಮಾರು ೫ ವರ್ಷಗಳ ನಂತರ ೧೮೩೬ರ ಅಕ್ಟೋಬರ್ ೨ರಂದು ಹಿಂದಿರುಗಿತು. ಇಡೀ ಭೂಮಿಯನ್ನು ಸುತ್ತುವರೆದ ಈ ಪ್ರವಾಸದಲ್ಲಿ ಡಾರ್ವಿನ್ ಹೋದ ಕಡೆಗಳಲ್ಲೆಲ್ಲಾ ಅಲ್ಲಿನ ಭೂರಚನೆ ಮತ್ತು ಜೀವ ವಿಧಗಳನ್ನು ಅಧ್ಯಯನ ಮಾಡಿದರು. ಸಮುದ್ರಯಾನದಿಂದ ಅಸ್ವಸ್ಥರಾಗಿದ್ದರೂ ಈ ಅಧ್ಯಯನಗಳನ್ನು ಬಹಳ ಎಚ್ಚರಿಕೆಯಿಂದ ದಾಖಲಿಸಿದರು. ನೀರಿನಲ್ಲಿ ವಾಸಿಸುವ ಬೆನ್ನೆಲುಬುಳ್ಳದ ಪ್ರಾಣಿಗಳ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಸಂಗ್ರಹಿಸಿದರು. ಭೂರಚನೆಯ ಅಧ್ಯಯನದಲ್ಲಿ ಚಾರ್ಲ್ಸ್ ಲ್ಯೆಲ್ ಅವರ "ಪ್ರಿನ್ಸಿಪಲ್ಸ್ ಆಫ್ ಜಿಯಾಲಜಿ" ಪುಸ್ತಕವನ್ನು ಹೆಚ್ಚಾಗಿ ಉಪಯೋಗಿಸಿದರು.

ಪೆಟಗೋನಿಯ ಪ್ರದೇಶದಲ್ಲಿ ಇದ್ದಾಗ ಇವರು ಅಳಿದುಹೋಗಿರುವ ಸಸ್ತನಿ ಪ್ರಾಣಿಗಳ ಒಂದು ದೊಡ್ಡ ಜೀವಪಳಯುಳಿಕೆ ಪ್ರದೇಶವನ್ನು ಕಂಡುಕೊಂಡರು. ಇಲ್ಲಿನ ಸಂಶೋಧನೆಗಳಿಂದ ಮತ್ತು ದಕ್ಷಿಣ ಅಮೇರಿಕದಲ್ಲಿ ಇವರು ಕಂಡ ಜೀವ ವಿಧಗಳ ಅಧ್ಯಯನದಿಂದ ಲ್ಯೆಲ್ ಅವರು ಪ್ರಸ್ತಾಪಿಸಿದ್ದ ಜೀವಿಗಳ ಉಗಮದ ಸಿದ್ಧಾಂತದಲ್ಲಿನ ದೋಶಗಳನ್ನು ಕಾಣತೊಡಗಿದರು. ಆದರೆ ಇವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪ್ರದೇಶವೆಂದರೆ ಗ್ಯಾಲಾಪಗೊಸ್ ದ್ವೀಪಗಳು. ಭೂರಚನಶಾಸ್ತ್ರದ ಮಾಪನದ ಪ್ರಕಾರ ಇತ್ತೀಚೆಗೆ ಸೃಷ್ಟಿತವಾಗಿರುವ ಈ ದ್ವೀಪಗಳಲ್ಲಿ ಅನೇಕ ಜೀವವಿಧಗಳನ್ನು ಕಂಡರು. ಈ ಜೀವವಿಧಗಳು ಪ್ರಪಂಚದ ಬೇರೆಲ್ಲೂ ಇಲ್ಲದಿದ್ದರಿಂದ, ಎಲ್ಲಾ ಜೀವವಿಧಗಳು ಒಮ್ಮೆಲೇ ಸೃಷ್ಟಿತವಾದವು ಎಂಬ ಸಿದ್ಧಾಂತದ ಬಗ್ಗೆ ತೀವ್ರ ಸಂಶಯ ಹೊಂದತೊಡಗಿದರು.

ಜೀವ ವಿಕಾಸವಾದದ ಮನವರಿಕೆ
(The Evolution)

ಡಾರ್ವಿನ್ ಅವರು ೧೮೩೬ರ ಅಕ್ಟೋಬರ್ ಅಲ್ಲಿ ಪ್ರವಾಸದಿಂದ ಹಿಂದಿರುಗಿದ ಹೊತ್ತಿಗೆ, ಇವರು ಹೆನ್ಸ್ಲೊ ಅವರಿಗೆ ಕಳುಹಿಸಿದ್ದ ಪತ್ರಗಳಿಂದ ಪ್ರಖಾತರಾಗಿದ್ದರು. ತಂದೆಯವರ ಆರ್ಥಿಕ ಸಹಾಯದಿಂದ, ಇವರು ಪ್ರವಾಸದ ವೇಳೆಯಲ್ಲಿ ಸಂಗ್ರಹಿಸಿದ್ದ ಜೀವಿಗಳನ್ನು ಮತ್ತು ಜೀವಪಳೆಯುಳಿಕೆಗಳನ್ನು ಗುರುತಿಸಿ ವರ್ಗೀಕರಣ ಮಾಡಿಸತೊಡಗಿದರು. ಜೀವರಚನಶಾಸ್ತ್ರ ತಜ್ಞರಾಗಿದ್ದ ರಿಚರ್ಡ್ ಒವೆನ್ ಇದರಲ್ಲಿ ಇವರಿಗೆ ಸಹಾಯ ಮಾಡಿದರು. ಪ್ರಮುಖವಾಗಿ ಇವರು ಗ್ಯಾಲಪಗೋಸ್ ದ್ವೀಪಗಳಲ್ಲಿ ಸಂಗ್ರಹಿಸಿದ್ದ ಪಕ್ಷಿಗಳು ಫಿಂಚ್ ಮತ್ತು ವ್ರೆನ್ ಕುಟುಂಬದ ೧೨ ವಿವಿಧ ಪ್ರಜಾತಿಗಳಿಗೆ ಸೇರಿರುವಂತಹವು ಎಂಬುದನ್ನು ಪಕ್ಷಿ ತಜ್ಞ ಜಾನ್ ಗೂಲ್ಡ್ ಗುರುತಿಸಿದರು.

ಮಾರ್ಚ್ ಹೊತ್ತಿಗೆ ಡಾರ್ವಿನ್ ಲಂಡನ್ ನಗರಕ್ಕೆ ಸ್ಥಳಾಂತರಗೊಂಡರು. ಇಲ್ಲಿ ಚಾರ್ಲ್ಸ್ ಲ್ಯೆಲ್ ಅವರ ಸೇರಿದ್ದ ಚಿಂತಕರ ಗುಂಪೊಂದನ್ನು ಸೇರಿದರು. ಅಲ್ಲಿ ಜೀವ ಪ್ರಜಾತಿಗಳ ಸೃಷ್ಟಿಯ ಬಗ್ಗೆ ಕೂಡ ಚಿಂತನ ನಡೆಯುತ್ತಿತ್ತು. ಆಗಿನ ಪ್ರಮುಖ ಚಿಂತಕರು ಎಲ್ಲಾ ಪ್ರಜಾತಿಗಳು ಒಮ್ಮೆಲೇ ಸೃಷ್ಟಿಹೊಂದಿದವು ಎಂಬ ವಾದವನ್ನು ನಂಬಿದ್ದರು. ಆದರೆ ಡಾರ್ವಿನ್ ತಮ್ಮ ಗ್ಯಾಲಪಗೋಸ್ ಪಕ್ಷಿಗಳ ವೈವಿಧ್ಯತೆಯ ಬಗ್ಗೆ ಯೋಚಿಸುತ್ತ, ಒಂದು ಪ್ರಜಾತಿ ಇತರ ಪ್ರಜಾತಿಗಳಾಗಿ ಪರಿವರ್ತನಗೊಳ್ಳಬಹುದೇನೊ ಎಂದು ಚಿಂತನೆ ಮಾಡತೊಡಗಿದರು. ಇದರ ಜೊತೆಗೆ ಇವರು ತಮ್ಮ ಪ್ರವಾಸದ ಬಗ್ಗೆ ಒಂದು ಪುಸ್ತಕವನ್ನು ಕೂಡ ಬರೆಯಲು ಪ್ರಾರಂಭಿಸಿದರು.

ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಪ್ರಕಟಣೆ (Theory Of Natural Selection)
ಈ ಸಿದ್ದಾಂತದ ಮೂಲ ಅಂಶವೇನೆಂದರೆ, ಪ್ರಕೃತಿಯು ತನಗೆ ಬೇಡದ ಹೆಚ್ಚಾಗಿ ಬದಲಾಗುತ್ತಿರುವ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳದೇ ಇರುವ ಜೀವಿಗಳನ್ನು ತೆಗೆದುಹಾಕುತ್ತದೆ, ಅಥವಾ ಆ ಜೀವಿಯು ತಂತಾನೆ ನಶಿಸುತ್ತದೆ.
ನೈಸರ್ಗಿಕ ಆಯ್ಕೆಯ ಸಿದ್ಧಾಂತದ ಮೂಲ ಆಯಕಟ್ಟನ್ನು ಮನಸ್ಸಿನಲ್ಲಿ ಹೊಂದಿದ್ದೇನೆಂದು ಭಾವಿಸಿ, ಈ ಬಗ್ಗೆ ಹೆಚ್ಚು ಸಂಶೋಧನೆ ನಡೆಸತೊಡಗಿದರು. ಮುಂದಿನ ದಶಕದಲ್ಲಿ ತಮ್ಮ ಬೀಗಲ್ ಪ್ರವಾಸದ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಕಟನೆ ಮಾಡುವಲ್ಲಿ ನಿರತರಾಗಿದ್ದರಿಂದ ತಮ್ಮ ಸಿದ್ಧಾಂತದ ಬಗ್ಗೆ ಸಂಶೋಧನೆ ಹಿಂಬದಿಯಲ್ಲಿ ಉಳಿಯಿತು. ಮೂರು ವರ್ಷಗಳ ಕೆಲಸದ ನಂತರ ೧೮೪೨ರಲ್ಲಿ ಡಾರ್ವಿನ್ ಅವರು ಹವಳದ ಬಗ್ಗೆ ಒಂದು ದೊಡ್ಡ ಕೃತಿಯನ್ನು ಪ್ರಕಟಿಸಿದರು. ಕೆಲಸಗಳ ಒತ್ತಡದಿಂದ ವಿಶ್ರಾಂತಿ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿನ ತಮ್ಮ ಮನೆಯಾದ ಡೌನ್ ಹೌಸ್‍ಗೆ ತೆರಳಿದರು. ೧೮೪೪ರ ಜನವರಿಯಲ್ಲಿ ತಮ್ಮ ಸಿದ್ಧಾಂತದ ಬಗ್ಗೆ ಒಂದು ಕರಡು ಪ್ರತಿಯನ್ನು ರಚಿಸಿ, ಸಸ್ಯಶಾಸ್ತ್ರಜ್ಞ ಜೊಸೆಫ್ ಡಾಲ್ಟನ್ ಹೂಕರ್ ಅವರಿಗೆ ಇದರ ಬಗ್ಗೆ ತಿಳಿಸಿದರು. ಹೂಕರ್ ಇದರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ನೀಡಿದರು. ಜುಲೈ ಹೊತ್ತಿಗೆ ಈ ಕರಡು ಪ್ರತಿಯನ್ನು ೨೩೦ ಪುಟಗಳ ಪ್ರಬಂಧವಾಗಿ ಪರಿವರ್ತಿಸಿದ್ದರು. ೧೮೪೬ರಲ್ಲಿ ಡಾರ್ವಿನ್ ತಮ್ಮ ಮೂರನೆಯ ಭೂರಚನಶಾಸ್ತ್ರದ ಬಗ್ಗೆಯ ಪುಸ್ತಕವನ್ನು ರಚಿಸಿದರು. ೧೮೪೭ರಲ್ಲಿ ಹೂಕರ್ ಅವರಿಗೆ ತಮ್ಮ ಪ್ರಬಂಧವನ್ನು ಕಳುಹಿಸಿದರು ಮತ್ತು ಅವರಿಂದ ಕ್ರಿಯಾತ್ಮಕ ಪ್ರತ್ಯತ್ತರಗಳನ್ನು ಪಡೆದರು.
೧೮೫೬ರಲ್ಲಿ ಲ್ಯೆಲ್ ಅವರು ಆಲ್ಫ್ರೆಡ್ ರಸೆಲ್ ವಾಲೇಸ್ ಅವರ ಒಂದು ಲೇಖನವನ್ನು ಓದಿದರು. ಅದರಲ್ಲಿನ ವಿಚಾರಗಳು ಡಾರ್ವಿನ್ ಅವರ ಸಿದ್ಧಾಂತಗಳನ್ನು ಹೋಲುವುದನ್ನು ನೋಡಿ, ಡಾರ್ವಿನ್ ಅವರಿಗೆ ತಮ್ಮ ವಾದವನ್ನು ಮೊದಲು ಪ್ರಕಟಿಸಲು ಎಚ್ಚರಿಸಿದರು. ಆದರೆ ಡಾರ್ವಿನ್ ಇದರ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದರು. ತಮ್ಮ ಸಿದ್ಧಾಂತದ ಬಗ್ಗೆ ಒಂದು ಚಿಕ್ಕ ಲೇಖನವನ್ನು ರಚಿಸಿದರೂ, ಮುಖ್ಯವಾಗಿ ಇದರ ಬಗ್ಗೆ ದೊಡ್ಡ ಪುಸ್ತಕವನ್ನು ಬರೆಯುವುದರಲ್ಲಿ ಹೆಚ್ಚು ಮಗ್ನರಾಗಿದ್ದರು. ೧೮೫೮ರ ಜೂನ್ ೧೮ರಂದು ವಾಲೇಸ್ ಅವರಿಂದ ತಮ್ಮ ವಾದವನ್ನು ಹೆಚ್ಚಾಗಿ ಹೋಲುವ ಲೇಖನವೊಂದನ್ನು ಪಡೆದರು. ಇದರಿಂದ ದಿಗಿಲುಗೊಂಡರೂ, ಇದನ್ನು ಲ್ಯೆಲ್ ಅವರಿಗೆ ಕಳುಹಿಸಿ, ವಾಲೇಸ್ ಅವರಿಗೆ ಇದನ್ನು ಪ್ರಕಟಣೆ ಮಾಡುವಲ್ಲಿ ಸಹಕರಿಸುವ ಮಾತು ನೀಡಿದರು. ಮಾತುಕತೆಯ ನಂತರ ಈ ಲೇಖನವನ್ನು ತಮ್ಮ ಲೇಖನದೊಂದಿಗೆ ಲಿನ್ನಿಯನ್ ಸೊಸೈಟಿಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದರು. ತಮ್ಮ ಚಿಕ್ಕ ಮಗ ಸ್ಕಾರ್ಲೆಟ್ ಜ್ವರದಿಂದ ಮರಣ ಹೊಂದಿದರಿಂದ, ಈ ಲೇಖನಗಳನ್ನು ಲ್ಯೆಲ್ ಮತ್ತು ಹೂಕರ್ ಅವರು ಜುಲೈ ೧ರಂದು ಮಂಡಿಸಿದರು.

ಈ ಪ್ರಕಟಣೆಗಳು ವಿಜ್ಞಾನಿಗಳಲ್ಲಿ ಮೊದಲಿಗೆ ಹೆಚ್ಚು ಆಸಕ್ತಿ ಉಂಟು ಮಾಡಲಿಲ್ಲ. ಮುಂದಿನ ೧೩ ತಿಂಗಳುಗಳಲ್ಲಿ ಡಾರ್ವಿನ್ ತಮ್ಮ ಪುಸ್ತಕದ ರಚನೆಯ ಮೇಲೆ ಹೆಚ್ಚಾಗಿ ಕೆಲಸ ನಡೆಸಿದರು. ೧೮೫೯ರ ನವೆಂಬರ್ ೨೨ರಂದು ಆನ್ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕವು ಪ್ರಕಟನೆಗೊಂಡಿತು. ಮೊದಲ ಆವತರಣಿಕೆಯ ೧,೨೫೦ ಪ್ರತಿಗಳು ಬಹಳ ಬೇಗನೆಯೇ ಮಾರಾಟಗೊಂಡವು

ಅಸ್ಥಿತ್ವಕ್ಕಾಗಿ ಹೋರಾಟ (Struggle for Existance)ನೈಸರ್ಗಿಕ ಆಯ್ಕೆಯ ಸಿದ್ದಾಂತಕ್ಕನುಗುಣವಾಗಿ ಯಾವುದೇ ಜೀವಿಯು ತನ್ನ ಉಳಿವಿಗಾಗಿ ತನ್ನ ರಕ್ಷಣೆಯಲ್ಲಿ ತೊಡಗುತ್ತದೆ. ಆ ರಕ್ಷಣೆಯು ಇತರ ಬೇರೆ ಜೀವಿಗಳ ವಿರುದ್ದವಾದ ಹೋರಾಟವಾಗಬಹುದು, ತನ್ನ ಆಹಾರಕ್ಕಾಗಿ, ವಸತಿಗಾಗಿ, ವಂಶಾಬಿವೃದ್ಧಿಗಾಗಿಯಾದರೂ ಸರಿ ತನ್ನದೇ ಅಥವಾ ಬೇರೆ ವರ್ಗಗಳ ಜೀವಿಯೊಡನೆಯ ಹೋರಾಟ್ದಲ್ಲಿ ಯಾವ ಜೀವಿಯು ಆ ಉಳಿವಿನಲ್ಲಿ ಬದುಕುಳಿಯುತ್ತದೋ ಅದು ಮತ್ತು ಅದರ ಸಂತತಿಗಳು ಮಾತ್ರ ಬದುಕುಳಿಯುತ್ತವೆ ಎಂಬುದು ಈ ಸಿದ್ದಾಂತದ ಅರ್ಥ. ಆ ಜೀವಿಯ ಹೋರಾಟವು ಇತರ ಜಾತಿಯ ಜಿವಿಗಳ ವಿರುದ್ದವಾಗಬಹುದು ಅಥವಾ ಪ್ರಾಕೃತಿಕ ವಿಪರೀತಗಳಾವಿರುದ್ದವಾಗಬಹುದು ಎಲ್ಲವನ್ನೂ ಮೀರಿ ಉಳಿಯುವ ಜೀವಿ ಬದುಕಿ ಉಳಿಯುತ್ತದೆ. ಈ ರೀತಿ ಹೋರಾಟದ ಗುಣ ಅವುಗಳ ಜೀನು ಗಳಲ್ಲಿ ಒಂದು ಸಂತತಿಯಿಂದ ಮತ್ತೊಂದು ಸಂತತಿಗೆ ಹರಿದುಬರುತ್ತದೆ.
ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಸೊಳ್ಳೆಗಳು ಮತ್ತು ಡಿ. ಡಿ. ಟಿ ಕೀಟನಾಶಕ 1950ರ ಸುಮಾರಿನಲ್ಲಿ ಭಾರತ ಮತ್ತಿತರ ಅಬ್ಹಿವೃಧ್ಧಿಹೊಂದುತ್ತಿರುವ ರಾಷ್ಟ್ರಗಳಲ್ಲಿ ಮಲೇರಿಯಾದಿಂದ ಸಾವಿನ ಸಂಖ್ಯೆಗಳು ಹೆಚ್ಚತೊಡಗಿದವು, ಹಾಗು ಮಲೇರಿಯಾ ಹರಡಲು 'ಆನಾಫಿಲೀಸ್ ' ಎಂಬ ಸೊಳ್ಳೆಯೇ ಕಾರಣವೆಂದರಿತ 'ವಿಶ್ವ ಆರೋಗ್ಯ ಸಂಸ್ಥೆ' ಯು ಸೊಳ್ಳೆಗಳು ಬರದಂತೆ ಡಿ.ಡಿ.ಟಿ ಕೀಟನಾಶಕವನ್ನು ಸಿಂಪಡಿಸಲು ಆರಂಭಿಸಿತು. ತಕ್ಷಣವೇ ಮಲೇರಿಯಾವು ಕಾಣಿಯಾಗತೊಡಗಿತು, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಯ್ತು. ಆದರೆ 1960 ಆಸುಪಾಸಿನಲ್ಲಿ ಈ ಮಹಾಮಾರಿ ಮತ್ತೆ ಬಂದೆರಗಿತು. ಅಷ್ಟೇಅಲ್ಲ ಡಿ.ಡಿ,ಟಿ ಸಿಂಪರಣೆಯಿಂದ ಸೊಳ್ಳೆಗಳು ಸಾಯಲೂ ಇಲ್ಲ. ಇದಕ್ಕೆ ಕಾರಣವನ್ನು ಅಭ್ಯಸಿಸಲು ಆ ಸೊಳ್ಳೆಗಳ ಸಂತತಿಗಳ 'ಜೀನ್ ' (Genes) ಗಳನ್ನು ಪರೀಕ್ಷಿಸಿದಾಗ ಅವುಗಳು ಡಿ.ಡಿ,ಟಿ ಗೆ ಸಾಯದೇ ಅದನ್ನೇ ತಿಂದು ಬದುಕುವ ಶಕ್ತಿಯನ್ನು ಹೊಂದಿದ್ದವು.
ಇದಲ್ಲದೇ ಮತ್ತಷ್ಟು ಉದಾಹರಣೆಯೆಂದರೆ ಜಿರಾಫೆಯ ಕತ್ತು, ದೈತ್ಯ ಡೈನಾಸೋರ್ ಗಳ ವಿನಾಶ ಜೊತೆಗೆ ಅಳಿವಿನ ಅಂಚಿನಲ್ಲಿರುವ ಇತರ ಪ್ರಸ್ತುತ ಜೀವಿಗಳನ್ನೂ ನಾವು ಕಾಣಬಹುದು. (ಕೆಲ ಜೀವಿಗಳ ವಿನಾಶಕ್ಕೆ ನಾವು ನಮ್ಮ ಸ್ವಾರ್ಥವೂ ಕಾರಣವಾದರೂ ಅವುಗಳಿಗೂ ಈ ಸಿದ್ದಾಂತ ಅನ್ವಯವಾಗುತ್ತದೆ)

ಸಿದ್ಧಾಂತದ ಬಗ್ಗೆ ಪ್ರತಿಕ್ರಿಯೆಗಳುಪುಸ್ತಕದ ಪ್ರಕಟಣೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಲ್ಲಿ ಆಸಕ್ತಿ ಮೂಡಿಸಿತು. ಡಾರ್ವಿನ್ ಅಸ್ವಸ್ಥ್ಯತೆಯಿಂದ ಸಾರ್ವಜನಿಕ ವಾದಗಳಲ್ಲಿ ಭಾಗವಹಿಸದಿದ್ದರೂ, ಪ್ರತಿಕ್ರಿಯೆಗಳನ್ನು ಅನುಸರಿಸಿದರು ಮತ್ತು ಆದಷ್ಟು ಪತ್ರಮುಖೇನ ತಮ್ಮ ಸಿದ್ಧಾಂತದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಿದರು. ಇಂಗ್ಲೆಂಡಿನ ಚರ್ಚು ಮತ್ತು ಇತರ ಧಾರ್ಮಿಕ ಸಂಘಟನೆಗಳು ಡಾರ್ವಿನ್ ಅವರ ವಾದಗಳಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಡಾರ್ವಿನ್‌ರ ಆಪ್ತ ಮಿತ್ರರಾದ ಗ್ರೇ, ಹೂಕರ್, ಹಕ್ಸ್ಲಿ ಮತ್ತು ಲ್ಯೆಲ್ ಅವರನ್ನು ಬೆಂಬಲಿಸಿದರು.

ಕಾಲಕ್ರಮೇಣ ನೈಸರ್ಗಿಕ ಆಯ್ಕೆ ಸಿದ್ಧಾಂತಕ್ಕೆ ಹೆಚ್ಚು ಪುರಾವೆಯನ್ನು ನೀಡುವ ಪುಸ್ತಕಗಳು ಪ್ರಕಟಗೊಂಡವು. ಜೀವಶಾಸ್ತ್ರದ ಬುನಾದಿಯಾಗಿ ಈ ಸಿದ್ಧಾಂತವನ್ನು ವಿಜ್ಞಾನಿಗಳು ಒಪ್ಪಿಕೊಂಡರು. ಈ ಸಾಧನೆಗೆ ೧೮೬೪ರ ನವೆಂಬರ್ ೩ರಂದು ಬ್ರಿಟನ್ನಿನ ಅತ್ಯಂತ ಶ್ರೇಷ್ಠ ವೈಜ್ಞಾನಿಕ ಪ್ರಶಸ್ತಿಯಾದ ರಾಯಲ್ ಸೊಸೈಟಿಯ ಕೋಪ್ಲೆ ಪದಕವನ್ನು ಡಾರ್ವಿನ್ ಅವರಿಗೆ ನೀಡಲಾಯಿತು.

ಮನದ ನಿವೇದನೆ......

ನಿನ ಬಿರಿದ ಬೊಗಸೆ ಕಂಗಳಲಿ ನನ ಬಿಂಬ
ನನ್ನೆಸರೇ ನಿನ್ನುಸಿರ ತುಂಬಾ
ಕಿವಿಯ ಜುಮುಕಿಯ ಪ್ರತಿಫಲನ ನನ್ನ ಕಣ್ಣೆಡೆಗೆ
ತೊಂಡೆಹಣ್ಣಿನ ತುಟಿಯೊಡೆದು ಬರುವ
ಪ್ರತಿ ಮಾತು ಮಾತಿಗೂ ನನ್ನ ಬೆಸುಗೆ!!
ನಿನ ಮೊಣಕಾಲ ಗೆಜ್ಜೆಗಳು 'ಗಲ್ '
ಎನ್ನುವುದ ಮರೆತು ಯಾವ ಕಾಲವಾಯ್ತೋ?
ನನ್ನೆಸರನ್ನು ತಳುಕುಹಾಕುವುದ ಯಾವಾಗ ಕಲಿತವೋ?
ನಿಜಕ್ಕೂ ಸೋಜಿಗ!!!!!!!

ಕತ್ತಲ ಕಡಲಲ್ಲಿ ಸಿಲುಕಿದ್ದ ನನಗೆ
ಬೆಳಕಿನ ಗಾಳ ಹಾಕಿ ದಡ ತೋರಿದವಳು ನೀನು
ನಿಜ ಹೇಳು?! ಎಲ್ಲರ ಬಾಯಲ್ಲೂ ಅಬಲೆಯಾಗಿರುವ ನೀನು
ಇಷ್ಟೊಂದು ಪ್ರಭಲೆಯಾದದ್ದು ಯಾವಾಗ??!!!
ಬಾಲ್ಯದಲಿ ಗೆಳತಿ, ಯೌವ್ವನದಲಿ ನಲ್ಮೆಯ ನಲ್ಲೆಯಾದೆ
ಮುದಿತನದಲ್ಲಿ ಒಲುಮೆಯ ಅವ್ವನಗುವೆ!
ಹಣ್ಣುಹಣ್ಣಾದಾಗ ಅಲುಗಾಡದ ಅಡೂಗೂಲಜ್ಜಿ!!

ಕಾಲಚಕ್ರಕ್ಕಿಂತಲೂ ವೇಗವಾಗಿ ಸಾಗುವ,
ದಿನದೂಡವ ದಿನಕರನ ರಥವ ನಾಚಿಸುವ
ನಿನ ಬಾಳ ಬಂಡಿಯಲಿ ನಿನ್ನ ಜೊತೆ ಏಗಲು
ಕಾರ್ಪಣ್ಯದ ಆ ನೊಗದಲ್ಲಿ ನನಗೂ
ಸ್ವಲ್ಪ ಜಾಗ ಮಿಗಿಸು!
ಎಂದಿಗೂ ತೀರದ ಆ ನಿನ್ನ ಋಣಕ್ಕೆ ಸ್ವಲ್ಪ
ಬಡ್ಡಿಯನ್ನಾದರೂ ಕಟ್ಟುತ್ತೇನೆ!!!
ನನ್ನೆಗಲನಿತ್ತು!!!!!!

ಕೆಲ ಚುಟುಕುಗಳು..........

ಕಾಡುವುದೇಕೆ...????

ಒಂದು ದಿನವಾದರೂ ನನ್ನೆದುರು ನಿಂತು ಮಾತಾಡಲಿಲ್ಲ
ಕಣ್ಣರಳಿಸಿ ಬಟ್ಟಲು ಕಂಗಳಲ್ಲಿ ದಿಟ್ಟಿಸಲಿಲ್ಲ,
ಕುಡಿನೋಟದಲ್ಲಿ ಕದ್ದು ನೋಡಿದ್ದೇ ಇಲ್ಲ
ನನ್ನೆದೆಯ ಭಾವನೆಗಳ ತಾಕಲಾಟದ ಸದ್ದು
ನಿನಗೆ ಕೇಳಿಸಿತೋ? ಗೊತ್ತಿಲ್ಲ
ನಿನ್ನರಳಿದ ತುಟಿಗಳ ಮೆಲು ಮಂದಹಾಸ!!
ನನಗೆ ಕಾಣಲೇ ಇಲ್ಲ!!!
ಅದರೂ ನೀನ್ಯಾಕೆ ನನ್ನನ್ನು ಹೀಗೆ ಕಾಡುತ್ತೀಯೋ?
ಆ ದೇವರೇ ಬಲ್ಲ!!!


ಒಂದೇ ಸೂರು........

ದುಃಖ ದುಗುಡ ಮನದಲ್ಲಿ ಸಾವಿರಾರು...
ದುಮ್ಮಾನಕ್ಕೆ ಕಾರಣಗಳು ನೂರು ಮತ್ತಾರು.........
ಸಂತಸಕ್ಕೆ ಒಂದೇ ಸೂರು....
ಅದುವೇ ನಿನ್ನಯ ಚಂದದ ಹೆಸರು.......

ನನ್ನವಳು........

ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮನದ ಬಾಗಿಲ ಮೆಲ್ಲಗೆ ತಳ್ಳಿ
ಒಳ ಬಂದವಳೆ

ಮೆದು ಕೆಂಪು ಕೆನ್ನೆಯ ಮೇಲೆ
ಸಂಕೋಚದ ಸಂಕೋಲೆ ತೊಟ್ಟು
ಬೊಗಸೆ ಕಂಗಳ ತುದಿಯಲ್ಲಿ
ಇಣುಕುವ ಕಳ್ಳ ಓರೆನೋಟ!

ಮಿರುಗುವ ಕೆಂದುಟಿಯಲ್ಲುದುಗಿದ
ಸಿಹಿ ಮೆಲು ಮಂದಹಾಸ
ಹಣೆಯ ಮೇಲ ಕರಿ ಕುರುಳು
ಚೆಲುವ ಮೊಗದಲ್ಲಿ!

ಗುಂಗುರು ಮುಡಿಯ ತುಂಬ
ಮೊಲ್ಲೆ ಹೂವು
ಕಟಿಯುದ್ದದ ಜಡೆಯ ತುದಿಯಲಿ
ಮಿರುಗುವ ಕರಿ ಬಿಲ್ಲೆ ಹೊಳೆವ ಕುಚ್ಚು

ಘಲ್ ಘಲ್ ಸದ್ದು ಬೆಳ್ಳಿ ಗೆಜ್ಜೆಯದಲ್ಲ
ನಾಚಿ ನಡುಗುವ ಎದೆಯ ಡವ! ಡವ!
ಚಿಮ್ಮಿ ಬರುವ ಪ್ರತಿ ನೆತ್ತರ ಹನಿ ಹನಿ
ನನ ಕೂಗಿ ಕರೆಯುವ ಇನಿದನಿ!

ಕಣ್ಮುಚ್ಚಲು ಸ್ನಿಗ್ದ ಮೊಗದ ಸಿಂಚನ
ಕಣ್ತೆರೆಯೇ ಹೊಂಬೆಳಕ ಸಿರಿಚಂದನ
ಕಾಲ ಕೂಪವ ಧಾಟಿ ಈಜುವ ಜೀವನದಿ
ನಿನ್ನೆದೆಯ ಸಮುದ್ರದಿ ಉದುಗಿಬಿಡುವೆ!!
ನನ್ನವಳೇ........

ಭಾಷೆ ಬರದ ಊರಲ್ಲೊಂದು ದಿನ !!!.....

ಸುಮಾರು 2005 ರ ಸೆಪ್ಟಂಬರ್ ತಿಂಗಳು ನನ್ನವಳು ಒಂದು ಭಾನುವಾರ ಬೆಳಿಗ್ಗೆ ಎದ್ದು
"ರೀ ದಿನಾ ನನ್ನನ್ನ ಅಣ್ಕುಸ್ತೀರಾ?! ನೋಡಿ ಇವತ್ತು ನಾನೇ ತರಕಾರಿ ವ್ಯಾಪಾರನ ತೆಲುಗಿನಲ್ಲೇ ಮಾತಾಡಿ ಹೆಂಗ್ ಮಾಡ್ತೀನಿ!! ಅಂತ!"
ನಾನು ಹೊದ್ದುಕೊಂಡು ಮಲಗಿದ್ದ ರಗ್ಗನ್ನು ಎಡಗೈಲ್ಲಿ ಎಳೆಯುತ್ತಾ, ಬಲಗೈಯಲ್ಲಿ ಕಾಫಿಯನ್ನು ಮುಖಕ್ಕೆ ಹಿಡಿಯುತ್ತಾ ಚಾಲೆಂಜ್ ಮಾಡುತ್ತಾ ಹೇಳಿದಳು. ಇವಳ 'ತೆಲುಗು ಭಾಷೆ ಕೇಳಬೇಕಲ್ಲಪ್ಪಾ!' ಎನ್ನುವ ಪೀಕಲಾಟ ವನ್ನು ನೆನೆದು ಇದ್ದಬದ್ದ ನಿದ್ದೆಯೆಲ್ಲಾ ಹಾರಿ ಹೋಗಿ ದಡಕ್ಕನೆದ್ದು ಕುಳಿತು ನಿತ್ಯವೂ ಹೇಳುತ್ತಿದ್ದ "ಕರಾಗ್ರ ವಸತೇ........" ಕೂಡ ಹೇಳದೆ ಕಾಫಿ ತೆಗೆದುಕೊಳ್ಳೂತ್ತಾ
"ಇವತ್ತು ಬೇಡಮ್ಮ ಇವತ್ತು ಕನ್ನಡಸಂಘದಲ್ಲಿ ಫಂಕ್ಷನ್ ಇದೆ ನಾಳೆ ಮಾಡು, ಇವತ್ತು ನಿನ್ ತರ್ಕಾರಿ ಅವಶ್ಯಕತೆ ಇಲ್ಲ ಅನ್ಸುತ್ತೆ'' ಅಂದೆ.
"ಇಲ್ಲಾ! ಇವತ್ತು ಭಾನ್ವಾರ ಏನೂ ಕೆಲ್ಸಾ ಇಲ್ಲಾ! ನಂಜೊತೆ ನೀವು ಬರ್ತಾ ಇದೀರಾ!! Ok!!" ಅಂತಾ ಫರ್ಮಾನು ಹೊರಡಿಸಿ ಅಡುಗೆ ಮನೆ ಸೇರಿದಳು.
ನನಗೇನೋ ನನ್ನ ಮಡದಿಯ ಕಂಡರೆ ಬೆಟ್ಟದಷ್ಟು ಪ್ರೇಮವೇ. ಆದರೆ ಅವಳ ತೆಲುಗು ಕಂಡರೆ ಮಾತ್ರ ಭಯ..
ಇದೆಲ್ಲಾ ನಡೆದದ್ದು ವಿಶಾಖಪಟ್ಟಣದಲ್ಲಿ.
ನಾನು ಮಂಡ್ಯದಲ್ಲಿ ಮಾಡುತ್ತಿದ್ದ ಕೆಲಸ ಮೆಚ್ಚಿ ನನ್ನ ಕಂಪನಿ ನನಗೆ ಪ್ರಮೋಷನ್ ನೀಡಿ ವಿಶಾಖಪಟ್ಟಣಕ್ಕೆ ವರ್ಗಾಯಿಸಿತ್ತು.
ಹೊಸ ಜಾಗ, ಹೊಸ ಜನ, ಹೊಸ ಜವಾಬ್ದಾರಿ ಹೇಗೋ? ಏನೋ? ಎಂಬ ಅಳುಕಿನಲ್ಲೇ ವಿಶಾಖಪಟ್ಟಣಕ್ಕೆ ಕಾಲಿಟ್ಟೆನಾದರೂ ಅಲ್ಲಿನ ವಾತಾವರಣಕ್ಕೆ ಬೇಗ ಹೊಂದಿಕೊಂಡು ನನಗೆ ಬರುತ್ತಿದ್ದ ಹರಕಲು ಮುರುಕಲು ತೆಲುಗಿನಲ್ಲೇ ವ್ಯವಹರಿಸಲು ಆರಂಭಿಸಿದವ, ತೆಲುಗರ ಸಮಾನಕ್ಕೆ ತೆಲುಗು ಮಾತನಾಡುವುದ ಕಲಿತೆ. ಮೊದಲ 3 ತಿಂಗಳು ಕನ್ನಡ ಮಾತನಾಡಬೇಕೆಂದರೆ ನನ್ನವಳ ಮತ್ತು ಅಪ್ಪ ಅಮ್ಮನ ಬಳಿ ಫೋನ್-ಇನ್-ನೇರ ಕಾರ್ಯಕ್ರಮವೊಂದೇ ದಾರಿಯಾಗಿತ್ತು. ಏಕೆಂದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು, ಒಳ್ಳೆಯ ಕಡೆ ಮನೆ ಮಾಡಿದನಂತರ ನನ್ನವಳನ್ನು ಕರೆದುಕೊಂಡು ಹೋಗುವುದೆಂದು ತೀರ್ಮಾನಿಸಿದ್ದರಿಂದ ಹೊಟ್ಟೆಗೆ ತಾತ್ಕಾಲಿಕ ಸಂಚಕಾರ ಬಂದೊದಗಿತ್ತು. ಇದಲ್ಲದೆ ವಿಶಾಖಪಟ್ಟಣದಲ್ಲೇ ಇದ್ದ "ಕಾವೇರಿ ಕನ್ನಡ ಸಂಘ" ದ ಸದಸ್ಯರೂ ನನ್ನ ಸಹಾಯಕ್ಕೆ ಬಂದರು. ನಿಜವಾಗಿಯು ನನಗೆ ನನ್ನ ಕನ್ನಡದ ಮಹತ್ವ ಅರಿವಾಗಿದ್ದು ನಾನು ಕರ್ನಾಟಕ ಬಿಟ್ಟು ಆಂಧ್ರಕ್ಕೆ ಹೋದನಂತರವೇ. ಹೊಸದರಲ್ಲಂತೂ ನೀರಿನಿಂದ ಹೊರಬಂದ ಮೀನಿನಂತಾಗಿದ್ದೆ. ಏಕೆಂದರೆ ಅಲ್ಲಿನವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಅಷ್ಟಾಗಿ ಬರುತಿರಲಿಲ್ಲ. ಆದ್ದರಿಂದಲೇ ನನಗೆ ತೆಲುಗು ಕಲಿಯುವ ಅನಿವಾರ್ಯತೆ. ಅಂತಹ ಸಂದರ್ಭದಲ್ಲಿ ಯಾರಾದರೂ ಕನ್ನಡ ಮಾತನಾಡುವವರು ಸಿಕ್ಕರೆ ಮರುಭೂಮಿಯಲ್ಲಿ 'ಓಯಸಿಸ್ ' ಸಿಕ್ಕಂತಾಗುತಿತ್ತು. ಆದ್ದರಿಂದಲೇ ನಾನು ಸಹ ಸಂಘದ ಸಕ್ರೀಯ ಸದಸ್ಯನಾಗಿದ್ದೆ.
3 ತಿಂಗಳ ನಂತರ ನನ್ನವಳ ಆಗಮನ. ಅವಳೂ ಸಹ ಎಂ.ಎಸ್ಸಿ.(Biochemistry) ಮುಗಿಸಿದ್ದರಿಂದ A.Q.J Pg college ನಲ್ಲಿ ಉಪನ್ಯಾಸಕಳಾಗಿ ಸೇರಿಕೊಂಡಿದ್ದಳು. ಅವಳಿಗೆ ತೆಲುಗು ಕಲಿಯುವ ಅವಶ್ಯಕತೆ ಇಲ್ಲವಾದರೂ ಅವಳ ವಿಧ್ಯಾರ್ಥಿಗಳಿಗಾಗಿ ಅವಳಿಗೆ ತೆಲುಗಿನ ಅನಿವಾರ್ಯತೆ ಇತ್ತು, ಆದರೂ ಅವಳು ಅದನ್ನು ಕಲಿಯುವ ಗೋಜಿಗೆ ಹೋಗಲಿಲ್ಲ. ಅಪ್ಪಿ ತಪ್ಪಿ ಅಕ್ಕಪಕ್ಕದ ಅಪಾರ್ಟ್'ಮೆಂಟ್ ನವರೇನಾದರೂ
"ಮೀ ಇಂಟ್ಲೋ ಈವಾಳ್ಳ ಏ ಸಾಂಬಾರ್ ಚೇಸ್ಯಾರಂಡೀ?" (ಇವತ್ತು ನಿಮ್ಮ ಮನೇಲಿ ಸಾಂಬಾರೇನು ಮಾಡಿದ್ದೀರಾ?) ಅಂತ ಕೇಳಿದ್ರೆ ಆ ದಿನ ಸಾಂಬಾರಿಗೆ ಹಾಕಿದ್ದ ತರಕಾರಿ ತಂದು ಅವರ ಮುಂದೆ ಹಿಡಿಯುತ್ತಿದ್ದಳು. ಈ ತಮಾಷೆ ನೋಡುವ ಸಲುವಾಗೆ ಅವರೆಲ್ಲಾ ನನ್ನವಳನ್ನು ಹಲವಾರು ಪ್ರಶ್ನೆ ಕೇಳಿ ಮಜಾ ತೆಗೆದು ಕೊಳ್ಳುತ್ತಿದ್ದರು.ಅಷ್ಟೆ ಅಲ್ಲ ನಾನು ಅವಳ ತೆಲುಗನ್ನು ಅಣಕಿಸಿ ಮಜಾನೋಡುತ್ತಿದ್ದೆ.
ಒಮ್ಮೆ ಕಾಲೇಜಿನಿಂದ ಬರುವಾಗ ಬಸ್ಸು ಸಿಗದಿದ್ದರಿಂದ, ಆ ದಿನ ನಾನು ಸಹ ಹೊರ ಊರಿಗೆ ಹೋಗಿದ್ದರಿಂದ ಫೋನ್ ಮಾಡಿದ ಅವಳಿಗೆ ಆಟೋದಲ್ಲಿ ಹೋಗುವಂತೆಯೂ, ಅವರು ಇಪ್ಪತ್ತು (ಇರುವೈ) ರೂಪಾಯಿ ಕೇಳುತ್ತಾರೆ ನೀನು 15 ರೂಪಾಯಿ ಕೊಟ್ಟು ಮನೆಗೆ ಹೋಗು ಎಂದು ಸಹ ಸಲಹೆಯಿತ್ತೆ. ಅರ್ಧ ಗಂಟೆಯ ನಂತರ ನನ್ನವಳಿಂದ ಮತ್ತೆ ನನಗೆ ಫೋನ್ ಬಂತು..
"ನೋಡ್ರೀ ಇವತ್ತು ನಾನು ತೆಲುಗಿನಲ್ಲೇ ಮಾತಾಡಿ ಆಟೋದವನ ಬಳಿ ದುಡ್ಡು ಉಳಿಸಿದ್ದೀನಿ. ಗೊತ್ತಾ?" ಅಂದಳು.ನಾನಂತೂ ಹಿಗ್ಗಿಹೋದೆ. 'ಕಡೆಗೂ ನನ್ನವಳು ಸ್ವಲ್ಪವಾದರೂ ತೆಲುಗು ಕಲಿತಳಲ್ಲ' ಅನ್ನಿಸಿ
"ಪರ್ವಾಗಿಲ್ವೇ!! ಏನಾಯ್ತು ಹೇಳಮ್ಮ?".
"ಆಟೋದವನು 25 ರೂ ಆಗುತ್ತೆ ಅಂದ ನಾನು seventeen rupees only ಅಂತ ಹೇಳ್ದೆ. ಅವನು ಅಷ್ಟಕ್ಕೆ ಮನೆ ತಲುಪಿಸಿದ"
ನಮ್ಮ ಮನೆಯಿಂದ ಇವಳ ಕಾಲೇಜಿಗೆ 3 ಕಿ.ಮೀ ಮಿನಿಮಮ್ ಇರೋದು 8 ರೂ. ಅಂದ್ರೆ ಮೀಟರ ಹಾಕಿದ್ರೆ 12 ರೂ ಆಗುತ್ತೆ, ಸುಮ್ಮನೆ ಯಾಕೆ ಅವರತ್ರ ಜಗಳ ಅಂತ 15 ರೂ ಕೊಟ್ಟು ಮನೆ ಸೇರುತಿದ್ದೆವು. ಇವಳು 17 ರೂ ಅಂತಿದ್ದಾಳೆ, ಅಂದ್ರೆ ಇವಳ ತೆಲುಗಿನಿಂದ ಏನೋ ಅವಾಂತರ ಆಗಿರ್ಬೋದು ಅನ್ನಿಸಿ,
"ಆಟೋ ದವ ತೆಲುಗಿನಲ್ಲಿ ತಾನೆ ದುಡ್ಡು ಕೇಳಿದ್ದು?" ಅಂದೆ.
"ಹೌದು!"
"ಹಾಗಿದ್ದರೆ ಹೇಳು ಆತ ತೆಲುಗಿನಲ್ಲಿ ಎಷ್ಟು ಕೇಳಿದ?"
"ಹೂಂ!!..... 'ಪದಿಹೆನ್ನು' ಅಂದ, ಇಲ್ಲಾ ಕೊಡೋದು seventeen rupees only ಅಂತ ಅಂದೆ, ಅವನು ಮಾತನಾಡದೆ ಒಪ್ಪಿಕೊಂಡ" ಅಂದಳು.
ಹೊಟ್ಟೆ ಹಿಡಿದು ನಗುವ ಸರದಿ ನನ್ನದಾಗಿತ್ತು!
ನಾನು ನಗುವುದನ್ನು ನೋಡಿ ಅವಳಿಗೆ ತುಂಬಾ ಸಂಕೋಚ ಸಿಟ್ಟು ಒಟ್ಟೊಟ್ಟಿ ಬಂತೆಂದು ಕಾಣುತ್ತದೆ.
" ಈ ಗಂಡಸರೆಲ್ಲಾ ಹೀಗೇನೇ! ಹೊಟ್ಟೆಕಿಚ್ಚಿನೋರು!ತಾವೇ...."
"ಅಮ್ಮ ತಾಯಿ 'ಪದಿಹೆನ್ನು' ಅಂದ್ರೆ 15 ಅಂತ, ಅಂದ್ರೆ ಅವನು 15ರೂಪಾಯಿ ಕೇಳಿದಾನೆ. ನೀನು 17 ರೂ ಕೊಟ್ಟಿದ್ದೀ....ಹ್ಹಿ..ಹ್ಹಾ..ಹ್ಹಾ....."
ಅವಳ ಮುಖ ಇಂಗು ತಿಂದ ಮಂಗನಾಗಿತ್ತು...

ಅದಕ್ಕೇ ಅವಳ ತೆಲುಗು ಅಂದ್ರೆ ನನ್ಗೆ ನಡುಕ!!!......

ಶನಿವಾರ, ನವೆಂಬರ್ 21, 2009

ಕನ್ನಡ ಬೆಳೆಯಲು....ಉಳಿಯಲು........

ನಮ್ಮ ಕನ್ನಡಕ್ಕೆ ಚುನಾಯಿತ ಸರಕಾರಗಳು, ಸೊಕ್ಕಿದ ಅಧಿಕಾರಿವರ್ಗ, ಅಷೇ ಏಕೆ ಕನ್ನಡಿಗರಾದ ನಾವೆ ಎಷ್ಟೋ ಸಾರಿ ಮಾಡಿದ ಅನ್ಯಾಯಗಳು ಎಲಾವೂ ಬಹುಷಃ ನಮಗೆ ಜ್ಗ್ನಾಪಕ ಬರುವುದು "ನವೆಂಬರ್ ತಿಂಗಳಲ್ಲಿ" ಮಾತ್ರ.
ಈಗಾಗಲೇ "ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇನು ಕಡ್ಡಾಯವಲ್ಲ" ಎಂದು ಪ್ರಹಾರ ಮಾಡುವುದಕ್ಕೆ ಮುನ್ನವೇ ನಮ್ಮ ಮಕ್ಕಳಿಗೆ ಕನ್ನಡಬಿಟ್ಟು ಇಂಗ್ಲೀಷ್ ಕಲಿಸುವುದನ್ನು ಪ್ರಾರಂಭಿಸಿ ಅದೆಷ್ಟೋ ಯುಗಗಳಾಗಿದ್ದವು. ಕನ್ನಡದಲ್ಲಿ ಏನಿದೆ? ಎನಿಸಿ 'ನಾಯಿಮರಿ, ನಾಯಿಮರಿ ತಿಂಡಿಬೇಕೆ' ಕಲಿಸುವುದ ಮರೆತು ನಾಲಿಗೆಯೇ ಹೊರಳದ 'ಟ್ವಿಂಕಲ್ ಟ್ವಿಂಕಲ್ ' ನಮ್ಮ ಮಕ್ಕಳಿಗೆ ಅಪ್ಯಾಯಮಾನವಾಗಿದೆ. "ಅ" ಅಂದ್ರೆ 'ಅಮ್ಮ' ಅಂತ ನಮ್ಮ ಗುರುಗಳಿಂದ ಕಲಿತ ನಾವು "A" for apple "ಕಲಿಸಿ ಮೇಷ್ಟ್ರೇ" ಎಂದು ನಮ್ಮ ಮಕ್ಕಳ ಗುರುಗಳಿಗೆ ತಾಕಿತು ಮಾಡುತ್ತೇವೆ. ಇಲ್ಲಿ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ವಿವೇಚಿಸುವ ಗೋಜಿಗೆ ನಾವ್ಯಾರು ಹೋಗಲ್ಲ, ಏಕೆಂದರೆ ಇಲ್ಲಿ ಇದು "ನಮ್ಮ ಮಕ್ಕಳ ಭವಿಷ್ಯ" ಎಂಬ ಗುಮ್ಮನನ್ನು ನಾವೇ ಮುಂದಿಡುತ್ತೇವೆ. ಕನ್ನಡ ಶಾಲೆಯಲ್ಲಿ ಕಲಿತು ದೊಡ್ಡವರಾದವರ ಬಗ್ಗೆ ಯಾರಾದರು ತಿಳಿಹೇಳಿದರೆ 'ಅದು ಆ ಕಾಲ ಇದು ಈ ಕಾಲ' ಎಂದು ಸಿನಿಕತನ ತೋರುತ್ತೇವೆ.
ಇನ್ನು ನಮ್ಮ 'ಬುದ್ದಿಜೀವಿ' ಅನ್ನಿಸಿಕೊಂಡ ವರ್ಗವು ನಮಗೆ ಸರಿಯಾದ ಮಾರ್ಗ ತೋರುವುದನ್ನು ಮರೆತು ಬೇಕಿಲ್ಲದ ಒಣಜಂಭ, ಬಡಾಯಿ ಪ್ರಚಾರದಲ್ಲಿ ಕಾಲ ಕಳೆಯುವುದಕ್ಕೆ ಸಮಯವಿಲ್ಲ.
ಹಾಗಾದರೆ ಕನ್ನಡವನ್ನು ಮುಂದಿನ ಪೀಳಿಗೆಗೆ ಕನ್ನಡವನ್ನಾಗಿಯೇ ಉಳಿಸಲು, ಆಧುನಿಕತೆಯ ಸವಾಲಿಗೆ ಮೈಯೊಡ್ಡಿ, ಪರಭಾಷೆಗಳ ಮಧ್ಯೆ ಎದ್ದುನಿಲ್ಲುವ ಹಾಗೆ ಮಾಡುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ.
ಬಹುಶಃ ಈ ಮಾತನ್ನು ಅಲ್ಲಲ್ಲಿ ಯಾವಗಲೂ ಕೇಳಿ, ಕೇಳಿ ಎಲ್ಲರಿಗೂ ಬೇಸರವಾಗಿರುತ್ತದೆ ಎಂದು ನನಗೆ ತಿಳಿದಿದೆ.
ಮತ್ತೆ ಮತ್ತೆ ಅದೇಮಾತನ್ನು ಆಡುವುದಕ್ಕಿಂತ ನನಗೆ ತೋಚಿದ ಕೆಲ ಸಲಹೆಗಳನ್ನು ಕೆಳಗೆ ನಮೂದಿಸಿದ್ದೇನೆ.
1) ಮನೆಯಲ್ಲಿ ಕನ್ನಡವೇ ಇರಲಿ, ಮಕ್ಕಳು ಶಾಲೆಯಲ್ಲಿ ಕಲಿಯುವುದನ್ನು ಕಲಿಯಲಿ. ಮನೆಯಲ್ಲಿ ಕನ್ನಡ ಹೇಳಿಕೊಟ್ಟರೆ ಒಳ್ಳೆಯದು.
2) http://kn.wikipedia.org ಇದು ಕನ್ನಡದ ಅಂರ್ತಜಾಲದ ವಿಶ್ವಕೋಶ, ಇದನ್ನು ಯಾರು ಬೇಕಾದರು, ಸಂಪಾದಿಸಬಹುದು, ಅಂದರೆ ತಮಗೆ ತಿಳಿದ ಒಳ್ಳೆಯ ವಿಚಾರಗಳನ್ನು ಸೇರಿಸಲು ಅವಕಾಶವಿದೆ. ಆದರೆ ಅದು ವಯಕ್ತಿಕ ವಿಚಾರಧಾರೆ ಮಂಡಿಸುವ ವೇದಿಕೆಯಲ್ಲ. ಕನ್ನಡದ ಬಗ್ಗೆ, ತಾವು ತಿಳಿದ ವಸ್ತುಗಳ ಬಗ್ಗೆ, ಕರ್ನಾಟಕದ ಸ್ಥಳಗಳ ಬಗ್ಗೆ, ನಿಮಗೆ ತಿಳಿದ ವಿಶ್ವದ ಯಾವುದೇ ಜಾಗದ ಬಗ್ಗೆ, ದೇಶದಬಗ್ಗೆ ವ್ಯಕ್ತಿಗಳ ಬಗ್ಗೆ ಕನ್ನಡದಲ್ಲೇ ಬರೆಯಬಹುದು. ನಿಮಗೆ ತಿಳಿದಿರಲಿ ಭಾರತದ ಇತರ ಭಾಷೆಗಳ ಲೇಖನಗಳು ಈಗಾಗಲೇ 20,000 ಕ್ಕೂ ಹೆಚ್ಚಿವೆ, ತೆಲುಗಿನಲ್ಲಿ ಸುಮಾರು 50,000 ಲೇಖನಗಳಿವೆ, ತಮಿಳಿನಲ್ಲಿ 22,000 ಹಿಂದಿಯಲ್ಲಿ ಸುಮಾರು 45,000 ಲೇಖನಗಳಿವೆ, ಅದೇ ರೀತಿ ಇಂಗ್ಲೀಷಿನಲ್ಲಿ 4 ಲಕ್ಷಕ್ಕೂ ಹೆಚ್ಚು ಲೇಖನಗಳಿವೆ. ದುರಂತವೆಂದರೆ ಕನ್ನಡದಲ್ಲಿ ಇವತ್ತಿನವರೆಗು ಇರುವ ಲೇಖನಗಳ ಸಂಖ್ಯೆ ಕೇವಲ 7,513 ಲೇಖನಗಳು ಮಾತ್ರ.
ಪ್ರತಿಯೊಬ್ಬ ಕನ್ನಡಿಗನೂ, ಪ್ರತಿಯೊಬ್ಬ ಅಂರ್ತಜಾಲ ಉಪಯೋಗಿಸುವ ಕನ್ನಡಿಗನು ದಿನಕ್ಕೊಂದು ಅಲ್ಲದಿದ್ದರೂ wikipidea ದಲ್ಲಿ ವಾರಕ್ಕೊಂದು ವಿಷಯ ಲೇಖನ ಬರೆದರೆ ಕನ್ನಡ ಬಗ್ಗೆ ವಿಶ್ವಕ್ಕೇ ಹೆಚ್ಚು ತಿಳಿಸಿದಂತಾಗುತ್ತದೆಯಲ್ಲವೆ.
ಇದು ನನ್ನ ಅಭಿಪ್ರಾಯ. ನಿಮಗೂ ಸರಿ ಅನ್ನಿಸಿದರೆ ಆಧುನಿಕಥೆಗೆ ಮೈಯೊಡ್ಡಿ ಕೊಡವಿ ನಿಲ್ಲಲು ಸಹಾಯಕವೆನಿಸಿದರೆ ಈ ವಿಚಾರವನ್ನು ನಿಮ್ಮ ಇತರ ಮಿತ್ರರಿಗೂ ತಿಳಿಸಿ, ಹಾಗು ನೀವು ಕನ್ನಡ ಬೆಳೆಸಿ.

"ಸಿರಿಗನ್ನಡಂ ಗೆಲ್ಗೆ"